Home / ಕವನ / ಕವಿತೆ / ಉದ್ಯೋಗ ಪರ್ವ

ಉದ್ಯೋಗ ಪರ್ವ

ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ
ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ
ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ
ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ
ಗೂಢಾಲೋಚನೆ ನಡಿಸಿ
ಫೈಲುಗಳ ಮೇಲೆ ಫೈಲುಗಳೋಡಿ
ಟಿಪ್ಪಣಿಗಳ ಕೆಳಗೆ ಟಿಪ್ಪಣಿಗಳು ಕೂಡಿ
ಮಾತಿಗೆ ಮಾತು ಸೇರಿ ಮಾತಿನ ಧ್ವನಿಯೇರಿ
ಧ್ವನಿಯ ಪ್ರತಿಧ್ವನಿಯ ಕಾವಿನಲ್ಲಿ ಚರ್ಚೆ
ಉದ್ದುದ್ದ ಬೆಳೆದು ಬೇವಸಗೊಂಡು
ಪೂರ್ವಯೋಜಿತ ನಿರ್ಣಯದ ಕಡೆಗೆ
ದಾರಿಗಾಣದೆ ಕಾದು ಆಕಳಿಸಿ ಸಿಗಾರು ಹಚ್ಚಿ
ಸೀಲಿಂಗಿನತ್ತ ಹೊಗೆ ಫೂ ಎಂದು ಊದಿ
ಮೆತ್ತೆಗೆ ಶಿರ ಮಂಡಿಸಿದರೆ ಧ್ಯಾನಾವಸ್ಥೆ

ಮತ್ತೆ ಸನತ್ಸುಜಾತ ವಿದುರಾದಿಗಳಿಂದ ಲೌಕಿಕ ಪಾರಲೌಕಿಕ
ಆರ್ಥಿಕ ಪಾರಮಾರ್ಥಿಕ ನೀತಿ ಹೇಳಿಸಿಕೊಂಡು
ಮತ್ತೆ ಶಕುನಿ ಕಲಿಸಿದ ಅನೀತಿ ಜ್ಞಾಪಿಸಿಕೊಂಡು
ಕಳೆದ ಪರ್ವಗಳ ನಂಜುರಕ್ತ ಮೆಲ್ಲನೇ ಒತ್ತಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಒಮ್ಮತ ಬಂದು
ಧರ್ಮ ಸಂಸ್ಥಾಪನೆಯಂಥ ಆರ್ಷ ಉದ್ದೇಶಕ್ಕೆ
ಜನ್ಮವೆತ್ತಿಬಂದ ಪುರುಷಾರ್ಥಕ್ಕೆ
ಕರ್ಮಕಾಂಡದ ವಿಧ್ಯುಕ್ತ ಕಾರ್ಯನಿರ್ವಾಹಕ್ಕೆ
ಎಂಬಿತ್ಯಾದಿಯಾಗಿ ಶ್ರುತಿಧರ್ಮ ಸಂಹಿತೆಗಳಿಂದ
ಬೇಕುಬೇಕಾದ ತತ್ವಗಳನ್ನಾರಿಸಿ ಠರಾವುಗಳಿಗೆ ಜೋಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಘೋಷಿಸಿ

ಘೋಷಣೆಯ ಕಾರ್ಯರೂಪಕ್ಕೆ ತೊಡಗಿದರೆ
ತೊಡಗಿದರೆ ತೊಟ್ಟ ಮಾರಕಾಸ್ತ್ರ ಪ್ರಯೋಗದಿಂದ ಈ ಗರ್ಭಕ್ಕೆ
ಗರ್ಭಸ್ಥ ಜೀವಕ್ಕೆ ಯಾತರ ರಕ್ಷೆ?
ಅಸಹಾಯಕಿ ಅಬಲೆ ಉತ್ತರೆಯೂ ನಿರುತ್ತರೆಯಾಗಿ ನಿಂತರೆ
ಅಲೆದೀತು ಒಂದು ವೇಳೆ ಈ ಪ್ರಶ್ನೆ ಹೀಗೆ ಕೊನೆಗೂ
ತನ್ನ ಉತ್ತರ ತಾನೆ ಕಂಡುಕೊಂಡೀತು ಒಂದು ವೇಳೆ
ಹೇಗಿದ್ದರೂ ಅದು ಈ ಪರ್ವದ ಹೊರತು ಇದರ ಸಮಸ್ಯೆಗಳ ಹೊರತು
ಈಗ ಸಮಗ್ರ ಮಗ್ನತೆಯನ್ನೂ ಕೂಡ
ಜರೂರು ವಿಚಾರಗಳ ವರ್ತಮಾನದಲ್ಲಿ ಕೇಂದ್ರೀಕರಿಸಿ
ಹಂಚಿಗೆಳ ಯೋಚಿಸುವ ಸಂಧಿಸುವ ಚಿಂತಿಸುವ ಪರ್ವ
ದೊಂಬಿ ಪಿತೂರಿ ಒಳಸಂಚಿನ ಸೈತಾನ ಕರ್ಮಗಳಿಂದ ಹಿಡಿದು
ಕುರುಕ್ಷೇತ್ರದ ಹೊಯ್ಕಯ್ ವರೆಗೂ
ಇದೆಲ್ಲದರ ಸಾಧ್ಯಾಸಾಧ್ಯತೆಗಳ ಕುರಿತು
ಇದರ ರಾಜತಾಂತ್ರಿಕ ಸೂತ್ರಗಳ ಕುರಿತು
ಕ್ಷೇತ್ರದ ಸಿದ್ಧತೆಯ ಕುರಿತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...