Home / ಕವನ / ಕವಿತೆ / ಹೇಂಟೆಯ ಕವಿತೆ

ಹೇಂಟೆಯ ಕವಿತೆ

ಕವನಗಳ ಕಟ್ಟಿ
ನವ್ಯ ನವೋದಯ ಪ್ರಗತಿಶೀಲದ
ಅಂಗಿ ತೊಟ್ಟವರು
ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ
ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು
ಮೇಲೊಂದು ಜಾಕೀಟು ತೊಟ್ಟು
ಮೈಕು ಹಿಡಿದು ಮೆರೆಯುತ್ತ
ಅರೇ! ನಾನೇನು ಹೇಳುತ್ತಿದ್ದೇನೆ
ಕವಿತೆ ಕಟ್ಟುವ ಬಗ್ಗೆ ಅಲ್ಲವೇ?
ಬನ್ನಿ.. ಹಳ್ಳಿಗಾಡಿನ ಕೋಳಿಗೂಡಿನ ಮನೆಗೆ
ಅಲ್ಲಿ ಕವಿತೆಯೇ ಕಾಣುತ್ತಾಳೆ ನಿಮಗೆ

ಕೋಳಿಗೂಡಿನ ಕಥೆಯೇನೂ
ಸಾಮಾನ್ಯವಲ್ಲ
ಅಲ್ಲಿ ಹುಂಜ ಎಂಬ ಗಂಡ ಬರಿಯ ಬೀಜದಾತ
ದಿನಬೆಳಗು ಮೊಟ್ಟೆ ಮೇಲೆ ಕೂತು
ಕಾವು ಕೊಟ್ಟು,
ಕೃಶವಾಗಿ ಕುಡಿ ಬರಿಸಲು
ಕಾಯುತ್ತದೆ ಕವಿತೆ
ಹಠತೊಟ್ಟ ಯೋಗಿಯಂತೆ.

ತಲೆಗೆ ಜುಟ್ಟು ಬಂದ ಮಾತ್ರಕ್ಕೆ
ತಲೆಯೊಳಗೆ ಇದ್ದದ್ದೆಲ್ಲಾ ವಾಙ್ಮಯ
ಎಂದುಕೊಂಡ ಹಿರಿಯ ಹುಂಜಗಳು
ಹೊಗಳಿದ್ದು ತೆಗಳಿದ್ದು
ಅದೇ ಆಕಾರದ ಜುಟ್ಟನ್ನು ಮಾತ್ರ
ಹೇಂಟೆಯ ಸಾಗರದ ಹರವುಳ್ಳ ಪಕ್ಕೆಗಳ
ಅಳೆಯುವುದು ಬಿಡಿ, ಅರಿತುಕೊಳ್ಳಲು ಆಗದು
ಜಡಜುಟ್ಟಿಗೆ

ಮಣ್ಣನೆಲವನ್ನು ಮುರುಟಿದ ಉಗುರುಗಳಿಂದ
ಬಗೆದು ಕೊನೆಯ ಅಲಗಿನ
ತುದಿ ಮುರಿಯುವ ತನಕವೂ
ಬಡಿದಾಡುವ ಕವನ ಸಿಕ್ಕ ಸಿಕ್ಕ ಕ್ರೀಮಿ ಕೀಟಗಳ
ಕಂಡಲ್ಲೆ ಕುಟುಕಿ ಬಾಯಿಗಿಡುತ್ತದೆ ಮರಿಗೆ
ತನ್ನೊಡಲ ಹಸಿವ ಇಂಗಿಸಿಕೊಳ್ಳುತ್ತದೆ
ಉಗುಳನುಂಗುತ್ತ.

ಇಷ್ಟಿಷ್ಟೇ ಉಂಡೆಯಾಕಾರದ ಮುದ್ದೆ
ಮರಿಗಳನ್ನು ಕಾಯುವುದು ಹದ್ದಿನ
ವಕ್ರದೃಷ್ಟಿಯಿಂದ ಕಾಪಾಡಿಕೊಳ್ಳುವುದೇನೂ
ಸುಲಭವಲ್ಲ. ಕೊಕ್ಕೋಕ್ಕೋ‌ಓ‌ಓ‌ಓ
ಕರೆದು ಕರೆದು ಪಕ್ಕೆಯಲ್ಲಿ
ಬಚ್ಚಿಟ್ಟುಕೊಂಡಷ್ಟು ಎಳವೆಯ ಮೋಜು
ಹುಡುಗಾಟ ಪುಕ್ಕ ಏರಿಸಿ ಪುಟಪುಟ ಹೊರಬಿದ್ದು
ಜಗವ ನೋಡುವ ಮರಿಗವನಗಳು
ಕಂಟಕಕ್ಕೆ ಎದುರಾದವೋ
ಕಾಲು ಕೆರೆದು ಸೆಟೆದು
ಹದ್ದಿನ ಮೇಲೆರಗುತ್ತದೆ ಕವಿತೆ
ಥೇಟ್, ಮರಿ ಇಟ್ಟ ಹೆಣ್ಣು ನಾಯಿಯಂತೆ.

ಹಿಂದೊಮ್ಮೆ ಬೇಟದ ಅಂಗಣವಾಗಿದ್ದ
ಹಳ್ಳಿಗಾಡಿನ ಕುತ್ತರಿಯ ಕಣ
ಹೇಂಟೆಯ ಬೇಟೆಯ ಕಣವೂ.
ಮರಿಕೋಳಿಗಳ ಟೋಳಿ ಕಟ್ಟಿಕೊಂಡು ಬರುವ
ಹೇಂಟೆ ಜಂಗಮ ಕವಿತೆ
ಈಗ ಅರ್‍ಥೈಸಿಕೊಳ್ಳಿ ನಿಮಗೆ ಬೇಕಾದಂತೆ
ನವ್ಯವೋ ನವೋದಯವೋ
ಪ್ರಗತಿಶೀಲವೋ,
ಸ್ತ್ರೀವಾದ, ದಲಿತ ಬಂಡಾಯವೋ
ಈ ಹೇಂಟೆ ಕವಿತೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...