Home / ಕವನ / ಹಾಯ್ಕು / ಝೆನ್ ಹಾಯಿಕುಗಳು

ಝೆನ್ ಹಾಯಿಕುಗಳು

ಬುದ್ಧ
ಬೇರಾಗು
ನನ್ನಲ್ಲಿ
ಸಿದ್ಧಿ
ತೇರಾಗು.

ಝೆನ್‌ಗೆ ಬೇಕೆ?
ತುತ್ತೂರಿ ಪೀಪಿ
ಶಂಖನಾದ, ಖಡ್ಗ?
ನಿಂತಿರುವ ನೋಡಿ
ಮುಗ್ಧ ಹುಡುಗ
ಓದಿ ಝೆನ್ ಅವನ
ಮೊಗದ ತುಂಬಾ!

ನನ್ನ ಹೃದಯ
ವೀಣೆಯ
ಝೆನ್ ತಂತಿಯ
ಝೆನ್ ಝೇಂಕಾರ
ಅದು ನನ್ನ ಸಾಕಾರ.

ಕವಿತೆ ಬರೆದರೆ
ಕವಿತೆ ಚಿಟ್ಟೆ
ಗೂಡ ಬಿಟ್ಟು ಹಾರೀತು
ಪ್ರೀತಿ ತೋರಿದರೆ
ಗೂಡ ಕಟ್ಟೀತು
ಎದೆ ಆಳದಲ್ಲಿ.

ಹಸುರೆಲೆಯ
ಹಸಿರು ವಾಗ್ದಾನದಲಿ
ಉನ್ಮತ್ತ ಇಬ್ಬನಿ
ಬಿಸಿಲು ಮಂಚದಲಿ
ಉಸಿರಾಡುತ್ತಿದೆ
ಅದೆಷ್ಟು ಕ್ಷಣ?

ಎರಡು ಇಬ್ಬನಿ
ಅಳುತ್ತಿವೆ, ಸತ್ತ
ಮೂರನೇಯ ಹನಿಗಾಗಿ,

ನನ್ನೊಳಗೆ
ನಾಧುಮುಕಿ
ನೆಲೆ ಹುಡುಕಿನಿಂತೆ.
ನನ್ನೊಳಗೆ
ನಾ ತೇಲಿ
ದಡ ಸೇರಿ ನಿಂತೆ.

ಇಬ್ಬನಿ ವಿರಮಿಸುತ್ತಿದೆ
ಕಿರಣದ ತೋಳಲ್ಲಿ
ತೋಟದ ಎಲೆಯ
ತುಟ್ಟ ತುದಿಯಲ್ಲಿ,
ಮನೆಗೆ ಸುಣ್ಣ ಬಣ್ಣ
ಮನಕೆ ಹಚ್ಚುವುದೇನು?
ಯಾವ ಬಣ್ಣ, ಯಾವ ಕಣ್ಣ?
ಕೊನೆಗೆ ಸೇರುವುದು
ಯಾವ ಊರು ಅಣ್ಣಾ!

ಉದಯ ವಿಹಾರದಲಿ
ಎರೆಹುಳು ಹುಡುಕುತಿದೆ
ಬಾನ ನಕ್ಷತ್ರ, ದಡದ ಶಂಖ ಚಕ್ರ
ಹಿಂದೆ ಹೆಜ್ಞೆ ಗುರುತನು ಬಿಟ್ಟು
ಮುಟ್ಟುತಿದೆ ಗುರಿಯ ಘಟ್ಟ.

ಹಸಿರು ಗದ್ದೆಗಳು
ಬಸಿರ ಮಾತಿಗೆ
ನಕ್ಷತ್ರದ ಮಿಣುಕು ಮಾತು.
ತೆನೆಯ ಸೊಗದ ನರ್ತನಕ್ಕೆ
ಗೀತ ಹಾಡುತಿದೆ
ಹಕ್ಕಿ ಬಾನಿಗಾತು.

ತೃಪ್ತಿ ಹಿಡಿಯಲ್ಲಿ
ಹೂವು ಮುಡಿಯಲ್ಲಿ
ದೀಪ್ತಿ, ಎಲ್ಲೆಡೆಯಲ್ಲಿ
ಹೃದಯ ಗುಡಿಯಲ್ಲಿ

ಜಗವೊಂದು
ಬರೆಯುವ ಹಲಗೆ
ಬರೆದಿಡು ಪ್ರೇಮ ಪತ್ರ.

ಬೋಳು ರೆಂಬೆಯ ಮೇಲೆ
ನಡುಗುವ ಹಕ್ಕಿ ಜೋಡಿಗೆ
ರೆಕ್ಕೆ ಕಂಬಳಿಯ ಮೋಡಿ
ಹಿಮವು ಬೀಳುತಿದೆ
ಹೃದಯ ಮುದುಡುತಿದೆ
ಶೋಕ ಗೀತೆ ಹಾಡಿ.

