ಅತಿ ಜರೂರು ಕರೆ
ಓಗೊಟ್ಟು ನಡೆಯಲೇ ಬೇಕು
ದೂಡಲಾಗದು ಮುಂದೆ
ಹೇಳಲಾಗದು ನೂರು ನೆಪ
ಅವ ದೂರ್ತನೆಂದರೂ ಬದುಕಿಗೆ
ಬಾರದಿರೆ ಸಾಕೆಂದರೂ
ದುತ್ತೆಂದು ಹೆಗಲೇರಿ
ತಳ್ಳಿ ಬಿಡುವ ಕೂಪಕ್ಕೆ
ಮುಗ್ಧ ಎಸಳುಗಳ ಕೂಡ
ಕೊಚ್ಚಿ ಹಾಕುವ ಕ್ರೂರ
ಕಣ್ಣೀರ ಧಾರೆಗೂ
ಆರ್ತನಾದಕ್ಕೂ ಕಿವುಡನವ
ಚಿಗುರೆಲೆಗೆ ಶರದೃತುವಿನಂತೆ
ಕರುಣೆಯಿಲ್ಲದೆ ಕರಕಲಾಗಿಸುವ
ಬಯಕೆ ಹೊತ್ತವ
ಎಷ್ಟೊಂದು ಕನಸುಗಳಿವೆ
ಮುಸ್ಸಂಜೆಯ ಮಾತುಗಳು ಬಾಕಿಯಿವೆ
ನಕ್ಷತ್ರಗಳ ಹಾದಿಯಲಿ ಬಯಕೆಗಳ ಮೂಟೆ
ಮಾರಲಿದೆ, ಕೊಳ್ಳಲಿದೆ
ಮೈಮನಗಳ ಸುಳಿಯಲಿ ತೇಲುವುದಿದೆ
ಅದಕ್ಕೆ
ಕೆಂಡ ಮಾರುವವನ ಸಹವಾಸ ಬೇಕಿಲ್ಲ ಎಂದರೂ
ಸಾರಿ ಬರುವ ಸರದಾರನ
ಅಪ್ಪುಗೆಯ ತೆಕ್ಕೆಗೆ ಬಿದ್ದರೆ – ಬಲಿ
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.