Home / ಕವನ / ಕವಿತೆ / ಕೋಶಗ್ರಂಥ ವ್ಯಾಕರಣ ಪ್ರಸಂಗದಿ

ಕೋಶಗ್ರಂಥ ವ್ಯಾಕರಣ ಪ್ರಸಂಗದಿ

ಕೋಶಗ್ರಂಥ ವ್ಯಾಕರಣ ಪ್ರಸಂಗದಿ
ವಾದಿಸ್ಯಾಡುವ ದಾಸರ ನಾಯಿ || ಪ ||

ಹೇಸಿ ವಿಷಯ ಗುಣಕೊಳಗಾಗುವ ಕವಿದೋಷಿಕ ಮಾಸ್ಯಾಳರ ನಾಯಿ
ಕಾಸು ಕಾಸಿಗೆ ಕೈಯೊಡ್ಡುವ ಯಾಚಕ ದೋಷಕಿಯರು ಸಾಕುವ ನಾಯಿ
ಆಸಗೆ ಬೀಳುವ ಸನ್ಯಾಸಿ ಫಕೀರರು ಪಾಶಗಾರ ಪಾಪದ ನಾಯಿ
ಕ್ಲೇಶವನರಿಯದೆ ಪಾಶಿಯಲಿದ್ದವ ಕಾಶಿ ಬ್ರಾಹ್ಮಣರ ಮನಿ ನಾಯಿ
ರೋಷಕೆದ್ದು ಕಡದಾಡುವ ಮನುಜರು ದೇಶದೇಶ ತಿರುಗುವ ನಾಯಿ
ವಾಸರಸಿ ವಿಧಿ ಹರಿಯ ಬಳಿಗೆ ಬಂದು ನಾಯಾಗಿ
ಸೂಸ್ಯಾಡಿ ದ್ವಾರಕೆಯ ನೀಗಿ
ಕಾಸಾರ ದಾಂಟಿ ಹನುಮಂತ ಲಂಕೆಗೆ ಹೋಗಿ
ರಕ್ಕಸರು ಕುನ್ನಿಹಾಂಗಾಗಿ
ಲೇಸಾಗಿ ಇಂದ್ರಜಿತು ಕಪಿರಾಶಿಯೊಳಿರಲಾಗಿ
ಆ ಸಮಯದಿ ಹೋದ ಮರೆಯಾಗಿ
ಈಶ ಸಿದ್ದೇಶಗೆ ಭೇದನಿಕ್ಕುವ ಲೇಸಿ ಬಾಗಿಲು ಕಾಯುವ ನಾಯಿ || ೧ ||

ವೇದವಾದದಲಿ ಕುಣಿದಾಡುವ ನರ
ಆದ ಚಲ್ವಾದೇರ ನಾಯಿ
ಪಾದವಿಷ್ಣು ಪದಕ್ಹೊಂದದ ಮನುಜರು
ಮಾದಿಗೇರ ಮೋಹದ ನಾಯಿ
ಸಾಧನದಲಿ ಹದಿನೆಂಟುಪುರಾಣವ
ಓದುವ ವಾಲ್ಮಿಕರ ನಾಯಿ
ಬೋಧಾನಂದದಿ ವೇದಾಂತರಿಯದ
ಸಾಧು ತಾನು ಸೊನಗಾರ ನಾಯಿ
ಶ್ರೀಧರನಾಮವ ನರಿಯದ ವೈಷ್ಣವ
ಈ ಧರೆಯೊಳು ಮ್ಯಾದಾರ ನಾಯಿ
ನಾದ ಬಿಂದು ಕಲೆಯರಿಯದ ಯೋಗಿ
ಹಾದಿಯೊಳಗ ಮಲಗಿದ ನಾಯಿ
ಸಾಧು ಸಂತರಿಗೆ ಸೇರದ ಮನುಜಾ
ಕ್ರೋಧದಿಂದ ಬೊಗಳುವ ನಾಯಿ
ಆತುರದಿ ಸಾರ ತಿಳಿಲಿಲ್ಲಾ
ಯಾತಕ ತೆರಯಿತೀದಿ ಹಲ್ಲಾ
ಪಾತಕಿ ಪಾಮರಾದೆಲ್ಲಾ ನೂತನವು ಕಲೀ ಜನಕೆಲ್ಲಾ
ಈ ತೆರದಲಿ ಭೂತಳದಲಿ ಮೆರೆಯುವ
ಜೋತಾಡುವ ಜೋಗ್ಯಾರ ನಾಯಿ || ೨ ||

