Home / ಕವನ / ಕವಿತೆ / ಹೇಂಟೆಯ ಕವಿತೆ

ಹೇಂಟೆಯ ಕವಿತೆ

ಕವನಗಳ ಕಟ್ಟಿ
ನವ್ಯ ನವೋದಯ ಪ್ರಗತಿಶೀಲದ
ಅಂಗಿ ತೊಟ್ಟವರು
ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ
ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು
ಮೇಲೊಂದು ಜಾಕೀಟು ತೊಟ್ಟು
ಮೈಕು ಹಿಡಿದು ಮೆರೆಯುತ್ತ
ಅರೇ! ನಾನೇನು ಹೇಳುತ್ತಿದ್ದೇನೆ
ಕವಿತೆ ಕಟ್ಟುವ ಬಗ್ಗೆ ಅಲ್ಲವೇ?
ಬನ್ನಿ.. ಹಳ್ಳಿಗಾಡಿನ ಕೋಳಿಗೂಡಿನ ಮನೆಗೆ
ಅಲ್ಲಿ ಕವಿತೆಯೇ ಕಾಣುತ್ತಾಳೆ ನಿಮಗೆ

ಕೋಳಿಗೂಡಿನ ಕಥೆಯೇನೂ
ಸಾಮಾನ್ಯವಲ್ಲ
ಅಲ್ಲಿ ಹುಂಜ ಎಂಬ ಗಂಡ ಬರಿಯ ಬೀಜದಾತ
ದಿನಬೆಳಗು ಮೊಟ್ಟೆ ಮೇಲೆ ಕೂತು
ಕಾವು ಕೊಟ್ಟು,
ಕೃಶವಾಗಿ ಕುಡಿ ಬರಿಸಲು
ಕಾಯುತ್ತದೆ ಕವಿತೆ
ಹಠತೊಟ್ಟ ಯೋಗಿಯಂತೆ.

ತಲೆಗೆ ಜುಟ್ಟು ಬಂದ ಮಾತ್ರಕ್ಕೆ
ತಲೆಯೊಳಗೆ ಇದ್ದದ್ದೆಲ್ಲಾ ವಾಙ್ಮಯ
ಎಂದುಕೊಂಡ ಹಿರಿಯ ಹುಂಜಗಳು
ಹೊಗಳಿದ್ದು ತೆಗಳಿದ್ದು
ಅದೇ ಆಕಾರದ ಜುಟ್ಟನ್ನು ಮಾತ್ರ
ಹೇಂಟೆಯ ಸಾಗರದ ಹರವುಳ್ಳ ಪಕ್ಕೆಗಳ
ಅಳೆಯುವುದು ಬಿಡಿ, ಅರಿತುಕೊಳ್ಳಲು ಆಗದು
ಜಡಜುಟ್ಟಿಗೆ

ಮಣ್ಣನೆಲವನ್ನು ಮುರುಟಿದ ಉಗುರುಗಳಿಂದ
ಬಗೆದು ಕೊನೆಯ ಅಲಗಿನ
ತುದಿ ಮುರಿಯುವ ತನಕವೂ
ಬಡಿದಾಡುವ ಕವನ ಸಿಕ್ಕ ಸಿಕ್ಕ ಕ್ರೀಮಿ ಕೀಟಗಳ
ಕಂಡಲ್ಲೆ ಕುಟುಕಿ ಬಾಯಿಗಿಡುತ್ತದೆ ಮರಿಗೆ
ತನ್ನೊಡಲ ಹಸಿವ ಇಂಗಿಸಿಕೊಳ್ಳುತ್ತದೆ
ಉಗುಳನುಂಗುತ್ತ.

ಇಷ್ಟಿಷ್ಟೇ ಉಂಡೆಯಾಕಾರದ ಮುದ್ದೆ
ಮರಿಗಳನ್ನು ಕಾಯುವುದು ಹದ್ದಿನ
ವಕ್ರದೃಷ್ಟಿಯಿಂದ ಕಾಪಾಡಿಕೊಳ್ಳುವುದೇನೂ
ಸುಲಭವಲ್ಲ. ಕೊಕ್ಕೋಕ್ಕೋ‌ಓ‌ಓ‌ಓ
ಕರೆದು ಕರೆದು ಪಕ್ಕೆಯಲ್ಲಿ
ಬಚ್ಚಿಟ್ಟುಕೊಂಡಷ್ಟು ಎಳವೆಯ ಮೋಜು
ಹುಡುಗಾಟ ಪುಕ್ಕ ಏರಿಸಿ ಪುಟಪುಟ ಹೊರಬಿದ್ದು
ಜಗವ ನೋಡುವ ಮರಿಗವನಗಳು
ಕಂಟಕಕ್ಕೆ ಎದುರಾದವೋ
ಕಾಲು ಕೆರೆದು ಸೆಟೆದು
ಹದ್ದಿನ ಮೇಲೆರಗುತ್ತದೆ ಕವಿತೆ
ಥೇಟ್, ಮರಿ ಇಟ್ಟ ಹೆಣ್ಣು ನಾಯಿಯಂತೆ.

ಹಿಂದೊಮ್ಮೆ ಬೇಟದ ಅಂಗಣವಾಗಿದ್ದ
ಹಳ್ಳಿಗಾಡಿನ ಕುತ್ತರಿಯ ಕಣ
ಹೇಂಟೆಯ ಬೇಟೆಯ ಕಣವೂ.
ಮರಿಕೋಳಿಗಳ ಟೋಳಿ ಕಟ್ಟಿಕೊಂಡು ಬರುವ
ಹೇಂಟೆ ಜಂಗಮ ಕವಿತೆ
ಈಗ ಅರ್‍ಥೈಸಿಕೊಳ್ಳಿ ನಿಮಗೆ ಬೇಕಾದಂತೆ
ನವ್ಯವೋ ನವೋದಯವೋ
ಪ್ರಗತಿಶೀಲವೋ,
ಸ್ತ್ರೀವಾದ, ದಲಿತ ಬಂಡಾಯವೋ
ಈ ಹೇಂಟೆ ಕವಿತೆ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...