Home / ಕವನ / ಕವಿತೆ / ಮಗುಚಲಾಗದ ಹಾಳೆ

ಮಗುಚಲಾಗದ ಹಾಳೆ

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ
ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು
ಇಣುಕುತ್ತಿವೆ ಗದ್ದೆ ಗುಳ್ಳೆಗಳು
ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ
ಹದುಳಿಂದ ಪಾದ ಊರುತ್ತ,
ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ
ತುಂತುರು ಸೋನೆ ಮಳೆಗೆ ಸ್ವಲ್ಪ ಸ್ವಲ್ಪವೇ ನಡಗುತ್ತ
ಆದರೂ ಬತ್ತದ ಉತ್ಸಾಹದಲಿ

ಆಯ್ದ ಗುಳ್ಳೆಗಳು ಈಗ ಮನೆಯ ನಡು ಅಂಗಳದಿ ಚದುರಿ ಬಿದ್ದಿವೆ-
ಮೂತಿ ಹೊರ ತೂರುವ ಗುಳ್ಳೆಗಳ ಹೊಂಚಿ ಹಿಡಿದು
ತೆಂಗಿನ ಗರಿಯ ಕಡ್ಡಿಯಿಂದ ಮೀಟಿ ಮಾಂಸವನ್ನು
ಒತ್ತಿ ತೆಗೆಯುತ್ತಿದೆ ಆಕೃತಿ,
ಕೆಲವು ಬೆರಕಿ ಗುಳ್ಳೆಗಳು ಹವಣಿಸುತ್ತಿವೆ ಜೀವ ಜೋಪಾನಕ್ಕಾಗಿ-
ವ್ಯರ್ಥವಾಗಿ -ಗೌಲಕೋಣೆಯ ಮಣ್ಣ ಮಡಿಕೆಯಲ್ಲಿ
ಕೊತ ಕೊತ ಕುದಿಯುತ್ತಿದೆ ಮಸಾಲೆ
ಗುಳ್ಳೆ ಮಾಂಸಕ್ಕೆ ಕಾಯುತ್ತ.

ನೋಡ ನೋಡುತ್ತ ಮಬ್ಬುಗತ್ತಲೆ ಅವುಚಿಕೊಳ್ಳುತ್ತಿದೆ.
ಹತ್ತಲಾಗದ ದೃಷ್ಟಿಯ ನಿಚ್ಚಳವಾಗಿಸಿ
ಗೂಡಿನತ್ತ ತೆವಳುತ್ತ ಮತ್ತೆ ಮಂದದಿಟ್ಟಿಗೆ ಬಿದ್ದ
ಹುಳವನ್ನೊಮ್ಮೆ ಕೊಕ್ಕಿನಿಂದ ಹೆಕ್ಕಿ ಕುಕ್ಕತೊಡಗಿದೆ-ಹುಂಜ
ಮತ್ತೀಗ ಅದೇ ಆಕೃತಿ
ಮರಿಕೋಳಿ ಹುಂಜಗಳ ಹಿಡಿದು ಗೂಡಿಗೆ ತಳ್ಳುತ್ತಿದೆ.
ಒತ್ತರಿಸಿ, ಜಪ್ಪರಿಸಿ ಸುರಿಯತೊಡಗಿದೆ ಮುಸಲಧಾರೆ,
ಅದಾವ ಪರಿಯ ಸೊಗಡುಗಾರನೋ ತಿಳಿಯದಾದಂತೆ,
ಥಕಥೈ ಕುಣಿತ ಅಮಲೇರಿದಂತೆ.
ಅಷ್ಟೇ ಅಲ್ಲ, ಸೇರಿಗೆ ಸವ್ವಾಸೇರು, ಜುಗಲಬಂದಿಗೆ
ಸೆಟೆದು ಬೀಸತೊಡಗಿದೆ ಗಾಳಿ, ಪರಕಾಯ ಪ್ರವೇಶ ಮಾಡಿದಂತೆ.

ಗಿಡಮರದ ಕಿವಿಯೊಳಗೆ ತೂರಿ ಕಚಗುಳಿ ಇಡುತ್ತಿದ್ದ
ತಂಬೆಲರು ಮಟಮಾಯ.
ಎಲೆಗಳು ಥರಥರನೇ ನಡಗುತ್ತಿವೆ, ಹಕ್ಕಿಗೂಡಿನ ಮರಿಗಳು
ತಾಯ್ ಪಕ್ಕೆಯಲಿ ಬಚ್ಚಿಟ್ಟುಕೊಳ್ಳುತ್ತಿವೆ,
ಮುಚ್ಚಟೆಯಾಗಿ ಸುರಿವ ಮಳೆಮಾರುತಕ್ಕೆ ಬೆದರಿ.
ಈಗ ಗಾಢಾಂಧಕಾರ ವಕ್ಕರಿಸಿದೆ,
ತಡಕಾಡುತ್ತಿವೆ ಹತ್ತಾರು ಕೈಗಳು – ದೀಪ ಬೆಳಗಲು,
ಹೊತ್ತಿಸಿದ ಮಂದ ಪ್ರಭೆಯಲ್ಲಿ ದಿಟ್ಟಿಸುತ್ತೇನೆ
-ಅದೋ, ಎಳೆಯ ಆಕೃತಿಯ ಸ್ತಬ್ಧ ಚಿತ್ರ
ಬಯಲು ಚಿತ್ರದಂತೆ-ನನ್ನದೇ ನಿಚ್ಚಳ ರೂಪ.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...