Home / ಕವನ / ಕವಿತೆ / ದಿನಚರಿ

ದಿನಚರಿ

ರಜದಲ್ಲೇನು ಮಾಡುವಿರಿ ಎಂದು ಕೇಳಿದರು ಟೀಚರು
ಊರಿಗೆ ಹೋಗುತ್ತೇವೆ ಎಂದರು ಒಬ್ಬಿಬ್ಬರು
ಊಟ, ಆಟ ಎಂದು ಪಿಸುಗುಟ್ಟಿ ನಕ್ಕರು ತುಂಟರು
ಒಬ್ಬರಿದ್ದಂತಿದ್ದರಲ್ಲವೆ ಇನ್ನೊಬ್ಬರು?
ತಲೆಗೊಂದರಂತೆ ಮಾತು ಗದ್ದಲಿಸಿದರು
ಅದೇನು ಮಾಡುತ್ತಿರೊ ಮಾಡಿ ಅಂದರು ಟೀಚರು
ಮಾಡಿದ್ದನ್ನೆಲ್ಲಾ ದಿನವೂ ಬರೆದಿಡಿ ಅಂದರು
‘ಇದ್ದದ್ದು ಇದ್ದ ಹಾಗೆಯೇ’ ಎಂದೂ ಸೇರಿಸಿದರು.

ಹೀಗೆ ಊಟ ಆಟದ ಜೊತೆಗೆ
ದಿನಚರಿ ಬರೆಯುವುದೂ ಸೇರಿಕೊಂಡಿತು
ಆಡಿದ್ದು, ನೋಡಿದ್ದು, ಮಾಡಿದ್ದು
ಬರೆದಂತೆಲ್ಲ ಚುರುಮುರಿ ಉಂಡೆಯದೆ ರುಚಿ ಕಂಡಿತು.

ರಜೆಯಲ್ಲೂ ಬರೆಯುವುದೇ? ಎಂದು
ಅಜ್ಜಿ ಗೊಣಗುಟ್ಟಿದರು.
ನೆಪಕ್ಕೆ ಟೀಚರಿನ ಹೆಸರು
ಇವಳದೆ ಕಾರು-ಬಾರು ಎಂದು
ಅಮ್ಮ ಮೆಣಸು ಕುಟ್ಟಿದರು.
ನಾವೂ ಬರೆಯುತ್ತೇವೆ ಎಂದು
ತಮ್ಮಂದಿರು ಹಠ ಮಾಡಿದರು.

ಹೀಗೆ

ಹೊಂಡದ ಮೀನುಗಳಿಗೆ ಮಂಡಕ್ಕಿ ಕೊಟ್ಟಿದ್ದು
ನಿಂಬೆಯ ಗಿಡದಲ್ಲಿದ್ದ ಮೊಟ್ಟೆ ಮರಿಯಾಗಿ
ಚಿಟ್ಟೆಯಾಗಿ ಹಾರಿದ್ದು
ಸೇವಂತಿಗೆ ದಾಸವಾಳಕ್ಕೆ ನೀರೆರದದ್ದು
ದಿನಚರಿಯಲ್ಲಿ ಸೇರಿತು.

ಜರಿಲಂಗಕ್ಕಾಗಿ ಅತ್ತ ಅಮ್ಮನ ಮೇಲೆ
ಮುನಿಸಿಕೊಂಡಿದ್ದು
ಅಪ್ಪ ತರುವ ಮಿಠಾಯಿಗಾಗಿ ರಾತ್ರಿಯೆಲ್ಲಾ
ಕಣ್ಣಿಗೆ ಎಣ್ಣೆ ಬಿಟ್ಟು ಕೂತದ್ದು
ದಿನಚರಿಯಲ್ಲಿ ಸೇರಿತು.

ಅಂಡಾ ಭಂಡಾ ಅಡಿ ಕುಂಟಾಬಿಲ್ಲೆ ಗೆದ್ದದ್ದು
ಒಟ್ಟು ಮಾಡಿದ ಬಳೆ ಚೂರುಗಳನ್ನು
ಗುಟ್ಟಾಗಿ ನಿಧಿಯಂತೆ ಅಡಗಿಸಿಟ್ಟಿದ್ದು
ದಿನಚರಿಯಲ್ಲಿ ಸೇರಿತು.

ಕೊಳಲೂದಿ ಅಜ್ಜಿಯ ಕಿವಿ ತೂತು ಮಾಡಿದ್ದು
ಮಣ್ಣಿಗೆ ನೀರು ಹಾಕಿ ಪಾಯಸವೆಂದು
ತಂಗಿಗೆ ನಂಬಿಸಿದ್ದು
ದಿನಚರಿಯಲ್ಲಿ ಸೇರಿತು.

ತೆಂಗಿನ ಗರಿಯ ವಾಚಿನ ಆಸೆಗೆ
ಪರಮವೈರಿಯೊಂದಿಗೂ ರಾಜಿಯಾದದ್ದು
‘ನಿದ್ರಾ ಸುಂದರಿ’ ಕಥೆಯೋದುತ್ತಾ
ಹಾಗೆಯೆ ನಿದ್ರೆ ಹೋದದ್ದು
ದಿನಚರಿಯಲ್ಲಿ ಸೇರಿತು.

