ವಿರಹಿಣಿಯ ಸಂತಾಪ

ಚಂದ್ರಮುಖಿಯು ನೀನು ಎಂದು ಬೆಡಗುಗಾರ್ತಿ ಚೆಲುವೆಯೆಂದು
ಸಂದ ಜೀವದಾತ್ಮ ಗೊಂಬೆಯೆಂದು ಪೇಽಳಿ-
ಇಂದು ತರವೆ ಇನಿಯ ಇನಿತು ಕೊರಗಿಸುವುದೊ!

ನೀರೆ ನೀನೆ ಶೂರೆ ಎಂದು ಎನ್ನ ಮೋಹ ಕಲಶವೆಂದು
ಸಾರೆ ಸರಸಿ ತೀರದಲ್ಲಿ ಚೆನ್ನು ಮುತ್ತು-
ಮೀರಿದೊಂದಾನಂದದಿತ್ತು-ಎಲ್ಲಿ ಪೋಽದೆ?

ಊರದೇವರಬ್ಬದಲ್ಲಿ ಬೆಳ್ದಿಂಗಳಾ ಆಟದಲ್ಲಿ
ಸೇರಿದವರು ಈ ದಂಪತಿಗಳಾರು-ಎಂದು,
ಸಾರಿನೋಡೆ ನಾಚಿ ನಡೆದುದನ್ನು ನೆನೆಯೆಯಾ?

ಅಂದು ಪತ್ರದಲ್ಲಿ ನೀನು ಬಣ್ಣನೆಗಳ ಶಬ್ದ ಜಾಲ-
ದಿಂದ ಕರೆದು ಬರುವ ಸುಖದ ಕನಸ ಕಂಡು
ನೊಂದ ನನ್ನ ವಂಚಿಸುವುದು-ನಿನಗೆ ತರಽವೆ?

ಬಡವರೊಲಿದ ನಲ್ಮೆ ಜೀವ ನೈಜ ಸುಖದ ರೂಪು ಅಲ್ಲ-?
ಬಡಿದು ಬಾಳ ಭಾಗ್ಯವನ್ನು ದ್ರೋಹದಿಂದ-
ಪಡೆವ ಅಲ್ಪ ಹುಸಿಯ ಸುಖದ ಕೆಚ್ಚು ಏಽಕೆ?

ಮೂಡುವೆಟ್ಟ ಹತ್ತುವಾಗ ಸೋಗೆ ಕೇಕೆ ಹಾಕುವಾಗ
ಕಾಡಸೊಬಗು ನೋಡಿ ದಣಿದು ಸೇರಿದಾಗ
ಕೂಡಿ ಬಿಡಿಸಿ ಲೋಕ ಸುಖವ ಪೇಳಿದೆಽಲ್ಲಿ?

ಮೊಸರು ಕಡೆದು ಬೆಣ್ಣೆ ತೂಗೆ, ಕಂದ ಜೋ ಜೊ ಲಾಲಿ ಹಾಡೆ
ಹಸಲೆ ಹುಲ್ಲ ಕುಯ್ಯುವಾಗ್ಗೆ ಹಾಡಿದೇನೊ?-
ಹೊಸತು ಜೋಡಿ ಜೀವ ಸುಖದ ಮರೆತೆಯೇನೊ?

ಕೊಲ್ಲಿಗದ್ದೆ ಅರುವಿಗಾಗಿ, ಹೊನಲು ಹರಿವ ಬಯಲಿಗಾಗಿ
ಬಳ್ಳಿ ಮನೆಯ ಕಟ್ಟಿ ನಲಿವ-ಕಾಡು ಸುಽತ್ತಿ
ಮಲ್ಲಳಿಗಳ ಹಾಡ ಕೇಳೆ ನಡೆವ ಬಾಽರೊ!

ಸೂಜಿದಾರ ಹೊತ್ತು ಹೊತ್ತು ಹೊರುವ ಭಾರ ಅದೇ ಆಯ್ತು!
ಜಾಜಿ ಕೋದು ಯಾರ ಕೊರಳಲಿರಿಸಲೆಂದು
ಸೋಜಿಗದಲಿ ನೆನೆದು ನೆನೆದು-ಸೊರಗಿದೆ ನಾ!

ಬಾವಿ ನೀರ ಸೇದುವಾಗ ಎಸರ ಬೇಯ್ಸಿ ತೆಗೆಯುವಾಗ
ಕವಿದ ಮಂಕ ಕಣ್ಣಿನಿಂದ ಒರಸುವಾಗಽ
ಜೀವಿಗಳ ಈ ಹುಸಿಯ ಬಾಳ ನೆನೆವೆ ನಾಽನೊ!

ನಗುತಲಿರು ನೀ, ನಗುವಿನಲ್ಲಿ ಬಾಳ ಸತ್ಯ ಮೂಡಿ ಬರಲಿ-
ಒಗುವ ಸತ್ಯ ನಲುಮೆಯೆಲ್ಲ-ಒಲುಮೆಯಲ್ಲಿ,
ಸೊಗವನೀಕ್ಷಿಸುತಲೆ ಬರಲಿ-ಆಹಾ ಕಾಽಯೋ!

ಸೂರ್ಯ ಕಾಂತಿ ಬೀಳ್ವ ಮುನ್ನ, ಚಂದ್ರ ಬೆಳಕು ತೋರ್ವ ಮುನ್ನ,
ಕಾರ್ಯಲೋಕ ಶಾಂತಿ ತಲ್ಪ ಸೇರ್ವ ಮುಽನ್ನ,
ಭಾರ್ಯೆ ದುಃಖವಳಿಸೆ, ಪ್ರಿಯಾ-ಬಂದು ಸೇಽರೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೧
Next post ಈ ಶಿಕ್ಷೆ ಯಾರಿಗೆಂದು?

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…