Home / ಕವನ / ಕವಿತೆ / ಉಸಿರಿನ ಹಡಗು

ಉಸಿರಿನ ಹಡಗು

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರೆದಿವೆ ನಿಲ್ಲದ ದಾರಿ.-
ಎಲ್ಲಿಂದೆಲ್ಲಿಗೆ ಇದರ ಸವಾರಿ!

ಕಾಮನ ಕೋರುವ ಕಣ್ಣು ಇದಕ್ಕೆ,
ಬಯಕೆಯ ಬೀರುವ ಬಾವುಟ-ರೆಕ್ಕೆ,
ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ,
ಹಾಹಾಕಾರದ ಹೆಬ್ದುಲಿ-ರಟ್ಟೆ.

ಮುಡಿಯಲಿ ಗರ್ವದ ಹೊಗೆಯ ಕಿರೀಟ,
ಮುಖದಲಿ ತಂಗಿದೆ ಮಕ್ಕಳ ನೋಟ,
ಸುತ್ತಾ ಉತ್ತೆಸೆದಲೆಗಳ ಕಾಟ;
ಮರುಭೂಮಿಯಲಿದು ತೆಂಗಿನ ತೋಟ.

ಮಗುವಿದೆ ತಳ್ಳಿದ ಕಾಲಿಗೆ ಬಿದ್ದು;
ತಂದೆಯ ಉತ್ತರ: ಮತ್ತೂ ಗುದ್ದು.
ಈ ಗತಿಯೇ ಹೆತ್ತವಳೇ ಇದ್ದೂ?-
ಕರುಣೆಯ ಕರುಳಲಿ ಹುಟ್ಟಿದ ಸದ್ದು.

ಇನಿಯನ ಎದೆಯಲಿ ಕೆನ್ನೆಯನಿಟ್ಟು
ಕಣ್ತೆರೆವಿನಿಯಳ ಚೆಲುವನು ತೊಟ್ಟು
ತುಂಬುತ್ತಲೆಯಿರೆ ಹಡಗಿನ ರೂಪ,
ಕಡಲಿನ ಕಣ್ಣಿಗೆ ಏಕೋ ಕೋಪ!

ಉಸಿರಿನ ಹಡಗಿದು, ಏನಿದರರಕೆ?
ಉಸುರುವಂತಿಲ್ಲ.-(ಉಳಿಯುವ ಬಯಕೆ?)
ಬರಿ ಕನಸಿದು,-ನಗೆ ನೋವಿನ ಬೆರಕೆ;-
ಅದೊ! ನೀರಿನ ಬಿರುಗಾಳಿಯ ಗೊರಕೆ.

ಹಡಗಿನ ಪಾಡಿಗೆ ಕಡಲೇ ನಕ್ಕು
ನೀರಿನ ಕೆನ್ನೆಗೆ ಬಂದಿದೆ ಸುಕ್ಕು.
ತೇಲುವ ಬಾಳಿಗೆ ಯಾರೋ ದಿಕ್ಕು?
ಬೇಕು ಅದೃಷ್ಟವೆ ತೇಲುವುದಕ್ಕೂ!

ತೇಲುವುದೆಲ್ಲಾ ತೇಲುತ್ತಿರಲಿ!
ಮುಳುಗುವುದೋ? ಸರಿ, ಮುಳುಗುತ್ತಿರಲಿ!
ರವಿಯೂ ಮುಳುಗಲಿ! ಶಶಿಯೂ ಮುಳುಗಲಿ!
ಗ್ರಹತಾರೆಗಳೂ ಸುಮ್ಮನೆ ಮುಳುಗಲಿ!-

ದಿಗ್ದಿಕ್ತಟಗಳ ಒಳಗೂ ಹೊರಗೂ
ನೀಲ ನೀಳ ನಾಲಗೆಗಳನೆಸೆದು,
ಜೀವದಾಸೆಗಳನೆಲ್ಲಾ ತೊಡೆದು,
ಎಲ್ಲಾ ಮುಗಿದರೆ, ತಾನೇ ಉಳಿದು,

ತುಂಬಿ ತುಳುಕುತಿದೆ ಕಾಲ ಸಮುದ್ರ;
ಬದುಕಬಲ್ಲವನು ಒಬ್ಬನೆ, ರುದ್ರ.
ತೇಲಬಹುದು ಈ ತುಂಬಿದ ಹಡಗು.
ನಾಳೆ ಇವರ ಮನೆ ಆಳದ ಕೊರಗು.-

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರದಿದೆ ನಿಲ್ಲದ ದಾರಿ.
ಎಲ್ಲಿಂದೆಲ್ಲಿಗೆ ಇದರ ಸವಾರಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...