ಕನಸಿನ ತುಂಬಾ ಪೆಪ್ಪರಮೆಂಟಿನ
ಮಳೆ ಸುರಿದದ್ದು
ನಿಜ ಜೀವನದಲ್ಲಿ ಪೈಗೆ ಪೈ ಕೂಡಿಟ್ಟರೂ
ಪೆಪ್ಪರಮೆಂಟು ಕೊಳ್ಳದೆ ಇದದ್ದು
ದಿನಚರಿಯಲ್ಲಿ ಸೇರಿತು.

ಕಾದೂ ಕಾದೂ ಕೊನೆಗೆ
ಶಾಲೆ ಕದ ತೆರೆಯಿತು
ಆವೊತ್ತಿನ ಮಾತುಕತೆ ಕಿತ್ತಾಟ
ಕುಣಿತ ದಿನಚರಿ ಕುರಿತೆ ಆಗಿತ್ತು
ಕೊನೆಗೆ ಎಲ್ಲರೂ ಸೇರಿ
ಎಲ್ಲವನ್ನೂ ಓದಿದ್ದೂ ಆಯಿತು.

ನನಗೋ…. ನನ್ನ ಗೆಳತಿಯರ
ದಿನಚರಿಯೆ ಚೆನ್ನಾಗಿದೆ ಅನ್ನಿಸತೊಡಗಿತ್ತು.
ನನ್ನ ಬಳಿ ಇಲ್ಲದ್ದು ಅವರ ಬಳಿ
ಇದೆ ಎಂದೆನಿಸುತ್ತಿತ್ತು.
ಅವರ ಬಳಿ ಇದ್ದದ್ದೆಲ್ಲವೂ ನನಗೂ
ಬೇಕೆನಿಸುತ್ತಿತ್ತು.

ಅವರ ದಿನಚರಿಗಳಲ್ಲಿ
ಬಣ್ಣ, ಬೆರಗು, ಬೆಡಗು
ಎಲ್ಲವೂ ಇದೆ ಎಂದೆನಿಸುತ್ತಿತ್ತು.
ಆ ರಂಗು, ರಂಜನೆ, ರೋಮಾಂಚನ
ಹೊಟ್ಟೆ ಉರಿಸುತ್ತಿತ್ತು.
ಹುಲಿ, ಕರಡಿ, ಆನೆ, ಕೊಕ್ಕರೆಗಳು
ರೈಲುಬಂಡಿ, ಅರಮನೆ ಆಟಿಕೆಗಳು
ಕಣ್ಣಿಗೆ ಕಟ್ಟಿದಂತಿತ್ತು.

ಟೀಚರೇನೋ ಎಲ್ಲರಿಗೂ ಕೊಡುವಂತೆ
ನನಗೂ ಮಾರ್‍ಕು ಕೊಟ್ಟಿದ್ದರು
ಅಭಿಮಾನವೊ? ಅನುಮಾನವೊ?
ಕಣ್ಣೀರು ತುಂಬಿ ತುಳುಕುತ್ತಿತ್ತು.

ಆಮೇಲೇನೂ ದಿನಚರಿ ಬರೆಯಲು
ಯಾರ ಒತ್ತಾಯವೂ ಇರಲಿಲ್ಲ
ಬರೆಯುವುದೂ ನಿಲ್ಲಲಿಲ್ಲ
ಆದರೆ ಇದ್ದದ್ದು ಇದ್ದ ಹಾಗೆಯೇ ಅಲ್ಲ!

ಕಲ್ಪನೆಗೆ ಕುದುರೆ ರಥ ಕಟ್ಟಿದ್ದಷ್ಟೇ ಗೊತ್ತು
ರಥ ಓಡಿತು.
ಆಸೆಹಕ್ಕಿಗೆ ರೆಕ್ಕೆ ಮೂಡಿಸಿದಷ್ಟೇ ಗೊತ್ತು
ಹಕ್ಕಿ ದೂರ ದೂರ ಹಾರಿತು.

ಇವತ್ತಿಗೂ ರಥ ಓಡುತ್ತಲೇ ಇದೆ
ಕುದುರೆಗಳ ಕಾಲು ಸೋತಂತಿಲ್ಲ
ಇವತ್ತಿಗೂ ಹಕ್ಕಿ ಹಾರುತ್ತಲೇ ಇದೆ
ಕಿಂಚಿತ್ತೂ ಆಯಾಸಗೊಂಡಿಲ್ಲ.

ಇಷ್ಟು ದಿನಗಳಾದ ಮೇಲೆ
ಇಷ್ಟು ದೊಡ್ಡವಳಾದ ಮೇಲೆ
ಕಡಲಲ್ಲಿ ಗುಮ್ಮನಂತೆ ನಿಂತಿರುವ
ಭಾರಿ ಹಡಗನ್ನ ನೋಡಿದಾಗೆಲ್ಲ
ನೆನಪಿನ ತಂತಿಗಳು ಮಿಡಿದು
ನಾನು ಕೈಯಾರೆ ಮಾಡಿ ತೇಲಿಸಿದ
ಕಾಗದದ ದೋಣಿ ಕಣ್ಣೊಳಗೇ ನಿಲ್ಲುತ್ತೆ.

ಆ ಹರ್‍ಷ, ವಿಷಾದ, ಒಲುಮೆ
ಆಸೆ ಆಕಾಂಕ್ಷೆಯ ಕುಲುಮೆ
ಇಂದಿಗೂ ಬೆಚ್ಚಗೆ ಉರಿದಿದೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...