Home / ಕವನ / ಕವಿತೆ / ಉಸಿರಿನ ಹಡಗು

ಉಸಿರಿನ ಹಡಗು

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರೆದಿವೆ ನಿಲ್ಲದ ದಾರಿ.-
ಎಲ್ಲಿಂದೆಲ್ಲಿಗೆ ಇದರ ಸವಾರಿ!

ಕಾಮನ ಕೋರುವ ಕಣ್ಣು ಇದಕ್ಕೆ,
ಬಯಕೆಯ ಬೀರುವ ಬಾವುಟ-ರೆಕ್ಕೆ,
ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ,
ಹಾಹಾಕಾರದ ಹೆಬ್ದುಲಿ-ರಟ್ಟೆ.

ಮುಡಿಯಲಿ ಗರ್ವದ ಹೊಗೆಯ ಕಿರೀಟ,
ಮುಖದಲಿ ತಂಗಿದೆ ಮಕ್ಕಳ ನೋಟ,
ಸುತ್ತಾ ಉತ್ತೆಸೆದಲೆಗಳ ಕಾಟ;
ಮರುಭೂಮಿಯಲಿದು ತೆಂಗಿನ ತೋಟ.

ಮಗುವಿದೆ ತಳ್ಳಿದ ಕಾಲಿಗೆ ಬಿದ್ದು;
ತಂದೆಯ ಉತ್ತರ: ಮತ್ತೂ ಗುದ್ದು.
ಈ ಗತಿಯೇ ಹೆತ್ತವಳೇ ಇದ್ದೂ?-
ಕರುಣೆಯ ಕರುಳಲಿ ಹುಟ್ಟಿದ ಸದ್ದು.

ಇನಿಯನ ಎದೆಯಲಿ ಕೆನ್ನೆಯನಿಟ್ಟು
ಕಣ್ತೆರೆವಿನಿಯಳ ಚೆಲುವನು ತೊಟ್ಟು
ತುಂಬುತ್ತಲೆಯಿರೆ ಹಡಗಿನ ರೂಪ,
ಕಡಲಿನ ಕಣ್ಣಿಗೆ ಏಕೋ ಕೋಪ!

ಉಸಿರಿನ ಹಡಗಿದು, ಏನಿದರರಕೆ?
ಉಸುರುವಂತಿಲ್ಲ.-(ಉಳಿಯುವ ಬಯಕೆ?)
ಬರಿ ಕನಸಿದು,-ನಗೆ ನೋವಿನ ಬೆರಕೆ;-
ಅದೊ! ನೀರಿನ ಬಿರುಗಾಳಿಯ ಗೊರಕೆ.

ಹಡಗಿನ ಪಾಡಿಗೆ ಕಡಲೇ ನಕ್ಕು
ನೀರಿನ ಕೆನ್ನೆಗೆ ಬಂದಿದೆ ಸುಕ್ಕು.
ತೇಲುವ ಬಾಳಿಗೆ ಯಾರೋ ದಿಕ್ಕು?
ಬೇಕು ಅದೃಷ್ಟವೆ ತೇಲುವುದಕ್ಕೂ!

ತೇಲುವುದೆಲ್ಲಾ ತೇಲುತ್ತಿರಲಿ!
ಮುಳುಗುವುದೋ? ಸರಿ, ಮುಳುಗುತ್ತಿರಲಿ!
ರವಿಯೂ ಮುಳುಗಲಿ! ಶಶಿಯೂ ಮುಳುಗಲಿ!
ಗ್ರಹತಾರೆಗಳೂ ಸುಮ್ಮನೆ ಮುಳುಗಲಿ!-

ದಿಗ್ದಿಕ್ತಟಗಳ ಒಳಗೂ ಹೊರಗೂ
ನೀಲ ನೀಳ ನಾಲಗೆಗಳನೆಸೆದು,
ಜೀವದಾಸೆಗಳನೆಲ್ಲಾ ತೊಡೆದು,
ಎಲ್ಲಾ ಮುಗಿದರೆ, ತಾನೇ ಉಳಿದು,

ತುಂಬಿ ತುಳುಕುತಿದೆ ಕಾಲ ಸಮುದ್ರ;
ಬದುಕಬಲ್ಲವನು ಒಬ್ಬನೆ, ರುದ್ರ.
ತೇಲಬಹುದು ಈ ತುಂಬಿದ ಹಡಗು.
ನಾಳೆ ಇವರ ಮನೆ ಆಳದ ಕೊರಗು.-

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರದಿದೆ ನಿಲ್ಲದ ದಾರಿ.
ಎಲ್ಲಿಂದೆಲ್ಲಿಗೆ ಇದರ ಸವಾರಿ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...