Home / ಕವನ / ಕವಿತೆ / ಈ ಗೆಳೆತನ….

ಈ ಗೆಳೆತನ….

ನನ್ನೆಲ್ಲಾ ಪದ್ಯಗಳಲ್ಲಿರುವಂತೆ
ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ.
ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ
ಇಷ್ಟವಾಗದಿದ್ದರೆ ಬೇಡ
ಕಿಂಚಿತ್ತೂ ಕೋಪವಿಲ್ಲ.

ಆದರೆ ನಾನು ಪ್ರೀತಿಸುವ
ಗಾಳಿ, ಮೋಡ, ತಾರೆಯರನ್ನು
ನಿಂದಿಸಬೇಡ.
ಅವರ ಬಗ್ಗೆ ಯಾಕೆ ಬರೆಯುತ್ತಿ?
ಎಂದು ಕೇಳಬೇಡ.
ಅವರ ಬಗ್ಗೆ ಎಷ್ಟು ಬರೆಯುತ್ತಿ?
ಎಂದು ಕಾಡಬೇಡ.

ನಾನೀಗ-
ನನ್ನ-ನಿನ್ನ ಗೆಳೆತನದ ಬಗ್ಗೆ
ಬರೆಯುತ್ತಿದ್ದೇನೆ.
ನಿನ್ನ ಗೈರು ಹಾಜರಿಯಲ್ಲಿ
ತಾರೆ, ಸೂರ್ಯ, ಮೋಡ, ಗಾಳಿ
ನನ್ನ ಜತೆಯಲ್ಲಿದ್ದಾರೆ.

ಈ ಗೆಳೆತನ ಮೋಡಗಳ ಹಾಗೆ.
ನಾಲ್ಕು ಹನಿ ತಂಪು ಚೆಲ್ಲುತ್ತೇನೆ
ಎಂದು ಹೇಳುವುದಿಲ್ಲ.
ಚೆಲ್ಲಬೇಡ ಎಂದರೆ
ಕೇಳುವುದೂ ಇಲ್ಲ.

ಈ ಗೆಳೆತನ ಕಡಲೊಳಗಿನ
ಅಲೆಗಳ ಹಾಗೆ.
ತಡಿಯಲ್ಲಿ ನಿಂತರೆ ಓಡಿಬಂದು
ಕಾಲನ್ನು ಚುಂಬಿಸುತ್ತದೆ.
ಚುಂಬಿಸುತ್ತೇನೆ ಎಂದು ಹೇಳುವುದಿಲ್ಲ
ಚುಂಬಿಸಬೇಡ ಎಂದರೆ
ಕೇಳುವುದೂ ಇಲ್ಲ.

ಈ ಗೆಳೆತನ ಗಾಳಿಯ ಹಾಗೆ.
ಎದೆಯೊಳಗೆ ನುಗ್ಗಿ ಹೊರಬರುತ್ತದೆ.
ಹೋಗುತ್ತೇನೆ ಎಂದು ಹೇಳುವುದಿಲ್ಲ.
ಹೋಗಬೇಡ ಎಂದರೆ
ಕೇಳುವುದೂ ಇಲ್ಲ.

ಆದರೂ ಅನಿಸುತ್ತದೆ.
ಒಮ್ಮೊಮ್ಮೆ ಈ ಗೆಳೆತನ
ಧೂಳಿನ ಹಾಗೆ ಮೆತ್ತಿಕೊಳ್ಳುತ್ತದೆ.
ಕೊಡವಿದರೆ ಚದುರಿ
ಚೆಲ್ಲಿ ಹೋಗುತ್ತದೆ.

ಹೌದು
ನನ್ನ-ನಿನ್ನ ಗೆಳೆತನದಲ್ಲಿ
ಮೆಚ್ಚುವಂಥಾದ್ದು ಇದೆ
ಚುಚ್ಚುವಂಥಾದ್ದು ಇದೆ
ಕೊಚ್ಚಿ ಹರಿದು ಹೋಗುವಂಥಾದ್ದು ಇದೆ.

ಅಂದಹಾಗೆ ಗೆಳೆಯಾ…
ಈ ಗೆಳೆತನದಲ್ಲಿ ನಾನು
ಶಾಮೀಲಾಗಿದ್ದರೂ ಇದು
ಇಡಿಯಾಗಿ ನಿನ್ನನ್ನು ಕುರಿತೆ
ಬರೆದ ಕವನ. ನಿಜ,
ಬರೆ ಎಂದೇನೂ ನೀನು ಕೇಳಿಲ್ಲ.
ಆದರೆ ಬರೆಯಬೇಡ ಎಂದರೆ ನಾನು ಕೇಳುವುದೂ ಇಲ್ಲ.


Tagged:

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...