Home / ಕವನ / ಕವಿತೆ / ಭಾಗ್ಯನಗರ

ಭಾಗ್ಯನಗರ

ಈ ಚೌಕಾಂಬದಲಿ ನಿಂತು ಕೇಳುವೆನು ನಾನು
ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ?
ಇಷ್ಟೆತ್ತರದಿಂದ ಕಾಣಿಸುವುದೇನು-ಜನರು
ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು
ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು
ಯಾರೋ ಆಡುತ್ತಿರುವ ಆಟಿಕೆಗಳಂತೆ
ಮನುಷ್ಯರ ಮಾತುಗಳು ಗೊಂದಲದಂತೆ

ಗಾರೆಯಲಿ ಬರೆದ ಈ ಹೆಸರುಗಳು
ಯಾರವೆಂದು ಹೇಳುವುದು ಹೇಗೆ ?
ಚರಿತ್ರೆಯಲ್ಲಿ ಬರೆದಂತೆ ಬರೆದಿದ್ದಾರೆ ಇಲ್ಲಿ
ಹೆಣ್ಣುಗಂಡುಗಳು ಪ್ರವಾಸಿಗಳು ಪ್ರಣಯಿಗಳು
ಈ ಸುತ್ತು ಮೆಟ್ಟಲುಗಳನೊಂದೊಂದೆ
ಏರಿ ಬಂದವರು ಕಿಂಡಿಗಳ ಬಳಿ ನಿಂತು
ಮೂಸಿ-ಗೊಲ್ಕೊಂಡ-ಫಲಕ್‌ನುಮಾದ
ಮೇಲಿಂದ ಬೀಸಿ ಬರುವ ಗಾಳಿಗೆ ತೆರೆದು
ಮಾಯಾ ಪಕ್ಷಿಗಳಂತೆ ಮಾಯವಾದವರು
ಏನ ಬಿಟ್ಟರು ಏನ ಕೊಂಡೊಯ್ದರು

ಮಾರ್ಗಗಳು ಹೊರಟು ಊರುಗಳ ಸೇರಿದುವು
ಮಿನಾರಗಳ ನೆರಳು ಬಿದ್ದು ಬೆಳೆದುವು
ಅವು ಕೋಟೆಕೊತ್ತಲಗಳ ರೂಪು ತಳೆದುವು
ಅದೊ ಬುರುಜು! ಅದೊ ಸೇನೆ! ಅದೊ
ತೋಫಖಾನೆ! ಅದೋ ಅಂತಃಪುರದಿ೦ದ
ಹೊರಟ ಮೇನೆ! ಜಾಗಟೆಯ ಧ್ವನಿಯೊ
ನಮಾಜಿನ ಕರೆಯೊ ಕಾಳಗದ ಕಹಳೆಯೊ
ಕಂಡರೂ ಕಾಣಿಸದು ಕೇಳಿದರೂ ಕೇಳಿಸದು
ಸಂಜೆಯ ಮಬ್ಬಿನಲಿ ನನ್ನ ಜತೆ ಯಾರಿಲ್ಲ
ನನ್ನ ಹೊರತು ಯಾರೂ ಇರದಲ್ಲಿ? ಆಹ್!

ಯಾರ ಭಾಗದ ಭಾಗ್ಯ! ಭಾಗ್ಯಮತಿಯೇ
ಇನ್ನೂ ಇಲ್ಲೇಕೆ ಕುಳಿತಿರುವೆ ನೀನು?
ನಾಟ್ಯ ಮುಗಿಯಿತು, ದರಬಾರು ಮುಗಿಯಿತು
ಸುಲ್ತಾನನೂ ಹೊರಟು ಹೋದನು ಅರಮನೆಗೆ
ನಗರದ ದೀಪಗಳು ಒಂದೊಂದೆ ಆರಿಹೋಗಿವೆ
ಕತ್ತಲು ಬಂದು ಮಿನಾರಗಳನ್ನು ಮುತ್ತಿವೆ
ತಿಂಗಳಿನ್ನೂ ಮೂಡಿರದ ಹೊತ್ತು ಹೊಳೆಯುವುದು
ಮಾತ್ರ ನನ್ನ ಮೂಗಿನ ನತ್ತು ಬೆಳ್ಳಿ ನಕ್ಷತ್ರ –
ದಂತೆ ನರ್ತಿಸಿ ಆಯಾಸಗೊಂಡವಳೆ ನನ್ನ
ಕಲ್ಪನೆಯಲ್ಲಿ ಬಂದು ಇಡಿಯಾಗಿ ನಿಲ್ಲು
ನಿನ್ನ ಪ್ರೀತಿಯ ಬೆಳಕ ಚೆಲ್ಲು
ನಿನ್ನ ಹೆಸರನೆ ಹೊತ್ತ ನಗರದ ಮೇಲೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...