ರಥದ ಕಥೆ

ಅಂದು ಇಂದು ಎಂದಿಗೂ
ಲೋಕದ ಥರ ಒಂದೇ
ಅವತಾರಗಳಳಿದರೂ
ಕ್ರಿಸ್ತ ಬುದ್ಧ ಎಳೆದರೂ
ಒಂದೆ ಒಂದು ಇಂಚೂ ರಥ
ಸರಿಯಲಿಲ್ಲ ಮುಂದೆ.

ಅಂಥ ಇಂಥ ರಥವೆ ? ಕೊಂಚ
ಕೊರಕಲತ್ತ ಜಾರಿ
ತಪ್ಪಿತಷ್ಟೆ ದಾರಿ,
ಪಥಕೆಳೆಯಲು ಬಂದ ಧರ್ಮ ಅಲ್ಲಲ್ಲೇ ಗೋರಿ!
ಒಳಗೆ ಕುಳಿತ ದೈವದೆಲ್ಲ
ಮಹಿಮೆಯ ಅಳೆದವರೆ ಇಲ್ಲ
ರಾಮಾಯಣ ಭಾರತ ಸಹ
ನಿವಾಳಿಸಿದ ಕಾಯಿ,
ಕೃತ ತ್ರೇತರ ತಾತ, ಕಲಿಯ
ನುಡಿತಕೆ ಇದು ಬಾಯಿ

ಹಣೆಯ ಮೇಲೆ ಸಿಕಂದರರ
ಹೆಸರುಗಳನು ಬರೆಸಿದೆ,
ಬಡವರನ್ನು ಅಡಿಗೆ ಹಾಕಿ
ಕಷ್ಟದ ಕಥೆ ಹರಿಸಿದೆ,
ಮೈಯ ಸುತ್ತ ಧ್ವಜದ ಬದಲು
ಈಟಿಗಳನೆ ಸಿಗಿಸಿದೆ,
ಗುಡುಗಿನೆದೆಯೆ ನಡುಗುವಂತೆ
ಢರ್ರೆನ್ನುತ ತೇಗಿದೆ.

ಲೋಭವೆನುವ ದೇವರ
ಮೆರೆಸುತ್ತಿದೆ ಬಯಕೆಯೆಂಬ
ದೀಪ ಹಚ್ಚಿ ಸಾವಿರ,
ಪ್ರಜ್ವಲಿಸಿದೆ ಬೆಳಗಿ ಮುಖ
ಉಜ್ವಲಿಸಿದೆ ಭಕ್ತಿ
ಉಗ್ಘಡಿಸಿದೆ ಭಕ್ತಗಣ
ಉಕ್ಕುತ್ತಿದೆ ಶಕ್ತಿ

ಬೆಳಗುತ್ತಿದೆ ಬೆಂಕಿ ಹತ್ತಿ
ಗುಡಿಸಲುರಿಯ ದೀಪ
ಕಾರ್ಖಾನೆಯ ಚಿಮಣಿ ತೂರಿ
ಚೀರಿ ಬರುವ ಧೂಪ
ನೈವೇದ್ಯಕೆ ಬಡಬಗ್ಗರ
ಮಕ್ಕಳ ತಲೆಕಾಯಿ
ಬೊಬ್ಬಿರಿದಿವೆ ಭೇರಿ ನುಡಿಸಿ
ಧನಿಕರ ಮನೆ ನಾಯಿ

ದೈವಮಹಿಮೆ ಕಂಡುಕೊಂಡ
ಧನಿಕವೃಂದ
ಶಾಸನಗಳ ಬರೆಸಿಕೊಟ್ಟ
ದತ್ತಿಗಳಿವೆ ಸಾಕ್ಷಿಗೆ
ಅಂಗಭೋಗ ರಂಗಭೋಗ
ದೇವದಾಸಿ ಪೂಜೆಗೆ
ಬಿಟ್ಟ ಬಿಟ್ಟ ಹೊಲಗಳಿವೆ
ಅದ ಕಾಯುವ ಕುಲಗಳಿವೆ
ಖಾಸಾ ಭೇಟಿ ಕೊಡುವುದಿದೆ
ಪೀಠಪತಿಗಳು
ಮಹಾಮಂತ್ರಿ, ಬರೀ ಮಂತ್ರಿ
ಬೆನ್ನ ಹಿಂದೆ ಇರುವ ತಂತ್ರಿ
ಕರಿಲಕ್ಷ್ಮೀವರಪಾತ್ರ ಕರೋಡು ಪತಿಗಳು.

ಯಾಜ್ಞವಲ್ಕ್ಯ ಪೈಗಂಬರ
ಯಾರು ಯಾರೋ ಬಂದರು
ವೇದ ಖುರಾನ್ ಸನ್ನೆಗೋಲು
ಅಡಿಗೆ ಕೊಟ್ಟು ಎಳೆದರು
ಜಗ್ಗಲಿಲ್ಲ, ಕಡೆಗೆ ಬಂದ
ಹಿಗ್ಗು ನಗೆಯ ಗಾಂಧಿ
(ಮಂಗಳಗಳ ನಾಂದಿ)
ಎಳೆದ ನೋಡಿ ಒಂದೇ ಸಲ
ಉಘೇ ಉಘೇ ಮಹಾಬಲ
ಸರಿದ ಭರಕೆ ಜರುಗಿ ಚಕ್ರ
ಹೂತೆ ಹೋಯ್ತು ಪೂರ್ತಿ
ಓಂ ಶಾಂತಿಃ: ಶಾಂತಿಃ ಶಾಂತಿಃ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೩೪
Next post ಆರ್ಥಿಕ ನಾಯಕತ್ವದ ಅಪಾಯ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…