Home / ಕವನ / ಕವಿತೆ / ಹೇ ರಾಮ್!

ಹೇ ರಾಮ್!

ಎಲ್ಲ ನೆನಪುಗಳಿಗೆ ವಿರಾಮ
ಹೋಗಿ ಬರುವೆ ರಾಮ
ಇರಿಸುವೆ ನನ್ಹೆಸರ
ಉರಿಸಿಕೊ ನಿನ್ನೊಳಗೆ
ಹೋಗಿ ಬರುವೆ ರಾಮ….

ನಾ ಬಲ್ಲೆ ನಿನ್ನೊಲುಮೆ
ಇತ್ತ ಬಿತ್ತಿ ಬೆಳೆದಿಹ ಪ್ರೇಮ
ಅತ್ತ ಒತ್ತಿ ಸುತ್ತಿಹ ನೇಮ
ಕೊರಗದಿರು ಮರುಗದಿರು
ಹೋಗಿ ಬರುವೆ ರಾಮ….

ಹಿಂಡನಗಲಿದಾ ಚುಕ್ಕಿ
ಒಂಟಿ ರೆಕ್ಕೆಯ ಹಕ್ಕಿ
ಎಣ್ಣೆ ತೀರಿದ ಬತ್ತಿ
ಹುರಿದುಂಬಿಸಿ ಉರಿಸು
ಹೋಗಿ ಬರುವೆ ರಾಮ….

ಹಗಲು ಮುಗಿದಾ ಮೇಲೆ
ಕಾರಿರುಳು ಜಗದ ಲೀಲೆ
ಹೊರಡು ಹೊತ್ತಾಯಿತು ಎಂದು
ಹರಸಿ ಕಳಿಸು
ಹೋಗಿ ಬರುವೆ ರಾಮ….


ಹೊತ್ತಿ ಉರಿಯಿತದು ಉಂಡೆ
ಧಗಧಗ ಧಗಧಗ
ಹಿಮ್ಮೇಳದಲ್ಲಿ ಗವ್ವಿರುಳ ಚಂಡೆ
ಅಬ್ಬಾ! ಎಷ್ಟಾದರೂ ಗಂಡು ಗಂಡೆ
ಹೋಗುವೆನು ರಾಮ….

ಅಗಸನ ಕತ್ತೆಗೆ ಸಮವಂತೆ
ಅರಸೊತ್ತಿಗೆಯ ನ್ಯಾಯ
ನಾ ಹೇಳೆ…. ನೀ ಕೇಳೆ….
ಹೋಗುವೆನು ರಾಮ….

ಗಾಯದ ಮೇಲೆ ಗಾಯ
ಮಾಯದಾ ಗಾಯ
ಕರಗಬಾರದೆ ಕಾಯ?
ಹೋಗುವೆನು ರಾಮ….


ನೆನಪುಗಳಿಗೆಲ್ಲಿ ವಿರಾಮ?
ಹೇಗೆ ಹೋಗಲಿ ರಾಮ?
ತುಟಿಯೊತ್ತಿ ನೂರೊಂದು ಮುತ್ತನಿರಿಸಿ
ಹನಿಗಣ್ಣ ಒರೆಸಿ
ಗೋಣಪ್ಪಿ ಮೈದಡವಿ
ಕಣ್ಣೀರ ಕರೆದರೆ ಹೇಗೆ ಹೋಗಲಿ ರಾಮ?

ಮುನ್ನಡೆಸು ಮುನ್ನಡೆಸು
ರಾಮ…. ನನ್ನ ರಾಮ….
ಸೀತಾರಾಮ….
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...