Home / ಕವನ / ಕವಿತೆ / ಸುಮ್ಮನಿದ್ದದ್ದು ಸಾಕು

ಸುಮ್ಮನಿದ್ದದ್ದು ಸಾಕು

ಗೊತ್ತಿರಲೇ ಇಲ್ಲ
ಫಲವತ್ತಾದ
ಕಪ್ಪು ನೆಲವೆಂದು
ನೀನು ಬಂದು ಬೇರೂರಿ
ಆಕಾಶದೆತ್ತರ
ಬೆಳೆದು ನಿಲ್ಲುವವರೆಗೂ

ಯಾರು ತಂದು ಬಿಸುಟರು
ನಿನ್ನ
ನನ್ನ ಎದೆಯಾಳದಲಿ?

ಹುಲ್ಲಿನ ಜೊತೆ ಹುಲ್ಲಿನಂತೆ
ಬೆಳೆದು
ಹುಲ್ಲಾಗಿ ಒಣಗಿ ಹೋಗದೆ
ಮರವಾಗಿ
ಬೆಳೆದು ನಿಂತುಬಿಟ್ಟೆ

ನನ್ನೆದೆ
ಬರೀ ಹುಲ್ಲು ಬೆಳೆಯುವ
ಬಂಜರು
ಎಂದವರ ಸುಳ್ಳಾಗಿಸಿದ್ದು
ಒಂದು ಸೋಜಿಗ

ನೋವು ತಿಳಿಯಲಿಲ್ಲ
ಬಿರುಕು
ಹುಡುಕಿ ಬೇರು ಬಿಟ್ಟು
ರಸ ಹೀರುವಾಗ
ಭಾರ
ಗೊತ್ತಾಗಲಿಲ್ಲ
ಹಾಲುಗೆನ್ನೆಯಂತ ಚಿಗುರು ತೊಟ್ಟಾಗ
ಕಂದ
ನಗುವಿನಂತ ಹೂವು
ಮುಡಿದಾಗ

ನೀನೊಂದು ಬರೀ
ನೆನಪು
ಹೊತ್ತ ಹೆಮ್ಮರವೆಂದು ತಿಳಿದೂ
ಕೊಡವಿ
ಕೆಡವಿ ಬೀಳಿಸುವ ತಾಕತ್ತು
ಇಲ್ಲದೇ ಹೋಗಿದ್ದು
ನನ್ನ ಬದುಕಿನ ದುರಂತ

ನಿನ್ನ ಹೂವು ಹಣ್ಣು
ನೆರಳು
ಮತ್ತಾರದೋ ಹೊಟ್ಟೆ ತುಂಬಿಸುವಾಗ
ಹಸಿದ ಬಸಿರು
ನಿನ್ನದೊಂದು ಬೀಜಕ್ಕಾಗಿ ಕಾತರಿಸುತ್ತದೆ
ನಾಚಿಕೆಯಿಲ್ಲದೆ

ಎಷ್ಟೊಂದು ಬಿಸಿಲು ಬಿರುಗಾಳಿ
ಗುಡುಗು ಸಿಡಿಲು
ಬೆಂಕಿ ಮಳೆ
ತಡೆದು ನಿಂತೆ
ಬೇರು ಸಹಿತ
ಕೊಳೆತು
ಬಿದ್ದು ಹೋಗುವವರೆಗೆ
ನೆನಪ ನೆರಳಿನ ಭಾರ
ಹೊರದೆ ಬೇರೆ ವಿಧಿಯಿಲ್ಲ

ಹೆಣ್ಣಾಗಿ ಹುಟ್ಟಿ
‘ಭೂಮಿ’
ಎಂದು ಕರೆಸಿಕೊಳ್ಳುವುದು
ಸಾಕು
ಸಿಡಿಯಬೇಕು

ಇನ್ನಾದರೂ ಜ್ವಾಲಾಮುಖಿಯಾಗಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...