Home / ಕವನ / ಕವಿತೆ / ಯಾರು ಬಂದರೆ ತಾನೆ ಏನು ?

ಯಾರು ಬಂದರೆ ತಾನೆ ಏನು ?

ನಿನಗೆ ಅರವತ್ತಾಯಿತಾ ಎಂದದ್ದು
‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ
ಸಣ್ಣಗೆ ಬೆಚ್ಚಿದೆ ಒಳಗೆ,
ಯಾರು ಕೇಳಿದ್ದು ಹಾಗೆ ?
ಜೊತೆಗಿದ್ದ ಅಳಿಯನ ? ಮಗನ ? ಅಥವಾ
ಸಿನಿಮಾ ರೇಸು ಕಾರು ಬಾರು ಎಂದು
ಸದಾ ಜೊತೆಗೆ ಪೋಲಿ ಅಲೆಯುವ
ಅವನ ಗೆಳೆಯನ ?
ಏನು ಕೇಳಿದರೊ ?
ಈ ಬೆಚ್ಚನೆ ಆರೋಗ್ಯ ಕಂಡು
ಮೆಚ್ಚಿಗೆ ಹುಟ್ಟಿ ಕೇಳಿದರೊ ?
ಯಾರಿಗೆ ಗೊತ್ತು
ಹುಚ್ಚು ಜನ ಅಸೂಯೆಪಟ್ಟೇ ಆಡಿದರೊ ?

ಯಾರು ಬಂದಾರೆಂದು ಇದ್ದೀತು ?
ಯಾರು ಬಂದರು ತಾನೆ ಏನು ದಿಗಿಲು ?
ಬಂದವರು ತಂದ ಋಣದಲ್ಲಿ ತೂಗಾಡುತಿವೆ
ನೂರು ಉರುಳಿನ ನೆರಳು ;
ಕನಸು ಕಲಿಸಿದ ಅಮ್ಮ
ಕಂಡು ತೀರಿದ ಅಪ್ಪ
ಕೈ ಹಿಡಿದ ಕಣ್ಮಣಿಯೊ
ತನ್ನ ಲೆಕ್ಕಗಳಲ್ಲಿ ನನ್ನ ಎತ್ತರ ಅಳೆದು
ನಟ್ಟನಡು ಚೌಕದಲಿ ಹರಾಜು ಹಾಕಿದ ಮಾಯೆ
ನುಂಗಲಾಗದೆ ಸುಟ್ಟ ಬಿಸಿ ಬಿಸೀ ತುಪ್ಪ
ಮಿಠಾಯಿ ಮಕ್ಕಳು, ಜೊತೆಗೆ ಕಠಾರಿ ನಂಟರು
ವೃತ್ತಿ ಹವ್ಯಾಸ ನೆರೆಹೊರೆಗೆ ಹುಟ್ಟಿದ ಎಷ್ಟೋ
ಪಟಾಕಿ ಗೆಳೆಯರು,

ಬೆಳಗಿನ ತುಷಾರ ಸರಿದು
ಕೆರಳಿದ ಮಧ್ಯಾಹ್ನ ಬೆಳೆದು
ಕನಸಿದ್ದ ಮುಖದಲ್ಲಿ ಸತ್ಯದ
ಕಠೋರ ದಾಡೆಗಳು !

ತುಂಬುತಿಂಗಳ ಬದುಕು
ಬರಿ ತಂಗಳು ಈಗ.
ನಿನ್ನೆ ಮೊನ್ನೆಯ, ಇವತ್ತು ನಿನ್ನೆಯ
ನಾಳೆ ಇಂದಿನ ಕಾರ್ಬನ್ ಕಾಪಿ.
ತರ್ಕಕ್ಕೆ ಗಣಿತಕ್ಕೆ ಅಂಕೆಗಳ ಮಣಿತಕ್ಕೆ ಸಿಕ್ಕು
ಬದುಕಲ್ಲಿ ಸುಖ ಸಿಗದ ಪಾಪಿ.
ಇದೆಲ್ಲ ಮೀಟಿ
ತಾರೆಗಳನ್ನೇ ದಾಟಿ
ನಿಂತ ಅನಂತದ ಹನಿ ಹನಿ ಆಮಂತ್ರಣ.
ಕಳ್ಳ ಹೆಜ್ಜೆಯನಿಟ್ಟು ಬಂದ ಕಾಮದ ಬೆಕ್ಕು
ಕತ್ತಲಲ್ಲಿ ತಿಂದು ಬಿಕ್ಕಿದ ಬದುಕಿನ
ಮೂಳೆಯವಶೇಷಕ್ಕೆ
ಅನಿರೀಕ್ಷಿತ ಅದ್ಭುತದ ಸಿಂಚನ.

ಹೀಗಿರುತ್ತ
ಯಾರು ಬಂದರೆ ತಾನೆ ಏನಂತೆ ?
ಬಾ ಎಂದು ಕರೆದರೂ ಇಲ್ಲ ಚಿಂತೆ.
ಬಂದು ಮುಟ್ಟಲಿ ನನ್ನ,
ಮುಟ್ಟಿ ಬಿಡಿಸಲಿ ಸಣ್ಣ
ಪಂಜರದಿ ಸೆರೆಸಿಕ್ಕ
ಗುಟ್ಟುಗಳ ಸಂತೆ.
ಹಕ್ಕಿ ಹಾರಲಿಬಿಡಿ ಬಾನಿನಲ್ಲಿ
ಸುಖವುಕ್ಕಿ ಈಜಲಿ ಬೆಳಕುಗಡಲಿನಲ್ಲಿ
ದೂರ ಮಣಿಯಾಗುತ್ತ ಸಮೆದು ಕಣವಾಗುತ್ತ
ತಾನೆ ಬಾನಾಗುತ್ತ ಕಾಣದಲ್ಲಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...