ಒಂದಾನೊಂದು ಊರಿನಲ್ಲಿ ಚಿತ್ರಾಂಗನೆಂಬ ನಾಯಿಯಿತ್ತು. ಆ ಊರಿನಲ್ಲಿ ಕ್ಷಾಮವು ಬಂತು. ತಿನ್ನುವುದಕ್ಕೆ ಎಂಜಲೂ ಇಲ್ಲದೆ ನಾಯಿಗಳು ನಾಶವಾಗಿ ಹೋದುವು. ಅದರಿಂದ ಚಿತ್ರಾಂಗನು ಹೊಟ್ಟೆಯಪಾಡು ನೋಡಿಕೊಳ್ಳಲು ದೇಶಾಂತರಕ್ಕೆ ಹೋಯಿತು.
ಅಲ್ಲೊಂದು ಊರಿನಲ್ಲಿ ಒಬ್ಬಳು ದಿನವೂ ಅಡಿಗೆಯ ಮನೆಯ ಬಾಗಿಲನ್ನು ಮುಚ್ಚುವುದನ್ನು ಮರೆತುಬಿಡುವಳು. ಈ ನಾಯಿಯು ಸಮಯ ಕಾದಿದ್ದು ಒಳನುಗ್ಗಿ ಬೇಕಾದ್ದನ್ನೆಲ್ಲ ತಿಂದುಬಿಡುವುದು. ಆದರೆ, ಈಚೆಗೆ ಬರುವ ವೇಳೆಗೆ ಸರಿಯಾಗಿ ಆ ಬೀದಿಯ ನಾಯಿಗಳು ಮೇಲೆ ಬಿದ್ದು ಕಚ್ಚಿ ಗೋಳುಗುಟ್ಟಿಸಿಬಿಡುವುವು.
ಹೀಗೆ ಕೆಲವುದಿನ ಕಷ್ಟದಿಂದ ಅಲ್ಲಿಯೇ ಕೆಲವು ದಿನವಿತ್ತು. ಕೊನೆಗೆ “ಇಲ್ಲಿದ್ದು ಈ ತಿಂಡಿ ತಿನ್ನುವುದೂ ಸಾಕು. ಈ ನಾಯಿಗಳಿಂದ ಕಚ್ಚಿಸಿಕೊಳ್ಳುವುದೂ ಸಾಕು. ನಮ್ಮೂರಲ್ಲಿ ತಿಂಡಿಯಿಲದಿದ್ದರೂ ಕಚ್ಚುವವರು ಯಾರೂ ಇಲ್ಲ” ಎಂದು ಆಲ್ಲಿ೦ದ ಹಿಂತಿರುಗಿ ಬಂತು.
ಅದರಿಂದ ಹಾಗೆ ಹೇಳಿದೆ. ಹೋಗು. ನಿನ್ನ ಮನೆಯನ್ನು ಹಿಡಿದುಕೊಂಡಿರುವನನೊಡನೆ ಯುದ್ಧ ಮಾಡಿ ಹೊಡೆದೋಡಿಸಿ ಮನೆಯನ್ನು ಸಾಧಿಸು” ಎಂದಿತು.
ಆ ಮೊಸಳೆಯೂ ಆ ಕಪಿಯು ಹೇಳಿದ ಬುದ್ಧಿಯ ಮಾತನ್ನು ಕೇಳಿ ಆ ಉಪದೇಶದಂತೆಯೇ ನಡೆಯಿತು. ಅದಕ್ಕೆ ಮನೆಯೂ ಸಿಕ್ಕಿತು. ಅದೂ ಬಹುಕಾಲ ಅಲ್ಲಿ ಸುಖವಾಗಿತ್ತು. ಅದರಿಂದಲೇ ಹೇಳುವುದು
ಪೌರುಷಮಾಡದೆ ಪಡೆದಾಸಿರಿಯದು |
ಹಿರಿದಾದರು ಫಲವಿಲ್ಲ | ವನದೊಳು ||
ದೈವವು ಕೊಟ್ಟಾ ಹುಲ್ಲನು ಸೊಪ್ಪನು |
ತಿಂಬುದು ಮುದಿ ಗೂಳಿಯು ಕಾಣೆಯ ॥ ೩೨॥
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಮೊದಲನೆಯ ತಂತ್ರವು
*****