Home / ಕವನ / ಕವಿತೆ / ಎಲ್ಲೀ ಕಾಣೆ ಎಲ್ಲೀ ಕಾಣೆ

ಎಲ್ಲೀ ಕಾಣೆ ಎಲ್ಲೀ ಕಾಣೆ

ಎಲ್ಲೀ ಕಾಣೆ ಎಲ್ಲೀ ಕಾಣೆ
ಎಲ್ಲಮ್ಮನಂಥಾಕಿನ ಎಲ್ಲೀ ಕಾಣೆ        ||ಪ||

ಎಲ್ಲೀ ಕಾಣೆನು ಶಿವನೊಲ್ಲಭಿ ಎನಿಸಿದಿ
ಕಲ್ಲಿನೊಳಗೆ ಪುಟ್ಟಿ ಉಗುರುಗೊಳ್ಳಕೆ ಇಳದಿ    ||ಅ.ಪ.||

ಬಾಳಮಂದಿ ಬತ್ತಲ ಮಾಡಿದಿ ನೀ ಎಂಥಾಕೆವ್ವಾ
ಬೇವನುಡಿಸಿ ಮೋಜ ನೋಡಿದಿ
ತಾಳ ಜಾಗುಟೆ ಗೆಜ್ಜೆ ನುಡಿಸಿ
ಕಾಲೊಳು ಕಂಚಿನ ಕೊಳಾ ಹಾಕಿ ಕುಣಿಸ್ಯಾಡಿದಿ
ಮ್ಯಾಳಗೊಂಡು ಭಿಕ್ಷೆ ಬೇಡಿಸಿದಿ
ಜೋಲಿಗೆ ಹಾಕಿ ಜೋಗವ್ವೆಂದು ಜನಕ ಕಾಡಿದಿ
ಕಳ್ಳ ಸುಳ್ಳರಿಗೊಲಿದಿ ಕಾಲ ಕರ್ಮವ ಗೆಲಿದಿ
ಭಲೆರೆ ಭಲೆರೆ ಏಳುಕೊಳ್ಳನಾಳುವ ಶರಣೆ        ||೧||

ಬಲ್ಲಿದವರನೆಲ್ಲ ಹಿಡಿದು ಬೆನ್ನಿಲೆ ಸೀಲಿ
ಬಾಯಿಗೆ ಬೀಗ ಜಡಿದು
ಸಲ್ಲು ಸಲ್ಲಿಗೊಮ್ಮೆ ನುಡಿದು
ಉಧೋ ಎಂಬುದೊಳ್ಳೆದವ್ವ ನಿನ್ನ ಬಿರುದು
ಚಲ್ವ ಹೆಂಗಸರ ಶೀರಿ ಸೆಳೆದು
ಚಲ್ಲಣ ತೊಡಿಸಿ ಬುಲ್ಲಿ ತುಂಬಾ ಅರ್ಲ ಜಡಿದು
ಕೋಲುದೀವಟಿಗಿ ಬತ್ತಿ ಮೇಲೆ ಜಗವ ಹೊತ್ತಿ
ಭೂಲೋಕದೊಳು ನಿನ್ನ ಜಾಲಕಿನ್ನೆಣೆಯುಂಟೆ?    ||೨||

ಮಂಡಲದೊಳು ಮಾಯಕಾರ್ತಿ ಜಮದಗ್ನಿಮುನಿಯ
ಚಂಡಕೊರಸಿದ ಮಾಯಕಾರ್ತಿ
ದಂಡು ತಂದು ಗಿರಿಗೆ ಮುತ್ತಿದಿ ಮುನಿಗಳ ಗವಿಗೆ
ಗುಂಡ ಬಡಿದು ಗುಮರಿ ಹಾಕಿದಿ
ಮಿಂಡೇರಂತೆ ನೀರ ತರತಿ ಮಳಲಿನ ಕೊಡಕೆ
ದುಂಡ ಹಾವಿನ ಸಿಂಬಿ ಸುತ್ತಿದಿ
ಗಂಡ-ಹೆಂಡಿರ ಬಿಡಿಸಿ ಭಂಡಾರ ಚೀಲವ ಹೊರಿಸಿ
ರಂಡೀಹುಣ್ಣಿವೆಗಳಿದು ರಾಜಮುತ್ತೈದಿಯಾದೆವ್ವ    ||೩||

ಚಿಕ್ಕ ಮಲಕಿನ ದುರದುಂಡಿ ನೀ ಎಂಥಾಕೆವ್ವಾ
ಚಿಕ್ಕ ಮಗನೊಳು ಕಲಹಗೊಂಡಿ
ಎಕ್ಕಯ್ಯನ ಪ್ರಾಣಗೊಂಡಿ
ಕಕ್ಕಯ್ಯ ಶರಣರಿಗೊಪ್ಪುವಂಥ ರಾಜಮಿಂಡಿ
ಸೊಕ್ಕಿದ ಜನರ ಮನಸ ಕಂಡಿ
ಕಾರಿಕ ಕಾಯಿಕ್ಕಿ ಕರ್ಪುರ ಕಾಣಿಕಗೊಂಡಿ
ದಿಕ್ಕಿನೋಳ್ ಶಿಶುನಾಳ ಮುಕ್ಕಣ್ನನೊಳುಕೂಡಿ
ಅಕ್ಕರದಲಿ ಗುರುನಾಥ ಗೋವಿಂದಗೊಲಿದಿ        ||೪||

*    *    *    *

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...