Home / ಕವನ / ಕವಿತೆ / ಮಗುಚಲಾಗದ ಹಾಳೆ

ಮಗುಚಲಾಗದ ಹಾಳೆ

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ
ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು
ಇಣುಕುತ್ತಿವೆ ಗದ್ದೆ ಗುಳ್ಳೆಗಳು
ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ
ಹದುಳಿಂದ ಪಾದ ಊರುತ್ತ,
ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ
ತುಂತುರು ಸೋನೆ ಮಳೆಗೆ ಸ್ವಲ್ಪ ಸ್ವಲ್ಪವೇ ನಡಗುತ್ತ
ಆದರೂ ಬತ್ತದ ಉತ್ಸಾಹದಲಿ

ಆಯ್ದ ಗುಳ್ಳೆಗಳು ಈಗ ಮನೆಯ ನಡು ಅಂಗಳದಿ ಚದುರಿ ಬಿದ್ದಿವೆ-
ಮೂತಿ ಹೊರ ತೂರುವ ಗುಳ್ಳೆಗಳ ಹೊಂಚಿ ಹಿಡಿದು
ತೆಂಗಿನ ಗರಿಯ ಕಡ್ಡಿಯಿಂದ ಮೀಟಿ ಮಾಂಸವನ್ನು
ಒತ್ತಿ ತೆಗೆಯುತ್ತಿದೆ ಆಕೃತಿ,
ಕೆಲವು ಬೆರಕಿ ಗುಳ್ಳೆಗಳು ಹವಣಿಸುತ್ತಿವೆ ಜೀವ ಜೋಪಾನಕ್ಕಾಗಿ-
ವ್ಯರ್ಥವಾಗಿ -ಗೌಲಕೋಣೆಯ ಮಣ್ಣ ಮಡಿಕೆಯಲ್ಲಿ
ಕೊತ ಕೊತ ಕುದಿಯುತ್ತಿದೆ ಮಸಾಲೆ
ಗುಳ್ಳೆ ಮಾಂಸಕ್ಕೆ ಕಾಯುತ್ತ.

ನೋಡ ನೋಡುತ್ತ ಮಬ್ಬುಗತ್ತಲೆ ಅವುಚಿಕೊಳ್ಳುತ್ತಿದೆ.
ಹತ್ತಲಾಗದ ದೃಷ್ಟಿಯ ನಿಚ್ಚಳವಾಗಿಸಿ
ಗೂಡಿನತ್ತ ತೆವಳುತ್ತ ಮತ್ತೆ ಮಂದದಿಟ್ಟಿಗೆ ಬಿದ್ದ
ಹುಳವನ್ನೊಮ್ಮೆ ಕೊಕ್ಕಿನಿಂದ ಹೆಕ್ಕಿ ಕುಕ್ಕತೊಡಗಿದೆ-ಹುಂಜ
ಮತ್ತೀಗ ಅದೇ ಆಕೃತಿ
ಮರಿಕೋಳಿ ಹುಂಜಗಳ ಹಿಡಿದು ಗೂಡಿಗೆ ತಳ್ಳುತ್ತಿದೆ.
ಒತ್ತರಿಸಿ, ಜಪ್ಪರಿಸಿ ಸುರಿಯತೊಡಗಿದೆ ಮುಸಲಧಾರೆ,
ಅದಾವ ಪರಿಯ ಸೊಗಡುಗಾರನೋ ತಿಳಿಯದಾದಂತೆ,
ಥಕಥೈ ಕುಣಿತ ಅಮಲೇರಿದಂತೆ.
ಅಷ್ಟೇ ಅಲ್ಲ, ಸೇರಿಗೆ ಸವ್ವಾಸೇರು, ಜುಗಲಬಂದಿಗೆ
ಸೆಟೆದು ಬೀಸತೊಡಗಿದೆ ಗಾಳಿ, ಪರಕಾಯ ಪ್ರವೇಶ ಮಾಡಿದಂತೆ.

ಗಿಡಮರದ ಕಿವಿಯೊಳಗೆ ತೂರಿ ಕಚಗುಳಿ ಇಡುತ್ತಿದ್ದ
ತಂಬೆಲರು ಮಟಮಾಯ.
ಎಲೆಗಳು ಥರಥರನೇ ನಡಗುತ್ತಿವೆ, ಹಕ್ಕಿಗೂಡಿನ ಮರಿಗಳು
ತಾಯ್ ಪಕ್ಕೆಯಲಿ ಬಚ್ಚಿಟ್ಟುಕೊಳ್ಳುತ್ತಿವೆ,
ಮುಚ್ಚಟೆಯಾಗಿ ಸುರಿವ ಮಳೆಮಾರುತಕ್ಕೆ ಬೆದರಿ.
ಈಗ ಗಾಢಾಂಧಕಾರ ವಕ್ಕರಿಸಿದೆ,
ತಡಕಾಡುತ್ತಿವೆ ಹತ್ತಾರು ಕೈಗಳು – ದೀಪ ಬೆಳಗಲು,
ಹೊತ್ತಿಸಿದ ಮಂದ ಪ್ರಭೆಯಲ್ಲಿ ದಿಟ್ಟಿಸುತ್ತೇನೆ
-ಅದೋ, ಎಳೆಯ ಆಕೃತಿಯ ಸ್ತಬ್ಧ ಚಿತ್ರ
ಬಯಲು ಚಿತ್ರದಂತೆ-ನನ್ನದೇ ನಿಚ್ಚಳ ರೂಪ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...