Home / ಲೇಖನ / ಇತರೆ / ಹೆಂಗ ಮರೆಯಲಿ ಆ ಹುಡುಗಿಯನ್ನು?

ಹೆಂಗ ಮರೆಯಲಿ ಆ ಹುಡುಗಿಯನ್ನು?

ಸುಂದರ ಬೆಂಗಳೂರಿನ ಸಿಟಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದೆ. ಕಿಡಿಗೇಡಿ ಬಸ್ಸು ಒಂದು ಗಂಟೆ ತಡವಾದರೂ ಮುಖ ತೋರಿಸಲಿಲ್ಲ.

ನನ್ನೆದುರಿನ ಪಾನ, ಬೀಡಾ, ಸಿಗರೇಟ, ಗುಟಕಾ, ಚಿಲ್ಲರೆ ದಿನಸಿ ಡಬ್ಬಿ ಅಂಗಡಿಯ ಮಾಲಕ ಅಂಗಡಿಯೊಳಗಿನ ಒಂದು ಬುಟ್ಟಿ ಕಸ ಬೆಂಗಳೂರಿನ ಸುಂದರವಾದ ದಾರಿಯ ಮೇಲೆ ಸ್ಥಿತಪ್ರಜ್ಞ ತಪಸ್ವಿಯಂತೆ ಚೆಲ್ಲಿಬಿಟ್ಟ. ನನ್ನ ಹೊಟ್ಟೆ ಚುರ್ ಎಂದಿತು. ಮತ್ತೆ ತನ್ನ ಅಂಗಡಿ ಸುತ್ತಮುತ್ತ ಕಸ ಗುಡಿಸುತ್ತಲೇ ಚಂದ ಮಾಡಿದ. ಸಿಗರೇಟ ಪ್ಯಾಕಗಳು, ಟೆಂಗಿನ ಜುಬ್ರ, ಪ್ಲಾಸ್ಟಿಕ್ ಡಬ್ಬಗಳನ್ನೆಲ್ಲ ದಾರಿಯ ಮೇಲೆ ಎಸೆದು ತನ್ನ ಡಬ್ಬ ಅಂಗಡಿಯ ಸಿಂಹಾಸನವನ್ನೇರಿ ಕುಂತ.

ನನ್ನ ಪೀಡಾ ಬಸ್ಸು, ತಡವಾಗಿದ್ದರಿಂದ, ಕೆಲಸವಿಲ್ಲದ ಸನ್ಯಾಸಿಯಂತೆ ಆ ಕಸದ ಮೇಲೆ ಹಾದು ಹೋಗುವ ಕಾರುಗಳು, ಬಸ್ಸುಗಳು, ಸ್ಕೂಟರ್ ಗಳು, ಲಾರಿಗಳು, ಜನರು, ಶಾಲೆಯ ಮಕ್ಕಳು…. ಅವರನ್ನೆಲ್ಲ ನೋಡುತ್ತಾ ನಿಂತೆ. ದಾರಿಯಲ್ಲಿ ಯಾರು ತಕರಾರು ತೆಗೆಯಲಿಲ್ಲ. ಅದು ಅಂಥ ಅಪರಾಧ ಅಂತ ಯಾರಿಗೂ ಅನಿಸಲೇ ಇಲ್ಲ.

ಸುತ್ತಮುತ್ತ ನೋಡಿದೆ. ಎಲ್ಲ ಅಂಗಡಿಯವರು ಈ ಚಂದನ್ನ ಸಂಜೆಯಲ್ಲಿ ತಮ್ಮ ಅಂಗಡಿ ಕಸಗುಡಿಸಿ, ಚಳಿ ಹೊಡೆದು, ರಸ್ತೆಗೆ ಕಸದ ಗುಂಪಿ ಚೆಲ್ಲಿ, ಅಂಗಡಿಯ ಕ್ಯಾಶ್ ಕೌಂಟರಿನ ಗಣಪತಿ, ಲಕ್ಷ್ಮಿ, ರಾಘವೇಂದ್ರ, ವೆಂಕಟಪತಿ ಸ್ವಾಮಿಗೆ ಧೂಪ ದೀಪ ಸಲ್ಲಿಸಿ, ಸಂಜೆ ಬಿಸಿನೆಸ್ಸಿಗೆ ಬಿಜಿಯಾಗಿದ್ದರು.

‘ಈ ಜನ ಎಂದು ಸುಧಾರಿಸುತ್ತಾರೆ?’ ಅಂತ ನನಗೆ ನಾನೇ ಕೇಳಿಕೊಂಡೆ. ನನ್ನ ಪ್ರಶ್ನೆಗೆ ಪ್ರತ್ಯಕ್ಷ ಉತ್ತರವಾಗಿ ಒಬ್ಬ ಮನುಷ್ಯ ನನ್ನ ಪಕ್ಕದಲ್ಲೇ ಪಿಚಕ್ಕನೆ ಉಗುಳಿದೆ! ನಾನು ಭಕ್ತಿಯಿಂದ ದೂರ ಸರಿದು ನಿಂತೆ!!