ಮಾತ ದಂತಕತಿ ಗೀತ ಭಾಗವತ
ರೀತಿ ಹೇಳುವ ಜಾತಿಗರ ನಾಯಿ
ಕೂಗಿನ ಚರಣಾ ಮುಂದೆ ಆದೆ ಹೊತ್ತು ಶಕುನಾ
ವಳೆಯಕ್ಕಿ ಬೆನಕನ ಮಾತಿಲ್ಹೇಳುವ ಮೆಕ್ಕಿನಾಯಿ
ನೀತಿಯಿಂದ ನಿಜಶಾಸ್ತ್ರವ ಕಲಿತವ
ನೀತಿನಡವ ಆರೇರ ನಾಯಿ
ಕಾದಾಡಿ ಕರ್ಮದಲಿ ಕರ್ಮದಿ ಬಿದ್ದಿ
ಈ ದೇಹಕ ನೀ ಹೊರತಾದಿ
ಆಧಾರವಿಲ್ಲದೆ ಆಲ್ಪರಿದಿ ಬೇಕಾದ ವಿದ್ಯವನು ಮರದಿ
ಶೋಧಿಸಿ ನೋಡೋ ಪರವಾದಿ
ಹೌದೆನಿಸದು ತಿಳಿ ಪರಬುದ್ಧಿ
ಮೇದಿನಿಯೊಳು ಹದಿನೆಂಟು ಜಾತಿ ಜನ
ಮೌಜಿಲಿರುವ ಮುಸಲ್ಮಾನರ ನಾಯಿ || ೩ ||

ಸ್ವರಗಳನರಿಯದೆ ಸರಿಗಮವೆಂಬುವ
ಪರಿಚಾರಕರ ಕೊರವರ ನಾಯಿ
ಬರಿದೆ ಬಯಸಿ ಬಾಯ್ದೆರೆಯುವ ಮಾನವ-
ನರುವಿಲ್ಲದ ಜಾವಲಿನಾಯಿ
ಮರುಳ ಶ್ರೀಮಂತಶೆಟ್ಟಿ ಸಾವುಕಾರರ
ಕುರಿಕಾಯುವ ಕುರುಬರ ನಾಯಿ
ಹರಿಕತಿ ಹೇಳಿ ತಿರುಗಾಡುವ ನರ
ಧರಿಯೊಳಗವ ತಿರಕರನಾಯಿ
ಕರುಣ ಪ್ರಸಾದಕೆ ನಿಲುಕದ ಜಂಗಮ
ಗುರುತರಿಯದ ಗೊರವರ ನಾಯಿ
ಖುರಾನವರಿಯದ ಖಾಜಿ ಖತೀಬಾ
ಮುಲ್ಲಾರೆಲ್ಲಾ ಗೊಲ್ಲರ ನಾಯಿ
ಸರಿಗಟ್ಟಿ ಸರಿಗಟ್ಟಿ ಹಾಡಬೇಡಣ್ಣಾ
ವರಮುಕ್ತಿ ಮಾರ್ಗ ಬೇಡಣ್ಣಾ
ನರಿ ನಾಯಿಜನ್ಮ ಜೋಡಣ್ಣಾ
ಅರಿವಿಡಿದು ನಡಿಯೋ ನೀ ಜಾಣಾ
ನೆರೆದಂಥ ಸಭೆಯೊಳು ನಿನ ಪೌರುಷ ತೋರದಿರು ಮುನ್ನಾ
ಅರಿಯದವರ ಮುಂದ ಅರ್ಥ ಹೇಳಿದರ
ಹೊರಗಾದಿಯೋ ಹೊಲಿಯರ ನಾಯಿ || ೪ ||

ಬಾಯಿಲೆ ಬ್ರಹ್ಮವ ಬೊಗಳಿದರೇನಲೋ
ಬಯಲೊಳಗೆ ಬೊಗಳುವ ನಾಯಿ
ಸಾವಿಗಂಜಿ ಸುಳಿದಾಡುವ ಮಹಿಮರು
ಠಾವನರಿಯಪ ಬೋವೆರ ನಾಯಿ
ಹ್ಯಾವಿಲ್ಲದೆ ಹಗಲೆಲ್ಲಾ ಜಳಕ
ಶಿವಪೂಜಿ ಮಾಡುವ ಸೂಳೆರ ನಾಯಿ
ಭಾವವಿಲ್ಲದೆ ಭಕ್ತನಾದವ
ಹಾವಗಾರ ಸಾಕಿದ ನಾಯಿ
ಕೋವಿದರೆನಿಸುವ ಕವಿಗಳನರಿಯದೆ
ಜಾವಜಾವಕ್ಕೆ ಓಂನಮಃ ಶಿವಾಯೆಂಬುವ ನಾಯಿ
ಕಾಮದ ಭ್ರಮೆಯನು ಕಳಿಯದೆ ತಪಸ್ಸಿಗೆ
ದೇವರ ಹಣತಿಯ ನೆಕ್ಕುವ ನಾಯಿ
ಉಪಾಯದಿಂದ ಕೇಳೋ ತಮ್ಮ
ಈ ನಾಯ್ಗಳ ಸ್ನೇಹ ಬಿಡು ಹಮ್ಮಾ
ಬಹು ಭಾಯ ಚಮತ್ಕಾರದ ಧರ್ಮಾ
ನಿರ್ವಾಹದಿಂದಲಿ ಬಿಡು ಮರ್ಮಾ
ಕಾಪುರುಷರರಿಯರೀ ಮರ್ಮಾ
ಈ ವ್ಯಾಪಾರದ ನೇಮಾ
ದುಷ್ಕರ್ಮದೊಳಾಗದು ಕ್ಷೇಮಾ
ಭೂಪಾರ ಶಿಶುನಾಳ ಸದ್ಗುರುವಿನ ಶೂರ-
ಸಿಪಾಯಿ ಸರದಾರನ ನಾಯಿ ||೫||
*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...