ಉಸಿರಿನ ಹಡಗು

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರೆದಿವೆ ನಿಲ್ಲದ ದಾರಿ.-
ಎಲ್ಲಿಂದೆಲ್ಲಿಗೆ ಇದರ ಸವಾರಿ!

ಕಾಮನ ಕೋರುವ ಕಣ್ಣು ಇದಕ್ಕೆ,
ಬಯಕೆಯ ಬೀರುವ ಬಾವುಟ-ರೆಕ್ಕೆ,
ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ,
ಹಾಹಾಕಾರದ ಹೆಬ್ದುಲಿ-ರಟ್ಟೆ.

ಮುಡಿಯಲಿ ಗರ್ವದ ಹೊಗೆಯ ಕಿರೀಟ,
ಮುಖದಲಿ ತಂಗಿದೆ ಮಕ್ಕಳ ನೋಟ,
ಸುತ್ತಾ ಉತ್ತೆಸೆದಲೆಗಳ ಕಾಟ;
ಮರುಭೂಮಿಯಲಿದು ತೆಂಗಿನ ತೋಟ.

ಮಗುವಿದೆ ತಳ್ಳಿದ ಕಾಲಿಗೆ ಬಿದ್ದು;
ತಂದೆಯ ಉತ್ತರ: ಮತ್ತೂ ಗುದ್ದು.
ಈ ಗತಿಯೇ ಹೆತ್ತವಳೇ ಇದ್ದೂ?-
ಕರುಣೆಯ ಕರುಳಲಿ ಹುಟ್ಟಿದ ಸದ್ದು.

ಇನಿಯನ ಎದೆಯಲಿ ಕೆನ್ನೆಯನಿಟ್ಟು
ಕಣ್ತೆರೆವಿನಿಯಳ ಚೆಲುವನು ತೊಟ್ಟು
ತುಂಬುತ್ತಲೆಯಿರೆ ಹಡಗಿನ ರೂಪ,
ಕಡಲಿನ ಕಣ್ಣಿಗೆ ಏಕೋ ಕೋಪ!

ಉಸಿರಿನ ಹಡಗಿದು, ಏನಿದರರಕೆ?
ಉಸುರುವಂತಿಲ್ಲ.-(ಉಳಿಯುವ ಬಯಕೆ?)
ಬರಿ ಕನಸಿದು,-ನಗೆ ನೋವಿನ ಬೆರಕೆ;-
ಅದೊ! ನೀರಿನ ಬಿರುಗಾಳಿಯ ಗೊರಕೆ.

ಹಡಗಿನ ಪಾಡಿಗೆ ಕಡಲೇ ನಕ್ಕು
ನೀರಿನ ಕೆನ್ನೆಗೆ ಬಂದಿದೆ ಸುಕ್ಕು.
ತೇಲುವ ಬಾಳಿಗೆ ಯಾರೋ ದಿಕ್ಕು?
ಬೇಕು ಅದೃಷ್ಟವೆ ತೇಲುವುದಕ್ಕೂ!

ತೇಲುವುದೆಲ್ಲಾ ತೇಲುತ್ತಿರಲಿ!
ಮುಳುಗುವುದೋ? ಸರಿ, ಮುಳುಗುತ್ತಿರಲಿ!
ರವಿಯೂ ಮುಳುಗಲಿ! ಶಶಿಯೂ ಮುಳುಗಲಿ!
ಗ್ರಹತಾರೆಗಳೂ ಸುಮ್ಮನೆ ಮುಳುಗಲಿ!-

ದಿಗ್ದಿಕ್ತಟಗಳ ಒಳಗೂ ಹೊರಗೂ
ನೀಲ ನೀಳ ನಾಲಗೆಗಳನೆಸೆದು,
ಜೀವದಾಸೆಗಳನೆಲ್ಲಾ ತೊಡೆದು,
ಎಲ್ಲಾ ಮುಗಿದರೆ, ತಾನೇ ಉಳಿದು,

ತುಂಬಿ ತುಳುಕುತಿದೆ ಕಾಲ ಸಮುದ್ರ;
ಬದುಕಬಲ್ಲವನು ಒಬ್ಬನೆ, ರುದ್ರ.
ತೇಲಬಹುದು ಈ ತುಂಬಿದ ಹಡಗು.
ನಾಳೆ ಇವರ ಮನೆ ಆಳದ ಕೊರಗು.-

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲೂ ಇರುಳೂ;
ನೀರಲಿ ತೆರದಿದೆ ನಿಲ್ಲದ ದಾರಿ.
ಎಲ್ಲಿಂದೆಲ್ಲಿಗೆ ಇದರ ಸವಾರಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಪೋಭೂಮಿ – ಭಾರತ ವರ್ಷ
Next post ಕೈ ಕೈ ಎಲ್ಹೋಯ್ತು?

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…