Home / ಕವನ / ಕವಿತೆ / ಶಿಲ್ಪಿ

ಶಿಲ್ಪಿ

ಕೆಂಪು ವಜ್ರ ನೀಲ ಪುಷ್ಯ
ರಾಗ ವೈಡೂರ್ಯವು
ಚಂಪರಾಗ ಚಂದ್ರಕಾಂತ
ನಾಗ ಗೋಮೇಧಿಕ

ಇಂತು ನೋಡಿ ಒಡೆದು ಕಡೆದು
ತಿಕ್ಕಿ ನಾಸಿಕ್ಕಿದೆ
ಚಿಂತೆಯಲ್ಲಿ ಸಾಣೆಯಿಟ್ಟು
ಮಿಕ್ಕುವನ್ನಿಕ್ಕಿದೆ

ಇಡಲು ಕಳಸ ಗೋಪುರಾದಿ
ರತುನ ಮಂದಿರಕೆನೆ
ನುಡಿಯ ಗಣಿಗಳಿಂದ ತೆಗೆದೆ
ರತುನ ಗಲ್ಲೆಂಬಿವ

ಹೂಡಿ ನೋಡಿ ತೋರಣಾದಿ
ಅಕ್ಷರಾಲಯಕನೆ
ಜೋಡಿಸಿಹೆನು ರೂಢಿಯೊಳಗೆ
ಅಕ್ಷರಾಲಯವಿದ

ಕಣ್ಣಿವೆಂದು ಉಣ್ಣದಂಥ
ರೂಪ ಸೌಂದಯ್ಯವು!
ಅಣ್ಣ ಕೇಳು ಚಲ್ವರೂಹ
ರೂಪ ರಾಗಾದಿಯು

ದ್ವಾರ ತೋರಣಾದಿಯಿಲ್ಲಿ
ಬಿಜಯಿಸೈ! ಅತಿಧಿಯೆ!
ದ್ವಾರ ದರ್ಪಣಾದಿಯಲ್ಲಿ
ಬಿಜಯಿಸೈ ಪಧಿಕನೆ

ಸಾಗಿ ಮುಂದೆ ನೀಡು‌ಅಲ್ಲಿ
ಅತ್ತಲಲ್ಲಿ ಕರಗಳ!
ರಾಗಿಣಿಯರು ಬಂದರಲ್ಲಿ
ಮತ್ತಕಾಶಿನಿಯರು!

ಇಲ್ಲಿ ಸಾಲಗೊಂಬೆ ನೋಡು
ನೋಡು ಕೈಸಾಲೆಯ!
ಇಲ್ಲಿ ಏರುಗಲ್ಲ ರಾಜಿ
ನೋಡು ವೈಭೋಗವ!

ಭೋಗ ಸಾಧ್ಯ ಸ್ವಪ್ನ ಸುಧೆಯ
ದೆಂದೆಯಾ ಈ ದಿನ
ಯೋಗ ಸಾಧ್ಯವೆಂಬ ರೂಪಿ
ವೆಂದೆಯಾ! ಈ ದಿನ!

ಏಳುನೆಲೆಯ ಶಿರಿಯನಲ್ಲಿ
ಶೀಲನೀ ಕಂಡೆಯ
ಭಾಳವುಂಡು ದಣಿದೆನೆಂದು
ಲೋಲನೀನೆಂದೆಯ!

ಇಷ್ಟು ರೂಪು ನೋಡಿ ದಿಟ್ಟಿ
ನೊಂದುದೇ ನೆಂಬೆಯ
ಇಷ್ಟ ದೈವ! ಕಾಣಲಿಲ್ಲ!
ವೆಂದಿತೇ ಹೃದಯವು!

ಕಾಣಲಿಲ್ಲ ಕಾಂತೆಯನ್ನು
ಕಾಂತೆಯೆಲ್ಲೆಂದಿತೆ?
ಜಾಣ ತಿರುಗು ವಳಗೆ ನೋಡು
ಕ್ಲಾಂತ! ನೀ ಮುಂಗಡೆ.

