ರೂಪ

ಬಾಯ್ದೆರೆದು ಮುತ್ತಿರುವ
ದಳ್ಳುರಿಯ ಮಧ್ಯದೊಳು
ಚಿಚ್ಛಕ್ತಿಯೊಂದೆದ್ದಿತು

ಇದೆ ಸಮಯ ಇದೆ ಸಮಯ
ತಡಮಾಡದಿರು ಏಳು
ರೂಪವನು ಇಳಿಸೆಂದಿತು

ರೂಪವೆಂದರೆ ಏನೊ
ಚಿತ್ರವಾಗಿದೆ ಮಾತು
ಶಿಲ್ಪಿಯೇ ನಾನೆಂದೆನು

ಪರಿಹರಿಪೆ ಸಂಶಯವ
ನೋಡೆನುತ ಬಹುತರದ
ಭಾವಗಳ ತಂದೊಡ್ಡಿತು

ರೂಪಗಳ ಭಟ್ಟಿ ಇದು
ಆನಂದವಿಲ್ಲಿಹುದು
ಬಿತ್ತರಿಸು ಏಳೆಂದಿತು

ಇರಲಿರಲು ಬಹುದೆಂದು
ಗೈಮೆ ಇದು ಸುಖವೆಂದು
ಚಟಪಟಿಸಿ ನಾನೆದ್ದೆನು

ಭಾವನೋದ್ರೇಕದೊಳು
ಉಲ್ಲಾಸವುಕ್ಕೇರಿ
ಬಹುದೂರ ನಾ ಸಾಗಿದೆ

ಆನಂದ ಸಿಗದಾಗೆ
ಅತ್ತಿತ್ತ ಸುಳಿದಾಡಿ
ಕಂಗೆಟ್ಟು ಬೆದಕಾಡಿದೆ

ಓ ರೂಪವೇ ನಿನ್ನ
ಕಾಣಲೋಸುಗವೆಂದು
ಪೊಸರಾಜ್ಯಕೈತಂದೆನು

ಭಾವಶೃಂಗವೆ ನಿನ್ನ
ಬೀಡಿನಿಂದೆನಗೊಸೆದು
ಇಳಿದು ಬಾ ಬಳಿಗೆಂದೆನು

ಕೂಗದಿರು ಕಂಡತ್ತ
ಓಡದಿರು ಬಾ ಇಲ್ಲಿ
ವಾಹಿನಿಯು ಸೆಳೆದೊಯ್ವುದು

ತಾನಾಗಿ ಬಂದುದನು
ಪುಟವಿಟ್ಟು ಬೆಲೆಕಟ್ಟಿ
ರೂಪಕೊಡು ಅದಕೆಂದಿತು

ರೂಪಿಸುವ ಬಗೆ ಏನೊ
ಬಣ್ಣಗಳ ನಾನರಿಯೆ
ಪಾಠವೆನಗಿಲ್ಲೆಂದೆನು

ಭಾವವನು ಕಟ್ಟಿರಿಸಿ
ಅರ್ಥವನು ಬಿಚ್ಚಿಡುವ
ಪದಗಳನು ತಾರೆಂದಿತು

ನಿನ್ನ ಕಲ್ಪನೆಯೊಳಗೆ
ಚಿತ್ರ ತಾನೇಳುವುದು
ನವನೀತವುದಯಿಪಂತೆ

ಭಾವದೊಳು ಕಾಂತಿಯುತ
ಔಪಾಸನೆಯು ಮೂಡೆ
ಸಾವಿಲ್ಲ ಆ ರೂಪಕೆ

ಭಾವಗಳು ಉನ್ನತದ
ವಜ್ರಗಳು ಇದ್ದಂತೆ
ವಾಕ್ಯಗಳು ಚಿನ್ನದಂತೆ

ನಿನ್ನ ನಿಪುಣತೆಯೊಡನೆ
ಕಟ್ಟಡವ ಕಟ್ಟಿರಿಸೆ
ಪೂರ್ಣತೆಯು ಬಹುದೆಂದಿತು

ಕಟ್ಟದಿರು ಕಬ್ಬಿಣದ
ಕಟ್ಟಡದಿ ಪುಷ್ಪವನು
ಮಕರಂದವಿಹುದು ಒಳಗೆ

ಮಕರಂದವಿಲ್ಲದೊಡೆ
ಸಮದೊಳಗೆ ಸುಖವಿಲ್ಲ
ಪೋಗದಿರು ಆ ಗೊಡವೆಗೆ

ಅನುಭವದ ಕ್ಷೇತ್ರವನು
ಹೊಕ್ಕು ನೋಡಿದೊಡಲ್ಲಿ
ನುಡಿಗಳಿಗೆ ಕ್ಷಾಮವಿಲ್ಲ

ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳ ತಾರೆಂದಿತು

ದಿಶೆ ದಿಶೆಯೊಳಲೆದಲೆದು
ವಾಕ್ಯಗಳನಾಯ್ದಾಯ್ದು
ಸಡಗರದಿ ನಾ ತಂದೆನು

ಸುಲಭ ಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳೊ ನೋಡೆಂದೆನು

ಸಾಕು ಬಿಡು ಸಾಕು ಬಿಡು
ಏನ ತಂದೆಯೊ ಕಾಣೆ
ಈ ಭಾವಕೀ ಪದಗಳೆ?

ಕಡಿವಾಣವಿಲ್ಲದಿಹ
ಪದಗಳಿವು ‘ಛೀ’ ಯೆಂದು
ಮೂದಲಿಸಿ ಸಿಡುಗುಟ್ಟಿತು

ನಿನ್ನಂತೆ ಕಂಡವರು
ಸಿಡುಗುಟ್ಟುವರೊ ಏನೋ
ರೂಪವೇ ಬೇಡೆಂದೆನು

ಅನ್ಯರಾಡುವುದೇನು
ನಿನ್ನ ಕತೆ ನಿನದಿರಲು
ಅಳುಕುಬಗೆ ಬೇಡೆಂದಿತು

ರೂಪವದು ನಮದಲ್ಲ
ಟೀಕಿಪರ ಸೊತ್ತಲ್ಲ
ಗಣಿಯೊಡೆಯ ವಿಶ್ವನಾಥ

ಆಳಕ್ಕೆ ತಕ್ಕಂತೆ
ಏಳುವುದು ಆನಂದ
ಜನಕಜೇ, ಕೇಳೆಂದಿತು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...