Home / ಕವನ / ಕವಿತೆ / ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮುದ್ದು ಮುದ್ದಾಗಿ ಮಾತಾಡಿ
ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ
ಹೂವು, ಎಲೆ, ಗಂಧ ಗಾಳಿಯ
ಗಮನ ಎತ್ತೆತ್ತಲೋ ಸೆಳೆದು
ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ
ನದಿಯೂ ಬೆಟ್ಟವೂ
ಎವೆ ಮುಚ್ಚಿ ಬಿಚ್ಚುವುದರೊಳಗೆ
ಕೋಟಿ ಕ್ರಿಮಿ ಕೀಟಗಳ ಕಣ್ಣಿಗೆ ಕಪ್ಪನೆಯ ಮುಸುಕೆಳೆದು
ಮುಚ್ಚಿರುವಂತೆಯೆ ಪಂಜರಶಾಲೆಯ ಬಾಗಿಲು,
ಭದ್ರ ಬಿಗಿ ಕಾವಲು-ಮಾಯವಾಯಿತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮತ್ತೊಂದು ಚಣದಲ್ಲಿ
ಗುಲಾಬಿ ರೆಕ್ಕೆ ಹಳದಿ ಕೊಕ್ಕಿನ ಗಿಣಿ
ಮಗದೊಂದು ಚಣದಲ್ಲಿ
ನೀಲಿ ರೆಕ್ಕೆ ಕಪ್ಪು ಕೊಕ್ಕಿನ ಗಿಣಿ
ಗಳಿಗೆಗೊಂದು ಬಣ್ಣ ಮೆತ್ತಿ
ರಂಗಮಂಟಪದೊಳಗೆ ಸುತ್ತಿ
ಮೊಲವಾಗಿ ಛಂಗನೆ ನೆಗೆದು
ಮೇನಕೆಯಾಗಿ ತಕಧಿಂ ಎಂದು ಕುಣಿದು
ಮಾಟಗಾತಿಯ ದಂಡ ಮೆಟ್ಟಿ
ಮಿಂಚಾಗಿ ಮಿಣಿ ಮಿಣಿಗುಟ್ಟಿ
ಮಾಯವಾಗಿಯತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮರಿಗುಬ್ಬಿಯ ಹಾಗೆ ಗಳಿಗೆಗಳನ್ನು ಗಬಾಯಿಸಿ
ಗೂಬೆಯ ಹಾಗೆ ಗುಕ್ಕೆಂದು ಕೂಗಿ
ಗುಂಗಿಯ ಹುಳುವಾಗಿ ಗೀಗೀ ಪದ ಹಾಡಿ
ಹಾರಿ ಹೋಯಿತಲ್ಲ….

ಅವ್ವ….
ಜಾಲಿಯ ಮರವನ್ನೇರಿಕುಳಿತಿರಬಹುದೆ ಗಿಣಿ?
ಚಂದನದ ಮರದೊಳಗೆ ಕುಳಿತಿರಬಹುದೆ ಗಿಣಿ?
ವೇದ ಶಾಸ್ತ್ರಾಗಮಗಳನ್ನು ನುಚ್ಚಾಗಿಸಿ-ನುಂಗಿ
ಅಣುಬಾಂಬುಗಳನ್ನು ಅತ್ತಿಯ ಹಣ್ಣಾಗಿಸಿ ಮೆದ್ದು
ಪಂಜರದೊಳಗೆಯೆ ಇದ್ದು, ಇಲ್ಲ ಎನಿಸುವ ಹಾಗೆ ಇದ್ದೂ
ಆಟವಾಡುತ್ತಿದೆಯೆ ಗಿಣಿ?

ಅವ್ವ….
ಅಂಬೆಗಾಲಿನ ಕಂದ ಮೋರೆ ತಿರುವಲು ಬೇಡ
ಕುತೂಹಲದ ಕುಡಿ ಚಿವುಟಿಬಿಸಾಡಲು ಬೇಡ
ನವಿಲುಗಣ್ಣಿಗೆ ಸುಣ್ಣ ಹಚ್ಚಲು ಬೇಡ
ಎದೆಯ ಗುಟ್ಟೇನದು ಹೇಳು…. ನಿನ್ನಾಣೆ
ಪಿಳ್ಳಂಗೋವಿ ಊದಿ ಪುಕಾರು ಹಬ್ಬಿಸುವುದಿಲ್ಲ….

ಹೇಳವ್ವ….
ಜಲಬಿಂದುವಿಗೆ ಪದ್ಮಪತ್ರದ ಹಂಗು ಯಾಕಿಲ್ಲ?
ಕಿಂಚಿತ್ತೂ ಪ್ರೀತಿ, ಕಿಂಚಿತ್ತೂ ಮೈತ್ರಿ ಯಾಕಿಲ್ಲ?
ಗಿಳಿಗೆ ಪಂಜರದ ಹಂಗು ಯಾಕಿಲ್ಲ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...