Home / ಕವನ / ಕವಿತೆ / ಅವಳು ಯಾರು?

ಅವಳು ಯಾರು?

ಹಸುರು ಸೀರೆಯನುಟ್ಟು ರಂಗು ಬಳೆಗಳ ತೊಟ್ಟು
ತನ್ನ ಗೆಳತಿಯರೊಡನೆ ನಡೆದವಳು ಯಾರು?
ಅರಳಿಯಾ ಮರದಡೀ ಹೂಬುಟ್ಟಿ ಕೆಳಗಿರಿಸಿ
ಚೆಂಡು ಹೂಗಳ ಕೋದು ಹಾಡಿದಳು-ಯಾರು?

ಹಣೆಗೆ ತಿಲಕವನಚ್ಚಿ ಮುಡಿಗೆ ಹೂಗಳ ಮುಚ್ಚಿ
ಮೆಲ್ಲಡಿಯನಿಡುತಿಡುತ ಪೋದವಳು ಯಾರು?
ಜಾರುತಿಹ ಸೆರಗನ್ನು ಎದೆಯಾರೆ ನಿಲ್ಲಿಸುತ
ತನ್ನನ್ನು ತಾನಾಗಿ ನೋಡುವಳು-ಯಾರು?

ಕಡೆಗಣ್ಣು ಉರುಳಿಸುತ ತನುಲತೆಯ ಕೊಂಕಿಸುತ
ನಸುನಾಚುಗೆಯ ತೋರಿ ನಡೆದವಳು ಯಾರು?
ಕೆರೆ ಏರಿ ಕಟ್ಟೆಯಲಿ ಕಾಲ್ತೊಳೆದು ಜಾರಲು
ಬೆರಗಾಗಿ ಆಚೀಚೆ ನೋಡಿದಳು-ಯಾರು?

ಮಣಿಸಾಲು ಕೆಂಪೋಲೆ ಜುಂಜುಮುಕಿ ಕಿವಿಯೋಲೆ
ಮುಂಗುರಿಯ ಮೂಗುತ್ತಿ ಹಾಕಿದಳು-ಯಾರು?
ಕಾವೇರಿ ಜಾತ್ರೆಯಲಿ ಜವ್ವನಿಗ ತಂಡದಲಿ
ತಾನೊಲಿವನಾರೆಂದು ಹುಡುಕಿದಳು-ಯಾರು?

ಫಣಿವೇಣಿ ಆಚೀಚೆ ಒಂಟಿಸರ ಕೊರಳಾಚೆ
ಕಾಲ್ಬಳೆ ಕಿರುಗೆಜ್ಜೆ ಧರಿಸಿದಳು ಯಾರು?
ಕೇರಿ ಹೆಂಗಳ ಸಾಲು ಸರಸವಾಡುತ ತಾನು
ಊರ ಜಾತ್ರೆಗೆ ಅಂದು ಪೋದವಳು ಯಾರು?

ದನಮೇವ ಬಯಲಿನಲಿ ತನ್ನ ತಾಳದ ಹಾಡ
ತೂಗುಯ್ಯಾಲೆ ಹಾಡಿ, ಹಾಡಿದಳು-ಯಾರು?
ಕೆಂಬಕ್ಕಿ ಶುಕ ಪಿಕ ಮಲ್ಲಳಿಯ ಹಾಡುಗಳ
ಕೇಳುತಲೆ ತಾನಾಗಿ ನಲಿದವಳು ಯಾರು?

ಕೊಡಪಾನ ನೀರೊಡನೆ ಘುಳುಗುಳು ಮಾತಾಡಿ
ಮೆಟ್ಟಲಲಿ ರಂಗೋಲಿ ಬಿಡಿಸಿದಳು-ಯಾರು?
ಹಸುರಾಂತ ವನಶೋಭೆ ತಾನುಟ್ಟ ಹಸುರುಡಿಗೆ
ಒಂದಾಗಲಿಲ್ಲೆಂದು ಅಂದವಳು ಯಾರು?

ಪೂರ್ಣಚಂದ್ರನ ಚೆಲುವು ಕಂಡು ತನ್ನಯ ರೂಪು
ಅಂತಾಗಲಿಲ್ಲೆಂದು ಗೊಣಗಿದಳು-ಯಾರು?
ತನ್ನ ಅಪ್ಪನ ಮಾಂವ ಎಂದು ತಾ ಕರೆವವನು
ಯಾರಿರುವನೋ ಎಂದು ನೆನೆಸಿದಳು ಯಾರು?
*****

ಪುಸ್ತಕ: ಸೂರ್ಯ ಕಾಂತಿ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...