Home / ಕವನ / ಕವಿತೆ / ಮುಂದೆ ಹೋಗಿ ಸ್ವಾಮಿ

ಮುಂದೆ ಹೋಗಿ ಸ್ವಾಮಿ

ನಿನ್ನೆ ಹಾಕಿದ್ದೆ ಓಟು
ಮತ್ತೆ ಬಂದಿರಿ ಇವತ್ತು!
ಏನು ಆಟವೆ ಸ್ವಾಮಿ ?
ಮುಂದೆ ಹೋಗಿ,
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ?
ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ.

ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ
ಯಜ್ಞ ನಡೆಯುತ್ತಿದೆ ಗೊತ್ತೆ ತಮಗೆ ?
ನಮ್ಮ ಹುಡುಗರ ಜೀವ ಆಜ್ಯಧಾರೆಯ ಹಾಗೆ
ಒಂದೆ ಸಮ ಸುರಿಯುತಿದೆ ಯುದ್ಧದುರಿಗೆ;
ಕಾದುವ ಹುಡುಗರ ತಂದೆ ತಾಯಿ ಹೆಂಡಿರ ದುಃಖ-
ಜ್ವಾಲೆ ಹಬ್ಬುತ್ತಿದೆ ಎಲ್ಲ ಕಡೆಗೆ.
ಇಂಥ ಹೊತ್ತಲ್ಲೂ ನಿಮ್ಮ ಆಟವೆ ನಿಮಗೆ!
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ ?
ಗೊತ್ತಾದ ಅವಧಿಗೆ ಮಾತ್ರ ಬನ್ನಿರಿ ತಾವು
ಕಂಡ ಕಂಡಾಗ ಅಲ್ಲ
ಮುಂದೆ ಹೋಗಿ.

ಕರುಳನಿರಿಯುವ ಚಳಿಯ ಇರುಳು, ಶಿಖರಗಳನ್ನು
ಏರುತ್ತ ಹೋರುತ್ತ,
ಬಂಕರಿನಲ್ಲಿ ಅಡಗಿ ಕೂತು
ಛಕ್ಕನೆ ಎದ್ದು
ಹೊಂಚಿ ಹೊಡೆಯುತ್ತ,
ಚುಕ್ಕಿಗಳ ಬಯಲಲ್ಲಿ
ಪತಾಕೆಯಂತೆ ಸೆಟೆದು
ತುಪಾಕಿ ಸಿಡಿಸುತ್ತ
ಅಂಗುಲ ಆಂಗುಲಕ್ಕೂ ಇಂಗುತಿದೆ ಜೀವಸಿರಿ;
ಆದರೂ ತಗ್ಗದೆ ಮೇಲಕ್ಕೆದ್ದಿದೆ ಉರಿ.
ಇಂಥ ಹೊತ್ತಲ್ಲೂ ಬರುತ್ತೀರಲ್ಲ ಹೀಗೆ!

ಸಾಕು ನಿಲ್ಲಿಸಿ ಶಂಖ, ಹಿಂದೆ ಕೇಳಿದ್ದೇ,
ಊದಬೇಡಿ ಮತ್ತೆ, ಮುಂದೆ ಹೋಗಿ
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಬೇಡ ಸ್ವಾಮೀ ನಿಮ್ಮ
ಚುನಾವಣೆಯ ಮಾತು,
ನಿಮ್ಮ ಯೋಗ್ಯತೆ ನಮಗೆ ಲಾಗಾಯ್ತಿನಿಂದಲೂ
ಚೆನ್ನಾಗಿ ಗೊತ್ತು;
ಶಾಕಿನಿ ಡಾಕಿನಿಯರ ರಕ್ತದಾಹಕ್ಕಾಗಿ
ಚೆನ್ನಾಗಿ ನಡೆದಿದ್ದ ರಥ ಉರುಳಿ ಬಿತ್ತು.
ಸರಿಯಾದ ಸಮಯಕ್ಕೆ ಹೊಂಚಿದ್ದ ಹುಲಿರಾಯ
ಬೇಲಿಯನ್ನೇ ಜಿಗಿದ
ಯುದ್ಧ ಬಂತು.
ಹೇಳಬೇಕೇ ತಮಗೆ ? ಎಲ್ಲ ಗೊತ್ತಲ್ಲ,
ಎಲ್ಲದರ ಹಿಂದೆ ತಾವೆ ಇದ್ದೀರಲ್ಲ ?
ಆದರೂ ಹೀಗೆ
ಹೊಸ ವೇಷ ಹಾಕಿ
ಬರಬಹುದೆ? ದಯಮಾಡಿ ಮುಂದೆ ಹೋಗಿ,
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.

ಯಾರಿಗೆ ಚುನಾವಣೆ,
ಯಾತಕ್ಕೆ ಚುನಾವಣೆ?
ಪೆದ್ದು ಕುರಿಗಳ ಹಿಂಡ ಕಾಯಲಿಕ್ಕಾಗಿಯೇ ?
ಕೊಬ್ಬಿದ ತೋಳಗಳನ್ನು ಆಯಲಿಕ್ಕಾಗಿಯೇ ?
ಪಾರ್ಲಿಮೆಂಟ್ ಹಾಲಲ್ಲಿ
ಕುರ್ಚಿ ಮೈಕು ಹಿಡಿದು
ಕಾದಲಿಕ್ಕಾಗಿಯೇ?
ಕಾಯುವುದಿದ್ದರೆ ಹೋಗಿ ಗಡಿಗಳನ್ನು ಕಾಯಿರಿ,
ಕಾದುವುದಿದ್ದರೆ ಹೋಗಿ ವೈರಿ ಜೊತೆ ಕಾದಿರಿ.
ಚುನಾವಣೆಗೆ ನಿಮಗೆ ಹಕ್ಕು ಎಲ್ಲುಂಟು?
ಎರಡು ಸಾವಿರ ಕೋಟಿ ಯರ ಮನೆ ಗಂಟು ?
ಹೋಗಿ ಹೋಗಿ ಸ್ವಾಮಿ ಮುಂದೆ ಹೋಗಿ.
ಎಲ್ಲ ಸರಿಯಾದಾಗ, ಹೊತ್ತು ಗೊತ್ತು ತಿಳಿದು
ಮತ್ತೆ ಬಂದೀರಂತೆ
ಮುಂದೆ ಹೋಗಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...