Home / ಕವನ / ಕವಿತೆ / ಹೊಸಬರು

ಹೊಸಬರು

ಈ ಕೊಳ ಯಾಕೆ ಕೊಳಚೆಯಾಗಿದೆ?  ಎಂಜಲನ್ನ
ಯಾಕೆ ಬೀದಿಗೆಸೆಯುತ್ತೀರಿ?  ಇದೇನು ದೇವಸ್ಥಾನದ
ಮುಂದೆ ಮೂಗಿಗೆ ಹಿಡಿಯುವ ಘಾಟು?  ಅಚೀಚೆ
ಉಗಿಯುತ್ತ ಹೋಗುವ ಆ ಅವರು ಯಾರು?  ಇದು
ಬಸ್ಸು ನಿಲ್ದಾಣವೆ ಅಥವ… ಎಂಬಿತ್ಯಾದಿಯಾಗಿ ನೀವು
ಕೇಳಲಿ, ಕೇಳದೆ ಇರಲಿ, ನಿಮ್ಮ ಮುಖಭಾವದಿಂದಲೆ
ಗೊತ್ತಾಗುವುದು ನೀವು ಈ ಸ್ಥಳಕ್ಕೆ ಹೊಸಬರು ಎಂದು

ಹೊಸಬರಾದರೆ ನೀವು ಯಾರಿಂದಲೂ ತಪ್ಪಿಸಿಕೊಳ್ಳಲಾರಿರಿ
ಒಳಬೀದಿಯಲ್ಲಿ ನಡೆದಿರಿ;  ಹಳೆ ಹಂಚಿನ ಅಂಗಡಿ
ಗೂಡಿನೊಳಗೆ ಕುಳಿತಿರಿ;  ಕ್ಷೌರಿಕನಲ್ಲಿ ಕಾಯುತ್ತಿರಿ:
ಎಲ್ಲರೂ ನಿಮ್ಮನ್ನು ಗಮನಿಸುತ್ತಾರೆ.  ನಿಮ್ಮ ಅಂಗಿಯ
ಬಣ್ಣವನ್ನೂ, ತಲೆಗೂದಲಿನ ಉದ್ದವನ್ನೂ ಕಣ್ಣಿನಲ್ಲೆ
ಹಿಡಿದು ಬಿಡುತ್ತಾರೆ.  ಯಾರೋ ಹೇಳಿದರೆಂದು ನೀವು
ಸುಮ್ಮನೇ ಈ ಕಡೆ ಬಂದಿರಬಹುದು.  ಸುದ್ದಿಯಲ್ಲಿ
ಬೀಳುವುದು ನಿಮಗೆ ಇಷ್ಟವಿಲ್ಲದಿರಬಹುದು.  ಆದರೂ
ಸುದ್ದಿಯಿಂದ ತಪ್ಪಿಸಿಕೊಳ್ಳಲಾರಿರಿ ನೀವು.  ಕಾರಣ
ನೀವು ಪ್ರೀತಿಸಿ, ಮದುವೆಯಾಗಲಾರದ ಹುಡುಗಿ
ಇಲ್ಲೇ ಇದ್ದಾಳೆ.   ಆ ಮೇಲೆ ನೀವೆಂದೂ
ಹೊಸಬರಾಗಿ ಉಳಿಯುವುದಿಲ್ಲ ಇವರ ಮಧ್ಯೆ.

ಹೇಗೆ ಉಳಿಯುವುದು ಸಾಧ್ಯ? ಈ ಊರ
ಅನ್ನ ತಿಳಿ ಸಾರು, ಕಬ್ಬಿನ ಹಾಲು, ಅಂಗಡಿ ವ್ಯವಹಾರ
ಸೋಡ ಬೀಡ, ಜಗಳ, ಪ್ರೇಮ ಎಲ್ಲರಿಗೂ
ಒಂದೇ ಗುರುತು ಒತ್ತಿಬಿಡುತ್ತವೆ.  ಕ್ರಮೇಣ
ನೀವು ಇಲ್ಲಿನ ಸಭೆಗಳಲ್ಲಿ ಮಾತಾಡುತ್ತಿರುವುದನ್ನು ಕಂಡು
ನಿಮಗೇ ಆಶ್ಚರ್ಯವಾಗಬಹುದು.  ಈ ಆಶ್ಚರ್ಯವೂ
ಹೋಗುವುದು.  ಇನ್ನೆಂದೂ ನೀವು ಕಿರಿಕಿರಿಯ ಪ್ರಶ್ನೆಗಳನ್ನು
ಕೇಳುವುದಿಲ್ಲ.  ಅದಲ್ಲದೆ, ಹೊಸಬರಾಗಿಯೇ
ಉಳಿಯಬೇಕೆಂದು ಮಾಡಿದ್ದರೆ ನೀವು-
ನಿಮ್ಮ ಮುಂದಿನ ಬಸ್ಸು ಇನ್ನರ್ಧ ಗಂಟೆಯಲ್ಲಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...