Home / ಕವನ / ಕವಿತೆ / ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮುದ್ದು ಮುದ್ದಾಗಿ ಮಾತಾಡಿ
ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ
ಹೂವು, ಎಲೆ, ಗಂಧ ಗಾಳಿಯ
ಗಮನ ಎತ್ತೆತ್ತಲೋ ಸೆಳೆದು
ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ
ನದಿಯೂ ಬೆಟ್ಟವೂ
ಎವೆ ಮುಚ್ಚಿ ಬಿಚ್ಚುವುದರೊಳಗೆ
ಕೋಟಿ ಕ್ರಿಮಿ ಕೀಟಗಳ ಕಣ್ಣಿಗೆ ಕಪ್ಪನೆಯ ಮುಸುಕೆಳೆದು
ಮುಚ್ಚಿರುವಂತೆಯೆ ಪಂಜರಶಾಲೆಯ ಬಾಗಿಲು,
ಭದ್ರ ಬಿಗಿ ಕಾವಲು-ಮಾಯವಾಯಿತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮತ್ತೊಂದು ಚಣದಲ್ಲಿ
ಗುಲಾಬಿ ರೆಕ್ಕೆ ಹಳದಿ ಕೊಕ್ಕಿನ ಗಿಣಿ
ಮಗದೊಂದು ಚಣದಲ್ಲಿ
ನೀಲಿ ರೆಕ್ಕೆ ಕಪ್ಪು ಕೊಕ್ಕಿನ ಗಿಣಿ
ಗಳಿಗೆಗೊಂದು ಬಣ್ಣ ಮೆತ್ತಿ
ರಂಗಮಂಟಪದೊಳಗೆ ಸುತ್ತಿ
ಮೊಲವಾಗಿ ಛಂಗನೆ ನೆಗೆದು
ಮೇನಕೆಯಾಗಿ ತಕಧಿಂ ಎಂದು ಕುಣಿದು
ಮಾಟಗಾತಿಯ ದಂಡ ಮೆಟ್ಟಿ
ಮಿಂಚಾಗಿ ಮಿಣಿ ಮಿಣಿಗುಟ್ಟಿ
ಮಾಯವಾಗಿಯತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮರಿಗುಬ್ಬಿಯ ಹಾಗೆ ಗಳಿಗೆಗಳನ್ನು ಗಬಾಯಿಸಿ
ಗೂಬೆಯ ಹಾಗೆ ಗುಕ್ಕೆಂದು ಕೂಗಿ
ಗುಂಗಿಯ ಹುಳುವಾಗಿ ಗೀಗೀ ಪದ ಹಾಡಿ
ಹಾರಿ ಹೋಯಿತಲ್ಲ….

ಅವ್ವ….
ಜಾಲಿಯ ಮರವನ್ನೇರಿಕುಳಿತಿರಬಹುದೆ ಗಿಣಿ?
ಚಂದನದ ಮರದೊಳಗೆ ಕುಳಿತಿರಬಹುದೆ ಗಿಣಿ?
ವೇದ ಶಾಸ್ತ್ರಾಗಮಗಳನ್ನು ನುಚ್ಚಾಗಿಸಿ-ನುಂಗಿ
ಅಣುಬಾಂಬುಗಳನ್ನು ಅತ್ತಿಯ ಹಣ್ಣಾಗಿಸಿ ಮೆದ್ದು
ಪಂಜರದೊಳಗೆಯೆ ಇದ್ದು, ಇಲ್ಲ ಎನಿಸುವ ಹಾಗೆ ಇದ್ದೂ
ಆಟವಾಡುತ್ತಿದೆಯೆ ಗಿಣಿ?

ಅವ್ವ….
ಅಂಬೆಗಾಲಿನ ಕಂದ ಮೋರೆ ತಿರುವಲು ಬೇಡ
ಕುತೂಹಲದ ಕುಡಿ ಚಿವುಟಿಬಿಸಾಡಲು ಬೇಡ
ನವಿಲುಗಣ್ಣಿಗೆ ಸುಣ್ಣ ಹಚ್ಚಲು ಬೇಡ
ಎದೆಯ ಗುಟ್ಟೇನದು ಹೇಳು…. ನಿನ್ನಾಣೆ
ಪಿಳ್ಳಂಗೋವಿ ಊದಿ ಪುಕಾರು ಹಬ್ಬಿಸುವುದಿಲ್ಲ….

ಹೇಳವ್ವ….
ಜಲಬಿಂದುವಿಗೆ ಪದ್ಮಪತ್ರದ ಹಂಗು ಯಾಕಿಲ್ಲ?
ಕಿಂಚಿತ್ತೂ ಪ್ರೀತಿ, ಕಿಂಚಿತ್ತೂ ಮೈತ್ರಿ ಯಾಕಿಲ್ಲ?
ಗಿಳಿಗೆ ಪಂಜರದ ಹಂಗು ಯಾಕಿಲ್ಲ?
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...