Home / ಕವನ / ಕವಿತೆ / ಸಮರ್ಥನೆ : ಗಂಡ

ಸಮರ್ಥನೆ : ಗಂಡ

ನಿನ್ನ ದಮ್ಮಯ್ಯ
ತಪ್ಪು ತಿಳಿಕೋಬೇಡ ನನ್ನ
ತಿಂದದ್ದೆ ತಿಂದು ಜಗಿದದ್ದೆ ಜಗಿದು
ಬರುತಿದೆ ನನಗೆ ವಾಕರಿಕೆ ಅಷ್ಟೆ
ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು
ಅನ್ನ ಮೊಸರು – ನಾ ಹುಟ್ಟಿದಂದಿನಿಂದ ಮುಕ್ಕಿದ್ದು.
ಬದುಕಬೇಕಲ್ಲ ಎಂದು
ನುಂಗುತಿದ್ದೇನೆ – ಒಗ್ಗರಣೆ ಹಾಕಿದರು
ನನಗೆ ರುಚಿಯಿಲ್ಲ.
ಹಾಗೆ ಬೇಕಾದರೆ
ನಮ್ಮ ಮದುವೆಗೆ ಮೊದಲೆ
ಇಲ್ಲಿ ಕೆಲಸಕ್ಕಿದ್ದ
ಪಾರು ಕುಟ್ಟಿಯ ಟಗರು ಮರಿಗಳಂತಹ ನಾಲ್ಕು
ಗಂಡು ಮಕ್ಕಳ ಸಾಕ್ಷಿ
ಒಂದು ಕಾಲಕ್ಕೆ
ರಾತ್ರಿಯೊಂದರಲಿ ನಾಲ್ಕು ಚದುರೆಯರೊಡನೆ
ಚದುರಂಗವಾಡಿ ಗೆದ್ದವನು ನಾನು
ಹೆಚ್ಚೇಕೆ?
ಮೊದಲ ರಾತ್ರಿ ಗುಟುರು ಹಾಕಿ ನಾ
ಹೋರಿ ಬಂದಾಗ
ಹ್ಹಾ ಎಂದು ನೀನೆ
ತೆವಳಲಿಲ್ಲವೆ?
ಮನಸ್ಸಿಗೇನೋ ಬೇಕು
ಮಾಂಸ ದುರ್ಬಲ ನೋಡು.
ಬೆಕ್ಕಿಗಿಕ್ಕಿದ ಹಾಗೆ ಇಕ್ಕಿದರೆ ನಿನಗೆ
ಸಾಕಾಗುವುದಿಲ್ಲ ಭಾರಿ ಹೊಟ್ಟೆ ಬಾಕಿ!
ಈಗ ಗೊತ್ತಾಯ್ತೆ
ಜೋಲು ಮೊಲೆಗಳ ಮುದುಕ
ಸುಕ್ಕು ಮೋರೆಯ ಮುದುಕಿ
ಗುಟ್ಟು ಮಾತಿನಲಿ ನಡೆಸಿದ ಮಸಲತ್ತು?
ಗಲ್ಲಿಯಲೊ ಓಣಿಯಲೊ
ಬೇಕಾದಲ್ಲಿ ಸುತ್ತಿ
ಕದ್ದೊ, ಕೇಳಿಯೊ, ಪಡೆದೊ ತಿನ್ನಬಹುದಾದ
ಹುಟ್ಟುಸ್ವಾತಂತ್ರ್ಯಕ್ಕೆ ಹಾಕಿದರು ಸಂಕೋಲೆ.
ನೀನು ಬಯಸಿದ್ದಲ್ಲ
ನಾನು ಕೇಳಿದ್ದಲ್ಲ
ಯಾರ ಉದ್ಧಾರಕ್ಕೆ ಈ ಯಜ್ಞ?
ನಿನಗೆ ತಿಳಿದರಿಲಿಲ್ಲ ಮೊದಲೆ
ನನಗೆ ಸಂಶಯವಿತ್ತು
ಆದರೂ ನನ್ನ ಸೊಂಟದ ಸುತ್ತ
ಹಣಿಕಿ ಹಾಕುವ ಕುತೂಹಲ ನಿನಗೆ
ನನಗೊ ಕಲ್ಲು ತಪ್ಪಿಸಿಕೊಂಡು ಓಡಿ ಸಾಕಾಗಿ
ಕೊನೆಗೆ ನನ್ನದೇ ಒಂದು ಹೆಂಡತಿ ಇರಲಿ – ಎಂದು
– ಅಂತು ಹೀಗೆ
ಒಂದೆ ತಾಳಿಯಲಿ ಇಬ್ಬರಿಗೆ ಗಾಳ.
ನಮ್ಮ ಜೈಲಿನ ಒಳಗೆ ನಾವು ಕುಳಿತಿರುವುದಕೆ
ಇದು ಲೀಗಲ್ ಪರ್ಮಿಟು
ಈ ಜೈಲು ನನ್ನ ನಿನ್ನ
ಮುತ್ತಜ್ಜರ ಸೇನೆ ಕಲ್ಲು ಹೊತ್ತು ಕಟ್ಟಿದ್ದು
ನಮ್ಮದೂ ಸಂದಿದೆ ಇದಕೆ ಅಳಿಲ ಸೇವೆ
ಹೆದರಬೇಡ ನೀನು
ಬಿದ್ದೀತು ಈ ಜೈಲು
ಪ್ರವಾಹದಲಿ ಕೊಚ್ಚಿ ಹೋದೀತು ಇದರ ಒಂದೊಂದೆ ಕಲ್ಲು.
ಬೇಸರವೆ ನಿನಗೆ? ನನಗೂ ಹಾಗೆ.
ಆಯ್ತು ನಿನಗಷ್ಟು ಬೇಕಿದ್ದರೆ
ತೆರೆ ಕದ
ಈಗ ಬಂದೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...