ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ
ನಿನ್ನೆದುರು ಏನಿಲ್ಲ ಮಾನಾವಮಾನ!
ನಿಗಿ ನಿಗೀ ಉರಿಯುವ
ಕೆಂಡ ಈ ಮನಸು
ಘಮ ಘಮದ ಹುಡಿಧೂಪ
ನೀನಿತ್ತ ಕನಸು
ಬಿದ್ದಂತೆ ಹುಡಿ ಧೂಪ
ಉರಿ ಕಾರಿ ಬಣ್ಣ
ಏಳುವುವು ಗೀತೆಗಳು
ಪರಿಮಳಿಸಿ ನನ್ನ!
ಕಾದು ಎದೆ ಬಿರಿದಿರುವ
ಬೇಸಿಗೆಯ ಭೂಮಿ
ಕಾದಿರುವೆ ಸುರಿದೀತು ಕಾರ್ಮುಗಿಲ ಬಾನಿ
ಕುಡಿದೇನು ಇಡಿಧಾರೆ
ಬೇಡುವೆನು ಮತ್ತೆ
ಜನುಮಗಳೆ ಸರಿದರೂ
ಕಾಯುವೆನು ಗೊತ್ತೆ?
*****
ಪುಸ್ತಕ: ನಿನಗಾಗೇ ಈ ಹಾಡುಗಳು
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.