Home / ಕವನ / ಕವಿತೆ / ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ

ಅವಳು ನಡೆಯುತ್ತಿದ್ದಾಳೆ.
ತನ್ನ ದಾರಿಯ ಪಥ ಸಂಚಲನ
ಸರಳೀಕರಿಸಿಕೊಳ್ಳುತ್ತ

ಗೊತ್ತು ಅವಳಿಗೆ,
ಆಸ್ಟ್ರೇಲಿಯಾದ ಏಕಾಂತ ಬೀದಿಗಳು
ಬೆಂಗಳೂರಿನ ಕಾಂಕ್ರೀಟು
ಕಾಡುಗಳ ಕಾಲುದಾರಿಗಳು
ನಮ್ಮ ನಿಮ್ಮೂರಿನ ಕಾಡಿನ
ಕವಲು ಹಾದಿಗಳು
ಚೂರು ಬದಲಾಗಿಲ್ಲ.
ನಾಯಿಗಳ ಆಕ್ರಮಣ
ಕೊಳ್ಳೆ ಹೊಡೆಯುವುದ ಬಿಟ್ಟಿಲ್ಲ.
ನಡೆಯುತ್ತಿದ್ದಾಳೆ ಅವಳು

ತುಂಡಂಗಿ ಗೀರಿದ ಉದ್ರೇಕ
ತಡೆಯಲಾಗದೇ
ತೋಳಗಳು ಮಾಂಸದ ರುಚಿಗೆ ಬಿದ್ದಿವೆ
ಎಂದೆಲ್ಲಾ ಜನರಾಡಿಕೊಳ್ಳುತ್ತಾರೆ.
ನಿಜಕ್ಕೂ ಅದಲ್ಲ.
ಬುರಖಾದ ಒಳಗಿನ ಮುಚ್ಚಿದ ಬೆಚ್ಚಗಿನ
ಮೈ ಕೂಡ ವಿವರ್ಣವಾಗಿದೆ.

ಕರಿಮಣಿಯ ಜೊತೆಗೆ ಅಲ್ಲಲ್ಲಿ
ಹೊಳೆವ ಗುಂಡುಗಳ ಪೋಣಿಸಿ
ಕನಸಿನಲ್ಲಿ ಮಾಲೆ ಕಟ್ಟುತ್ತಾಳೆ
ಲಾಸ್ಯವಾಡುತ್ತದೆ ತುಟಿಯಂಚು
ತಟ್ಟನೆ ಕೆಂಪು ದೀಪ ಉರಿಯುತ್ತದೆ.
ಭಗ್ನಗೊಳ್ಳುತ್ತವೆ,
ಸೆಟೆದು ಚೂರಾಗುತ್ತವೆ ಮಣಿಗಳು
ತುಟಿಯೊಡೆದು ರಕ್ತ ಒಸರುತ್ತದೆ.
ಮೂಲೆಯಲ್ಲಿ ರಾಶಿ ತುಪ್ಪೆಯಾಗಿರುವ
ಬಲೂನುಗಳು ಎದ್ದು
ವಿಕಾರ, ವಿದ್ರೂಪ ಭಂಗಿಗಳಲ್ಲಿ
ಗೋಡೆ ಎತ್ತರಕೆ ಜಿಗಿದು
ಜಡ್ಡುಗಟ್ಟಿಸುತ್ತವೆ ಅವಳನ್ನು.
ಆದರೂ ಕಣ್ಣು ಮುಚ್ಚಿ ಕನಸೇರುತ್ತಾಳೆ
ಮಣಿ ಪೋಣಿಸುತ್ತಾಳೆ.

ದಾರಿ ದಾರಿಯ ಮಧ್ಯೆ
ವೈರುಧ್ಯಗಳ ಕವಲು ಸೀಳುಗಳು
ಅಣಕಿಸುತ್ತವೆ ದಿಕ್ಕು ತಪ್ಪಿಸುತ್ತವೆ ಕೂಡಾ
ಮುಡಿ ಕಟ್ಟಿ, ಮುಡಿ ಬಿಚ್ಚಿ
ಬೆದರು ಬೊಂಬೆಗಳು ಯಾತ್ರೆಯಲ್ಲೂ
ಜಾತ್ರೆ ಮಾಡುತ್ತವೆ.
ಬಾವಿಕಟ್ಟೆಯ ಎಂದೂ ಒಣಗದ ಹಸಿಯಂತೆ.

ಯೂರೋಪಿನ ಕರಿಯ ಜೀತರ
ಮಾರಣ ಹೋಮ
ಇಸ್ರೇಲು, ಪ್ಯಾಲಿಸ್ತೇನಿನ ಕರಿಯ
ಬಂದೂಕುಗಳು
ಅರಬರ ಮರಳುಗಾಡು
ಕೊರಿಯಾದ ಕಗ್ಗೋಲೆಗಳು
ಸರಣಿ ಅನುಕ್ರಮವಾಗಿ
ಕೆಂಪು ಬಣ್ಣದ ಬಟ್ಟೆಗಳಲ್ಲಿ
ಕಸ ಎತ್ತಿ ಸುರುವಿ ಹಾಕುತ್ತವೆ.
ಕಥೆ ಹೇಳುತ್ತವೆ.
ಕಣ್ಣಿನ ದಳಗಳು ಕೊಳದಲ್ಲಿ ಮುಳುಗೇಳುತ್ತವೆ.
ನಡೆಯುತ್ತಿದ್ದಾಳೆ ಆಕೆ.

ಕಲಾಯಿ ಕಂದಿದ ತಾಮ್ರದ
ಪಾತ್ರೆಯಲ್ಲಿ ಅನ್ನಕ್ಕಿಡಬಾರದು
ಅಂದುಕೊಳ್ಳುತ್ತ ನಡೆಯುತ್ತಿದ್ದಾಳೆ.
ನಿತ್ಯಪಥದ ಮಿಗೆಯಗಲ ಅಂಕುರಿಸಿದ
ಕೊಳೆಗಳ ಕೈಗೆಟುಕುವಷ್ಟು ಕಿತ್ತೆಸೆದು
ಮತ್ತೆ ನಡೆಯುತ್ತಾಳೆ.
ಅಕ್ಷರದ ಅರಮನೆಗೆ ಪರಿಮಳವ
ಮಾರಿ ಬರಬೇಕು ಎನ್ನುತ್ತ
ನಡೆಯುತ್ತಿದ್ದಾಳೆ ಅವಳು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...