Home / ಕವನ / ಕವಿತೆ / ಸುಮ್ಮನಿದ್ದದ್ದು ಸಾಕು

ಸುಮ್ಮನಿದ್ದದ್ದು ಸಾಕು

ಗೊತ್ತಿರಲೇ ಇಲ್ಲ
ಫಲವತ್ತಾದ
ಕಪ್ಪು ನೆಲವೆಂದು
ನೀನು ಬಂದು ಬೇರೂರಿ
ಆಕಾಶದೆತ್ತರ
ಬೆಳೆದು ನಿಲ್ಲುವವರೆಗೂ

ಯಾರು ತಂದು ಬಿಸುಟರು
ನಿನ್ನ
ನನ್ನ ಎದೆಯಾಳದಲಿ?

ಹುಲ್ಲಿನ ಜೊತೆ ಹುಲ್ಲಿನಂತೆ
ಬೆಳೆದು
ಹುಲ್ಲಾಗಿ ಒಣಗಿ ಹೋಗದೆ
ಮರವಾಗಿ
ಬೆಳೆದು ನಿಂತುಬಿಟ್ಟೆ

ನನ್ನೆದೆ
ಬರೀ ಹುಲ್ಲು ಬೆಳೆಯುವ
ಬಂಜರು
ಎಂದವರ ಸುಳ್ಳಾಗಿಸಿದ್ದು
ಒಂದು ಸೋಜಿಗ

ನೋವು ತಿಳಿಯಲಿಲ್ಲ
ಬಿರುಕು
ಹುಡುಕಿ ಬೇರು ಬಿಟ್ಟು
ರಸ ಹೀರುವಾಗ
ಭಾರ
ಗೊತ್ತಾಗಲಿಲ್ಲ
ಹಾಲುಗೆನ್ನೆಯಂತ ಚಿಗುರು ತೊಟ್ಟಾಗ
ಕಂದ
ನಗುವಿನಂತ ಹೂವು
ಮುಡಿದಾಗ

ನೀನೊಂದು ಬರೀ
ನೆನಪು
ಹೊತ್ತ ಹೆಮ್ಮರವೆಂದು ತಿಳಿದೂ
ಕೊಡವಿ
ಕೆಡವಿ ಬೀಳಿಸುವ ತಾಕತ್ತು
ಇಲ್ಲದೇ ಹೋಗಿದ್ದು
ನನ್ನ ಬದುಕಿನ ದುರಂತ

ನಿನ್ನ ಹೂವು ಹಣ್ಣು
ನೆರಳು
ಮತ್ತಾರದೋ ಹೊಟ್ಟೆ ತುಂಬಿಸುವಾಗ
ಹಸಿದ ಬಸಿರು
ನಿನ್ನದೊಂದು ಬೀಜಕ್ಕಾಗಿ ಕಾತರಿಸುತ್ತದೆ
ನಾಚಿಕೆಯಿಲ್ಲದೆ

ಎಷ್ಟೊಂದು ಬಿಸಿಲು ಬಿರುಗಾಳಿ
ಗುಡುಗು ಸಿಡಿಲು
ಬೆಂಕಿ ಮಳೆ
ತಡೆದು ನಿಂತೆ
ಬೇರು ಸಹಿತ
ಕೊಳೆತು
ಬಿದ್ದು ಹೋಗುವವರೆಗೆ
ನೆನಪ ನೆರಳಿನ ಭಾರ
ಹೊರದೆ ಬೇರೆ ವಿಧಿಯಿಲ್ಲ

ಹೆಣ್ಣಾಗಿ ಹುಟ್ಟಿ
‘ಭೂಮಿ’
ಎಂದು ಕರೆಸಿಕೊಳ್ಳುವುದು
ಸಾಕು
ಸಿಡಿಯಬೇಕು

ಇನ್ನಾದರೂ ಜ್ವಾಲಾಮುಖಿಯಾಗಿ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...