Home / ಕವನ / ಕವಿತೆ / ಈ ಗೆಳೆತನ….

ಈ ಗೆಳೆತನ….

ನನ್ನೆಲ್ಲಾ ಪದ್ಯಗಳಲ್ಲಿರುವಂತೆ
ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ.
ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ
ಇಷ್ಟವಾಗದಿದ್ದರೆ ಬೇಡ
ಕಿಂಚಿತ್ತೂ ಕೋಪವಿಲ್ಲ.

ಆದರೆ ನಾನು ಪ್ರೀತಿಸುವ
ಗಾಳಿ, ಮೋಡ, ತಾರೆಯರನ್ನು
ನಿಂದಿಸಬೇಡ.
ಅವರ ಬಗ್ಗೆ ಯಾಕೆ ಬರೆಯುತ್ತಿ?
ಎಂದು ಕೇಳಬೇಡ.
ಅವರ ಬಗ್ಗೆ ಎಷ್ಟು ಬರೆಯುತ್ತಿ?
ಎಂದು ಕಾಡಬೇಡ.

ನಾನೀಗ-
ನನ್ನ-ನಿನ್ನ ಗೆಳೆತನದ ಬಗ್ಗೆ
ಬರೆಯುತ್ತಿದ್ದೇನೆ.
ನಿನ್ನ ಗೈರು ಹಾಜರಿಯಲ್ಲಿ
ತಾರೆ, ಸೂರ್ಯ, ಮೋಡ, ಗಾಳಿ
ನನ್ನ ಜತೆಯಲ್ಲಿದ್ದಾರೆ.

ಈ ಗೆಳೆತನ ಮೋಡಗಳ ಹಾಗೆ.
ನಾಲ್ಕು ಹನಿ ತಂಪು ಚೆಲ್ಲುತ್ತೇನೆ
ಎಂದು ಹೇಳುವುದಿಲ್ಲ.
ಚೆಲ್ಲಬೇಡ ಎಂದರೆ
ಕೇಳುವುದೂ ಇಲ್ಲ.

ಈ ಗೆಳೆತನ ಕಡಲೊಳಗಿನ
ಅಲೆಗಳ ಹಾಗೆ.
ತಡಿಯಲ್ಲಿ ನಿಂತರೆ ಓಡಿಬಂದು
ಕಾಲನ್ನು ಚುಂಬಿಸುತ್ತದೆ.
ಚುಂಬಿಸುತ್ತೇನೆ ಎಂದು ಹೇಳುವುದಿಲ್ಲ
ಚುಂಬಿಸಬೇಡ ಎಂದರೆ
ಕೇಳುವುದೂ ಇಲ್ಲ.

ಈ ಗೆಳೆತನ ಗಾಳಿಯ ಹಾಗೆ.
ಎದೆಯೊಳಗೆ ನುಗ್ಗಿ ಹೊರಬರುತ್ತದೆ.
ಹೋಗುತ್ತೇನೆ ಎಂದು ಹೇಳುವುದಿಲ್ಲ.
ಹೋಗಬೇಡ ಎಂದರೆ
ಕೇಳುವುದೂ ಇಲ್ಲ.

ಆದರೂ ಅನಿಸುತ್ತದೆ.
ಒಮ್ಮೊಮ್ಮೆ ಈ ಗೆಳೆತನ
ಧೂಳಿನ ಹಾಗೆ ಮೆತ್ತಿಕೊಳ್ಳುತ್ತದೆ.
ಕೊಡವಿದರೆ ಚದುರಿ
ಚೆಲ್ಲಿ ಹೋಗುತ್ತದೆ.

ಹೌದು
ನನ್ನ-ನಿನ್ನ ಗೆಳೆತನದಲ್ಲಿ
ಮೆಚ್ಚುವಂಥಾದ್ದು ಇದೆ
ಚುಚ್ಚುವಂಥಾದ್ದು ಇದೆ
ಕೊಚ್ಚಿ ಹರಿದು ಹೋಗುವಂಥಾದ್ದು ಇದೆ.

ಅಂದಹಾಗೆ ಗೆಳೆಯಾ…
ಈ ಗೆಳೆತನದಲ್ಲಿ ನಾನು
ಶಾಮೀಲಾಗಿದ್ದರೂ ಇದು
ಇಡಿಯಾಗಿ ನಿನ್ನನ್ನು ಕುರಿತೆ
ಬರೆದ ಕವನ. ನಿಜ,
ಬರೆ ಎಂದೇನೂ ನೀನು ಕೇಳಿಲ್ಲ.
ಆದರೆ ಬರೆಯಬೇಡ ಎಂದರೆ ನಾನು ಕೇಳುವುದೂ ಇಲ್ಲ.


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...