Home / ಕವನ / ಕವಿತೆ / ಹೇಂಟೆಯ ಕವಿತೆ

ಹೇಂಟೆಯ ಕವಿತೆ

ಕವನಗಳ ಕಟ್ಟಿ
ನವ್ಯ ನವೋದಯ ಪ್ರಗತಿಶೀಲದ
ಅಂಗಿ ತೊಟ್ಟವರು
ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ
ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು
ಮೇಲೊಂದು ಜಾಕೀಟು ತೊಟ್ಟು
ಮೈಕು ಹಿಡಿದು ಮೆರೆಯುತ್ತ
ಅರೇ! ನಾನೇನು ಹೇಳುತ್ತಿದ್ದೇನೆ
ಕವಿತೆ ಕಟ್ಟುವ ಬಗ್ಗೆ ಅಲ್ಲವೇ?
ಬನ್ನಿ.. ಹಳ್ಳಿಗಾಡಿನ ಕೋಳಿಗೂಡಿನ ಮನೆಗೆ
ಅಲ್ಲಿ ಕವಿತೆಯೇ ಕಾಣುತ್ತಾಳೆ ನಿಮಗೆ

ಕೋಳಿಗೂಡಿನ ಕಥೆಯೇನೂ
ಸಾಮಾನ್ಯವಲ್ಲ
ಅಲ್ಲಿ ಹುಂಜ ಎಂಬ ಗಂಡ ಬರಿಯ ಬೀಜದಾತ
ದಿನಬೆಳಗು ಮೊಟ್ಟೆ ಮೇಲೆ ಕೂತು
ಕಾವು ಕೊಟ್ಟು,
ಕೃಶವಾಗಿ ಕುಡಿ ಬರಿಸಲು
ಕಾಯುತ್ತದೆ ಕವಿತೆ
ಹಠತೊಟ್ಟ ಯೋಗಿಯಂತೆ.

ತಲೆಗೆ ಜುಟ್ಟು ಬಂದ ಮಾತ್ರಕ್ಕೆ
ತಲೆಯೊಳಗೆ ಇದ್ದದ್ದೆಲ್ಲಾ ವಾಙ್ಮಯ
ಎಂದುಕೊಂಡ ಹಿರಿಯ ಹುಂಜಗಳು
ಹೊಗಳಿದ್ದು ತೆಗಳಿದ್ದು
ಅದೇ ಆಕಾರದ ಜುಟ್ಟನ್ನು ಮಾತ್ರ
ಹೇಂಟೆಯ ಸಾಗರದ ಹರವುಳ್ಳ ಪಕ್ಕೆಗಳ
ಅಳೆಯುವುದು ಬಿಡಿ, ಅರಿತುಕೊಳ್ಳಲು ಆಗದು
ಜಡಜುಟ್ಟಿಗೆ

ಮಣ್ಣನೆಲವನ್ನು ಮುರುಟಿದ ಉಗುರುಗಳಿಂದ
ಬಗೆದು ಕೊನೆಯ ಅಲಗಿನ
ತುದಿ ಮುರಿಯುವ ತನಕವೂ
ಬಡಿದಾಡುವ ಕವನ ಸಿಕ್ಕ ಸಿಕ್ಕ ಕ್ರೀಮಿ ಕೀಟಗಳ
ಕಂಡಲ್ಲೆ ಕುಟುಕಿ ಬಾಯಿಗಿಡುತ್ತದೆ ಮರಿಗೆ
ತನ್ನೊಡಲ ಹಸಿವ ಇಂಗಿಸಿಕೊಳ್ಳುತ್ತದೆ
ಉಗುಳನುಂಗುತ್ತ.

ಇಷ್ಟಿಷ್ಟೇ ಉಂಡೆಯಾಕಾರದ ಮುದ್ದೆ
ಮರಿಗಳನ್ನು ಕಾಯುವುದು ಹದ್ದಿನ
ವಕ್ರದೃಷ್ಟಿಯಿಂದ ಕಾಪಾಡಿಕೊಳ್ಳುವುದೇನೂ
ಸುಲಭವಲ್ಲ. ಕೊಕ್ಕೋಕ್ಕೋ‌ಓ‌ಓ‌ಓ
ಕರೆದು ಕರೆದು ಪಕ್ಕೆಯಲ್ಲಿ
ಬಚ್ಚಿಟ್ಟುಕೊಂಡಷ್ಟು ಎಳವೆಯ ಮೋಜು
ಹುಡುಗಾಟ ಪುಕ್ಕ ಏರಿಸಿ ಪುಟಪುಟ ಹೊರಬಿದ್ದು
ಜಗವ ನೋಡುವ ಮರಿಗವನಗಳು
ಕಂಟಕಕ್ಕೆ ಎದುರಾದವೋ
ಕಾಲು ಕೆರೆದು ಸೆಟೆದು
ಹದ್ದಿನ ಮೇಲೆರಗುತ್ತದೆ ಕವಿತೆ
ಥೇಟ್, ಮರಿ ಇಟ್ಟ ಹೆಣ್ಣು ನಾಯಿಯಂತೆ.

ಹಿಂದೊಮ್ಮೆ ಬೇಟದ ಅಂಗಣವಾಗಿದ್ದ
ಹಳ್ಳಿಗಾಡಿನ ಕುತ್ತರಿಯ ಕಣ
ಹೇಂಟೆಯ ಬೇಟೆಯ ಕಣವೂ.
ಮರಿಕೋಳಿಗಳ ಟೋಳಿ ಕಟ್ಟಿಕೊಂಡು ಬರುವ
ಹೇಂಟೆ ಜಂಗಮ ಕವಿತೆ
ಈಗ ಅರ್‍ಥೈಸಿಕೊಳ್ಳಿ ನಿಮಗೆ ಬೇಕಾದಂತೆ
ನವ್ಯವೋ ನವೋದಯವೋ
ಪ್ರಗತಿಶೀಲವೋ,
ಸ್ತ್ರೀವಾದ, ದಲಿತ ಬಂಡಾಯವೋ
ಈ ಹೇಂಟೆ ಕವಿತೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...