Home / ಕವನ / ಕವಿತೆ / ಸಮರ್ಥನೆ : ಗಂಡ

ಸಮರ್ಥನೆ : ಗಂಡ

ನಿನ್ನ ದಮ್ಮಯ್ಯ
ತಪ್ಪು ತಿಳಿಕೋಬೇಡ ನನ್ನ
ತಿಂದದ್ದೆ ತಿಂದು ಜಗಿದದ್ದೆ ಜಗಿದು
ಬರುತಿದೆ ನನಗೆ ವಾಕರಿಕೆ ಅಷ್ಟೆ
ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು
ಅನ್ನ ಮೊಸರು – ನಾ ಹುಟ್ಟಿದಂದಿನಿಂದ ಮುಕ್ಕಿದ್ದು.
ಬದುಕಬೇಕಲ್ಲ ಎಂದು
ನುಂಗುತಿದ್ದೇನೆ – ಒಗ್ಗರಣೆ ಹಾಕಿದರು
ನನಗೆ ರುಚಿಯಿಲ್ಲ.
ಹಾಗೆ ಬೇಕಾದರೆ
ನಮ್ಮ ಮದುವೆಗೆ ಮೊದಲೆ
ಇಲ್ಲಿ ಕೆಲಸಕ್ಕಿದ್ದ
ಪಾರು ಕುಟ್ಟಿಯ ಟಗರು ಮರಿಗಳಂತಹ ನಾಲ್ಕು
ಗಂಡು ಮಕ್ಕಳ ಸಾಕ್ಷಿ
ಒಂದು ಕಾಲಕ್ಕೆ
ರಾತ್ರಿಯೊಂದರಲಿ ನಾಲ್ಕು ಚದುರೆಯರೊಡನೆ
ಚದುರಂಗವಾಡಿ ಗೆದ್ದವನು ನಾನು
ಹೆಚ್ಚೇಕೆ?
ಮೊದಲ ರಾತ್ರಿ ಗುಟುರು ಹಾಕಿ ನಾ
ಹೋರಿ ಬಂದಾಗ
ಹ್ಹಾ ಎಂದು ನೀನೆ
ತೆವಳಲಿಲ್ಲವೆ?
ಮನಸ್ಸಿಗೇನೋ ಬೇಕು
ಮಾಂಸ ದುರ್ಬಲ ನೋಡು.
ಬೆಕ್ಕಿಗಿಕ್ಕಿದ ಹಾಗೆ ಇಕ್ಕಿದರೆ ನಿನಗೆ
ಸಾಕಾಗುವುದಿಲ್ಲ ಭಾರಿ ಹೊಟ್ಟೆ ಬಾಕಿ!
ಈಗ ಗೊತ್ತಾಯ್ತೆ
ಜೋಲು ಮೊಲೆಗಳ ಮುದುಕ
ಸುಕ್ಕು ಮೋರೆಯ ಮುದುಕಿ
ಗುಟ್ಟು ಮಾತಿನಲಿ ನಡೆಸಿದ ಮಸಲತ್ತು?
ಗಲ್ಲಿಯಲೊ ಓಣಿಯಲೊ
ಬೇಕಾದಲ್ಲಿ ಸುತ್ತಿ
ಕದ್ದೊ, ಕೇಳಿಯೊ, ಪಡೆದೊ ತಿನ್ನಬಹುದಾದ
ಹುಟ್ಟುಸ್ವಾತಂತ್ರ್ಯಕ್ಕೆ ಹಾಕಿದರು ಸಂಕೋಲೆ.
ನೀನು ಬಯಸಿದ್ದಲ್ಲ
ನಾನು ಕೇಳಿದ್ದಲ್ಲ
ಯಾರ ಉದ್ಧಾರಕ್ಕೆ ಈ ಯಜ್ಞ?
ನಿನಗೆ ತಿಳಿದರಿಲಿಲ್ಲ ಮೊದಲೆ
ನನಗೆ ಸಂಶಯವಿತ್ತು
ಆದರೂ ನನ್ನ ಸೊಂಟದ ಸುತ್ತ
ಹಣಿಕಿ ಹಾಕುವ ಕುತೂಹಲ ನಿನಗೆ
ನನಗೊ ಕಲ್ಲು ತಪ್ಪಿಸಿಕೊಂಡು ಓಡಿ ಸಾಕಾಗಿ
ಕೊನೆಗೆ ನನ್ನದೇ ಒಂದು ಹೆಂಡತಿ ಇರಲಿ – ಎಂದು
– ಅಂತು ಹೀಗೆ
ಒಂದೆ ತಾಳಿಯಲಿ ಇಬ್ಬರಿಗೆ ಗಾಳ.
ನಮ್ಮ ಜೈಲಿನ ಒಳಗೆ ನಾವು ಕುಳಿತಿರುವುದಕೆ
ಇದು ಲೀಗಲ್ ಪರ್ಮಿಟು
ಈ ಜೈಲು ನನ್ನ ನಿನ್ನ
ಮುತ್ತಜ್ಜರ ಸೇನೆ ಕಲ್ಲು ಹೊತ್ತು ಕಟ್ಟಿದ್ದು
ನಮ್ಮದೂ ಸಂದಿದೆ ಇದಕೆ ಅಳಿಲ ಸೇವೆ
ಹೆದರಬೇಡ ನೀನು
ಬಿದ್ದೀತು ಈ ಜೈಲು
ಪ್ರವಾಹದಲಿ ಕೊಚ್ಚಿ ಹೋದೀತು ಇದರ ಒಂದೊಂದೆ ಕಲ್ಲು.
ಬೇಸರವೆ ನಿನಗೆ? ನನಗೂ ಹಾಗೆ.
ಆಯ್ತು ನಿನಗಷ್ಟು ಬೇಕಿದ್ದರೆ
ತೆರೆ ಕದ
ಈಗ ಬಂದೆ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...