Home / ಕವನ / ಕವಿತೆ / ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ.
ತನ್ನ ದಾರಿಯ ಪಥ ಸಂಚಲನ
ಸರಳೀಕರಿಸಿಕೊಳ್ಳುತ್ತ

ಗೊತ್ತು ಅವಳಿಗೆ,
ಆಸ್ಟ್ರೇಲಿಯಾದ ಏಕಾಂತ ಬೀದಿಗಳು
ಬೆಂಗಳೂರಿನ ಕಾಂಕ್ರೀಟು
ಕಾಡುಗಳ ಕಾಲುದಾರಿಗಳು
ನಮ್ಮ ನಿಮ್ಮೂರಿನ ಕಾಡಿನ
ಕವಲು ಹಾದಿಗಳು
ಚೂರು ಬದಲಾಗಿಲ್ಲ.
ನಾಯಿಗಳ ಆಕ್ರಮಣ
ಕೊಳ್ಳೆ ಹೊಡೆಯುವುದ ಬಿಟ್ಟಿಲ್ಲ.
ನಡೆಯುತ್ತಿದ್ದಾಳೆ ಅವಳು

ತುಂಡಂಗಿ ಗೀರಿದ ಉದ್ರೇಕ
ತಡೆಯಲಾಗದೇ
ತೋಳಗಳು ಮಾಂಸದ ರುಚಿಗೆ ಬಿದ್ದಿವೆ
ಎಂದೆಲ್ಲಾ ಜನರಾಡಿಕೊಳ್ಳುತ್ತಾರೆ.
ನಿಜಕ್ಕೂ ಅದಲ್ಲ.
ಬುರಖಾದ ಒಳಗಿನ ಮುಚ್ಚಿದ ಬೆಚ್ಚಗಿನ
ಮೈ ಕೂಡ ವಿವರ್ಣವಾಗಿದೆ.

ಕರಿಮಣಿಯ ಜೊತೆಗೆ ಅಲ್ಲಲ್ಲಿ
ಹೊಳೆವ ಗುಂಡುಗಳ ಪೋಣಿಸಿ
ಕನಸಿನಲ್ಲಿ ಮಾಲೆ ಕಟ್ಟುತ್ತಾಳೆ
ಲಾಸ್ಯವಾಡುತ್ತದೆ ತುಟಿಯಂಚು
ತಟ್ಟನೆ ಕೆಂಪು ದೀಪ ಉರಿಯುತ್ತದೆ.
ಭಗ್ನಗೊಳ್ಳುತ್ತವೆ,
ಸೆಟೆದು ಚೂರಾಗುತ್ತವೆ ಮಣಿಗಳು
ತುಟಿಯೊಡೆದು ರಕ್ತ ಒಸರುತ್ತದೆ.
ಮೂಲೆಯಲ್ಲಿ ರಾಶಿ ತುಪ್ಪೆಯಾಗಿರುವ
ಬಲೂನುಗಳು ಎದ್ದು
ವಿಕಾರ, ವಿದ್ರೂಪ ಭಂಗಿಗಳಲ್ಲಿ
ಗೋಡೆ ಎತ್ತರಕೆ ಜಿಗಿದು
ಜಡ್ಡುಗಟ್ಟಿಸುತ್ತವೆ ಅವಳನ್ನು.
ಆದರೂ ಕಣ್ಣು ಮುಚ್ಚಿ ಕನಸೇರುತ್ತಾಳೆ
ಮಣಿ ಪೋಣಿಸುತ್ತಾಳೆ.

ದಾರಿ ದಾರಿಯ ಮಧ್ಯೆ
ವೈರುಧ್ಯಗಳ ಕವಲು ಸೀಳುಗಳು
ಅಣಕಿಸುತ್ತವೆ ದಿಕ್ಕು ತಪ್ಪಿಸುತ್ತವೆ ಕೂಡಾ
ಮುಡಿ ಕಟ್ಟಿ, ಮುಡಿ ಬಿಚ್ಚಿ
ಬೆದರು ಬೊಂಬೆಗಳು ಯಾತ್ರೆಯಲ್ಲೂ
ಜಾತ್ರೆ ಮಾಡುತ್ತವೆ.
ಬಾವಿಕಟ್ಟೆಯ ಎಂದೂ ಒಣಗದ ಹಸಿಯಂತೆ.

ಯೂರೋಪಿನ ಕರಿಯ ಜೀತರ
ಮಾರಣ ಹೋಮ
ಇಸ್ರೇಲು, ಪ್ಯಾಲಿಸ್ತೇನಿನ ಕರಿಯ
ಬಂದೂಕುಗಳು
ಅರಬರ ಮರಳುಗಾಡು
ಕೊರಿಯಾದ ಕಗ್ಗೋಲೆಗಳು
ಸರಣಿ ಅನುಕ್ರಮವಾಗಿ
ಕೆಂಪು ಬಣ್ಣದ ಬಟ್ಟೆಗಳಲ್ಲಿ
ಕಸ ಎತ್ತಿ ಸುರುವಿ ಹಾಕುತ್ತವೆ.
ಕಥೆ ಹೇಳುತ್ತವೆ.
ಕಣ್ಣಿನ ದಳಗಳು ಕೊಳದಲ್ಲಿ ಮುಳುಗೇಳುತ್ತವೆ.
ನಡೆಯುತ್ತಿದ್ದಾಳೆ ಆಕೆ.

ಕಲಾಯಿ ಕಂದಿದ ತಾಮ್ರದ
ಪಾತ್ರೆಯಲ್ಲಿ ಅನ್ನಕ್ಕಿಡಬಾರದು
ಅಂದುಕೊಳ್ಳುತ್ತ ನಡೆಯುತ್ತಿದ್ದಾಳೆ.
ನಿತ್ಯಪಥದ ಮಿಗೆಯಗಲ ಅಂಕುರಿಸಿದ
ಕೊಳೆಗಳ ಕೈಗೆಟುಕುವಷ್ಟು ಕಿತ್ತೆಸೆದು
ಮತ್ತೆ ನಡೆಯುತ್ತಾಳೆ.
ಅಕ್ಷರದ ಅರಮನೆಗೆ ಪರಿಮಳವ
ಮಾರಿ ಬರಬೇಕು ಎನ್ನುತ್ತ
ನಡೆಯುತ್ತಿದ್ದಾಳೆ ಅವಳು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...