Home / ಕವನ / ಕವಿತೆ / ಶವ ಕ್ಷೇತ್ರಗಳು

ಶವ ಕ್ಷೇತ್ರಗಳು

ಜನರ ಲೌಕಿಕಾಶಯಗಳ ತುಳಿದ
ಕಲ್ಲು ಕಲ್ಲುಗಳ ತಳಪಾಯ
ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು
ಶೋಷಣೆಯ ವೈಭವೀಕರಣದ ನವರಂಗಗಳು
ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ
ಮತಾಧಿಕ್ಯತೆಯ ಬೆರಗಿನ ಗೋಪುರ
ಅಜ್ಞಾನಕ್ಕಿಟ್ಟ ಕಳಸುಗಳು
ಮೆರೆದಿವೆ ಭವ್ಯ ಭಾರತದ ಭೂತದ ಹಿರಿಮೆಗಳು
ಕೆಲವರ ಕೀರ್ತಿಯ ಮೆರೆಸಲು
ಅಸಮಾನತೆಯ ಪರಂಪರೆಯ ಆಚಂದ್ರಾರ್ಕವುಳಿಸಲು
ಕೊಳ್ಳೆ ಲೂಟಿಗಳಿಂದ ಜನರ ಸುಲಿಗೆಯಿಂದ
ದುಡಿವವರ ಬೆವರು ರಕ್ತಗಳಿಂದ
ಕಟ್ಟಿಸಿದ ಸುಂದರ ಸುಲಿಗೆಯ ಮಂದಿರಗಳು
ಬದುಕಿಗೆಂದೂ ಬೆಂಬಲವಾಗದ ಕಲ್ಲು ಚಪ್ಪಡಿ ಹಂದರಗಳು
ಇಲ್ಲಿ ಸಿಗಲು ಸಾಧ್ಯವೇ ಇಲ್ಲದ ಇಷ್ಟಾರ್ಥಗಳನ್ನು
ಅಲ್ಲಿ ಕಂಡುಕೊಂಡು ಮೋಕ್ಷ ಪಡೆಯಲು
ಸೊನ್ನೆಯೊಳಗೇ ಸುತ್ತುತ್ತಾ
ಸುತ್ತಿ ಬಂದು ಅಡ್ಡ ಬೀಳಲು
ಇಹದಿಂದ ಪಲಾಯನವನೇ ಜೀವನ ಸಿದ್ದಿಯೆಂದು ತಿಳಿದು
ಮತ್ಯ೯ವ ಜರೆದು ಕುಗ್ಗಿ ಕುಸಿದು
ನೆಲ ಹತ್ತಲು
ನೆಲ ಹತ್ತುವುದೇ ಪರಮಾನಂದವಾಗಲು
ಇಷ್ಟಿಷ್ಟೇ ಇಡೀ ದೇಶದ
ಸಾಮೂಹಿಕ ಹತ್ಯೆ ಸಾಗಿ ಬಂದಿದೆ ನೂರಾರರು ವರ್ಷ
ಆಳುವ ವರ್ಗದ ಕೃಪಾ ಛತ್ರದಡಿಯಲ್ಲಿ
ಕೊಳಕು ಮಂಡಲಗಳಂಥ ಈ ಕ್ಷೇತ್ರಗಳಲ್ಲಿ
ಭಕ್ತಿಯ ಹೆಸರಿನ ಭಯ ಮೌಢ್ಯದ ಬಂಡವಾಳದ ಮೇಲೆ
ನಡೆದು ಬಂದಿದೆ ಭರ್ಜರಿ ಲಾಭೋದ್ಯಮ
ಅಲ್ಲೇ ದೇವರಿದ್ದಾನೆ, ಅಲ್ಲೇ ಪುಣ್ಯ ದೊರೆಯುವುದು
ಎಂದು ನಂಬಿ ಬೋರಲು ಬಿದ್ದ ಮೂರ್ಖರ ಸಂತೆಗಳು
ಜನ ಮರುಳಿನ ಜಾತ್ರೆಗಳು
ಇವು ಶತಮಾನಗಳಿಂದಲೂ ದೇಶದ ದೇಹದ ಮೇಲೆ
ಗಟ್ಟಿಯಾಗಿ ನೆಲೆಯೂರಿರುವ ಕೀವು ಹುಣ್ಣುಗಳು
ಇವುಗಳೂಳಗೆ ಹರಿದಾಡುತಿವೆ ಕ್ಷುದ್ರ ಹುಳುಗಳು
ಮಂತಾಂಧತೆಯು ದದ್ದುಗಟ್ಟಿದ ಗಟ್ಟಿ ಗಣ್ಣುಗಳು

ಭಿಕ್ಷುಕರನ್ನು ಸಾಲು ಸಾಲು ಬೆಳೆಸುವ
ಪಿಳ್ಳೆ ಜುಟ್ಟುಗಳ ಬೊಜ್ಜುಗಳನ್ನುಬ್ಬಿಸುವ
ಸಾಂಕ್ರಮಿಕ ರೋಗಗಳ ಪುಕ್ಕಟ್ಟೆ ಮಾರುವ
ಜನರ ಜೇಬು ತಲೆಗಳ ನುಣ್ಣಗೆ ಬೋಳಿಸುವ
ಮಣ್ಣ ಮಕ್ಕಳ ದೂರವಿಟ್ಟು ಕಣ್ಣು ಕೆಕ್ಕರಿಸಿ
ಅಧರ್ಮಿಗಳೆಂದು ನೋಡುವ
ಇವು
ಪುಣ್ಯ ಕ್ಷೇತ್ರಗಳಲ್ಲ ಪಣ್ಯ ಕ್ಷೇತ್ರಗಳು
ಶಿವ ಕ್ಷೇತ್ರಗಳಲ್ಲ ಶವ ಕ್ಷೇತ್ರಗಳು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...