Home / ಲೇಖನ / ಇತರೆ / ಗುರುಗಳು ಇಲ್ಲಿದ್ದಾರೆ

ಗುರುಗಳು ಇಲ್ಲಿದ್ದಾರೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ಶಾಲೆಯಲ್ಲಿ ಪಾಠ ಕಲಿಸುವವರನ್ನು ತಾವು ಶಿಕ್ಷಕರೆನ್ನುತ್ತೇವೆ. ಹಾಗೇ ಬದುಕಿನ ಪಾಠಗಳನ್ನು ಕಲಿಸುವವರು ಗುರುಗಳಾಗುತ್ತಾರೆ. ಹೀಗಾಗಿಯೇ ಶಿಕ್ಷಕರೆಲ್ಲರೂ ಗುರುಗಳಾಗಲು ಸಾಧ್ಯವಿಲ್ಲ. ಶಿಕ್ಷಕ, ಬುದ್ಧಿಗೆ ಕಸರತ್ತು ನೀಡುವ ಜ್ಞಾನವನ್ನು ತುಂಬುವ ವಿದ್ಯೆಯನ್ನು ಹೇಳಿಕೊಡುತ್ತಾನೆ. ಆದರೆ ಗುರು ಮನಸ್ಸನ್ನು ಅರಳಿಸುವ, ಆತ್ಮೋನ್ನತಿಯೆಡೆಗೆ ಕರೆದೊಯ್ಯುವ ವಿವೇಕವನ್ನು ಎಚ್ಚರಿಸುತ್ತಾನೆ. ಹೀಗಾಗಿಯೇ ಶಿಕ್ಷಕ ಹೇಳಿಕೊಟ್ಟ ಭೌತಶಾಸ್ತ್ರ, ಗಣಿತ, ಸಮಾಜಶಾಸ್ತ್ರ ನಮಗೆ ಮರೆತು ಹೋದರೂ ಗುರುಗಳು ಹೇಳಿಕೊಟ್ಟ ವಿವೇಕದ ಪಾಠ ಮರೆಯುವುದಿಲ್ಲ.

ಸಖಿ, ನೀನು ಯೋಚಿಸುತ್ತಿರಬಹುದು, ಬದುಕಿನ ಪಾಠ ಕಲಿಸುವ ಇಂತಹ ಗುರುಗಳು ಯಾರು ಎಂದು ನಿಜ, ಅಂತಹ ಆದರ್ಶ ಗುಣಗಳು ಎಲ್ಲ ವ್ಯಕ್ತಿಗಳಲ್ಲೂ ಇದೆ. ಆದರೆ ಅದನ್ನು ಕಾಣುವ ಕಣ್ಣು ನಮಗಿರಬೇಕು. ಆಗ…. ತನ್ನ ಕೆಲಸಕ್ಕೆ ಒಂದು ದಿನವೂ ಚಕ್ಕರ್ ಹೊಡೆಯದೇ ಸಮಯಕ್ಕೆ ಸರಿಯಾಗಿ ಬಂದು ಕಾಲೇಜಿನ ಬಾಗಿಲು ತೆರೆಯುವ ಕಾಲೇಜಿನ ಜವಾನ ಗಂಗಯ್ಯನ ಕರ್ತವ್ಯ ಪ್ರಜ್ಞೆ ಸಮಯ ಪರಿಪಾಲನೆಯಲ್ಲೂ ಗುರುವನ್ನು ಕಾಣಲು ಸಾಧ್ಯ.

