Home / ಕವನ / ಕವಿತೆ / ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮುದ್ದು ಮುದ್ದಾಗಿ ಮಾತಾಡಿ
ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ
ಹೂವು, ಎಲೆ, ಗಂಧ ಗಾಳಿಯ
ಗಮನ ಎತ್ತೆತ್ತಲೋ ಸೆಳೆದು
ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ
ನದಿಯೂ ಬೆಟ್ಟವೂ
ಎವೆ ಮುಚ್ಚಿ ಬಿಚ್ಚುವುದರೊಳಗೆ
ಕೋಟಿ ಕ್ರಿಮಿ ಕೀಟಗಳ ಕಣ್ಣಿಗೆ ಕಪ್ಪನೆಯ ಮುಸುಕೆಳೆದು
ಮುಚ್ಚಿರುವಂತೆಯೆ ಪಂಜರಶಾಲೆಯ ಬಾಗಿಲು,
ಭದ್ರ ಬಿಗಿ ಕಾವಲು-ಮಾಯವಾಯಿತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮತ್ತೊಂದು ಚಣದಲ್ಲಿ
ಗುಲಾಬಿ ರೆಕ್ಕೆ ಹಳದಿ ಕೊಕ್ಕಿನ ಗಿಣಿ
ಮಗದೊಂದು ಚಣದಲ್ಲಿ
ನೀಲಿ ರೆಕ್ಕೆ ಕಪ್ಪು ಕೊಕ್ಕಿನ ಗಿಣಿ
ಗಳಿಗೆಗೊಂದು ಬಣ್ಣ ಮೆತ್ತಿ
ರಂಗಮಂಟಪದೊಳಗೆ ಸುತ್ತಿ
ಮೊಲವಾಗಿ ಛಂಗನೆ ನೆಗೆದು
ಮೇನಕೆಯಾಗಿ ತಕಧಿಂ ಎಂದು ಕುಣಿದು
ಮಾಟಗಾತಿಯ ದಂಡ ಮೆಟ್ಟಿ
ಮಿಂಚಾಗಿ ಮಿಣಿ ಮಿಣಿಗುಟ್ಟಿ
ಮಾಯವಾಗಿಯತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮರಿಗುಬ್ಬಿಯ ಹಾಗೆ ಗಳಿಗೆಗಳನ್ನು ಗಬಾಯಿಸಿ
ಗೂಬೆಯ ಹಾಗೆ ಗುಕ್ಕೆಂದು ಕೂಗಿ
ಗುಂಗಿಯ ಹುಳುವಾಗಿ ಗೀಗೀ ಪದ ಹಾಡಿ
ಹಾರಿ ಹೋಯಿತಲ್ಲ….

ಅವ್ವ….
ಜಾಲಿಯ ಮರವನ್ನೇರಿಕುಳಿತಿರಬಹುದೆ ಗಿಣಿ?
ಚಂದನದ ಮರದೊಳಗೆ ಕುಳಿತಿರಬಹುದೆ ಗಿಣಿ?
ವೇದ ಶಾಸ್ತ್ರಾಗಮಗಳನ್ನು ನುಚ್ಚಾಗಿಸಿ-ನುಂಗಿ
ಅಣುಬಾಂಬುಗಳನ್ನು ಅತ್ತಿಯ ಹಣ್ಣಾಗಿಸಿ ಮೆದ್ದು
ಪಂಜರದೊಳಗೆಯೆ ಇದ್ದು, ಇಲ್ಲ ಎನಿಸುವ ಹಾಗೆ ಇದ್ದೂ
ಆಟವಾಡುತ್ತಿದೆಯೆ ಗಿಣಿ?

ಅವ್ವ….
ಅಂಬೆಗಾಲಿನ ಕಂದ ಮೋರೆ ತಿರುವಲು ಬೇಡ
ಕುತೂಹಲದ ಕುಡಿ ಚಿವುಟಿಬಿಸಾಡಲು ಬೇಡ
ನವಿಲುಗಣ್ಣಿಗೆ ಸುಣ್ಣ ಹಚ್ಚಲು ಬೇಡ
ಎದೆಯ ಗುಟ್ಟೇನದು ಹೇಳು…. ನಿನ್ನಾಣೆ
ಪಿಳ್ಳಂಗೋವಿ ಊದಿ ಪುಕಾರು ಹಬ್ಬಿಸುವುದಿಲ್ಲ….

ಹೇಳವ್ವ….
ಜಲಬಿಂದುವಿಗೆ ಪದ್ಮಪತ್ರದ ಹಂಗು ಯಾಕಿಲ್ಲ?
ಕಿಂಚಿತ್ತೂ ಪ್ರೀತಿ, ಕಿಂಚಿತ್ತೂ ಮೈತ್ರಿ ಯಾಕಿಲ್ಲ?
ಗಿಳಿಗೆ ಪಂಜರದ ಹಂಗು ಯಾಕಿಲ್ಲ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...