ಇದೆಲ್ಲ ಬೇಡ ಅಂತ ದಾರಿಯಲ್ಲಿ ಓಡುತ್ತಿದ್ದ ಸುಂದರವಾದ ಕಾರುಗಳನ್ನು ನೋಡುತ್ತಾ ನಿಂತೆ. ಲೇಟೆಸ್ಟ್ ಮಾಡಲ್ ಕಾರುಗಳೆಲ್ಲಾ ನನ್ನ ಮುಂದೆ ಧೂಳಿನಿಂದ ಗೌರವದ ಸೆಲ್ಯೂಟ್ ಕೊಟ್ಟು ಮುಂದೆ ಸಾಗಿದವು. ಕೆಲವರು ಹುಡುಗಿಯರೂ ಕಾರು ಕರಾಮತ್ ತಾಗಿ ಓಡಿಸುತ್ತಿದ್ದರು. ಅಂಥದೊಂದು ಅದ್ಭುತ ಬೆಲೆಬಾಳುವ ನವನವೀನ ಕಾರೊಂದರ ಸೈಡ್ ಸೀಟಿನಿಂದ ಒಂದು ಕರ್ಪೂರ ಕಾಂತಿಯ ಸಿಗರೇಟ ತುಂಡು ನನ್ನ ಮುಂದೆಯೇ ಚೆಲುವಿನಿಂದ ಉರಿಯುತ್ತಾ ಬಿತ್ತು! ಇದು ಶಿವ ಸಾಕ್ಷಾತ್ಕಾರವೆಂದು ಖುಷಿಪಟ್ಟೆ!

ಪಕ್ಕದ ಗೋಡೆಯಿಂದ ಗಬ್ಬೆದ್ದು ಬರುತ್ತಿದ್ದ ಉಚ್ಚೆ ವಾಸನೆ ನನ್ನನ್ನು ಹುಚ್ಚೆಬ್ಬಿಸಿತು. ಹಲವು ಪ್ರಶ್ನೆಗಳ ಕಾರ್ಖಾನೆಗಳು ನನ್ನಲ್ಲಿ ಹೊಗೆ ಕಾರಿದವು.

ಕೊನೆಗೂ ನನ್ನ ಬಸ್ಸು ಕೈ ಕೊಡದೆ ನವಮಾಸ ಗರ್ಭಿಣಿಯಂತೆ ತುಂಬಿ ತುಳುಕಿ ಬಂತು. ಗಡಬಡಿಸಿ ಹತ್ತಿದೆ. ಹೆಂಗಸರ ಸೀಟಿನಲ್ಲಿ ಗಂಡಸರು ಗಡದ್ದಾಗಿ ಕುಂತಿದ್ದರು. ಹೆಸರು ತಪಸ್ವಿಗಳಾಗಿ ನಿಂತಿದ್ದರು.

ಓಡುತ್ತಿದ್ದ ಆ ತುಂಬಿದ ಗದ್ದಲದ ಬಸ್ಸಿನಲ್ಲಿ ಯಾರೋ ನನ್ನನ್ನು ಹಿಂದಿನಿಂದ ತಿವಿದರು. ಹೊರಳಿ ನೋಡಿದೆ. ಅಲ್ಲಿ ಹೆಂಗಸರ ಸೀಟ್ ಒಂದರಲ್ಲಿ ಕುಂತಿದ್ದ ಸುಂದರ ಅಪರಿಚಿತ ಹುಡುಗಿಯೊಬ್ಬಳು ನನಗೆ ಹೇಳಿದಳು-

‘ಅಂಕಲ್… ಬನ್ನಿ… ಇಲ್ಲಿ ಕೂತುಕೋ ಬನ್ನಿ…’

ತಾನೆದ್ದು, ತನ್ನ ಸೀಟು ತೆರುವು ಮಾಡಿ ನನ್ನನ್ನು ಕುಳ್ಳಿರಿಸಿದಳು. ಆ ಹುಡುಗಿಯ ಮುಖವನ್ನು ತುಂಬಿದ ಪ್ರೀತಿಯಿಂದ ನೋಡಿ ಥ್ಯಾಂಕ್ಸ್ ಅಂತ ಹೇಳಿ ಕುಂತೆ. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು!

ನನಗನ್ನಿಸಿತು… ಇಂಥ ಜನರು ಇಲ್ಲಿದ್ದಾರೆ… ಜನರು ಸುಧಾರಿಸಿದರೆ ನಗರ ಸುಧಾರಿಸುತ್ತದೆ… ಆದರೆ ನಗರವೇ ಸುಧಾರಿಸುತ್ತ ಹೋದರೆ ಅದು ಇನ್ನೊಂದು ದೊಡ್ಡ ಬೀಡಿ ಅಂಗಡಿ ಡಬ್ಬಾ ಆಗುತ್ತದೆ! ಈಗ ನಗರ ಕಟ್ಟುವ ಕೆಲಸ ಮುಖ್ಯವಲ್ಲ, ನಾಗರೀಕರನ್ನು ಕಟ್ಟುವ ಕಾರ್ಯ ಮುಖ್ಯ!

ಮತ್ತೆ ಆ ಹುಡುಗಿಯನ್ನು ಎರಡನೇ ಬಾರಿ ಭಕ್ತಿಯಿಂದ ನೋಡಿದೆ. ಅವಳು ನನಗೆ ಆಶೀರ್ವಾದ ಮಾಡಿದ ತರಹ ಮಂದಹಾಸ ತೋರಿದಳು! ಬಸ್ಸು ಸುಖವಾಗಿ ಸಾಗಿತು!

ಹೆಂಗ ಮರೆಯಲಿ ಆ ಹುಡುಗಿಯನ್ನು?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...