ಮುಗಿಲ ಮುಸುಕಿದ ಮೋಡ ಮರೆಯಾಗಿ ನಿಂತಂತೆ
ಜಗದಗಲ ಜೀವನದ ನದಿಯೆ ಸೆಲೆಯೊಡೆದಂತೆ
ಹಗಲು ರಾತ್ರಿಯ ಸುಪ್ತ ಚೇತನವೆ ನೆಗೆದಂತೆ
ಮಿಗಿಲಾಗಿ ಮನದಂತರಂಗದಲಿ ಸುಳಿದಂತೆ
ಸಂಗೀತ ದಧಿ ದೇವಿ ತಾನೆ ಮೈ ಮರೆತಂತೆ
ಮಧುರ ಮೂರ್ತಿಯ ಮೃದುಲ ಮಾತಿನಿನಿದನಿಯಂತೆ
ಮಧು ಜೀವಿ ಗಾಯನದ ತಾನದಲಿ ತೊನೆವಂತೆ
ಶೃಂಗಾರ ಸಾಗರದ ಸೂಕ್ಷ್ಮ ತೆರೆ ಸರಿದಂತೆ
ಚಂದ್ರ ಲೋಕದ ಬಿಂಬ ಕಣ್ಣ ಕೋರೈಪಂತೆ
ಸೌಕುಮಾರ್ಯದ ಸೃಷ್ಟಿ ಸೆರೆ ತೊರೆದು ಬಂದಂತೆ
ಮುಕುತಿ ಮಾಯೆಯ ಮಂತ್ರ ಕರ್ಣದಲಿ ಮಿಡಿದಂತೆ
ಇಂದ್ರನೈರಾವತವೆ ಮನಬಿಚ್ಚಿ ನಡೆದಂತೆ
ಬಂತಿದೋ ನಾಡಿನೀ ಸುಪ್ರಭಾತದ ಮೂರ್ತಿ
ನಿಂತಿರಲಿ ಚಿರಮಾಗಿ ನಾಡದೇವಿಯ ಪ್ರಣತಿ
*****
ಬೆಂಗಳೂರು : ೧೯೪೫

















