Home / ಕವನ / ಕವಿತೆ / ಯಾರು ಬಂದರೆ ತಾನೆ ಏನು ?

ಯಾರು ಬಂದರೆ ತಾನೆ ಏನು ?

ನಿನಗೆ ಅರವತ್ತಾಯಿತಾ ಎಂದದ್ದು
‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ
ಸಣ್ಣಗೆ ಬೆಚ್ಚಿದೆ ಒಳಗೆ,
ಯಾರು ಕೇಳಿದ್ದು ಹಾಗೆ ?
ಜೊತೆಗಿದ್ದ ಅಳಿಯನ ? ಮಗನ ? ಅಥವಾ
ಸಿನಿಮಾ ರೇಸು ಕಾರು ಬಾರು ಎಂದು
ಸದಾ ಜೊತೆಗೆ ಪೋಲಿ ಅಲೆಯುವ
ಅವನ ಗೆಳೆಯನ ?
ಏನು ಕೇಳಿದರೊ ?
ಈ ಬೆಚ್ಚನೆ ಆರೋಗ್ಯ ಕಂಡು
ಮೆಚ್ಚಿಗೆ ಹುಟ್ಟಿ ಕೇಳಿದರೊ ?
ಯಾರಿಗೆ ಗೊತ್ತು
ಹುಚ್ಚು ಜನ ಅಸೂಯೆಪಟ್ಟೇ ಆಡಿದರೊ ?

ಯಾರು ಬಂದಾರೆಂದು ಇದ್ದೀತು ?
ಯಾರು ಬಂದರು ತಾನೆ ಏನು ದಿಗಿಲು ?
ಬಂದವರು ತಂದ ಋಣದಲ್ಲಿ ತೂಗಾಡುತಿವೆ
ನೂರು ಉರುಳಿನ ನೆರಳು ;
ಕನಸು ಕಲಿಸಿದ ಅಮ್ಮ
ಕಂಡು ತೀರಿದ ಅಪ್ಪ
ಕೈ ಹಿಡಿದ ಕಣ್ಮಣಿಯೊ
ತನ್ನ ಲೆಕ್ಕಗಳಲ್ಲಿ ನನ್ನ ಎತ್ತರ ಅಳೆದು
ನಟ್ಟನಡು ಚೌಕದಲಿ ಹರಾಜು ಹಾಕಿದ ಮಾಯೆ
ನುಂಗಲಾಗದೆ ಸುಟ್ಟ ಬಿಸಿ ಬಿಸೀ ತುಪ್ಪ
ಮಿಠಾಯಿ ಮಕ್ಕಳು, ಜೊತೆಗೆ ಕಠಾರಿ ನಂಟರು
ವೃತ್ತಿ ಹವ್ಯಾಸ ನೆರೆಹೊರೆಗೆ ಹುಟ್ಟಿದ ಎಷ್ಟೋ
ಪಟಾಕಿ ಗೆಳೆಯರು,

ಬೆಳಗಿನ ತುಷಾರ ಸರಿದು
ಕೆರಳಿದ ಮಧ್ಯಾಹ್ನ ಬೆಳೆದು
ಕನಸಿದ್ದ ಮುಖದಲ್ಲಿ ಸತ್ಯದ
ಕಠೋರ ದಾಡೆಗಳು !

ತುಂಬುತಿಂಗಳ ಬದುಕು
ಬರಿ ತಂಗಳು ಈಗ.
ನಿನ್ನೆ ಮೊನ್ನೆಯ, ಇವತ್ತು ನಿನ್ನೆಯ
ನಾಳೆ ಇಂದಿನ ಕಾರ್ಬನ್ ಕಾಪಿ.
ತರ್ಕಕ್ಕೆ ಗಣಿತಕ್ಕೆ ಅಂಕೆಗಳ ಮಣಿತಕ್ಕೆ ಸಿಕ್ಕು
ಬದುಕಲ್ಲಿ ಸುಖ ಸಿಗದ ಪಾಪಿ.
ಇದೆಲ್ಲ ಮೀಟಿ
ತಾರೆಗಳನ್ನೇ ದಾಟಿ
ನಿಂತ ಅನಂತದ ಹನಿ ಹನಿ ಆಮಂತ್ರಣ.
ಕಳ್ಳ ಹೆಜ್ಜೆಯನಿಟ್ಟು ಬಂದ ಕಾಮದ ಬೆಕ್ಕು
ಕತ್ತಲಲ್ಲಿ ತಿಂದು ಬಿಕ್ಕಿದ ಬದುಕಿನ
ಮೂಳೆಯವಶೇಷಕ್ಕೆ
ಅನಿರೀಕ್ಷಿತ ಅದ್ಭುತದ ಸಿಂಚನ.

ಹೀಗಿರುತ್ತ
ಯಾರು ಬಂದರೆ ತಾನೆ ಏನಂತೆ ?
ಬಾ ಎಂದು ಕರೆದರೂ ಇಲ್ಲ ಚಿಂತೆ.
ಬಂದು ಮುಟ್ಟಲಿ ನನ್ನ,
ಮುಟ್ಟಿ ಬಿಡಿಸಲಿ ಸಣ್ಣ
ಪಂಜರದಿ ಸೆರೆಸಿಕ್ಕ
ಗುಟ್ಟುಗಳ ಸಂತೆ.
ಹಕ್ಕಿ ಹಾರಲಿಬಿಡಿ ಬಾನಿನಲ್ಲಿ
ಸುಖವುಕ್ಕಿ ಈಜಲಿ ಬೆಳಕುಗಡಲಿನಲ್ಲಿ
ದೂರ ಮಣಿಯಾಗುತ್ತ ಸಮೆದು ಕಣವಾಗುತ್ತ
ತಾನೆ ಬಾನಾಗುತ್ತ ಕಾಣದಲ್ಲಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...