ಝೆನ್ ಹಾಯಿಕುಗಳು

ಬುದ್ಧ
ಬೇರಾಗು
ನನ್ನಲ್ಲಿ
ಸಿದ್ಧಿ
ತೇರಾಗು.

ಝೆನ್‌ಗೆ ಬೇಕೆ?
ತುತ್ತೂರಿ ಪೀಪಿ
ಶಂಖನಾದ, ಖಡ್ಗ?
ನಿಂತಿರುವ ನೋಡಿ
ಮುಗ್ಧ ಹುಡುಗ
ಓದಿ ಝೆನ್ ಅವನ
ಮೊಗದ ತುಂಬಾ!

ನನ್ನ ಹೃದಯ
ವೀಣೆಯ
ಝೆನ್ ತಂತಿಯ
ಝೆನ್ ಝೇಂಕಾರ
ಅದು ನನ್ನ ಸಾಕಾರ.

ಕವಿತೆ ಬರೆದರೆ
ಕವಿತೆ ಚಿಟ್ಟೆ
ಗೂಡ ಬಿಟ್ಟು ಹಾರೀತು
ಪ್ರೀತಿ ತೋರಿದರೆ
ಗೂಡ ಕಟ್ಟೀತು
ಎದೆ ಆಳದಲ್ಲಿ.

ಹಸುರೆಲೆಯ
ಹಸಿರು ವಾಗ್ದಾನದಲಿ
ಉನ್ಮತ್ತ ಇಬ್ಬನಿ
ಬಿಸಿಲು ಮಂಚದಲಿ
ಉಸಿರಾಡುತ್ತಿದೆ
ಅದೆಷ್ಟು ಕ್ಷಣ?

ಎರಡು ಇಬ್ಬನಿ
ಅಳುತ್ತಿವೆ, ಸತ್ತ
ಮೂರನೇಯ ಹನಿಗಾಗಿ,

ನನ್ನೊಳಗೆ
ನಾಧುಮುಕಿ
ನೆಲೆ ಹುಡುಕಿನಿಂತೆ.
ನನ್ನೊಳಗೆ
ನಾ ತೇಲಿ
ದಡ ಸೇರಿ ನಿಂತೆ.

ಇಬ್ಬನಿ ವಿರಮಿಸುತ್ತಿದೆ
ಕಿರಣದ ತೋಳಲ್ಲಿ
ತೋಟದ ಎಲೆಯ
ತುಟ್ಟ ತುದಿಯಲ್ಲಿ,
ಮನೆಗೆ ಸುಣ್ಣ ಬಣ್ಣ
ಮನಕೆ ಹಚ್ಚುವುದೇನು?
ಯಾವ ಬಣ್ಣ, ಯಾವ ಕಣ್ಣ?
ಕೊನೆಗೆ ಸೇರುವುದು
ಯಾವ ಊರು ಅಣ್ಣಾ!

ಉದಯ ವಿಹಾರದಲಿ
ಎರೆಹುಳು ಹುಡುಕುತಿದೆ
ಬಾನ ನಕ್ಷತ್ರ, ದಡದ ಶಂಖ ಚಕ್ರ
ಹಿಂದೆ ಹೆಜ್ಞೆ ಗುರುತನು ಬಿಟ್ಟು
ಮುಟ್ಟುತಿದೆ ಗುರಿಯ ಘಟ್ಟ.

ಹಸಿರು ಗದ್ದೆಗಳು
ಬಸಿರ ಮಾತಿಗೆ
ನಕ್ಷತ್ರದ ಮಿಣುಕು ಮಾತು.
ತೆನೆಯ ಸೊಗದ ನರ್ತನಕ್ಕೆ
ಗೀತ ಹಾಡುತಿದೆ
ಹಕ್ಕಿ ಬಾನಿಗಾತು.

ತೃಪ್ತಿ ಹಿಡಿಯಲ್ಲಿ
ಹೂವು ಮುಡಿಯಲ್ಲಿ
ದೀಪ್ತಿ, ಎಲ್ಲೆಡೆಯಲ್ಲಿ
ಹೃದಯ ಗುಡಿಯಲ್ಲಿ

ಜಗವೊಂದು
ಬರೆಯುವ ಹಲಗೆ
ಬರೆದಿಡು ಪ್ರೇಮ ಪತ್ರ.

ಬೋಳು ರೆಂಬೆಯ ಮೇಲೆ
ನಡುಗುವ ಹಕ್ಕಿ ಜೋಡಿಗೆ
ರೆಕ್ಕೆ ಕಂಬಳಿಯ ಮೋಡಿ
ಹಿಮವು ಬೀಳುತಿದೆ
ಹೃದಯ ಮುದುಡುತಿದೆ
ಶೋಕ ಗೀತೆ ಹಾಡಿ.