ಸಾಲವಾಗಿ ತೆಗೆದುಕೊಂಡು ಹೋಗಿದ್ದ ಹತ್ತು ರೂಪಾಯಿಯನ್ನು ಹೇಳಿದ ದಿನ ಸರಿಯಾಗಿ ಹಿಂತಿರುಗಿಸುವ ಜಾಡಮಾಲಿಯ ಪ್ರಾಮಾಣಿಕತೆಯಲ್ಲೂ ಗುರುವನ್ನು ಕಾಣಲು ಸಾಧ್ಯ. ತನ್ನ ಶೋಷಣೆಯ ವಿರುದ್ಧ ಸದಾ ಹೋರಾಡುವ ಕೆಲಸದಾಳು ಮೇರಿಯಮ್ಮನ ಅಂತ್ಯದಲ್ಲೂ ಗುರುವನ್ನು ಕಾಣಲು ಸಾಧ್ಯ. ನೀನು ಮಾತ್ರ ಸುಳ್ಳು ಹೇಳಬಹುದು. ನಾನು ಮಾತ್ರ ಹೇಳಬಾರದು ಎನ್ನುತ್ತೀಯಲ್ಲಾ ? ಎಂದು ಮುಗ್ಧವಾಗಿ ಪ್ರಶ್ನಿಸುವ ಮಗುವಿನ ಸತ್ಯದ ಮಾತಿನಲ್ಲೂ ಗುರುವನ್ನು ಕಾಣಲು ಸಾಧ್ಯ. ನಾವು ಗಡಿಬಿಡಿಯಲ್ಲಿ ಹೆಚ್ಚಾಗಿ ಕೊಟ್ಟಿದ್ದ ಹಣವನ್ನು ಹಿಂತಿರುಗಿಸುವ ತರಕಾರಿ ಮಾರುವವನ ಪ್ರಾಮಾಣಿಕತೆಯಲ್ಲೂ ಗುರುವನ್ನು ಕಾಣಲು ಸಾಧ್ಯ.

ಈ ಕಾಲದಲ್ಲಿ ನಮಗೆ ಯಾವ ಆದರ್ಶ ವ್ಯಕ್ತಿಯೂ ಕಾಣಸಿಗುವುದಿಲ್ಲ ಎಂದು ಗೊಣಗುತ್ತಿರುತ್ತೇವೆ. ಆದರೆ ತಮ್ಮ ಸಣ್ಣ ಸಣ್ಣ ಕೆಲಸದಲ್ಲೂ ಆದರ್ಶ ಗುಣಗಳನ್ನು ಹೊಂದಿರುವ ನಮಗೆ ನಿತ್ಯ ಪಾಠ ಕಲಿಸುವ ಗುರುಗಳು ನೂರಾರು ಜನರು ಕಾಣಸಿಗುತ್ತಾರೆ. ಅವರನ್ನು ಗುರುಗಳೆಂದು ನಾವು ಪೂಜಿಸಬೇಕಿಲ್ಲ. ಆದರೆ ಅವರಿಂದ ಬದುಕಿನ ಪಾಠಗಳನ್ನೂ, ನೈತಿಕ ಮೌಲ್ಯಗಳನ್ನೂ, ವಿವೇಕವನ್ನೂ, ವೈಚಾರಿಕ ಪ್ರಜ್ಞೆಯನ್ನು ಕಲಿತು, ಬೆಳೆಸಿಕೊಂಡು, ರೂಢಿಸಿಕೊಂಡರೆ ಅದಕ್ಕಿಂತ ಸಾರ್ಥಕತೆ ಬೇರೇನಿದೆ ?

ಸಖಿ, ಸಣ್ಣ ವ್ಯಕ್ತಿಗಳಲ್ಲೂ, ಸಣ್ಣ ಸಂಗತಿಗಳಲ್ಲೂ, ಸಣ್ಣ ಘಟನೆಗಳಲ್ಲೂ ನಾವು ಸದಾ ಗುರುಗಳನ್ನು ಕಾಣಬಹುದು ಪಾಠಗಳನ್ನು ಕಲಿಯಬಹುದು. ಇಂತಹ ಗುರುಗಳನ್ನು ಕಾಣಲು ಮನಸ್ಸನ್ನು ಇಂದಿನಿಂದಲೇ ತೆರೆದಿಡೋಣ ಆಲ್ಲವೇ ? ನಿನ್ನ ಬದುಕಿನಲ್ಲೂ ಇಂತಹ ಗುರುಗಳು ಅನೇಕರಿರಬಹುದಲ್ಲವೇ ? ನೆನಪಾದರೆ ಮರೆಯದೇ ತಿಳಿಸು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...