ಮುಂದೆ ಹೋಗಿ ಸ್ವಾಮಿ

ನಿನ್ನೆ ಹಾಕಿದ್ದೆ ಓಟು
ಮತ್ತೆ ಬಂದಿರಿ ಇವತ್ತು!
ಏನು ಆಟವೆ ಸ್ವಾಮಿ ?
ಮುಂದೆ ಹೋಗಿ,
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ?
ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ.

ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ
ಯಜ್ಞ ನಡೆಯುತ್ತಿದೆ ಗೊತ್ತೆ ತಮಗೆ ?
ನಮ್ಮ ಹುಡುಗರ ಜೀವ ಆಜ್ಯಧಾರೆಯ ಹಾಗೆ
ಒಂದೆ ಸಮ ಸುರಿಯುತಿದೆ ಯುದ್ಧದುರಿಗೆ;
ಕಾದುವ ಹುಡುಗರ ತಂದೆ ತಾಯಿ ಹೆಂಡಿರ ದುಃಖ-
ಜ್ವಾಲೆ ಹಬ್ಬುತ್ತಿದೆ ಎಲ್ಲ ಕಡೆಗೆ.
ಇಂಥ ಹೊತ್ತಲ್ಲೂ ನಿಮ್ಮ ಆಟವೆ ನಿಮಗೆ!
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ ?
ಗೊತ್ತಾದ ಅವಧಿಗೆ ಮಾತ್ರ ಬನ್ನಿರಿ ತಾವು
ಕಂಡ ಕಂಡಾಗ ಅಲ್ಲ
ಮುಂದೆ ಹೋಗಿ.

ಕರುಳನಿರಿಯುವ ಚಳಿಯ ಇರುಳು, ಶಿಖರಗಳನ್ನು
ಏರುತ್ತ ಹೋರುತ್ತ,
ಬಂಕರಿನಲ್ಲಿ ಅಡಗಿ ಕೂತು
ಛಕ್ಕನೆ ಎದ್ದು
ಹೊಂಚಿ ಹೊಡೆಯುತ್ತ,
ಚುಕ್ಕಿಗಳ ಬಯಲಲ್ಲಿ
ಪತಾಕೆಯಂತೆ ಸೆಟೆದು
ತುಪಾಕಿ ಸಿಡಿಸುತ್ತ
ಅಂಗುಲ ಆಂಗುಲಕ್ಕೂ ಇಂಗುತಿದೆ ಜೀವಸಿರಿ;
ಆದರೂ ತಗ್ಗದೆ ಮೇಲಕ್ಕೆದ್ದಿದೆ ಉರಿ.
ಇಂಥ ಹೊತ್ತಲ್ಲೂ ಬರುತ್ತೀರಲ್ಲ ಹೀಗೆ!

ಸಾಕು ನಿಲ್ಲಿಸಿ ಶಂಖ, ಹಿಂದೆ ಕೇಳಿದ್ದೇ,
ಊದಬೇಡಿ ಮತ್ತೆ, ಮುಂದೆ ಹೋಗಿ
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಬೇಡ ಸ್ವಾಮೀ ನಿಮ್ಮ
ಚುನಾವಣೆಯ ಮಾತು,
ನಿಮ್ಮ ಯೋಗ್ಯತೆ ನಮಗೆ ಲಾಗಾಯ್ತಿನಿಂದಲೂ
ಚೆನ್ನಾಗಿ ಗೊತ್ತು;
ಶಾಕಿನಿ ಡಾಕಿನಿಯರ ರಕ್ತದಾಹಕ್ಕಾಗಿ
ಚೆನ್ನಾಗಿ ನಡೆದಿದ್ದ ರಥ ಉರುಳಿ ಬಿತ್ತು.
ಸರಿಯಾದ ಸಮಯಕ್ಕೆ ಹೊಂಚಿದ್ದ ಹುಲಿರಾಯ
ಬೇಲಿಯನ್ನೇ ಜಿಗಿದ
ಯುದ್ಧ ಬಂತು.
ಹೇಳಬೇಕೇ ತಮಗೆ ? ಎಲ್ಲ ಗೊತ್ತಲ್ಲ,
ಎಲ್ಲದರ ಹಿಂದೆ ತಾವೆ ಇದ್ದೀರಲ್ಲ ?
ಆದರೂ ಹೀಗೆ
ಹೊಸ ವೇಷ ಹಾಕಿ
ಬರಬಹುದೆ? ದಯಮಾಡಿ ಮುಂದೆ ಹೋಗಿ,
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಯಾರಿಗೆ ಚುನಾವಣೆ,
ಯಾತಕ್ಕೆ ಚುನಾವಣೆ?
ಪೆದ್ದು ಕುರಿಗಳ ಹಿಂಡ ಕಾಯಲಿಕ್ಕಾಗಿಯೇ ?
ಕೊಬ್ಬಿದ ತೋಳಗಳನ್ನು ಆಯಲಿಕ್ಕಾಗಿಯೇ ?
ಪಾರ್ಲಿಮೆಂಟ್ ಹಾಲಲ್ಲಿ
ಕುರ್ಚಿ ಮೈಕು ಹಿಡಿದು
ಕಾದಲಿಕ್ಕಾಗಿಯೇ?
ಕಾಯುವುದಿದ್ದರೆ ಹೋಗಿ ಗಡಿಗಳನ್ನು ಕಾಯಿರಿ,
ಕಾದುವುದಿದ್ದರೆ ಹೋಗಿ ವೈರಿ ಜೊತೆ ಕಾದಿರಿ.
ಚುನಾವಣೆಗೆ ನಿಮಗೆ ಹಕ್ಕು ಎಲ್ಲುಂಟು?
ಎರಡು ಸಾವಿರ ಕೋಟಿ ಯರ ಮನೆ ಗಂಟು ?
ಹೋಗಿ ಹೋಗಿ ಸ್ವಾಮಿ ಮುಂದೆ ಹೋಗಿ.
ಎಲ್ಲ ಸರಿಯಾದಾಗ, ಹೊತ್ತು ಗೊತ್ತು ತಿಳಿದು
ಮತ್ತೆ ಬಂದೀರಂತೆ
ಮುಂದೆ ಹೋಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಡಭೇರುಂಡ
Next post ತ್ಯಾಗಮಯಿ ನೀ ಪೂರ್ಣಮಯಿ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…