Home / ಕಥೆ / ಕಿರು ಕಥೆ / ದೇವರಿಗೆ ಬಿಟ್ಟಿದ್ದು

ದೇವರಿಗೆ ಬಿಟ್ಟಿದ್ದು

ಬಿರು ಬೇಸಿಗೆ ಒಂದು ಮಧ್ಯಾಹ್ನ ಪಾಟೀಲ್ ಸರ್‍ ಭೇಟಿಯಾದರು. ಹೊರ ಜಿಲ್ಲೆಯ ಹಳ್ಳಿಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ನಂತರ ಅವರು ಕಂಡದ್ದು ಅದೇ ಮೊದಲು. ಉಭಯಕುಶಲೋಪರಿ ತರುವಾಯ ಹೊಟೇಲಿಗೆ ಹೋಗಿ ಕಾಫಿಗೆ ಆರ್ಡರ್‍ ಕೊಟ್ಟು ಪಾಟೀಲರನ್ನು ಕೇಳಿದೆ:

“ನಿಮ್ಮ ಶಿಕ್ಷಕ ವೃತಿ ಹೇಗೆ ನಡೆದಿದೆ?”
“ಬಹಳ ಆರಾಮಾಗಿದೆ” ಎಂದರು ಪಾಟೀಲ ಸರ್‍.
“ನಿಮ್ಮ ಶಾಲೆಯಲ್ಲಿ ಎಷ್ಟು ತರಗತಿಗಳಿವೆ?”
“ಒಂದರಿಂದ ಐದು”
“ಸ್ಟಾಫ್?”
“ಫುಲ್ ಇದೆ”.
“ಕಟ್ಟಡ?”
“ಬಾಗಿಲು, ಕಿಟಕಿ, ಸೂರಿನ ಹಂಚು ಪೂರ್ತಿ ಇಲ್ಲದಿದ್ದರೂ ಸ್ವಂತ ಕಟ್ಟಡ ಇದೆ.”
“ಮಕ್ಕಳ ಸಂಖ್ಯೆ?”
“ಸಾಕಷ್ಟಿದೆ.”
“ದಾಖಲಾತಿ…. ಹಾಜರಾತಿ?”
“ಹಾಜರಾತಿಯದೇ ಸಮಸ್ಯೆ.”
“ಉಚಿತ ಪುಸ್ತಕ, ಬಟ್ಟೆ, ಬಿಸಿಯೂಟ ವ್ಯವಸ್ಥೆ ಇಲ್ಲವೆ?”
“ಎಲ್ಲ ಅನುಕೂಲವೂ ಇದೆ.”
“ಹಾಗಾದರೆ ಮಕ್ಕಳ ಹಾಜರಾತಿ ಕಮ್ಮಿ ಏಕೆ?”
“ಊಟದ ವೇಳೆಯಲ್ಲಿ ಹಾಜರಾತಿ ಹೆಚ್ಚಿಗಿರುವುದು.”
“ಮಕ್ಕಳ ಕಲಿಕೆಯ ಮಟ್ಟ.”
“ಆರಕ್ಕೇರದು ಮೂರಕ್ಕಿಳಿಯದು.”
“ಈ ಬಗ್ಗೆ ಸಹೇಬರು ಗಮನ ಹರಿಸುವುದಿಲ್ಲವೆ?”
“ಮಕ್ಕಳು ಶಾಲೆಗೆ ಬರಲಿ ಬಿಡಲಿ ವಾರ್ಷಿಕ ಪರೀಕ್ಷೆಯಲ್ಲಿ ಅವರೆಲ್ಲ ಪಾಸು.”
“ಓದು – ಬರಹ ಇಲ್ಲದೆ ಪಾಸಾಗುತ್ತಾರೆಯೇ ಅವರು?”
“ಮಕ್ಕಳಿಗೆ ಪರೀಕ್ಷೆಯ ಭಯ ಇರಬಾರದು. ಅವರನ್ನು ನಪಾಸೂ ಮಾಡಬಾರದು.”
“ಅವರ ಪ್ರಗತಿಯ ಬಗ್ಗೆ ಕಾಳಜಿ ವಹಿಸುವುದಿಲ್ಲವೆ ನೀವು?”
