Home / ಕವನ / ಕವಿತೆ / ವಿರಹಿಣಿಯ ಸಂತಾಪ

ವಿರಹಿಣಿಯ ಸಂತಾಪ

ಚಂದ್ರಮುಖಿಯು ನೀನು ಎಂದು ಬೆಡಗುಗಾರ್ತಿ ಚೆಲುವೆಯೆಂದು
ಸಂದ ಜೀವದಾತ್ಮ ಗೊಂಬೆಯೆಂದು ಪೇಽಳಿ-
ಇಂದು ತರವೆ ಇನಿಯ ಇನಿತು ಕೊರಗಿಸುವುದೊ!

ನೀರೆ ನೀನೆ ಶೂರೆ ಎಂದು ಎನ್ನ ಮೋಹ ಕಲಶವೆಂದು
ಸಾರೆ ಸರಸಿ ತೀರದಲ್ಲಿ ಚೆನ್ನು ಮುತ್ತು-
ಮೀರಿದೊಂದಾನಂದದಿತ್ತು-ಎಲ್ಲಿ ಪೋಽದೆ?

ಊರದೇವರಬ್ಬದಲ್ಲಿ ಬೆಳ್ದಿಂಗಳಾ ಆಟದಲ್ಲಿ
ಸೇರಿದವರು ಈ ದಂಪತಿಗಳಾರು-ಎಂದು,
ಸಾರಿನೋಡೆ ನಾಚಿ ನಡೆದುದನ್ನು ನೆನೆಯೆಯಾ?

ಅಂದು ಪತ್ರದಲ್ಲಿ ನೀನು ಬಣ್ಣನೆಗಳ ಶಬ್ದ ಜಾಲ-
ದಿಂದ ಕರೆದು ಬರುವ ಸುಖದ ಕನಸ ಕಂಡು
ನೊಂದ ನನ್ನ ವಂಚಿಸುವುದು-ನಿನಗೆ ತರಽವೆ?

ಬಡವರೊಲಿದ ನಲ್ಮೆ ಜೀವ ನೈಜ ಸುಖದ ರೂಪು ಅಲ್ಲ-?
ಬಡಿದು ಬಾಳ ಭಾಗ್ಯವನ್ನು ದ್ರೋಹದಿಂದ-
ಪಡೆವ ಅಲ್ಪ ಹುಸಿಯ ಸುಖದ ಕೆಚ್ಚು ಏಽಕೆ?

ಮೂಡುವೆಟ್ಟ ಹತ್ತುವಾಗ ಸೋಗೆ ಕೇಕೆ ಹಾಕುವಾಗ
ಕಾಡಸೊಬಗು ನೋಡಿ ದಣಿದು ಸೇರಿದಾಗ
ಕೂಡಿ ಬಿಡಿಸಿ ಲೋಕ ಸುಖವ ಪೇಳಿದೆಽಲ್ಲಿ?

ಮೊಸರು ಕಡೆದು ಬೆಣ್ಣೆ ತೂಗೆ, ಕಂದ ಜೋ ಜೊ ಲಾಲಿ ಹಾಡೆ
ಹಸಲೆ ಹುಲ್ಲ ಕುಯ್ಯುವಾಗ್ಗೆ ಹಾಡಿದೇನೊ?-
ಹೊಸತು ಜೋಡಿ ಜೀವ ಸುಖದ ಮರೆತೆಯೇನೊ?

ಕೊಲ್ಲಿಗದ್ದೆ ಅರುವಿಗಾಗಿ, ಹೊನಲು ಹರಿವ ಬಯಲಿಗಾಗಿ
ಬಳ್ಳಿ ಮನೆಯ ಕಟ್ಟಿ ನಲಿವ-ಕಾಡು ಸುಽತ್ತಿ
ಮಲ್ಲಳಿಗಳ ಹಾಡ ಕೇಳೆ ನಡೆವ ಬಾಽರೊ!

ಸೂಜಿದಾರ ಹೊತ್ತು ಹೊತ್ತು ಹೊರುವ ಭಾರ ಅದೇ ಆಯ್ತು!
ಜಾಜಿ ಕೋದು ಯಾರ ಕೊರಳಲಿರಿಸಲೆಂದು
ಸೋಜಿಗದಲಿ ನೆನೆದು ನೆನೆದು-ಸೊರಗಿದೆ ನಾ!

ಬಾವಿ ನೀರ ಸೇದುವಾಗ ಎಸರ ಬೇಯ್ಸಿ ತೆಗೆಯುವಾಗ
ಕವಿದ ಮಂಕ ಕಣ್ಣಿನಿಂದ ಒರಸುವಾಗಽ
ಜೀವಿಗಳ ಈ ಹುಸಿಯ ಬಾಳ ನೆನೆವೆ ನಾಽನೊ!

ನಗುತಲಿರು ನೀ, ನಗುವಿನಲ್ಲಿ ಬಾಳ ಸತ್ಯ ಮೂಡಿ ಬರಲಿ-
ಒಗುವ ಸತ್ಯ ನಲುಮೆಯೆಲ್ಲ-ಒಲುಮೆಯಲ್ಲಿ,
ಸೊಗವನೀಕ್ಷಿಸುತಲೆ ಬರಲಿ-ಆಹಾ ಕಾಽಯೋ!

ಸೂರ್ಯ ಕಾಂತಿ ಬೀಳ್ವ ಮುನ್ನ, ಚಂದ್ರ ಬೆಳಕು ತೋರ್ವ ಮುನ್ನ,
ಕಾರ್ಯಲೋಕ ಶಾಂತಿ ತಲ್ಪ ಸೇರ್ವ ಮುಽನ್ನ,
ಭಾರ್ಯೆ ದುಃಖವಳಿಸೆ, ಪ್ರಿಯಾ-ಬಂದು ಸೇಽರೊ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...