ಬಿಗಿದು ಆಶೆ ಬಿಗಿದು ಊಹೆ
ಮುಗುದ! ಮೆಲ್ಲನಡಿಯಿಡು
ಮುಗಿಲಿನಂತೆ ತೆರೆಯ ಕಡೆಗೆ
ಮುಗುದ! ಮೆಲ್ಲನಡಿಯಿಡು.

ಏಳು ಹೊಸಿಲ ದಾಟ ಬೇಕು
ಏಳು ತರೆಯ ಹಾರಿಸಿ
ಏಳು ವರಣ ಜೋತಿ ರಾಜಿ
ಏಳ ನೀ ದಾಟುವೆ.

ತೆರೆಯ ಶೆಳೆದು ನೋಡು ವಳಗೆ
ಇರುವ ಮೂರ್ತಿ ಯಾವುದು?
ಶಿರಿನಿಕೇತನಕ್ಕೆ ಈಕೆ
ಅರಿಯೆ ನೀ ರಾಣಿಯು!

ಬಲ್ಲೆ ಬಲೆ! ನೀನು ಇವಳ
ಬಲ್ಲೆಯೈಯ್ಯ! ಅತಿಥಿಯೆ!
ಚಲ್ಪ ರೂಹ ತೇಜದಲ್ಲಿ
ಎಲ್ಲೋ ನೀ ಮಿಂದಿಹೆ.

ಇದುವೆ ಪದುಮವನ್ನು ಹುಡಕಿ
ಭ್ರಮರ ಕೋರಿಕೆಗಳು
ಚದುರ! ತಿರುಗಿ ಯೇಳು ಲೋಕ
ಅಮಮ! ಹಿಂದಿರುಗಿವೆ.

ಹೃದಯ ರಮೆಯನದಯಳೆಂದು
ವಿರಹಿ ನೀ ನೊಂದೆಯ?
ಚದುರೆಯನ್ನು ವಿರಹ ಮನವು
ಅರಸಿ ಕಾಣದಿದ್ದಿತೇ?

ನೀನು ಕಂಡು ಭ್ರಮಿಸಿ ಪೋದ
ನಾಳೆಯೆಂಬಾದಿನ
ರಾಣಿ! ನಿನ್ನ ಧ್ಯಾನದಲ್ಲಿ
ಭಾಳ ಮೈಮರೆತಿರೆ

ಚಂಡಬಲರು ದೈತ್ಯ ಸುತರು
ದೂರ ನೀರವರಿರೆ!
ಕಂಡು ಶೆಳೆದು ವೊಯ್ದರವಳ
ನೀರು ಯೇಳ ರಾಚೆಗೆ!

ರಸಿಕ ! ನಿನ್ನ ನೆನಹಿನಲ್ಲಿ
ಕನಲುತಿರ್ದೀಕೆಯ
ಸಸಿಯ ಮೊಗವ ಕಂಡೆನೊಮ್ಮ
ಕನಸ ಸಂಚರಿಯಲಿ.

ಕಮಲ ನಾಳ ದೊಳಗೆ ಯಿಳಿದು
ಕಂಡೆ ನಾ ಶರೆಮನೆ.
ರಮಣಿ ಇವಳ ಬಿಡಿಸಿ ತಂದೆ
ಪುಂಡರಂ ಖಂಡ್ರಿಸಿ.

ನುಡಿಯ ಲಲಿತ ಗೃಹವ ಕಟ್ಟಿ
ಕುವರಿಯನ್ನಿಟ್ಟೆನು,
ಒಡನೆ ಛಲವ ಹಿಡಿದವಳವಳು
ಅವನ ತೋರೆನುತಲಿ!

ರತುನ ದ್ವಾರ ಮುಚ್ಚದಿಹುದು
ಸತತ ರಾಗಿಣಿಯರು
ಪಧಿಕ! ರಸಿಕ! ಬರುವನೆಂದು
ಸತತ ಕಾದಿರುವರು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...