ಧನ್ಯಭೂಮೀ-
ಮಾನ್ಯರೂಪೀ, ಕನ್ಯೆಭಾರತಿ ಪುಣ್ಯೆಯೇ!
ಏಸುಕಾಲದಿ
ಮಾಸದಳಿಯದೆ ಕೋಶಸಲಹಿದೆ-ತಾಯಿಯೆ?

ಆರ್ಯಮೊಗಲರ
ವೀರ್ಯತೇಜರ ಶೌರ್ಯದಿಂದಲಿ ಸಲಹಿದೆ-
ರಾಶಿಜನಗಣ
ಆಶ್ರಯಾ ನಿನ್ನ ಲೇಸು ಪಡೆದರು-ಅಲ್ಲವೇ?

ನೆನೆವೆ ಅಂದಿನ
ಮುನಿಜನ ಮನ, ನಿನ್ನ ವೈಭವ-ವೈಭವ!
ವೇದ ಭೂಮಿಯು-
ಬೋಧದಾಶ್ರಮ-ವಿದುಷಿ ನೀನೇ ಸ್ಫೂರ್ತಿಯು!

ಕರ್ಮಭೂಮೀ
ಧರ್ಮಯಾತ್ರಾ ಮರ್ಮದಿಂದಲಿ ಮಾಡಿದೆ
ಗೀತೆ ಭಾರತ
ಮಾತೆ ವೇದದ ಜಾತೆ ನೀನೇ-ಭಾರತೇ!

ನೆನೆವೆ ಬುದ್ಧನ
ಧಣಿದಶೋಕನ, ಮಣಿವೆ ಸಾವಿರ ಮಾಽತ್ಮಗೆ
ತಪೋಭೂಮಿ
ರೂಪುಗೊಳಿಸು ಶಪಿಸಿದಿಂದಿನ ಸ್ಥಿತಿಯನು!

ಆ ರಾಮ ಕೃಷ್ಣರ
ಶೂರ ಗಾಂಧಿಯ ಪರಮ ಹಂಸರ ಕಂಡೆನೊ;
ಅಮಿತ ದೇಶಾ-
ಭಿಮಾನ ವಾದವ ಸಾಮವಾದದಿ ತೋರಿಸಿ.

ಇಂದು ನಾಳೆಯು
ಮುಂದು ಮುಂದಕು ಸಂದಾಹಿಂಸಾ ರೂಪವ
ಸತ್ಯ ಧರ್ಮದ
ಕೇತು ಹಾರಿಸಿ, ನರ್ತಿಸು-ಎಲೊ ಭಾರತಿ!

ಸ್ಥೈರ್ಯ ಧೈರ್ಯವು
ಸೂರ್ಯಕಾಂತಿಯ ಬೀರ್ಯಮೀರುತ ಬೆಳಗಲಿ,
ಅಮರ ಲೋಕದ
ಸಾಮಗಾನವ ಧರ್ಮರೂಪಿಣಿ-ಹಾಡೆಲೊ!
*****