ಝೆನ್ ಹಾಯಿಕುಗಳು

ಬುದ್ಧ
ಬೇರಾಗು
ನನ್ನಲ್ಲಿ
ಸಿದ್ಧಿ
ತೇರಾಗು.

ಝೆನ್‌ಗೆ ಬೇಕೆ?
ತುತ್ತೂರಿ ಪೀಪಿ
ಶಂಖನಾದ, ಖಡ್ಗ?
ನಿಂತಿರುವ ನೋಡಿ
ಮುಗ್ಧ ಹುಡುಗ
ಓದಿ ಝೆನ್ ಅವನ
ಮೊಗದ ತುಂಬಾ!

ನನ್ನ ಹೃದಯ
ವೀಣೆಯ
ಝೆನ್ ತಂತಿಯ
ಝೆನ್ ಝೇಂಕಾರ
ಅದು ನನ್ನ ಸಾಕಾರ.

ಕವಿತೆ ಬರೆದರೆ
ಕವಿತೆ ಚಿಟ್ಟೆ
ಗೂಡ ಬಿಟ್ಟು ಹಾರೀತು
ಪ್ರೀತಿ ತೋರಿದರೆ
ಗೂಡ ಕಟ್ಟೀತು
ಎದೆ ಆಳದಲ್ಲಿ.

ಹಸುರೆಲೆಯ
ಹಸಿರು ವಾಗ್ದಾನದಲಿ
ಉನ್ಮತ್ತ ಇಬ್ಬನಿ
ಬಿಸಿಲು ಮಂಚದಲಿ
ಉಸಿರಾಡುತ್ತಿದೆ
ಅದೆಷ್ಟು ಕ್ಷಣ?

ಎರಡು ಇಬ್ಬನಿ
ಅಳುತ್ತಿವೆ, ಸತ್ತ
ಮೂರನೇಯ ಹನಿಗಾಗಿ,

ನನ್ನೊಳಗೆ
ನಾಧುಮುಕಿ
ನೆಲೆ ಹುಡುಕಿನಿಂತೆ.
ನನ್ನೊಳಗೆ
ನಾ ತೇಲಿ
ದಡ ಸೇರಿ ನಿಂತೆ.

ಇಬ್ಬನಿ ವಿರಮಿಸುತ್ತಿದೆ
ಕಿರಣದ ತೋಳಲ್ಲಿ
ತೋಟದ ಎಲೆಯ
ತುಟ್ಟ ತುದಿಯಲ್ಲಿ,
ಮನೆಗೆ ಸುಣ್ಣ ಬಣ್ಣ
ಮನಕೆ ಹಚ್ಚುವುದೇನು?
ಯಾವ ಬಣ್ಣ, ಯಾವ ಕಣ್ಣ?
ಕೊನೆಗೆ ಸೇರುವುದು
ಯಾವ ಊರು ಅಣ್ಣಾ!

ಉದಯ ವಿಹಾರದಲಿ
ಎರೆಹುಳು ಹುಡುಕುತಿದೆ
ಬಾನ ನಕ್ಷತ್ರ, ದಡದ ಶಂಖ ಚಕ್ರ
ಹಿಂದೆ ಹೆಜ್ಞೆ ಗುರುತನು ಬಿಟ್ಟು
ಮುಟ್ಟುತಿದೆ ಗುರಿಯ ಘಟ್ಟ.

ಹಸಿರು ಗದ್ದೆಗಳು
ಬಸಿರ ಮಾತಿಗೆ
ನಕ್ಷತ್ರದ ಮಿಣುಕು ಮಾತು.
ತೆನೆಯ ಸೊಗದ ನರ್ತನಕ್ಕೆ
ಗೀತ ಹಾಡುತಿದೆ
ಹಕ್ಕಿ ಬಾನಿಗಾತು.

ತೃಪ್ತಿ ಹಿಡಿಯಲ್ಲಿ
ಹೂವು ಮುಡಿಯಲ್ಲಿ
ದೀಪ್ತಿ, ಎಲ್ಲೆಡೆಯಲ್ಲಿ
ಹೃದಯ ಗುಡಿಯಲ್ಲಿ

ಜಗವೊಂದು
ಬರೆಯುವ ಹಲಗೆ
ಬರೆದಿಡು ಪ್ರೇಮ ಪತ್ರ.

ಬೋಳು ರೆಂಬೆಯ ಮೇಲೆ
ನಡುಗುವ ಹಕ್ಕಿ ಜೋಡಿಗೆ
ರೆಕ್ಕೆ ಕಂಬಳಿಯ ಮೋಡಿ
ಹಿಮವು ಬೀಳುತಿದೆ
ಹೃದಯ ಮುದುಡುತಿದೆ
ಶೋಕ ಗೀತೆ ಹಾಡಿ.

