Home / ಕವನ / ಕವಿತೆ / ಹೊರತು

ಹೊರತು

ಈ ಸೆಲ್ಲಿನೊಳಗಿಂದ ನೋಟವೇ ಬೇರೆ-ಮೇಲಕ್ಕೆ ತೆರೆದ
ಅವಕಾಶದಲ್ಲಿ ಕತ್ತಲಾಗಿರಬಹುದು ಬೆಳಕಾಗಿರಬಹುದು
ಮೋಡ ಹಾಯುತ್ತಿರಬಹುದು ನಕ್ಷತ್ರಗಳ ಬೆಳಕು
ಬೀಳುತ್ತಿರಬಹುದು ಮುಖಗಳು ಮೂಡುತ್ತಿರಬಹುದು
ನೆನಪು ಹಣಿಕುತ್ತಿರಬಹುದು

ರಾತ್ರಿಯ ತಣ್ಣನೆ ಗಾಳಿ ಮಣ್ಣಿನ ವಾಸನೆ ಉಪ್ಪಿನ
ವಾಸನೆ ತರುವ ಕಿನಾರೆ ಗಾಳಿ ನಿದ್ದೆ ಜೊಂಪಿನ ಬೇಸಗೆಯ
ರಾತ್ರಿ ಗಾಳಿ ಗಾರೆ ಗೋಡೆಯ ಮೇಲೆ ವ್ಯರ್ಥ ಬಡಿದು
ಬೆಳಗಾದಾಗ ಇಲ್ಲಿಗೆ ಬಂದು ತಲುಪುತ್ತಿರುವ ಧ್ವನಿಗಳೇ ಬೇರೆ
ಅವುಗಳ ರೀತಿಯೇ ಬೇರೆ ಆ ಅಲೆಗಳೇ ಬೇರೆ
ರೇಲ್ವೆಯ ಹರಿತ ಧ್ವನಿ ಟ್ರಕ್ಕಿನ ಖಂಡಿ ಧ್ವನಿ
ಯಾವ ಜಗತ್ತಿಗೋ ಹೋಗುತ್ತಿರುವ ಜನರ ಸ್ಟೀಮರಿನ
ಸೈರರಿನ ಧ್ವನಿ ಸ್ವಂತಕ್ಕೆ ಸಂಬಂಧವಿಲ್ಲದೇ
ಮೂಕ ಧ್ವನಿಯಲ್ಲಿ ಸೇರಿ ನಿಶ್ಶಬ್ದವಾಗಿ
ಬಂದು ಬಡಿಯುವ ಶೈಲಿಯೇ ಬೇರೆ
ಈ ಗೋಡೆಗಳ ಒಳಗೆ
ಆ ಜಗತ್ತೇ ಬೇರೆ-ಎಂದಿಗೂ ಸಂಬಂಧವಿರದ
ಮಣ್ಣ ಬೊಂಬೆಗಳ ಸಾಲು ನಿರ್ವಿಕಾರ
ಆಕಾರಗಳ ಸಾಲು ಈ ಗೋಡೆಗಳ ಬದಿಗೆ
ನೆರಳಿದಲ್ಲದ ಜನಗಳ ನಿಟ್ಟುಸಿರು ತಾಗಿ ನಿಂತ ಈ ಕಲ್ಲುಗಳ
ಗೋಡೆ ಮೈಗಳ ಬೆವರು ಜಿಗುಟುಗಟ್ಟಿದ ಗೋಡೆ
ಬಿದ್ದರೂ ಎದ್ದು ನಿಲ್ಲುವ ಈ ಸ್ವಂತ ಮೈ
ಗೋಡೆ ಕಟ್ಟಿ ಮಾಡಿದ ಸಮಾಧಿ
ಸಮಾಧಿಯಲ್ಲಿ ಸತ್ತ ಸಂವೇದನೆ ಮತ್ತು
ಇದಕ್ಕೆಲ್ಲ ಹೊರತಾದ ನಿರ್ವಾತ ಕೋಶ
ಅದೃಶ್ಯಗಳೊಡನೆ ಮಾತಾಡಿ ಅರ್ಥಗಳ ಹಿಂದೆ ಅಲೆದಾಡಿ
ಗೇಣು ನೆಲದಲ್ಲಿ ಸುತ್ತಾಡಿ ದೂಳಿನ ರುಚಿ
ಅನ್ನದ ರುಚಿ ಕಾಮದ ರುಚಿ ವ್ಯತ್ಯಾಸವಿಲ್ಲದ ಅಸ್ತಿತ್ವವಿಲ್ಲದ
ನೆನಪಿನ ಪರೆಯಂತೆ ಅನುಭವ ಮತ್ತು ಸ್ವಂತದ ನಡುವೆ
ಮೈ ಮತ್ತು ಮಾತಿನ ನಡುವೆ ಮೂರ್ಛೆ ಮತ್ತು ಪ್ರಜ್ಞೆಯ ನಡುವೆ
ಮೊದಲಾಗುವುದಕ್ಕೆ ಮತ್ತು ಕೊನೆಗೊಳ್ಳುವುದಕ್ಕೆ
ಕಾಯುವ ಈ ಅವಸ್ಥೆಯೇ ಬೇರೆ
ಇರುವಿಕೆ ಇಲ್ಲದಿರುವಿಕೆಯ ಹೊರಗೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...