ಪೀಚ್, ಪ್ಲಮ್
ಮರಗಳೂ ನಿಂತಿವೆ
ಬೆಟ್ಟದ ತುದಿಯಲ್ಲಿ
ಬಿದ್ದು ಉರುಳುತಿವೆ
ಹಣ್ಣುಗಳು, ಮಣ್ಣಿನಲ್ಲಿ
ಬೆಟ್ಟ ಕೊಚ್ಚುತ್ತಿದೆ
ನನ್ನದೆಂಬ ಜಂಭ! ಅದೆಷ್ಟಡಂಭ!

ಧೈರ್ಯ ಸ್ಥೈರ್ಯದಿ
ಒಣಗಿದ ಮರನಿಂತಿದೆ
ಚಳಿಯ ಒಪ್ಪಿಕೊಂಡು
ಮತ್ತೆ ಚೈತ್ರ ಚಿಗುರು
ಹೂಗಳ, ಅಪ್ಪಿಕೊಂಡು
ಬಂದೇ ಬಂದಾನು ವಸಂತನೆಂದು.

ಅನುಭವದಲ್ಲಿ
ಭಾವ ಒಂದೇ ಏಕೆ?
ಪ್ರಭಾವ, ವಿಭಾವಗಳ ಸಾಲು
ಹುಡುಕಿದರೆ ಸಿಗದಿರುವುದೇ
ಝೆನ್ ಮಾಲು?

ಶೂನ್ಯಗಳ ಸನ್ನೆಯಲಿ
ಕಂಡುಕೋ
ನನ್ನಿಯ ಅರಿವು
ನಡೆಸುವುದು ಮುನ್ನ
ತಿಳಿಸುವುದು ವಿಶ್ವ ಅವಿಚ್ಛಿನ್ನ

ರೆಂಬೆಗಳು ತೂಗುತಿವೆ
ಎಲೆಗಳು, ಮರ್ಮರ ಹಾಡುತಿವೆ
ವೃಕ್ಷನಿಂತು ನಿದ್ರಿಸುತ್ತಿದೆ
ತೋಟದ ಕಟ್ಟೆಯಲ್ಲಿ
ಕುಳಿತು ನಾ ದೃಷ್ಟಿಸಿರುವೆ.

ಮೊಗ್ಗು ಹೂ ಕಾಯಿ
ಹಣ್ಣುಗಳಿರಲು
ಗಿಡವೆಂದು, ಒಂಟಿಯಿಲ್ಲ
ನಾ ನಿಂತಿರುವೆ ಒಂಟಿ
ಬೀದಿ ಕಂಭದಂತೆ.

ಎಲೆಗಳೂ ಪಟಪಟ
ಮಾತನಾಡುತಿವೆ
ನಿಂತು ವೃಕ್ಷ
ಕೇಳಿ ಕೇಳಿ
ತಲೆ ತೂಗುತಿದೆ.

ಕ್ಷಣ ಕ್ಷಣದ ಬಾಳಲ್ಲಿ
ಕಣ ಕಣದ ದೈವ
ಬೇಕೇ? ಒಣ ಒಣದ ತತ್ವ
ಝೆನ್‌ಲಿ ಒಂದಾಗೆ
ಹೊರ ಬಾರದೆ ಸತ್ವ?

ನನಗೆ ಇದೆ ಹೆಸರು
ನನ್ನೊಡನೆ ಹುಟ್ಟಿದ
ಮನಕೆ ಇದೆ ಯಾವ ಹೆಸರು?
ನನಗೆ ಇದೆ ಉಸಿರು
ಮನಕೆ ಇದೆ ಯಾವ ಬಸಿರು?

ಅನಂತದಿಂದ
ಸಿಡಿದಿರುವ, ನಾನೊಂದು
ಜೀವರಕ್ತ ಬಿಂದು
ಬಾಳು ಬೆಳೆಯೆ ಎತ್ತರಕ್ಕೆ
ಬದುಕೊಂದು ಸಿಂಧು.

ಆಗಸ ಭೂಮಿಯ ಒಂದಾಗಿಸಿ
ಝೆನ್ ನೂಲಿನಲಿ ಜಗವ ಹೆಣೆದೆ
ನಾನು, ನನ್ನ ಮನ
ಬಲುದೂರ ಸರಿದು
ಬೇರೆಯಾಗಿಯೆ ನಿಂತೆ.

ಉದುರಿದ ಎಲೆಯೊಂದ
ಎತ್ತಿ, ತುಟಿಗೊತ್ತಿಕೊಂಡೆ
ಗಿಡ ಕಣ್ಣಿಟ್ಟು ನೋಡಿ
ತಲೆ ತೂಗಿ ಹೂವರಿಳಿಸಿತು
ಗಿಡ ತುಂಬ.

ತತ್ತರಿಸುವ ಮನ
ತಥಾಗತನ ಎದುರಲ್ಲಿ
ಕರಗಿ ನೀರಾಗುತ್ತಿರುವ
ಹಿಮಗಡ್ಡೆಯ ಗುಡ್ಡೆ.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಯಿಕು-ಹಂದರ
Next post ಕೋಶಗ್ರಂಥ ವ್ಯಾಕರಣ ಪ್ರಸಂಗದಿ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…