Home / ಕವನ / ಕವಿತೆ / ದಿನಚರಿ

ದಿನಚರಿ

ರಜದಲ್ಲೇನು ಮಾಡುವಿರಿ ಎಂದು ಕೇಳಿದರು ಟೀಚರು
ಊರಿಗೆ ಹೋಗುತ್ತೇವೆ ಎಂದರು ಒಬ್ಬಿಬ್ಬರು
ಊಟ, ಆಟ ಎಂದು ಪಿಸುಗುಟ್ಟಿ ನಕ್ಕರು ತುಂಟರು
ಒಬ್ಬರಿದ್ದಂತಿದ್ದರಲ್ಲವೆ ಇನ್ನೊಬ್ಬರು?
ತಲೆಗೊಂದರಂತೆ ಮಾತು ಗದ್ದಲಿಸಿದರು
ಅದೇನು ಮಾಡುತ್ತಿರೊ ಮಾಡಿ ಅಂದರು ಟೀಚರು
ಮಾಡಿದ್ದನ್ನೆಲ್ಲಾ ದಿನವೂ ಬರೆದಿಡಿ ಅಂದರು
‘ಇದ್ದದ್ದು ಇದ್ದ ಹಾಗೆಯೇ’ ಎಂದೂ ಸೇರಿಸಿದರು.

ಹೀಗೆ ಊಟ ಆಟದ ಜೊತೆಗೆ
ದಿನಚರಿ ಬರೆಯುವುದೂ ಸೇರಿಕೊಂಡಿತು
ಆಡಿದ್ದು, ನೋಡಿದ್ದು, ಮಾಡಿದ್ದು
ಬರೆದಂತೆಲ್ಲ ಚುರುಮುರಿ ಉಂಡೆಯದೆ ರುಚಿ ಕಂಡಿತು.

ರಜೆಯಲ್ಲೂ ಬರೆಯುವುದೇ? ಎಂದು
ಅಜ್ಜಿ ಗೊಣಗುಟ್ಟಿದರು.
ನೆಪಕ್ಕೆ ಟೀಚರಿನ ಹೆಸರು
ಇವಳದೆ ಕಾರು-ಬಾರು ಎಂದು
ಅಮ್ಮ ಮೆಣಸು ಕುಟ್ಟಿದರು.
ನಾವೂ ಬರೆಯುತ್ತೇವೆ ಎಂದು
ತಮ್ಮಂದಿರು ಹಠ ಮಾಡಿದರು.

ಹೀಗೆ

ಹೊಂಡದ ಮೀನುಗಳಿಗೆ ಮಂಡಕ್ಕಿ ಕೊಟ್ಟಿದ್ದು
ನಿಂಬೆಯ ಗಿಡದಲ್ಲಿದ್ದ ಮೊಟ್ಟೆ ಮರಿಯಾಗಿ
ಚಿಟ್ಟೆಯಾಗಿ ಹಾರಿದ್ದು
ಸೇವಂತಿಗೆ ದಾಸವಾಳಕ್ಕೆ ನೀರೆರದದ್ದು
ದಿನಚರಿಯಲ್ಲಿ ಸೇರಿತು.

ಜರಿಲಂಗಕ್ಕಾಗಿ ಅತ್ತ ಅಮ್ಮನ ಮೇಲೆ
ಮುನಿಸಿಕೊಂಡಿದ್ದು
ಅಪ್ಪ ತರುವ ಮಿಠಾಯಿಗಾಗಿ ರಾತ್ರಿಯೆಲ್ಲಾ
ಕಣ್ಣಿಗೆ ಎಣ್ಣೆ ಬಿಟ್ಟು ಕೂತದ್ದು
ದಿನಚರಿಯಲ್ಲಿ ಸೇರಿತು.

ಅಂಡಾ ಭಂಡಾ ಅಡಿ ಕುಂಟಾಬಿಲ್ಲೆ ಗೆದ್ದದ್ದು
ಒಟ್ಟು ಮಾಡಿದ ಬಳೆ ಚೂರುಗಳನ್ನು
ಗುಟ್ಟಾಗಿ ನಿಧಿಯಂತೆ ಅಡಗಿಸಿಟ್ಟಿದ್ದು
ದಿನಚರಿಯಲ್ಲಿ ಸೇರಿತು.

ಕೊಳಲೂದಿ ಅಜ್ಜಿಯ ಕಿವಿ ತೂತು ಮಾಡಿದ್ದು
ಮಣ್ಣಿಗೆ ನೀರು ಹಾಕಿ ಪಾಯಸವೆಂದು
ತಂಗಿಗೆ ನಂಬಿಸಿದ್ದು
ದಿನಚರಿಯಲ್ಲಿ ಸೇರಿತು.

ತೆಂಗಿನ ಗರಿಯ ವಾಚಿನ ಆಸೆಗೆ
ಪರಮವೈರಿಯೊಂದಿಗೂ ರಾಜಿಯಾದದ್ದು
‘ನಿದ್ರಾ ಸುಂದರಿ’ ಕಥೆಯೋದುತ್ತಾ
ಹಾಗೆಯೆ ನಿದ್ರೆ ಹೋದದ್ದು
ದಿನಚರಿಯಲ್ಲಿ ಸೇರಿತು.

