ಸಮರ್ಥನೆ : ಗಂಡ

ನಿನ್ನ ದಮ್ಮಯ್ಯ
ತಪ್ಪು ತಿಳಿಕೋಬೇಡ ನನ್ನ
ತಿಂದದ್ದೆ ತಿಂದು ಜಗಿದದ್ದೆ ಜಗಿದು
ಬರುತಿದೆ ನನಗೆ ವಾಕರಿಕೆ ಅಷ್ಟೆ
ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು
ಅನ್ನ ಮೊಸರು – ನಾ ಹುಟ್ಟಿದಂದಿನಿಂದ ಮುಕ್ಕಿದ್ದು.
ಬದುಕಬೇಕಲ್ಲ ಎಂದು
ನುಂಗುತಿದ್ದೇನೆ – ಒಗ್ಗರಣೆ ಹಾಕಿದರು
ನನಗೆ ರುಚಿಯಿಲ್ಲ.
ಹಾಗೆ ಬೇಕಾದರೆ
ನಮ್ಮ ಮದುವೆಗೆ ಮೊದಲೆ
ಇಲ್ಲಿ ಕೆಲಸಕ್ಕಿದ್ದ
ಪಾರು ಕುಟ್ಟಿಯ ಟಗರು ಮರಿಗಳಂತಹ ನಾಲ್ಕು
ಗಂಡು ಮಕ್ಕಳ ಸಾಕ್ಷಿ
ಒಂದು ಕಾಲಕ್ಕೆ
ರಾತ್ರಿಯೊಂದರಲಿ ನಾಲ್ಕು ಚದುರೆಯರೊಡನೆ
ಚದುರಂಗವಾಡಿ ಗೆದ್ದವನು ನಾನು
ಹೆಚ್ಚೇಕೆ?
ಮೊದಲ ರಾತ್ರಿ ಗುಟುರು ಹಾಕಿ ನಾ
ಹೋರಿ ಬಂದಾಗ
ಹ್ಹಾ ಎಂದು ನೀನೆ
ತೆವಳಲಿಲ್ಲವೆ?
ಮನಸ್ಸಿಗೇನೋ ಬೇಕು
ಮಾಂಸ ದುರ್ಬಲ ನೋಡು.
ಬೆಕ್ಕಿಗಿಕ್ಕಿದ ಹಾಗೆ ಇಕ್ಕಿದರೆ ನಿನಗೆ
ಸಾಕಾಗುವುದಿಲ್ಲ ಭಾರಿ ಹೊಟ್ಟೆ ಬಾಕಿ!
ಈಗ ಗೊತ್ತಾಯ್ತೆ
ಜೋಲು ಮೊಲೆಗಳ ಮುದುಕ
ಸುಕ್ಕು ಮೋರೆಯ ಮುದುಕಿ
ಗುಟ್ಟು ಮಾತಿನಲಿ ನಡೆಸಿದ ಮಸಲತ್ತು?
ಗಲ್ಲಿಯಲೊ ಓಣಿಯಲೊ
ಬೇಕಾದಲ್ಲಿ ಸುತ್ತಿ
ಕದ್ದೊ, ಕೇಳಿಯೊ, ಪಡೆದೊ ತಿನ್ನಬಹುದಾದ
ಹುಟ್ಟುಸ್ವಾತಂತ್ರ್ಯಕ್ಕೆ ಹಾಕಿದರು ಸಂಕೋಲೆ.
ನೀನು ಬಯಸಿದ್ದಲ್ಲ
ನಾನು ಕೇಳಿದ್ದಲ್ಲ
ಯಾರ ಉದ್ಧಾರಕ್ಕೆ ಈ ಯಜ್ಞ?
ನಿನಗೆ ತಿಳಿದರಿಲಿಲ್ಲ ಮೊದಲೆ
ನನಗೆ ಸಂಶಯವಿತ್ತು
ಆದರೂ ನನ್ನ ಸೊಂಟದ ಸುತ್ತ
ಹಣಿಕಿ ಹಾಕುವ ಕುತೂಹಲ ನಿನಗೆ
ನನಗೊ ಕಲ್ಲು ತಪ್ಪಿಸಿಕೊಂಡು ಓಡಿ ಸಾಕಾಗಿ
ಕೊನೆಗೆ ನನ್ನದೇ ಒಂದು ಹೆಂಡತಿ ಇರಲಿ – ಎಂದು
– ಅಂತು ಹೀಗೆ
ಒಂದೆ ತಾಳಿಯಲಿ ಇಬ್ಬರಿಗೆ ಗಾಳ.
ನಮ್ಮ ಜೈಲಿನ ಒಳಗೆ ನಾವು ಕುಳಿತಿರುವುದಕೆ
ಇದು ಲೀಗಲ್ ಪರ್ಮಿಟು
ಈ ಜೈಲು ನನ್ನ ನಿನ್ನ
ಮುತ್ತಜ್ಜರ ಸೇನೆ ಕಲ್ಲು ಹೊತ್ತು ಕಟ್ಟಿದ್ದು
ನಮ್ಮದೂ ಸಂದಿದೆ ಇದಕೆ ಅಳಿಲ ಸೇವೆ
ಹೆದರಬೇಡ ನೀನು
ಬಿದ್ದೀತು ಈ ಜೈಲು
ಪ್ರವಾಹದಲಿ ಕೊಚ್ಚಿ ಹೋದೀತು ಇದರ ಒಂದೊಂದೆ ಕಲ್ಲು.
ಬೇಸರವೆ ನಿನಗೆ? ನನಗೂ ಹಾಗೆ.
ಆಯ್ತು ನಿನಗಷ್ಟು ಬೇಕಿದ್ದರೆ
ತೆರೆ ಕದ
ಈಗ ಬಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂದ್ಯ
Next post ಯಾರ ಹಂಗೂ ಇಲ್ಲದೇ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…