Home / ಕವನ / ಕವಿತೆ / ಮುಖಗಳು

ಮುಖಗಳು

ಬೆಳಕಿನ ಮುಖಗಳಿವೆ
ಮಣ್ಣಿನ ಮುಖಗಳಿವೆ
ಇವೆರಡರ ನಡುವೆಯೊಂದು
ದಾರಿ ಹುಡುಕುತ್ತೇನೆ:
ಮನುಷ್ಯರ ಮುಖಗಳತ್ತ
ಕೊಂಡೊಯ್ಯುವ ದಾರಿ

ಮುಖವಿಲ್ಲದವನು ನಾನು.

ನಿನ್ನ ಮುಖ ನನ್ನದು
ಅವನದೂ ನನ್ನದೇ
ಅವಳದೂ ಹೌದು.
ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ
ನನ್ನ ಸ್ವರೂಪವೇ ಬಿಂಬಿಸಿದಂತೆ
ಅನಿಸುತ್ತದೆ.
ಮತ್ತು ಈ ಬೃಹತ್ ಕೋಣೆಯಲಿ ನನ್ನ ಸ್ವಗತವೇ
ಧ್ವನಿಯಾಗಿ ಪ್ರತಿಧ್ವನಿಯಾಗಿ
ತಮ್ಮಟೆ ಬಾರಿಸುತ್ತದೆ ನಿರಂತರ.
ಇಷ್ಟೆ ಅಲ್ಲ.
ಈಡಿಪಸ್, ನೀರೊ, ಶಾಜಹಾನ್
ಹೀಗೆ ಸೀರೆನಿರಿಯಂತೆ
ಅಕ್ಷಯ ಅವತಾರಿಯಾಗಿ
ಕೊರೆದಿದ್ದೇನೆ ಚರಿತ್ರೆಯಲಿ
ನನ್ನ ಮುಖಗಳ ಏರುತಗ್ಗು.
ಆಕಾರಕ್ಕೆ ಬಾರದೆ
ನೆರಳಾಗಿ, ನೆರಳೂ ಅಲ್ಲದಾಗಿ
ಅಗೋಚರವಾಗಿ
ಯಾರಿಗೂ ಏನೂ ಅಲ್ಲದೆ
ತೊಟ್ಟು ಕಳಚಿ
ಆಕಾಶದಲ್ಲಿ ತ್ರಿಶಂಕುವಾಗಿ
ತೊನೆಯುತ್ತಿರುವ,
ಇರವಿನರಿವಿಲ್ಲದೆ, ಇರವೂ ಇಲ್ಲದೆ,
ಬದುಕಿ ಸತ್ತಿರುವ
ಸತ್ತು ಬದುಕಿರುವ
ಸಾವು ಬದುಕಿನ ಮಧ್ಯೆ ಪ್ರೇತಾತ್ಮವಾಗಿರುವ
ಆತ್ಮವೇ ಇಲ್ಲದ ಹಲವು ಸಾವಿರ
ಮುಖಗಳೂ ಇವೆ ನನಗೆ.
ಇವೆಲ್ಲವನು ಹೊತ್ತು
ಈಜಿಪ್ತದ ಸ್ಫಿಂಕ್ಸೆನ ಹಾಗೆ
ಭೂತದಿಂದ ಭವಿಷ್ಯತ್ತಿನ ಕಡೆಗೆ
ನಾನು ಮುಂದೊತ್ತಿ ಬರುತ್ತಿದ್ದೇನೆ ಮೆಲ್ಲಗೆ
ಆದರೂ ನನಗೆ ಇವೆಲ್ಲವೂ ಮಸಕು
ಎಲ್ಲ ಮುಖಗಳಿಗೂ ಅಪರಿಚಿತ ಮುಸುಕು
ನಿನ್ನದೂ
ನನ್ನದೂ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...