ಒಂದು ಪಟ್ಟಣದಲ್ಲಿ ಒಬ್ಬ ಅತ್ಯಂತ ಧನಿಕನಿದ್ದ. ಅವನಲ್ಲಿ ಇರದ ವಸ್ತುಗಳಿರಲಿಲ್ಲ. ಜಗತ್ತಿನ ಎಲ್ಲಾ ವಸ್ತುಗಳನ್ನು ಖರೀದಿಸಿ ಶೇಖರಿಸಿದ್ದ. ಆದರೂ ಅವನಿಗೆ ತೃಪ್ತಿ, ಸಂತಸವಿರಲಿಲ್ಲ. ನೆಮ್ಮದಿ ಶಾಂತಿ ದೊರೆತಿರಲಿಲ್ಲ. ಅವನ ಬಾಳನ್ನು ವ್ಯಾಪಾರಿ ಮನೋಭಾವ ತುಂಬಿತ್ತು. ಧನ, ಕನಕ, ವಸ್ತು, ವೈವಿಧ್ಯವಿರುವ ತನ್ನದು ತುಂಬು ಜೀವನವೆಂದು ಹೆಮ್ಮೆಪಡುತ್ತಿದ್ದ. ಇದರ ಜೊತೆಯಲ್ಲಿ ಅವನ ಮನವು ಮಿಥ್ಯ, ಮೋಸ, ಈರ್ಷೆ, ದ್ವೇಷ, ಕಾಮ, ಕ್ರೋಧ, ಮದ, ಮಾತ್ಸರ್ಯಗಳಿಂದ ತುಂಬಿತ್ತು.
ಒಮ್ಮೆ ಆ ಪಟ್ಟಣಕ್ಕೆ ಒಬ್ಬ ಝುನ್ ಗುರು ಬಂದರು.
ತನ್ನ ಹಣದ ಹೆಚ್ಚಳಿಕೆಯನ್ನು ತೋರಿಸಿಕೊಳ್ಳಲು ಧನಿಕ, ಝೆನ್ ಗುರುಗಳನ್ನು ತನ್ನ ಮನೆಗೆ ಸ್ವಾಗತಿಸಿದ.
ಗುರುಗಳಿಗೆ ನಮಿಸಿ ತನಗೆ ಶಾಂತಿಯ ನೆಲೆ ಬೇಕೆಂದು ಕೇಳಿಕೊಂಡ. ಝೆನ್ ಗುರುಗಳು, ಧನಿಕನಿಗೆ ಕೆಲವು ನಿಬಂಧನೆಗಳನ್ನು ಹಾಕಿದರು.
ಧನಿಕ ಹೇಳಿದ “ಗುರುಗಳೇ ನಿಮಗೆ ಧನದ ಮೂಟೆಯನ್ನೇ ಕೊಡುವೆ, ನನಗೆ ಶಾಂತಿಯ ನೆಲೆ ದೊರತರೆ” ಎಂದ.
“ನಿನ್ನ ಧನದ ಅವಶ್ಯಕತೆ ನನಗಿಲ್ಲ. ನಿನ್ನ ಬೇಡಿಕೆ ಪೂರೈಸಲು ನಿನಗೆ ಒಂದು ಸೂತ್ರ ಕೊಡುತ್ತೇನೆ.”
“ಅದೇನು ಹೇಳಿ ಗುರುಗಳೇ”
“ನೀನು ಬಾಳಿನಲ್ಲಿ ಖಾಲಿ ಮಾಡುವುದನ್ನು ಕಲಿಯಬೇಕು”
“ಇಷ್ಟೇ ತಾನೇ, ಎಲ್ಲವನ್ನು ಖಾಲಿ ಮಾಡುತ್ತೇನೆ. ಹಾಗಾದರೆ ನನಗೆ ಶಾಂತಿ ಸಿಕ್ಕುತ್ತದಲ್ಲವೇ?” ಎಂದ ಧನಿಕ.
“ಖಾಲಿಮಾಡಿ ಜೀವನ ನಡೆಸು. ನಂತರ ಬಂದು ತಿಳಿಸು” ಎಂದರು ಝೆನ್ ಗುರುಗಳು.
ಧನಿಕನಿಗೆ ಹಲವಾರು ತಿಂಗಳುಗಳಾದರು ನೆಮ್ಮದಿ ಸಿಗಲಿಲ್ಲ ಎಂದು ಹಲುಬಿದ.
“ನಿನ್ನಲ್ಲಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ, ಈರ್ಷೆ, ದ್ವೇಷ, ಇವುಗಳನ್ನು ಖಾಲಿ ಮಾಡಿರುವೆಯಾ? ಎಂದರು ಗುರುಗಳು. ನಿನಗೆ ನೆಮ್ಮದಿ ಸಿಗಬೇಕಾದರೆ ನಿನ್ನ ಮನವು ಸತ್ಯದ ನಿರೀಕ್ಷೆಯಲ್ಲಿರುವ ಪ್ರಾಮಾಣಿಕತೆ, ಪ್ರೀತಿ, ಸ್ನೇಹ ಮನದಲ್ಲಿ ತುಂಬಿರಲಿ. ಮನವನ್ನು ಪ್ರಾಪಂಚಿಕತೆಯಿಂದ, ಸಂಸಾರದಿಂದ ದೂರ ಇಡು. ಆಗ ನಿನಗೆ ನೆಮ್ಮದಿಯ ನೆಲೆ ಸಿಗುತ್ತದೆ” ಎಂದಾಗ ಧನಿಕನಿಗೆ ಶಾಂತಿಯ ನೆಲೆ ಏನೆಂಬುದರ ಅರಿವಾಯಿತು.
*****

