“ಹೆಡ್‌ಮಾಸ್ಟರ್‍ ಆ ಕಾಗದ ಈ ಕಾಗದ ಎಂದು ಆಫೀಸಿಗೆ ಅಲೆದಾಡುವರು. ನಮ್ಮಲ್ಲಿ ಕೆಲವರು ತರಬೇತಿಗೆ ಹೋಗುವರು. ಕೆಲವರಿಗೆ ಗಣತಿ ಕಾರ್ಯ ಅದು-ಇದು ಎಂದಿರುವುದು ಮಕ್ಕಳಿಗೆ ಕಲಿಸಲು ಪುರುಸೊತ್ತೇ ಸಿಗುವುದಿಲ್ಲ”
“ಸಾಹೇಬರು ನಿಮ್ಮ ಶಾಲೆಯ ತಪಾಸಣೆಗೆ ಬರುವುದಿಲ್ಲವೆ?”
“ಹಿರಿಯ ಸಾಹೇಬರು ವರ್ಷಕ್ಕೊಮ್ಮೆ ಬರುತ್ತಾರೆ, ಕಿರಿಯ ಸಾಹೇಬರು ಬೇಕೆನಿಸಿದಾಗ ದಿಢೀರನೆ ಪ್ರತ್ಯಕ್ಷರಾಗುತ್ತಾರೆ.”
“ಅವರಿಗೆ ಸಮಸ್ಯೆ ಅರ್ಥವಾಗುವುದಿಲ್ಲವೆ?”
“ತಮ್ಮ ವೈಯಕ್ತಿಕ ಬೇಡಿಕೆಗಳನ್ನು ಪೂರೈಸಿಕೊಂಡು ಹೋಗುವ ಅವರು ಕಲಿಸುವುದರ ಬಗ್ಗೆ ಚಕಾರವೆತ್ತುವುದಿಲ್ಲ. ವಿಜಿಟ್ ಪುಸ್ತಕದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ. ನಮ್ಮ ಶಾಲೆ ಬಹಳ ನೆಮ್ಮದಿಯಾಗಿದೆ.”
“ಊರಿನವರು ಲಕ್ಷ್ಯ ಕೊಡುವುದಿಲ್ಲವೆ?”
“ನಮ್ಮದು ಸರಕಾರಿ ಶಾಲೆ, ಅದರ ಮೇಲೆ ಅವರ ಹಕ್ಕು ಇಲ್ಲ.”
“ಇದೆಲ್ಲ ವಿಚಿತ್ರವಲ್ಲವೇ?”
“ಅದೆಲ್ಲ ಕವರಿನ ಮಹಿಮೆ!”
“ಕವರು … ಏನದು?”
“ಸಾಹೇಬರಿಗೆ ನಾವು ಕವರು ಮುಟ್ಟಿಸುತ್ತೇವೆ.”
“ಏಕೆ?”
“ಕವರಿನಲ್ಲಿ ನಮ್ಮ ದುಡ್ಡಿರುವುದು.”
“ಸಾಹೇಬರಿಗೆ ಹಣ ಏಕೆ? ಅವರಿಗೆ ಪಗಾರ ಇರುವುದಿಲ್ಲವೆ?”
“ಪಗಾರ ಅವರ ಸಂಸಾರಕ್ಕೆ ನಮ್ಮ ದುಡ್ಡು ಅವರ ಇತರೆ ಖರ್ಚಿಗೆ.”
‘ಇದೆಂಥ ವ್ಯವಸ್ಥೆ?”
“ನಮ್ಮ ದೋಷಗಳನ್ನು ಸಾಹೇಬರು ಮುಚ್ಚಿಕೊಳ್ಳುತ್ತಾರೆ. ಸಾಹೇಬರ ದೋಷಗಳನ್ನು ದೊಡ್ಡ ಸಾಹೇಬರು. ಅವರ ಮೇಲಿನವರ ದೋಷಗಳನ್ನು ಅದಕ್ಕೂ ಮೇಲಿನವರು ಬೇರಿನಿಂದ ಟೊಂಗೆಯ ತುದಿತನಕ ಇದೇ ವ್ಯವಸ್ಥೆ ಇರುವುದು.”
“ಶಾಲೆ ಮತ್ತು ಮಕ್ಕಳ ಗತಿ?”
“ದೇವರಿಗೇ ಬಿಟ್ಟದ್ದು!”

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...