ಪೀಚ್, ಪ್ಲಮ್
ಮರಗಳೂ ನಿಂತಿವೆ
ಬೆಟ್ಟದ ತುದಿಯಲ್ಲಿ
ಬಿದ್ದು ಉರುಳುತಿವೆ
ಹಣ್ಣುಗಳು, ಮಣ್ಣಿನಲ್ಲಿ
ಬೆಟ್ಟ ಕೊಚ್ಚುತ್ತಿದೆ
ನನ್ನದೆಂಬ ಜಂಭ! ಅದೆಷ್ಟಡಂಭ!

ಧೈರ್ಯ ಸ್ಥೈರ್ಯದಿ
ಒಣಗಿದ ಮರನಿಂತಿದೆ
ಚಳಿಯ ಒಪ್ಪಿಕೊಂಡು
ಮತ್ತೆ ಚೈತ್ರ ಚಿಗುರು
ಹೂಗಳ, ಅಪ್ಪಿಕೊಂಡು
ಬಂದೇ ಬಂದಾನು ವಸಂತನೆಂದು.

ಅನುಭವದಲ್ಲಿ
ಭಾವ ಒಂದೇ ಏಕೆ?
ಪ್ರಭಾವ, ವಿಭಾವಗಳ ಸಾಲು
ಹುಡುಕಿದರೆ ಸಿಗದಿರುವುದೇ
ಝೆನ್ ಮಾಲು?

ಶೂನ್ಯಗಳ ಸನ್ನೆಯಲಿ
ಕಂಡುಕೋ
ನನ್ನಿಯ ಅರಿವು
ನಡೆಸುವುದು ಮುನ್ನ
ತಿಳಿಸುವುದು ವಿಶ್ವ ಅವಿಚ್ಛಿನ್ನ

ರೆಂಬೆಗಳು ತೂಗುತಿವೆ
ಎಲೆಗಳು, ಮರ್ಮರ ಹಾಡುತಿವೆ
ವೃಕ್ಷನಿಂತು ನಿದ್ರಿಸುತ್ತಿದೆ
ತೋಟದ ಕಟ್ಟೆಯಲ್ಲಿ
ಕುಳಿತು ನಾ ದೃಷ್ಟಿಸಿರುವೆ.

ಮೊಗ್ಗು ಹೂ ಕಾಯಿ
ಹಣ್ಣುಗಳಿರಲು
ಗಿಡವೆಂದು, ಒಂಟಿಯಿಲ್ಲ
ನಾ ನಿಂತಿರುವೆ ಒಂಟಿ
ಬೀದಿ ಕಂಭದಂತೆ.

ಎಲೆಗಳೂ ಪಟಪಟ
ಮಾತನಾಡುತಿವೆ
ನಿಂತು ವೃಕ್ಷ
ಕೇಳಿ ಕೇಳಿ
ತಲೆ ತೂಗುತಿದೆ.

ಕ್ಷಣ ಕ್ಷಣದ ಬಾಳಲ್ಲಿ
ಕಣ ಕಣದ ದೈವ
ಬೇಕೇ? ಒಣ ಒಣದ ತತ್ವ
ಝೆನ್‌ಲಿ ಒಂದಾಗೆ
ಹೊರ ಬಾರದೆ ಸತ್ವ?

ನನಗೆ ಇದೆ ಹೆಸರು
ನನ್ನೊಡನೆ ಹುಟ್ಟಿದ
ಮನಕೆ ಇದೆ ಯಾವ ಹೆಸರು?
ನನಗೆ ಇದೆ ಉಸಿರು
ಮನಕೆ ಇದೆ ಯಾವ ಬಸಿರು?

ಅನಂತದಿಂದ
ಸಿಡಿದಿರುವ, ನಾನೊಂದು
ಜೀವರಕ್ತ ಬಿಂದು
ಬಾಳು ಬೆಳೆಯೆ ಎತ್ತರಕ್ಕೆ
ಬದುಕೊಂದು ಸಿಂಧು.

ಆಗಸ ಭೂಮಿಯ ಒಂದಾಗಿಸಿ
ಝೆನ್ ನೂಲಿನಲಿ ಜಗವ ಹೆಣೆದೆ
ನಾನು, ನನ್ನ ಮನ
ಬಲುದೂರ ಸರಿದು
ಬೇರೆಯಾಗಿಯೆ ನಿಂತೆ.

ಉದುರಿದ ಎಲೆಯೊಂದ
ಎತ್ತಿ, ತುಟಿಗೊತ್ತಿಕೊಂಡೆ
ಗಿಡ ಕಣ್ಣಿಟ್ಟು ನೋಡಿ
ತಲೆ ತೂಗಿ ಹೂವರಿಳಿಸಿತು
ಗಿಡ ತುಂಬ.

ತತ್ತರಿಸುವ ಮನ
ತಥಾಗತನ ಎದುರಲ್ಲಿ
ಕರಗಿ ನೀರಾಗುತ್ತಿರುವ
ಹಿಮಗಡ್ಡೆಯ ಗುಡ್ಡೆ.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಯಿಕು-ಹಂದರ
Next post ಕೋಶಗ್ರಂಥ ವ್ಯಾಕರಣ ಪ್ರಸಂಗದಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…