Home / ಕವನ / ಕವಿತೆ / ಮಗುಚಲಾಗದ ಹಾಳೆ

ಮಗುಚಲಾಗದ ಹಾಳೆ

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ
ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು
ಇಣುಕುತ್ತಿವೆ ಗದ್ದೆ ಗುಳ್ಳೆಗಳು
ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ
ಹದುಳಿಂದ ಪಾದ ಊರುತ್ತ,
ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ
ತುಂತುರು ಸೋನೆ ಮಳೆಗೆ ಸ್ವಲ್ಪ ಸ್ವಲ್ಪವೇ ನಡಗುತ್ತ
ಆದರೂ ಬತ್ತದ ಉತ್ಸಾಹದಲಿ

ಆಯ್ದ ಗುಳ್ಳೆಗಳು ಈಗ ಮನೆಯ ನಡು ಅಂಗಳದಿ ಚದುರಿ ಬಿದ್ದಿವೆ-
ಮೂತಿ ಹೊರ ತೂರುವ ಗುಳ್ಳೆಗಳ ಹೊಂಚಿ ಹಿಡಿದು
ತೆಂಗಿನ ಗರಿಯ ಕಡ್ಡಿಯಿಂದ ಮೀಟಿ ಮಾಂಸವನ್ನು
ಒತ್ತಿ ತೆಗೆಯುತ್ತಿದೆ ಆಕೃತಿ,
ಕೆಲವು ಬೆರಕಿ ಗುಳ್ಳೆಗಳು ಹವಣಿಸುತ್ತಿವೆ ಜೀವ ಜೋಪಾನಕ್ಕಾಗಿ-
ವ್ಯರ್ಥವಾಗಿ -ಗೌಲಕೋಣೆಯ ಮಣ್ಣ ಮಡಿಕೆಯಲ್ಲಿ
ಕೊತ ಕೊತ ಕುದಿಯುತ್ತಿದೆ ಮಸಾಲೆ
ಗುಳ್ಳೆ ಮಾಂಸಕ್ಕೆ ಕಾಯುತ್ತ.

ನೋಡ ನೋಡುತ್ತ ಮಬ್ಬುಗತ್ತಲೆ ಅವುಚಿಕೊಳ್ಳುತ್ತಿದೆ.
ಹತ್ತಲಾಗದ ದೃಷ್ಟಿಯ ನಿಚ್ಚಳವಾಗಿಸಿ
ಗೂಡಿನತ್ತ ತೆವಳುತ್ತ ಮತ್ತೆ ಮಂದದಿಟ್ಟಿಗೆ ಬಿದ್ದ
ಹುಳವನ್ನೊಮ್ಮೆ ಕೊಕ್ಕಿನಿಂದ ಹೆಕ್ಕಿ ಕುಕ್ಕತೊಡಗಿದೆ-ಹುಂಜ
ಮತ್ತೀಗ ಅದೇ ಆಕೃತಿ
ಮರಿಕೋಳಿ ಹುಂಜಗಳ ಹಿಡಿದು ಗೂಡಿಗೆ ತಳ್ಳುತ್ತಿದೆ.
ಒತ್ತರಿಸಿ, ಜಪ್ಪರಿಸಿ ಸುರಿಯತೊಡಗಿದೆ ಮುಸಲಧಾರೆ,
ಅದಾವ ಪರಿಯ ಸೊಗಡುಗಾರನೋ ತಿಳಿಯದಾದಂತೆ,
ಥಕಥೈ ಕುಣಿತ ಅಮಲೇರಿದಂತೆ.
ಅಷ್ಟೇ ಅಲ್ಲ, ಸೇರಿಗೆ ಸವ್ವಾಸೇರು, ಜುಗಲಬಂದಿಗೆ
ಸೆಟೆದು ಬೀಸತೊಡಗಿದೆ ಗಾಳಿ, ಪರಕಾಯ ಪ್ರವೇಶ ಮಾಡಿದಂತೆ.

ಗಿಡಮರದ ಕಿವಿಯೊಳಗೆ ತೂರಿ ಕಚಗುಳಿ ಇಡುತ್ತಿದ್ದ
ತಂಬೆಲರು ಮಟಮಾಯ.
ಎಲೆಗಳು ಥರಥರನೇ ನಡಗುತ್ತಿವೆ, ಹಕ್ಕಿಗೂಡಿನ ಮರಿಗಳು
ತಾಯ್ ಪಕ್ಕೆಯಲಿ ಬಚ್ಚಿಟ್ಟುಕೊಳ್ಳುತ್ತಿವೆ,
ಮುಚ್ಚಟೆಯಾಗಿ ಸುರಿವ ಮಳೆಮಾರುತಕ್ಕೆ ಬೆದರಿ.
ಈಗ ಗಾಢಾಂಧಕಾರ ವಕ್ಕರಿಸಿದೆ,
ತಡಕಾಡುತ್ತಿವೆ ಹತ್ತಾರು ಕೈಗಳು – ದೀಪ ಬೆಳಗಲು,
ಹೊತ್ತಿಸಿದ ಮಂದ ಪ್ರಭೆಯಲ್ಲಿ ದಿಟ್ಟಿಸುತ್ತೇನೆ
-ಅದೋ, ಎಳೆಯ ಆಕೃತಿಯ ಸ್ತಬ್ಧ ಚಿತ್ರ
ಬಯಲು ಚಿತ್ರದಂತೆ-ನನ್ನದೇ ನಿಚ್ಚಳ ರೂಪ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...