ಉಸಿರಿನ ಹಡಗು

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರೆದಿವೆ ನಿಲ್ಲದ ದಾರಿ.-
ಎಲ್ಲಿಂದೆಲ್ಲಿಗೆ ಇದರ ಸವಾರಿ!

ಕಾಮನ ಕೋರುವ ಕಣ್ಣು ಇದಕ್ಕೆ,
ಬಯಕೆಯ ಬೀರುವ ಬಾವುಟ-ರೆಕ್ಕೆ,
ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ,
ಹಾಹಾಕಾರದ ಹೆಬ್ದುಲಿ-ರಟ್ಟೆ.

ಮುಡಿಯಲಿ ಗರ್ವದ ಹೊಗೆಯ ಕಿರೀಟ,
ಮುಖದಲಿ ತಂಗಿದೆ ಮಕ್ಕಳ ನೋಟ,
ಸುತ್ತಾ ಉತ್ತೆಸೆದಲೆಗಳ ಕಾಟ;
ಮರುಭೂಮಿಯಲಿದು ತೆಂಗಿನ ತೋಟ.

ಮಗುವಿದೆ ತಳ್ಳಿದ ಕಾಲಿಗೆ ಬಿದ್ದು;
ತಂದೆಯ ಉತ್ತರ: ಮತ್ತೂ ಗುದ್ದು.
ಈ ಗತಿಯೇ ಹೆತ್ತವಳೇ ಇದ್ದೂ?-
ಕರುಣೆಯ ಕರುಳಲಿ ಹುಟ್ಟಿದ ಸದ್ದು.

ಇನಿಯನ ಎದೆಯಲಿ ಕೆನ್ನೆಯನಿಟ್ಟು
ಕಣ್ತೆರೆವಿನಿಯಳ ಚೆಲುವನು ತೊಟ್ಟು
ತುಂಬುತ್ತಲೆಯಿರೆ ಹಡಗಿನ ರೂಪ,
ಕಡಲಿನ ಕಣ್ಣಿಗೆ ಏಕೋ ಕೋಪ!

ಉಸಿರಿನ ಹಡಗಿದು, ಏನಿದರರಕೆ?
ಉಸುರುವಂತಿಲ್ಲ.-(ಉಳಿಯುವ ಬಯಕೆ?)
ಬರಿ ಕನಸಿದು,-ನಗೆ ನೋವಿನ ಬೆರಕೆ;-
ಅದೊ! ನೀರಿನ ಬಿರುಗಾಳಿಯ ಗೊರಕೆ.

ಹಡಗಿನ ಪಾಡಿಗೆ ಕಡಲೇ ನಕ್ಕು
ನೀರಿನ ಕೆನ್ನೆಗೆ ಬಂದಿದೆ ಸುಕ್ಕು.
ತೇಲುವ ಬಾಳಿಗೆ ಯಾರೋ ದಿಕ್ಕು?
ಬೇಕು ಅದೃಷ್ಟವೆ ತೇಲುವುದಕ್ಕೂ!

ತೇಲುವುದೆಲ್ಲಾ ತೇಲುತ್ತಿರಲಿ!
ಮುಳುಗುವುದೋ? ಸರಿ, ಮುಳುಗುತ್ತಿರಲಿ!
ರವಿಯೂ ಮುಳುಗಲಿ! ಶಶಿಯೂ ಮುಳುಗಲಿ!
ಗ್ರಹತಾರೆಗಳೂ ಸುಮ್ಮನೆ ಮುಳುಗಲಿ!-

ದಿಗ್ದಿಕ್ತಟಗಳ ಒಳಗೂ ಹೊರಗೂ
ನೀಲ ನೀಳ ನಾಲಗೆಗಳನೆಸೆದು,
ಜೀವದಾಸೆಗಳನೆಲ್ಲಾ ತೊಡೆದು,
ಎಲ್ಲಾ ಮುಗಿದರೆ, ತಾನೇ ಉಳಿದು,

ತುಂಬಿ ತುಳುಕುತಿದೆ ಕಾಲ ಸಮುದ್ರ;
ಬದುಕಬಲ್ಲವನು ಒಬ್ಬನೆ, ರುದ್ರ.
ತೇಲಬಹುದು ಈ ತುಂಬಿದ ಹಡಗು.
ನಾಳೆ ಇವರ ಮನೆ ಆಳದ ಕೊರಗು.-

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರದಿದೆ ನಿಲ್ಲದ ದಾರಿ.
ಎಲ್ಲಿಂದೆಲ್ಲಿಗೆ ಇದರ ಸವಾರಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪೋಭೂಮಿ – ಭಾರತ ವರ್ಷ
Next post ಕೈ ಕೈ ಎಲ್ಹೋಯ್ತು?

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…