Home / ಕವನ / ಕವಿತೆ / ಉದ್ಯೋಗ ಪರ್ವ

ಉದ್ಯೋಗ ಪರ್ವ

ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ
ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ
ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ
ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ
ಗೂಢಾಲೋಚನೆ ನಡಿಸಿ
ಫೈಲುಗಳ ಮೇಲೆ ಫೈಲುಗಳೋಡಿ
ಟಿಪ್ಪಣಿಗಳ ಕೆಳಗೆ ಟಿಪ್ಪಣಿಗಳು ಕೂಡಿ
ಮಾತಿಗೆ ಮಾತು ಸೇರಿ ಮಾತಿನ ಧ್ವನಿಯೇರಿ
ಧ್ವನಿಯ ಪ್ರತಿಧ್ವನಿಯ ಕಾವಿನಲ್ಲಿ ಚರ್ಚೆ
ಉದ್ದುದ್ದ ಬೆಳೆದು ಬೇವಸಗೊಂಡು
ಪೂರ್ವಯೋಜಿತ ನಿರ್ಣಯದ ಕಡೆಗೆ
ದಾರಿಗಾಣದೆ ಕಾದು ಆಕಳಿಸಿ ಸಿಗಾರು ಹಚ್ಚಿ
ಸೀಲಿಂಗಿನತ್ತ ಹೊಗೆ ಫೂ ಎಂದು ಊದಿ
ಮೆತ್ತೆಗೆ ಶಿರ ಮಂಡಿಸಿದರೆ ಧ್ಯಾನಾವಸ್ಥೆ

ಮತ್ತೆ ಸನತ್ಸುಜಾತ ವಿದುರಾದಿಗಳಿಂದ ಲೌಕಿಕ ಪಾರಲೌಕಿಕ
ಆರ್ಥಿಕ ಪಾರಮಾರ್ಥಿಕ ನೀತಿ ಹೇಳಿಸಿಕೊಂಡು
ಮತ್ತೆ ಶಕುನಿ ಕಲಿಸಿದ ಅನೀತಿ ಜ್ಞಾಪಿಸಿಕೊಂಡು
ಕಳೆದ ಪರ್ವಗಳ ನಂಜುರಕ್ತ ಮೆಲ್ಲನೇ ಒತ್ತಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಒಮ್ಮತ ಬಂದು
ಧರ್ಮ ಸಂಸ್ಥಾಪನೆಯಂಥ ಆರ್ಷ ಉದ್ದೇಶಕ್ಕೆ
ಜನ್ಮವೆತ್ತಿಬಂದ ಪುರುಷಾರ್ಥಕ್ಕೆ
ಕರ್ಮಕಾಂಡದ ವಿಧ್ಯುಕ್ತ ಕಾರ್ಯನಿರ್ವಾಹಕ್ಕೆ
ಎಂಬಿತ್ಯಾದಿಯಾಗಿ ಶ್ರುತಿಧರ್ಮ ಸಂಹಿತೆಗಳಿಂದ
ಬೇಕುಬೇಕಾದ ತತ್ವಗಳನ್ನಾರಿಸಿ ಠರಾವುಗಳಿಗೆ ಜೋಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಘೋಷಿಸಿ

ಘೋಷಣೆಯ ಕಾರ್ಯರೂಪಕ್ಕೆ ತೊಡಗಿದರೆ
ತೊಡಗಿದರೆ ತೊಟ್ಟ ಮಾರಕಾಸ್ತ್ರ ಪ್ರಯೋಗದಿಂದ ಈ ಗರ್ಭಕ್ಕೆ
ಗರ್ಭಸ್ಥ ಜೀವಕ್ಕೆ ಯಾತರ ರಕ್ಷೆ?
ಅಸಹಾಯಕಿ ಅಬಲೆ ಉತ್ತರೆಯೂ ನಿರುತ್ತರೆಯಾಗಿ ನಿಂತರೆ
ಅಲೆದೀತು ಒಂದು ವೇಳೆ ಈ ಪ್ರಶ್ನೆ ಹೀಗೆ ಕೊನೆಗೂ
ತನ್ನ ಉತ್ತರ ತಾನೆ ಕಂಡುಕೊಂಡೀತು ಒಂದು ವೇಳೆ
ಹೇಗಿದ್ದರೂ ಅದು ಈ ಪರ್ವದ ಹೊರತು ಇದರ ಸಮಸ್ಯೆಗಳ ಹೊರತು
ಈಗ ಸಮಗ್ರ ಮಗ್ನತೆಯನ್ನೂ ಕೂಡ
ಜರೂರು ವಿಚಾರಗಳ ವರ್ತಮಾನದಲ್ಲಿ ಕೇಂದ್ರೀಕರಿಸಿ
ಹಂಚಿಗೆಳ ಯೋಚಿಸುವ ಸಂಧಿಸುವ ಚಿಂತಿಸುವ ಪರ್ವ
ದೊಂಬಿ ಪಿತೂರಿ ಒಳಸಂಚಿನ ಸೈತಾನ ಕರ್ಮಗಳಿಂದ ಹಿಡಿದು
ಕುರುಕ್ಷೇತ್ರದ ಹೊಯ್ಕಯ್ ವರೆಗೂ
ಇದೆಲ್ಲದರ ಸಾಧ್ಯಾಸಾಧ್ಯತೆಗಳ ಕುರಿತು
ಇದರ ರಾಜತಾಂತ್ರಿಕ ಸೂತ್ರಗಳ ಕುರಿತು
ಕ್ಷೇತ್ರದ ಸಿದ್ಧತೆಯ ಕುರಿತು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...