ಸೂರ್ಯಾಸ್ತಮಾನ ಸಮಯ

ಪಡುವಣ ದಿಗಂತದಲಿ ಅಗ್ನಿದೇವನ ಒಂದು
ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ!
ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ
ದಿನಕರನು ಇಣಿಕಿಣಿಕಿ ಮರೆಸೇರ್ವನೊ!

ಎಲ್ಲಿಂದ ಯಾವೆಡೆಗೆ?  ಯಾವೂರು ಪೋಗ್ವನೊ
ಅಗ್ನಿಯಾ ಚಂಡು ಈ ಕೆಂಬಣ್ಣದೀ;
ಪಡುವಣದ ಪ್ರಾಂತದಲಿ ನೀರು ನೆಲದಲಿ ಎಲ್ಲ
ರಂಗು ಕುಂಕುಮ ಚೆಲ್ಲಿ-ಮುನ್ನೋಡ್ವನು!

ಜೀವ ರಾಶಿಗಳೆಲ್ಲ ಗೂಡು ಸೇರುವ ಪೊಳ್ತು
ಏಳು ವರ್ಣದ ಬಿಲ್ಲು ನಡುಗೋಲಿಯೊ!
ಹಾರಿ ಬಿದ್ದಿತು ಅಲ್ಲಿ, ಪಾಕಡಾಚೆಲಿ ನೋಡು,
ದೇವ ನಾವೆಯ ಒಳಗೆ ತೇಲಿ ಪೋಪಂ!

ತುಳುನಾಡ ಸಂಪಾಜೆ ಘಾಟಿ ದಾಟುತ ಹಾರ್‍ವ
ಪಕ್ಷಿಗಳೊ ಕೂಹೂಹು ಕೂಗಿ ಎಲ್ಲ;
ತಪ್ಪಲಿನ ಬಯಲಿನಲಿ ದುಡಿದು ಹಾಡುತ ಪೋಪರ್‍
ಕಿನಕಾಪು ನೀರಿ ಬೀಸಿ ಹೆಂಗಳೆಲ್ಲ?

ದನವು ಕರಗಳು ಎಲ್ಲ ಮೇಕೇರಿ ಬಯಲಿನಲಿ
ಕರೆ ಕರೆದು ಸೇರಿದವು ಕೊಟ್ಟೆಯನು;
ಕೋಟೆ ಗಂಟೆಯೊ ಆರು ಬಡಿಯೆ ಸೇರಿದರೆಲ್ಲ
ಆಡುತಿಹ ಮಕ್ಕಳೂ ಮನೆ ಸೇರಲು.

ಸಂಜೆ ಸಮಯವೊ ನೋಡು, ತಂಪುಗಾಳಿಯು ಸುತ್ತು,
ಬಾನ್ಕರೆಯಲೊಂದು ಮಗು ಅಳುತಲಿಹುದು,
ತನ್ನ ಮುಗುಳ್ನಗೆಯನ್ನು ಮುದ್ದು ಮಾತುಗಳನ್ನು
ತೋರಿ, ತಾಸಿನ ಕಾಲ ಬಾಳಿ ಇಲ್ಲಿ!

ಬೆಳಕಿನಲಿ ಸುಖವಿಹುದು, ಅದು ಲೋಕನ್ಯಾಯ,
ರಾತ್ರಿ ಕಷ್ಟದ ನಂಟು, ಶೋಕ ಮೂಲ;
ಅಗಲಬೇಡ ನೀ, ಬೇಡ ಸೂರ್ಯದೇವ
ನೋಡಲಾರೆನು ನೀನು ಅಗಲ್ವುದೆಮ್ಮ!

ಸೃಷ್ಠಿ ಚಿತ್ರವ ಜಗಕೆ ತೋರಿ ನೀ ಮಿಗಿಲಿಂ
ಯಾವ ನಾಡೊಳು ಪೋಗಿ ನಿದ್ರಿಸುವಿಯೊ?
ಕಾಡು ಮಾಡನು ಎಲ್ಲ, ಗುಡ್ಡ ಬಯಲಲಿ ಮಲೆಯೊಳ್
ಹೊಂಬೆಳಕ ಚಿಮುಕಿಸುತ ಪೋಪೆ ಎಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೩
Next post ಎಳೆದೂ, ಎಳೆದೂ ಇರುಳು

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…