ಕನಸಿನ ತುಂಬಾ ಪೆಪ್ಪರಮೆಂಟಿನ
ಮಳೆ ಸುರಿದದ್ದು
ನಿಜ ಜೀವನದಲ್ಲಿ ಪೈಗೆ ಪೈ ಕೂಡಿಟ್ಟರೂ
ಪೆಪ್ಪರಮೆಂಟು ಕೊಳ್ಳದೆ ಇದದ್ದು
ದಿನಚರಿಯಲ್ಲಿ ಸೇರಿತು.

ಕಾದೂ ಕಾದೂ ಕೊನೆಗೆ
ಶಾಲೆ ಕದ ತೆರೆಯಿತು
ಆವೊತ್ತಿನ ಮಾತುಕತೆ ಕಿತ್ತಾಟ
ಕುಣಿತ ದಿನಚರಿ ಕುರಿತೆ ಆಗಿತ್ತು
ಕೊನೆಗೆ ಎಲ್ಲರೂ ಸೇರಿ
ಎಲ್ಲವನ್ನೂ ಓದಿದ್ದೂ ಆಯಿತು.

ನನಗೋ…. ನನ್ನ ಗೆಳತಿಯರ
ದಿನಚರಿಯೆ ಚೆನ್ನಾಗಿದೆ ಅನ್ನಿಸತೊಡಗಿತ್ತು.
ನನ್ನ ಬಳಿ ಇಲ್ಲದ್ದು ಅವರ ಬಳಿ
ಇದೆ ಎಂದೆನಿಸುತ್ತಿತ್ತು.
ಅವರ ಬಳಿ ಇದ್ದದ್ದೆಲ್ಲವೂ ನನಗೂ
ಬೇಕೆನಿಸುತ್ತಿತ್ತು.

ಅವರ ದಿನಚರಿಗಳಲ್ಲಿ
ಬಣ್ಣ, ಬೆರಗು, ಬೆಡಗು
ಎಲ್ಲವೂ ಇದೆ ಎಂದೆನಿಸುತ್ತಿತ್ತು.
ಆ ರಂಗು, ರಂಜನೆ, ರೋಮಾಂಚನ
ಹೊಟ್ಟೆ ಉರಿಸುತ್ತಿತ್ತು.
ಹುಲಿ, ಕರಡಿ, ಆನೆ, ಕೊಕ್ಕರೆಗಳು
ರೈಲುಬಂಡಿ, ಅರಮನೆ ಆಟಿಕೆಗಳು
ಕಣ್ಣಿಗೆ ಕಟ್ಟಿದಂತಿತ್ತು.

ಟೀಚರೇನೋ ಎಲ್ಲರಿಗೂ ಕೊಡುವಂತೆ
ನನಗೂ ಮಾರ್‍ಕು ಕೊಟ್ಟಿದ್ದರು
ಅಭಿಮಾನವೊ? ಅನುಮಾನವೊ?
ಕಣ್ಣೀರು ತುಂಬಿ ತುಳುಕುತ್ತಿತ್ತು.

ಆಮೇಲೇನೂ ದಿನಚರಿ ಬರೆಯಲು
ಯಾರ ಒತ್ತಾಯವೂ ಇರಲಿಲ್ಲ
ಬರೆಯುವುದೂ ನಿಲ್ಲಲಿಲ್ಲ
ಆದರೆ ಇದ್ದದ್ದು ಇದ್ದ ಹಾಗೆಯೇ ಅಲ್ಲ!

ಕಲ್ಪನೆಗೆ ಕುದುರೆ ರಥ ಕಟ್ಟಿದ್ದಷ್ಟೇ ಗೊತ್ತು
ರಥ ಓಡಿತು.
ಆಸೆಹಕ್ಕಿಗೆ ರೆಕ್ಕೆ ಮೂಡಿಸಿದಷ್ಟೇ ಗೊತ್ತು
ಹಕ್ಕಿ ದೂರ ದೂರ ಹಾರಿತು.

ಇವತ್ತಿಗೂ ರಥ ಓಡುತ್ತಲೇ ಇದೆ
ಕುದುರೆಗಳ ಕಾಲು ಸೋತಂತಿಲ್ಲ
ಇವತ್ತಿಗೂ ಹಕ್ಕಿ ಹಾರುತ್ತಲೇ ಇದೆ
ಕಿಂಚಿತ್ತೂ ಆಯಾಸಗೊಂಡಿಲ್ಲ.

ಇಷ್ಟು ದಿನಗಳಾದ ಮೇಲೆ
ಇಷ್ಟು ದೊಡ್ಡವಳಾದ ಮೇಲೆ
ಕಡಲಲ್ಲಿ ಗುಮ್ಮನಂತೆ ನಿಂತಿರುವ
ಭಾರಿ ಹಡಗನ್ನ ನೋಡಿದಾಗೆಲ್ಲ
ನೆನಪಿನ ತಂತಿಗಳು ಮಿಡಿದು
ನಾನು ಕೈಯಾರೆ ಮಾಡಿ ತೇಲಿಸಿದ
ಕಾಗದದ ದೋಣಿ ಕಣ್ಣೊಳಗೇ ನಿಲ್ಲುತ್ತೆ.

ಆ ಹರ್‍ಷ, ವಿಷಾದ, ಒಲುಮೆ
ಆಸೆ ಆಕಾಂಕ್ಷೆಯ ಕುಲುಮೆ
ಇಂದಿಗೂ ಬೆಚ್ಚಗೆ ಉರಿದಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...