ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ
ಎಂಥ ಹಬ್ಬವೆ ಹೇಳು ಸಖಿ?
ಇದೆಂಥ ಹಬ್ಬವೇ ಹೇಳು ಸಖಿ.
ಮನ್ಮಥದೇವನ ಹೋಳಿಯುತ್ಸವ
ಹಾಳುಸುರಿಯುತಿದೆ ಹೀಗೇಕೆ?
ಓಕುಳಿಯಾಟಕೆ ಕಳೆಯೇ ಇಲ್ಲ
ಬಿಕೋ ಎನ್ನುತಿದ ಹಸೆ ಏಕೆ?
ಬೇಯುತ್ತಿದೆ ಎದೆ ಒಂದೇ ಸಮನೆ
ಸುರಿದಿದೆ ಕಂಬನಿ ಕೆನ್ನೆಯಲಿ;
ಹರಿ ಹೊರಗಿರಲು ಬೇಕೇ ದೀಪ
ಬೆಳಕಾರಿರಲು ಚಿತ್ತದಲಿ?
ಎಂದು ಬರುವನೋ ಗೋಪಿನಂದನ
ಎಂದು ಕರೆವನೋ ಹತ್ತಿರಕೆ?
ಎಂದು ಏರುವೆನೋ ಅವನನು ಕೂಡಿ
ಆನಂದದ ಮುಗಿಲೆತ್ತರಕೆ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.