ಪೀಚ್, ಪ್ಲಮ್
ಮರಗಳೂ ನಿಂತಿವೆ
ಬೆಟ್ಟದ ತುದಿಯಲ್ಲಿ
ಬಿದ್ದು ಉರುಳುತಿವೆ
ಹಣ್ಣುಗಳು, ಮಣ್ಣಿನಲ್ಲಿ
ಬೆಟ್ಟ ಕೊಚ್ಚುತ್ತಿದೆ
ನನ್ನದೆಂಬ ಜಂಭ! ಅದೆಷ್ಟಡಂಭ!

ಧೈರ್ಯ ಸ್ಥೈರ್ಯದಿ
ಒಣಗಿದ ಮರನಿಂತಿದೆ
ಚಳಿಯ ಒಪ್ಪಿಕೊಂಡು
ಮತ್ತೆ ಚೈತ್ರ ಚಿಗುರು
ಹೂಗಳ, ಅಪ್ಪಿಕೊಂಡು
ಬಂದೇ ಬಂದಾನು ವಸಂತನೆಂದು.

ಅನುಭವದಲ್ಲಿ
ಭಾವ ಒಂದೇ ಏಕೆ?
ಪ್ರಭಾವ, ವಿಭಾವಗಳ ಸಾಲು
ಹುಡುಕಿದರೆ ಸಿಗದಿರುವುದೇ
ಝೆನ್ ಮಾಲು?

ಶೂನ್ಯಗಳ ಸನ್ನೆಯಲಿ
ಕಂಡುಕೋ
ನನ್ನಿಯ ಅರಿವು
ನಡೆಸುವುದು ಮುನ್ನ
ತಿಳಿಸುವುದು ವಿಶ್ವ ಅವಿಚ್ಛಿನ್ನ

ರೆಂಬೆಗಳು ತೂಗುತಿವೆ
ಎಲೆಗಳು, ಮರ್ಮರ ಹಾಡುತಿವೆ
ವೃಕ್ಷನಿಂತು ನಿದ್ರಿಸುತ್ತಿದೆ
ತೋಟದ ಕಟ್ಟೆಯಲ್ಲಿ
ಕುಳಿತು ನಾ ದೃಷ್ಟಿಸಿರುವೆ.

ಮೊಗ್ಗು ಹೂ ಕಾಯಿ
ಹಣ್ಣುಗಳಿರಲು
ಗಿಡವೆಂದು, ಒಂಟಿಯಿಲ್ಲ
ನಾ ನಿಂತಿರುವೆ ಒಂಟಿ
ಬೀದಿ ಕಂಭದಂತೆ.

ಎಲೆಗಳೂ ಪಟಪಟ
ಮಾತನಾಡುತಿವೆ
ನಿಂತು ವೃಕ್ಷ
ಕೇಳಿ ಕೇಳಿ
ತಲೆ ತೂಗುತಿದೆ.

ಕ್ಷಣ ಕ್ಷಣದ ಬಾಳಲ್ಲಿ
ಕಣ ಕಣದ ದೈವ
ಬೇಕೇ? ಒಣ ಒಣದ ತತ್ವ
ಝೆನ್‌ಲಿ ಒಂದಾಗೆ
ಹೊರ ಬಾರದೆ ಸತ್ವ?

ನನಗೆ ಇದೆ ಹೆಸರು
ನನ್ನೊಡನೆ ಹುಟ್ಟಿದ
ಮನಕೆ ಇದೆ ಯಾವ ಹೆಸರು?
ನನಗೆ ಇದೆ ಉಸಿರು
ಮನಕೆ ಇದೆ ಯಾವ ಬಸಿರು?

ಅನಂತದಿಂದ
ಸಿಡಿದಿರುವ, ನಾನೊಂದು
ಜೀವರಕ್ತ ಬಿಂದು
ಬಾಳು ಬೆಳೆಯೆ ಎತ್ತರಕ್ಕೆ
ಬದುಕೊಂದು ಸಿಂಧು.

ಆಗಸ ಭೂಮಿಯ ಒಂದಾಗಿಸಿ
ಝೆನ್ ನೂಲಿನಲಿ ಜಗವ ಹೆಣೆದೆ
ನಾನು, ನನ್ನ ಮನ
ಬಲುದೂರ ಸರಿದು
ಬೇರೆಯಾಗಿಯೆ ನಿಂತೆ.

ಉದುರಿದ ಎಲೆಯೊಂದ
ಎತ್ತಿ, ತುಟಿಗೊತ್ತಿಕೊಂಡೆ
ಗಿಡ ಕಣ್ಣಿಟ್ಟು ನೋಡಿ
ತಲೆ ತೂಗಿ ಹೂವರಿಳಿಸಿತು
ಗಿಡ ತುಂಬ.

ತತ್ತರಿಸುವ ಮನ
ತಥಾಗತನ ಎದುರಲ್ಲಿ
ಕರಗಿ ನೀರಾಗುತ್ತಿರುವ
ಹಿಮಗಡ್ಡೆಯ ಗುಡ್ಡೆ.

****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...