Home / ಕವನ / ಕವಿತೆ / ರಥದ ಕಥೆ

ರಥದ ಕಥೆ

ಅಂದು ಇಂದು ಎಂದಿಗೂ
ಲೋಕದ ಥರ ಒಂದೇ
ಅವತಾರಗಳಳಿದರೂ
ಕ್ರಿಸ್ತ ಬುದ್ಧ ಎಳೆದರೂ
ಒಂದೆ ಒಂದು ಇಂಚೂ ರಥ
ಸರಿಯಲಿಲ್ಲ ಮುಂದೆ.

ಅಂಥ ಇಂಥ ರಥವೆ ? ಕೊಂಚ
ಕೊರಕಲತ್ತ ಜಾರಿ
ತಪ್ಪಿತಷ್ಟೆ ದಾರಿ,
ಪಥಕೆಳೆಯಲು ಬಂದ ಧರ್ಮ ಅಲ್ಲಲ್ಲೇ ಗೋರಿ!
ಒಳಗೆ ಕುಳಿತ ದೈವದೆಲ್ಲ
ಮಹಿಮೆಯ ಅಳೆದವರೆ ಇಲ್ಲ
ರಾಮಾಯಣ ಭಾರತ ಸಹ
ನಿವಾಳಿಸಿದ ಕಾಯಿ,
ಕೃತ ತ್ರೇತರ ತಾತ, ಕಲಿಯ
ನುಡಿತಕೆ ಇದು ಬಾಯಿ

ಹಣೆಯ ಮೇಲೆ ಸಿಕಂದರರ
ಹೆಸರುಗಳನು ಬರೆಸಿದೆ,
ಬಡವರನ್ನು ಅಡಿಗೆ ಹಾಕಿ
ಕಷ್ಟದ ಕಥೆ ಹರಿಸಿದೆ,
ಮೈಯ ಸುತ್ತ ಧ್ವಜದ ಬದಲು
ಈಟಿಗಳನೆ ಸಿಗಿಸಿದೆ,
ಗುಡುಗಿನೆದೆಯೆ ನಡುಗುವಂತೆ
ಢರ್ರೆನ್ನುತ ತೇಗಿದೆ.

ಲೋಭವೆನುವ ದೇವರ
ಮೆರೆಸುತ್ತಿದೆ ಬಯಕೆಯೆಂಬ
ದೀಪ ಹಚ್ಚಿ ಸಾವಿರ,
ಪ್ರಜ್ವಲಿಸಿದೆ ಬೆಳಗಿ ಮುಖ
ಉಜ್ವಲಿಸಿದೆ ಭಕ್ತಿ
ಉಗ್ಘಡಿಸಿದೆ ಭಕ್ತಗಣ
ಉಕ್ಕುತ್ತಿದೆ ಶಕ್ತಿ

ಬೆಳಗುತ್ತಿದೆ ಬೆಂಕಿ ಹತ್ತಿ
ಗುಡಿಸಲುರಿಯ ದೀಪ
ಕಾರ್ಖಾನೆಯ ಚಿಮಣಿ ತೂರಿ
ಚೀರಿ ಬರುವ ಧೂಪ
ನೈವೇದ್ಯಕೆ ಬಡಬಗ್ಗರ
ಮಕ್ಕಳ ತಲೆಕಾಯಿ
ಬೊಬ್ಬಿರಿದಿವೆ ಭೇರಿ ನುಡಿಸಿ
ಧನಿಕರ ಮನೆ ನಾಯಿ

ದೈವಮಹಿಮೆ ಕಂಡುಕೊಂಡ
ಧನಿಕವೃಂದ
ಶಾಸನಗಳ ಬರೆಸಿಕೊಟ್ಟ
ದತ್ತಿಗಳಿವೆ ಸಾಕ್ಷಿಗೆ
ಅಂಗಭೋಗ ರಂಗಭೋಗ
ದೇವದಾಸಿ ಪೂಜೆಗೆ
ಬಿಟ್ಟ ಬಿಟ್ಟ ಹೊಲಗಳಿವೆ
ಅದ ಕಾಯುವ ಕುಲಗಳಿವೆ
ಖಾಸಾ ಭೇಟಿ ಕೊಡುವುದಿದೆ
ಪೀಠಪತಿಗಳು
ಮಹಾಮಂತ್ರಿ, ಬರೀ ಮಂತ್ರಿ
ಬೆನ್ನ ಹಿಂದೆ ಇರುವ ತಂತ್ರಿ
ಕರಿಲಕ್ಷ್ಮೀವರಪಾತ್ರ ಕರೋಡು ಪತಿಗಳು.

ಯಾಜ್ಞವಲ್ಕ್ಯ ಪೈಗಂಬರ
ಯಾರು ಯಾರೋ ಬಂದರು
ವೇದ ಖುರಾನ್ ಸನ್ನೆಗೋಲು
ಅಡಿಗೆ ಕೊಟ್ಟು ಎಳೆದರು
ಜಗ್ಗಲಿಲ್ಲ, ಕಡೆಗೆ ಬಂದ
ಹಿಗ್ಗು ನಗೆಯ ಗಾಂಧಿ
(ಮಂಗಳಗಳ ನಾಂದಿ)
ಎಳೆದ ನೋಡಿ ಒಂದೇ ಸಲ
ಉಘೇ ಉಘೇ ಮಹಾಬಲ
ಸರಿದ ಭರಕೆ ಜರುಗಿ ಚಕ್ರ
ಹೂತೆ ಹೋಯ್ತು ಪೂರ್ತಿ
ಓಂ ಶಾಂತಿಃ: ಶಾಂತಿಃ ಶಾಂತಿಃ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...