Home / ಕಥೆ / ಸಣ್ಣ ಕಥೆ / ಪಂಜುಗಳ ಯುದ್ಧ

ಪಂಜುಗಳ ಯುದ್ಧ

ಚಿಕ್ಕದೇವರಾಜ ಒಡೆಯರು ರಾಜರಾದಮೇಲೆ ಮರಾಟೆಯವರು ದಂಡೆತ್ತಿ ಬರುವುದಕ್ಕೆ ಮೊದಲಾಯಿತು. ಪಟ್ಟಕ್ಕೆ ಬಂದ ಮೇಲೆ ರಾಜರು ತಮ್ಮ ದಳವಾಯಿ ಕುಮಾರಯ್ಯನನ್ನೂ ಆತನ ಮಗ ದೊಡ್ಡಯ್ಯನನ್ನೂ ತಿರುಚನಾಪಳ್ಳಿಯನ್ನು ಗೆಲ್ಲಲು ಕೊಟ್ಟು ಕಳುಹಿಸಿದರು. ಆಗ ಅಕಸ್ಮಾತ್ತಾಗಿ ಮರಾಟೆಯವರ ಒಂದು ದಂಡು ನುಗ್ಗಿ ಬಂದು ಶ್ರೀರಂಗಪಟ್ಟಣದ ಸಮೀಪದಲ್ಲಿ ಕಲಸಗೆರೆ ಕೊತ್ತತ್ತಿ ಎಂಬ ಗ್ರಾಮದ ಬಳಿ ಮೈದಾನದಲ್ಲಿ ಇಳಿದುಕೊಂಡರು.

ಒಡೆಯರು ಆಗಲೇ ದೊಡ್ಡಯ್ಯನನ್ನು ಕೆಲವು ಸೇನೆಯೊಡನೆ ಶ್ರೀರಂಗಪಟ್ಟಣಕ್ಕೆ ಕಳುಹಿಸುವಂತೆ ದಳವಾಯಿ ಕುಮಾರಯ್ಯನಿಗೆ ಹೇಳಿ ಕಳುಹಿಸಿದ್ದರು. ದೊಡ್ಡಯ್ಯನು ಕಾವೇರೀ ಪುರದ ಕಣಿವೆಯ ಮಾರ್ಗವಾಗಿ ಬರುತ್ತಿದ್ದನು. ಅಷ್ಟರಲ್ಲಿ ಮೊರಾಟೆಯವರ ದಂಡು ಬಂದು ಪ್ರತ್ಯಕ್ಷವಾಗಲು ರಾಜರು ದೊಡ್ಡಯ್ಯನಿಗೆ “ಈ ಕಲಸಗೆರೆ ಕೊತ್ತತ್ತಿ ಗ್ರಾಮದ ಬಳಿ ಇಳಿದಿರುವ ಮರಾಟೆಯವರ ಸೈನ್ಯದ ಸಮೀಪಕ್ಕೆ ಯಾರೂ ಅರಿಯದಂತೆ ಸಂಚರಿಸತಕ್ಕದ್ದು; ಅಲ್ಲಿ ಸೇರಿದ ಕೂಡಲೆ ನಮ್ಮ ದಂಡಿನಲ್ಲಿರುವ ೨-೩ ಸಾವಿರ ದನದ ಕೊಂಬುಗಳಿಗೆ ಅಪಾಯವಿಲ್ಲದ ಹಾಗೆ ಪಂಜುಗಳನ್ನು ಕಟ್ಟಿ ಮೂರು ಕಡೆಯಿಂದಲೂ ಸೈನ್ಯವು ತಮ್ಮನ್ನು ಸುತ್ತಿಕೊಂಡಿತೆಂಬ ಭ್ರಾಂತಿಯು ಮರಾಟೆಯವರ ಮನಸ್ಸಿನಲ್ಲಿ ಹುಟ್ಟುವಂತೆ ಅವುಗಳನ್ನು ರಾತ್ರಿಯಲ್ಲಿ ಚದರಿಸತಕ್ಕದ್ದು; ಅವರು ಭ್ರಾಂತರಾದ ವೇಳೆಯಲ್ಲಿ ನೀವು ಅವರನ್ನು ತಾಗತಕ್ಕದ್ದು. ಸಮಯಕ್ಕೆ ಸಹಾಯಮಾಡುವಂತೆ ಶ್ರೀರಂಗಪಟ್ಟಣದಿಂದ ಬೇರೊಂದು ಸೈನ್ಯವನ್ನು ಕಳುಹಿಸುತ್ತಿದ್ದೇವೆ” ಎಂದು ಆಜ್ಞೆ ಮಾಡಿದರು. ದೊಡ್ಡಯ್ಯ ಮುಂತಾದ ಸೇನಾನಾಯಕರು ಅದರಂತೆಯೇ ದನಗಳಿಗೆ ಪಂಜುಗಳನ್ನು ಕಟ್ಟಿಸಿ ಮೂರು ದಿಕ್ಕಿಗೂ ಓಡಿಸಿ, ಉಳಿದ ದಿಕ್ಕಿನಿಂದ ಸಂಚರಿಸುತ್ತ ಮರಾಟೆಯವರ ಮೇಲೆ ಬಿದ್ದರು. ಮರಾಟೆಯವರಿಗೆ ದಿಕ್ಕು ತೋಚದಂತಾಗಿ ತಾರುಮಾರಾಗಿ ಪಲಾಯನಮಾಡಿದರು. ಬೆಳಕು ಹರಿದಾಗ ಅವರ ಉಗ್ರಾಣವೆಲ್ಲವೂ ದೊಡ್ಡಯ್ಯನ ಕೈಗೆ ಬಂತು. ಮರಾಟೆಯವರ ನಾಯಕರ ತಲೆಗಳನ್ನು ಕತ್ತರಿಸಿ ಸೈನಿಕರು ದೊಡ್ಡಯ್ಯನಿಗೆ ಸಮರ್ಪಿಸಿದರು. ದೊಡ್ಡಯ್ಯನು ಆ ತಲೆಗಳನ್ನು ತೆಗೆಸಿಕೊಂಡು ದೊರೆಗಳ ಸನ್ನಿಧಿಗೆ ಬಂದು ಅಡ್ಡ ಬಿದ್ದು ಎಲ್ಲ ಸಂಗತಿಯನ್ನೂ ಬಿನ್ನಯಿಸಿದನು. ಒಡೆಯರು ಆ ತಲೆಗಳಲ್ಲಿ ಶ್ರೀರಂಗಪಟ್ಟಣದ ಕೋಟೆ ಬಾಗಲಿಗೊಂದನ್ನೂ ಮೈಸೂರು ಕೋಟೆ ಬಾಗಲಿಗೊಂದನ್ನೂ ಕಟ್ಟಿಸಿದರು. ದೊಡ್ಡಯ್ಯ ಮುಂತಾದ ಸೇನಾ ನಾಯಕರಿಗೆ ಬಹಳ ಸನ್ಮಾನವು ದೊರೆಯಿತು.
*****
[ವಂಶರತ್ನಾಕರ, ಪುಟ ೧೦೮, ವಂಶಾವಳಿ ೧೧೪-೫, ವಿಲ್ಕ್ಸ್, ಪುಟ ೬೧]

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...