Home / ಕವನ / ಕವಿತೆ / ಕ್ಷಮಿಸು ತಂದೆ

ಕ್ಷಮಿಸು ತಂದೆ

ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು
ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ
ಅಷ್ಟೊಂದು ಆಳ ಕೊಳ್ಳ ಕಣಿವೆಗಳು
ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ!

ಯುಗಯುಗಾಂತರದ ತಿರುವು ಹೊರಳು
ಗಳೊಳಗೂ ಇತ್ತು ಬಿತ್ತಿ ಬೆಳೆವ
ಪ್ರೀತಿ ಪ್ರೇಮ ವಿಶ್ವಾಸಗಳ ಬೀಜ
ಅದಕೇಕಿಂದು ರಾಹು ಬಡಿದು ಮೊಳಕೆ
ಒಡೆಯದೇ ಮನಮನ ಕಾಡಿಸುತಿವೆ- ದೇವರೆ!

ದಿಕ್ಕುದಿಕ್ಕುಗಳು ಸೀಳಿ ಚಡಪಡಿಸಿ
ಸಮುದ್ರಗಳು ಭೂಕಂಪನಕೆ ಕೋಲಾಹಲಿಸಿ
ಕಾಡು ಮೇಡು ಬೆಟ್ಟಸಾಲಿನ ಮೂಕ ಜೀವಗಳ
ಮೈಸುಟ್ಟ ನೆತ್ತರವಾಸನೆ ಹರಡಿ
ಮನಸಿಗೇಕೋ ತಳಮಳ ದೇವದೇವಾ!

ರಾತ್ರಿಯ ನಿರಮ್ಮಳ ಮೌನ ಸರಿದು
ಹಗಲಾಗುವ ಹಪಹಪಿಕೆಯೊಳಗೆ ಸಂಕಟಗಳ ಸುಳಿ
ಎಲ್ಲೆಲ್ಲೂ ಹಾವು ಏಣಿಯ ಆಟ
ದಾಳಗಳು, ದಾಳಗಳು, ಪ್ರಶ್ನಾರ್ಥಕ ವಿಷವರ್ತುಲ
ಅರ್ಥಸಿಗದ ದಾರಿಯ ತುಂಬಾ ವೇದನೆ ಚಡಪಡಿಕೆ- ದೇವರೆ!

ಕಳಿಸಿರುವೆ ಈ ಜಾತ್ರೆಗೆ ಮತಿತುಂಬಿ
ಕರೆಸಿಕೊಳ್ಳುವವನೂ ನೀನೆ
ಭಕ್ತರೊಳಗೆ ನೀನು, ನಿನ್ನೊಳಗೆ ಭಕ್ತರು
ಕರುಣಿಸು ಕರುಣಾಮಯನೆ ಮತಿಗೆಟ್ಟವರ.

ಸುರಿಸು ಎಲ್ಲರೆದೆಯಂಗಳಕೆ
ಪ್ರೀತಿ ಪ್ರೇಮ ವಿಶ್ವಾಸಗಳ ಧಾರಾಕಾರ ಮಳೆ-
ನಿನ್ನದೇ ಮಕ್ಕಳು, ನಿನ್ನದೇ ಉಸಿರು, ನಿನ್ನದೇ ಹಸಿರು
ತೇಲಿಸಿಬಿಡು ಅವರವರ ಕರ್ಮಕಾಂಡ
ಬಂಜರಿಸದಿರು ಭಾವನೆಗಳ ಭೂಮಿ
ಕ್ಷಮಿಸು, ತಂದೆ, ಶರಣು ಶರಣು ನಿನ್ನ ಪಾದಕೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...