Home / ಕವನ / ಕವಿತೆ / ಉದ್ಯೋಗ ಪರ್ವ

ಉದ್ಯೋಗ ಪರ್ವ

ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ
ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ
ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ
ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ
ಗೂಢಾಲೋಚನೆ ನಡಿಸಿ
ಫೈಲುಗಳ ಮೇಲೆ ಫೈಲುಗಳೋಡಿ
ಟಿಪ್ಪಣಿಗಳ ಕೆಳಗೆ ಟಿಪ್ಪಣಿಗಳು ಕೂಡಿ
ಮಾತಿಗೆ ಮಾತು ಸೇರಿ ಮಾತಿನ ಧ್ವನಿಯೇರಿ
ಧ್ವನಿಯ ಪ್ರತಿಧ್ವನಿಯ ಕಾವಿನಲ್ಲಿ ಚರ್ಚೆ
ಉದ್ದುದ್ದ ಬೆಳೆದು ಬೇವಸಗೊಂಡು
ಪೂರ್ವಯೋಜಿತ ನಿರ್ಣಯದ ಕಡೆಗೆ
ದಾರಿಗಾಣದೆ ಕಾದು ಆಕಳಿಸಿ ಸಿಗಾರು ಹಚ್ಚಿ
ಸೀಲಿಂಗಿನತ್ತ ಹೊಗೆ ಫೂ ಎಂದು ಊದಿ
ಮೆತ್ತೆಗೆ ಶಿರ ಮಂಡಿಸಿದರೆ ಧ್ಯಾನಾವಸ್ಥೆ

ಮತ್ತೆ ಸನತ್ಸುಜಾತ ವಿದುರಾದಿಗಳಿಂದ ಲೌಕಿಕ ಪಾರಲೌಕಿಕ
ಆರ್ಥಿಕ ಪಾರಮಾರ್ಥಿಕ ನೀತಿ ಹೇಳಿಸಿಕೊಂಡು
ಮತ್ತೆ ಶಕುನಿ ಕಲಿಸಿದ ಅನೀತಿ ಜ್ಞಾಪಿಸಿಕೊಂಡು
ಕಳೆದ ಪರ್ವಗಳ ನಂಜುರಕ್ತ ಮೆಲ್ಲನೇ ಒತ್ತಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಒಮ್ಮತ ಬಂದು
ಧರ್ಮ ಸಂಸ್ಥಾಪನೆಯಂಥ ಆರ್ಷ ಉದ್ದೇಶಕ್ಕೆ
ಜನ್ಮವೆತ್ತಿಬಂದ ಪುರುಷಾರ್ಥಕ್ಕೆ
ಕರ್ಮಕಾಂಡದ ವಿಧ್ಯುಕ್ತ ಕಾರ್ಯನಿರ್ವಾಹಕ್ಕೆ
ಎಂಬಿತ್ಯಾದಿಯಾಗಿ ಶ್ರುತಿಧರ್ಮ ಸಂಹಿತೆಗಳಿಂದ
ಬೇಕುಬೇಕಾದ ತತ್ವಗಳನ್ನಾರಿಸಿ ಠರಾವುಗಳಿಗೆ ಜೋಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಘೋಷಿಸಿ

ಘೋಷಣೆಯ ಕಾರ್ಯರೂಪಕ್ಕೆ ತೊಡಗಿದರೆ
ತೊಡಗಿದರೆ ತೊಟ್ಟ ಮಾರಕಾಸ್ತ್ರ ಪ್ರಯೋಗದಿಂದ ಈ ಗರ್ಭಕ್ಕೆ
ಗರ್ಭಸ್ಥ ಜೀವಕ್ಕೆ ಯಾತರ ರಕ್ಷೆ?
ಅಸಹಾಯಕಿ ಅಬಲೆ ಉತ್ತರೆಯೂ ನಿರುತ್ತರೆಯಾಗಿ ನಿಂತರೆ
ಅಲೆದೀತು ಒಂದು ವೇಳೆ ಈ ಪ್ರಶ್ನೆ ಹೀಗೆ ಕೊನೆಗೂ
ತನ್ನ ಉತ್ತರ ತಾನೆ ಕಂಡುಕೊಂಡೀತು ಒಂದು ವೇಳೆ
ಹೇಗಿದ್ದರೂ ಅದು ಈ ಪರ್ವದ ಹೊರತು ಇದರ ಸಮಸ್ಯೆಗಳ ಹೊರತು
ಈಗ ಸಮಗ್ರ ಮಗ್ನತೆಯನ್ನೂ ಕೂಡ
ಜರೂರು ವಿಚಾರಗಳ ವರ್ತಮಾನದಲ್ಲಿ ಕೇಂದ್ರೀಕರಿಸಿ
ಹಂಚಿಗೆಳ ಯೋಚಿಸುವ ಸಂಧಿಸುವ ಚಿಂತಿಸುವ ಪರ್ವ
ದೊಂಬಿ ಪಿತೂರಿ ಒಳಸಂಚಿನ ಸೈತಾನ ಕರ್ಮಗಳಿಂದ ಹಿಡಿದು
ಕುರುಕ್ಷೇತ್ರದ ಹೊಯ್ಕಯ್ ವರೆಗೂ
ಇದೆಲ್ಲದರ ಸಾಧ್ಯಾಸಾಧ್ಯತೆಗಳ ಕುರಿತು
ಇದರ ರಾಜತಾಂತ್ರಿಕ ಸೂತ್ರಗಳ ಕುರಿತು
ಕ್ಷೇತ್ರದ ಸಿದ್ಧತೆಯ ಕುರಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...