Home / ಕವನ / ಕವಿತೆ / ಕಂಡೆನೊ ನಾ!

ಕಂಡೆನೊ ನಾ!

ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!!

ಈ ಲೋಕ ಈ ರಾಜ್ಯ ಈ ಊರು ಈ ಮನೆ
ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ,
ಬಲ್ಲಿದ ಬಡವನ ಶತಕೋಟಿ ಸಂಸಾರ-  ||ಕಂ||

ಸಾಗರ-ಭೂಮಿಯ ನಡೆ ಕಂಡು ಮೊರೆವುದೊ,
ಯೋಗ ತಾರಕೆಗಳು ಮಿಣುಮಿಣುಕಿ ನಗುವುದೊ;
ಆಗದೀ ಜನಭಾರ ಕಲ್ಭೂಮಿ ಆಳುವುದೊ-  ||ಕಂ||

ತತ್ವಗಳೊಂದೆಡೆಽ ಉದ್ಧಾರ ಕಾಯ್ವುವು,
ನೀತಿಗಳ್ ಬಿರುಗಾಳಿ ಅಲೆಯೊಳು ಸಾಗ್ವುವು;
ಮಾತು ಮಾತಿನ ಜೀವ, ತೋರಲಿದರೆ ಜೀವ-  ||ಕಂ||

ಅವಸರದ ಆಲಾಪ, ದಣೀದ ದೇಹಿಯ ತಾಪ,
ಭುವನತ್ರಯದ ಪಾಪ, ಸಮ್ಮಿಳಿತ ಮಾಕೂಪ,
ಭವ ಸರಸಿಜನದು ಸರಸತಿಯರ ಶಾಪ-  ||ಕಂ||

ಮನುಜನ ಮನಶ್ಶಕ್ತಿ ಮರುಳಾಗಿ ಕಲ್ಲಂತೆ,
ತನುಮನವೆಲ್ಲವು ಸ್ವಾರ್ಥಕ್ಕೆ ಮರೆಹೋಗಿ
ಜನಗಣವು ಪಶುಗಣವಾದ ವೈಚಿತ್ರ್‍ಯವೊ-  ||ಕಂ||

ರಂಗುರಂಗಿನ ತಳಕು, ಬಣ್ಣ ಬಣ್ಣದ ಬೆಳಕು;
ಶೃಂಗಾರ ಸಂಪತ್ತು ನಗುಸರಸ ಸವಿಮಾತು;
ಭೃಂಗಕುಂತಲ ‘ಷೋಕು’, ಕೃತಕ ಜೀವದ ಮಂಕು-  ||ಕಂ||

ಜನ ಜನಿತ ಜನಮೋಹ, ಜೀತ ಜೀತದ ಜೀವ,
ಗಣನೀಯ ಗಂಭೀರ, ಚಂಚಲ ವ್ಯವಹಾರ,
ದಣಿದ ಬಾಳಿನ ಸಾರ ಸಾಕು ಸಾಕು ಸಾಕೀ ಹಾರ!  ||ಕಂ||

ಒಂದಿಽನ ನಾನೊಂದು ಪೂಗಿಡವ ನಟ್ಟೆನೊ,
ಮುಂದಾರು ದಿನ ಕಳೆದು ನಾನೋಡಿ ಅತ್ತೆನೊ;
ಅಂದಿಽತು ನನಗಽದು ‘ಚಿಗುರೆಽಲೆ ಕೊಡೆ’ನೆಂದು-  ||ಕಂ||

ಹಸುರಾಂತ ವನಶೋಭೆ ನೀಲಾಕಾಶದ ಪ್ರಭೆ,
ಹಸುಗೂಸು ಹುಸಿ ಸೊಬಗು ಪಂಚಭೂತದ ಬೆಡಗು,
ನಸುನಗುತ ಒಲಿದಽರು ವಿರಸ ಪ್ರಕೃತಿಯದೊ-  ||ಕಂ||

ಜನಕೋಟಿ ಈ ಜಗದಿ ಸಂಸಾರವೆಂದೆಂದು
ಮುನಿಜನವು ಕವಿಗಣವು ಹಾಡಿ ಪಾಡಿದರಂದು,
ಋಣಮುಕ್ತ ಜೀವಽದ ಪಾಡನ್ನು ಹಾಡುತ್ತ;  ||ಕಂ||

ಲೋಕವು ದಿನಕೊಂದು ರೂಪವ ಪಡೆವುದೊ,
ಸಾಕಿಽದ ಕೋಳಿಯ ಬೆಳೆಸಂತೆ ಬದಲಾಗೆ;
ಈ ಕರ್ಮ ಜಾಲಕ್ಕೆ ಪ್ರಾಣಗಳರ್ಪಿಸಿ-  ||ಕಂ||

ಸಲ್ಲಲಿತ ಸುಖಶಾಂತಿ-ರಣರಂಗ ಭಯಕ್ರಾಂತಿ;
ಮಲ್ಲಳಿಯ ಇನಿವಾಡು-ಸಂಸಾರ ಒಳಪಾಡು,
ಬಲ್ಲವರ ವಿದ್ವತ್ತು-ಲೋಕನಾಶಕೆ ಹೇತು!  ||ಕಂ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...