Home / ಕವನ / ಕವಿತೆ / ಎಲ್ಲೀ ಕಾಣೆ ಎಲ್ಲೀ ಕಾಣೆ

ಎಲ್ಲೀ ಕಾಣೆ ಎಲ್ಲೀ ಕಾಣೆ

ಎಲ್ಲೀ ಕಾಣೆ ಎಲ್ಲೀ ಕಾಣೆ
ಎಲ್ಲಮ್ಮನಂಥಾಕಿನ ಎಲ್ಲೀ ಕಾಣೆ        ||ಪ||

ಎಲ್ಲೀ ಕಾಣೆನು ಶಿವನೊಲ್ಲಭಿ ಎನಿಸಿದಿ
ಕಲ್ಲಿನೊಳಗೆ ಪುಟ್ಟಿ ಉಗುರುಗೊಳ್ಳಕೆ ಇಳದಿ    ||ಅ.ಪ.||

ಬಾಳಮಂದಿ ಬತ್ತಲ ಮಾಡಿದಿ ನೀ ಎಂಥಾಕೆವ್ವಾ
ಬೇವನುಡಿಸಿ ಮೋಜ ನೋಡಿದಿ
ತಾಳ ಜಾಗುಟೆ ಗೆಜ್ಜೆ ನುಡಿಸಿ
ಕಾಲೊಳು ಕಂಚಿನ ಕೊಳಾ ಹಾಕಿ ಕುಣಿಸ್ಯಾಡಿದಿ
ಮ್ಯಾಳಗೊಂಡು ಭಿಕ್ಷೆ ಬೇಡಿಸಿದಿ
ಜೋಲಿಗೆ ಹಾಕಿ ಜೋಗವ್ವೆಂದು ಜನಕ ಕಾಡಿದಿ
ಕಳ್ಳ ಸುಳ್ಳರಿಗೊಲಿದಿ ಕಾಲ ಕರ್ಮವ ಗೆಲಿದಿ
ಭಲೆರೆ ಭಲೆರೆ ಏಳುಕೊಳ್ಳನಾಳುವ ಶರಣೆ        ||೧||

ಬಲ್ಲಿದವರನೆಲ್ಲ ಹಿಡಿದು ಬೆನ್ನಿಲೆ ಸೀಲಿ
ಬಾಯಿಗೆ ಬೀಗ ಜಡಿದು
ಸಲ್ಲು ಸಲ್ಲಿಗೊಮ್ಮೆ ನುಡಿದು
ಉಧೋ ಎಂಬುದೊಳ್ಳೆದವ್ವ ನಿನ್ನ ಬಿರುದು
ಚಲ್ವ ಹೆಂಗಸರ ಶೀರಿ ಸೆಳೆದು
ಚಲ್ಲಣ ತೊಡಿಸಿ ಬುಲ್ಲಿ ತುಂಬಾ ಅರ್ಲ ಜಡಿದು
ಕೋಲುದೀವಟಿಗಿ ಬತ್ತಿ ಮೇಲೆ ಜಗವ ಹೊತ್ತಿ
ಭೂಲೋಕದೊಳು ನಿನ್ನ ಜಾಲಕಿನ್ನೆಣೆಯುಂಟೆ?    ||೨||

ಮಂಡಲದೊಳು ಮಾಯಕಾರ್ತಿ ಜಮದಗ್ನಿಮುನಿಯ
ಚಂಡಕೊರಸಿದ ಮಾಯಕಾರ್ತಿ
ದಂಡು ತಂದು ಗಿರಿಗೆ ಮುತ್ತಿದಿ ಮುನಿಗಳ ಗವಿಗೆ
ಗುಂಡ ಬಡಿದು ಗುಮರಿ ಹಾಕಿದಿ
ಮಿಂಡೇರಂತೆ ನೀರ ತರತಿ ಮಳಲಿನ ಕೊಡಕೆ
ದುಂಡ ಹಾವಿನ ಸಿಂಬಿ ಸುತ್ತಿದಿ
ಗಂಡ-ಹೆಂಡಿರ ಬಿಡಿಸಿ ಭಂಡಾರ ಚೀಲವ ಹೊರಿಸಿ
ರಂಡೀಹುಣ್ಣಿವೆಗಳಿದು ರಾಜಮುತ್ತೈದಿಯಾದೆವ್ವ    ||೩||

ಚಿಕ್ಕ ಮಲಕಿನ ದುರದುಂಡಿ ನೀ ಎಂಥಾಕೆವ್ವಾ
ಚಿಕ್ಕ ಮಗನೊಳು ಕಲಹಗೊಂಡಿ
ಎಕ್ಕಯ್ಯನ ಪ್ರಾಣಗೊಂಡಿ
ಕಕ್ಕಯ್ಯ ಶರಣರಿಗೊಪ್ಪುವಂಥ ರಾಜಮಿಂಡಿ
ಸೊಕ್ಕಿದ ಜನರ ಮನಸ ಕಂಡಿ
ಕಾರಿಕ ಕಾಯಿಕ್ಕಿ ಕರ್ಪುರ ಕಾಣಿಕಗೊಂಡಿ
ದಿಕ್ಕಿನೋಳ್ ಶಿಶುನಾಳ ಮುಕ್ಕಣ್ನನೊಳುಕೂಡಿ
ಅಕ್ಕರದಲಿ ಗುರುನಾಥ ಗೋವಿಂದಗೊಲಿದಿ        ||೪||

*    *    *    *

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...