Home / ಕವನ / ಕವಿತೆ / ಮುಂದೆ ಹೋಗಿ ಸ್ವಾಮಿ

ಮುಂದೆ ಹೋಗಿ ಸ್ವಾಮಿ

ನಿನ್ನೆ ಹಾಕಿದ್ದೆ ಓಟು
ಮತ್ತೆ ಬಂದಿರಿ ಇವತ್ತು!
ಏನು ಆಟವೆ ಸ್ವಾಮಿ ?
ಮುಂದೆ ಹೋಗಿ,
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ?
ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ.

ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ
ಯಜ್ಞ ನಡೆಯುತ್ತಿದೆ ಗೊತ್ತೆ ತಮಗೆ ?
ನಮ್ಮ ಹುಡುಗರ ಜೀವ ಆಜ್ಯಧಾರೆಯ ಹಾಗೆ
ಒಂದೆ ಸಮ ಸುರಿಯುತಿದೆ ಯುದ್ಧದುರಿಗೆ;
ಕಾದುವ ಹುಡುಗರ ತಂದೆ ತಾಯಿ ಹೆಂಡಿರ ದುಃಖ-
ಜ್ವಾಲೆ ಹಬ್ಬುತ್ತಿದೆ ಎಲ್ಲ ಕಡೆಗೆ.
ಇಂಥ ಹೊತ್ತಲ್ಲೂ ನಿಮ್ಮ ಆಟವೆ ನಿಮಗೆ!
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ ?
ಗೊತ್ತಾದ ಅವಧಿಗೆ ಮಾತ್ರ ಬನ್ನಿರಿ ತಾವು
ಕಂಡ ಕಂಡಾಗ ಅಲ್ಲ
ಮುಂದೆ ಹೋಗಿ.

ಕರುಳನಿರಿಯುವ ಚಳಿಯ ಇರುಳು, ಶಿಖರಗಳನ್ನು
ಏರುತ್ತ ಹೋರುತ್ತ,
ಬಂಕರಿನಲ್ಲಿ ಅಡಗಿ ಕೂತು
ಛಕ್ಕನೆ ಎದ್ದು
ಹೊಂಚಿ ಹೊಡೆಯುತ್ತ,
ಚುಕ್ಕಿಗಳ ಬಯಲಲ್ಲಿ
ಪತಾಕೆಯಂತೆ ಸೆಟೆದು
ತುಪಾಕಿ ಸಿಡಿಸುತ್ತ
ಅಂಗುಲ ಆಂಗುಲಕ್ಕೂ ಇಂಗುತಿದೆ ಜೀವಸಿರಿ;
ಆದರೂ ತಗ್ಗದೆ ಮೇಲಕ್ಕೆದ್ದಿದೆ ಉರಿ.
ಇಂಥ ಹೊತ್ತಲ್ಲೂ ಬರುತ್ತೀರಲ್ಲ ಹೀಗೆ!

ಸಾಕು ನಿಲ್ಲಿಸಿ ಶಂಖ, ಹಿಂದೆ ಕೇಳಿದ್ದೇ,
ಊದಬೇಡಿ ಮತ್ತೆ, ಮುಂದೆ ಹೋಗಿ
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಬೇಡ ಸ್ವಾಮೀ ನಿಮ್ಮ
ಚುನಾವಣೆಯ ಮಾತು,
ನಿಮ್ಮ ಯೋಗ್ಯತೆ ನಮಗೆ ಲಾಗಾಯ್ತಿನಿಂದಲೂ
ಚೆನ್ನಾಗಿ ಗೊತ್ತು;
ಶಾಕಿನಿ ಡಾಕಿನಿಯರ ರಕ್ತದಾಹಕ್ಕಾಗಿ
ಚೆನ್ನಾಗಿ ನಡೆದಿದ್ದ ರಥ ಉರುಳಿ ಬಿತ್ತು.
ಸರಿಯಾದ ಸಮಯಕ್ಕೆ ಹೊಂಚಿದ್ದ ಹುಲಿರಾಯ
ಬೇಲಿಯನ್ನೇ ಜಿಗಿದ
ಯುದ್ಧ ಬಂತು.
ಹೇಳಬೇಕೇ ತಮಗೆ ? ಎಲ್ಲ ಗೊತ್ತಲ್ಲ,
ಎಲ್ಲದರ ಹಿಂದೆ ತಾವೆ ಇದ್ದೀರಲ್ಲ ?
ಆದರೂ ಹೀಗೆ
ಹೊಸ ವೇಷ ಹಾಕಿ
ಬರಬಹುದೆ? ದಯಮಾಡಿ ಮುಂದೆ ಹೋಗಿ,
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಯಾರಿಗೆ ಚುನಾವಣೆ,
ಯಾತಕ್ಕೆ ಚುನಾವಣೆ?
ಪೆದ್ದು ಕುರಿಗಳ ಹಿಂಡ ಕಾಯಲಿಕ್ಕಾಗಿಯೇ ?
ಕೊಬ್ಬಿದ ತೋಳಗಳನ್ನು ಆಯಲಿಕ್ಕಾಗಿಯೇ ?
ಪಾರ್ಲಿಮೆಂಟ್ ಹಾಲಲ್ಲಿ
ಕುರ್ಚಿ ಮೈಕು ಹಿಡಿದು
ಕಾದಲಿಕ್ಕಾಗಿಯೇ?
ಕಾಯುವುದಿದ್ದರೆ ಹೋಗಿ ಗಡಿಗಳನ್ನು ಕಾಯಿರಿ,
ಕಾದುವುದಿದ್ದರೆ ಹೋಗಿ ವೈರಿ ಜೊತೆ ಕಾದಿರಿ.
ಚುನಾವಣೆಗೆ ನಿಮಗೆ ಹಕ್ಕು ಎಲ್ಲುಂಟು?
ಎರಡು ಸಾವಿರ ಕೋಟಿ ಯರ ಮನೆ ಗಂಟು ?
ಹೋಗಿ ಹೋಗಿ ಸ್ವಾಮಿ ಮುಂದೆ ಹೋಗಿ.
ಎಲ್ಲ ಸರಿಯಾದಾಗ, ಹೊತ್ತು ಗೊತ್ತು ತಿಳಿದು
ಮತ್ತೆ ಬಂದೀರಂತೆ
ಮುಂದೆ ಹೋಗಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...