ಪುರಾತನ ಕಾಲದಲ್ಲಿ ಹೇಹಯರು, ಭಾರ್ಗವರು ಎಂದು ಎರಡು ಗುಂಪಿನವರು ಇದ್ದರು. ಹೇಹಯರು ಕ್ಷತ್ರಿಯರು, ಅರಸುಗಳು. ಭಾರ್ಗವರು ಬ್ರಾಹ್ಮಣರು, ತಪಸ್ವಿಗಳು. ಹೇಹಯರಿಗೆ ತಮಗೆ ಬರಬೇಕಾದುದನ್ನೆಲ್ಲಾ ಭಾರ್ಗವರು ತೆಗೆದುಕೊಂಡರು ಎ೦ದು ಅವರಮೇಲೆ ಕೋಪ. ತಮಗೆ ದಾನವಾಗಿ ಬಂದಿರುವುದನ್ನು ಮಾತ್ರ ತಾವು ತೆಗೆದುಕೊಂಡಿದ್ದೇವೆಂದು ಭಾರ್ಗವರ ವಾದ. ಹೇಹಯರು ರೇಗಿ ಭಾರ್ಗವರ ಮೇಲೆ ಬೀಳುವರು. ಭಾರ್ಗವರು ಅದಕ್ಕೆ ಪ್ರತಿಮಾಡುವರು. ಹೀಗೆಯೇ ನಡೆಯುತ್ತಿತ್ತು.
ಒಂದು ಸಲ ಹೇಹಯರು ಜಮದಗ್ನಿಯ ಮೇಲೆ ಬಿದ್ದು ಆತನನ್ನು ಕಡಿದುಹಾಕಿ ಆತನ ಕಾಮಧೇನುವನ್ನು ಹೊತ್ತುಕೊಂಡು ಹೋದರು. ಅದು ಜಮದಗ್ನಿಯ ಮಗ ಪರುಶುರಾಮನಿಗೆ ತಿಳಿಯಿತು. ಅವನು ರೇಗಿ “ಈ ಕ್ಷತ್ರಿಯಕುಲವನ್ನು ಧ್ವ೦ಸ ಮಾಡುವೆನು” ಎಂದು ಹಟ ತೊಟ್ಟನು. ಒಂದು ಗಂಡು ಗೊಡಲಿಯನ್ನು ತೆಗೆದುಕೊಂಡು ಹೊರಟನು. ಹೇಹಯರ ಕುಲವೆಲ್ಲ ಧ್ವಂಸವಾಯಿತು.
ಆಗ ದಶರಥನು ಆಳುತ್ತಿದ್ದನು. ವಸಿಷ್ಠರು ಅವನ ಗುರುಗಳು. ಅವರಿಗೆ ಪರಶುರಾಮನು ಕಂಕಣವಿರುವವರೊಡನೆ ಯುದ್ದ ಮಾಡುವುದಿಲ್ಲ ಎನ್ನುವುದು ಗೊತ್ತು. ಅದರಿಂದ ಪರಶುರಾಮನು ಬಂದನು ಎಂದರೆ ದಶರಥನಿಗೆ ಮದುವೆಯ ಕಂಕಣವನ್ನು ಕಟ್ಟುವರು. ಪರಶುರಾಮನು ಇನ್ನೊಂದು ಸಲ ಬರುವೆನು ಎಂದು ಹೊರಟುಹೋಗುವನು. ಹೀಗೆಯೇ ಮುನ್ನೂರು ಸಲ ಆಯಿತು. ಮುನ್ನೂರು ಸಲವೂ ಮದುವೆಯ ಕಂಕಣವು ದಶರಥನನ್ನು ಕಾಪಾಡಿತು.
ಆ ವೇಳೆಗೆ ಪರಶುರಾಮನ ಕೋಪವೂ ಶಾಂತವಾಯಿತು. ದಶರಥನಿಗೆ ರಾಮನೆಂಬ ಮಗನು ಹುಟ್ಟಿದನು. ಪರಶುರಾಮನು ಶ್ರೀರಾಮನ ಮೇಲೆ ಕೊನೆಯ ಸಲ ಯುದ್ಧಕ್ಕೆ ಬಂದನು. ಆಗ ಆತನಿಗೆ ಸೋಲಾಯಿತು. ತನ್ನದೆಲ್ಲವನ್ನೂ ಶ್ರೀರಾಮನಿಗೆ ಒಪ್ಪಿಸಿ ಅವನು ತಪಸ್ಸಿಗೆ ಹೋದನು. ಆದುರಿಂದ ಜೊಂಡಿನಂತೆ ಇದ್ದು ಬದುಕಬೇಕು” ಎಂದು ನಾನು ಹೇಳಿದೆನು.
ಅದನ್ನು ಕೇಳಿದ ವಾಯಸ ರಾಜನು ಸಂಜೀವಿ ಎಂಬ ಮಂತ್ರಿಯನ್ನು ಏನು ಮಾಡಬೇಕು ಎಂದು ಕೇಳಿದನು. ಆತನು “ದೇವ, ನನಗೆ ಸಂಧಿಯು ಸಮ್ಮತವಿಲ್ಲ. ನೀರು ಕಾದು. ಬಿಸಿಯಾಗಿದ್ದರೆ ತಾನೇ ಏನು, ಬೆಂಕಿಯನ್ನು ಆರಿಸುವುದಿಲ್ಲವೇನು? ಅಲ್ಲದೆ ಅರಿಮರ್ದನನು ಕ್ರೂರನು, ಲೋಭಿಯು, ಧರ್ಮವಲ್ಲದವನು. ಸತ್ಯಧರ್ಮಗಳಿಲ್ಲದವನೊಡನೆ ಸಂಧಿ ಮಾಡಿಕೊಂಡರೂ ಸಂಧಿಯು ಉಳಿಯುವುದೇನು? ಹೀಗೆ ಸತ್ಯ ಧರ್ಮಗಳಿಲ್ಲದ ಕ್ರೂರರನ್ನು ಸುಖವಾಗಿ ಗೆಲ್ಲಬಹುದು. ಅಲ್ಲದೆ, ಈಗ ನಾವು ಸೋತಿರುವೆವು. ಈಗ ನಾವು ಸಂಧಿಯನ್ನು ಕೋರಿದರೆ ಅವನು ಇನ್ನೂ ಬಿಗಿದುಕೊಳ್ಳುವನು. ಕಾದ ಎಣ್ಣೆಯ ಮೇಲೆ ನೀರು ಚಿಮುಕಿಸಿದಂತೆ ಉರಿದು ಉಪ್ಪಾಗುವನು. ಅದರಿಂದ ಚಿಕ್ಕ ಸಿಂಹವು ದೊಡ್ಡಾನೆಯ ಮೇಲೆ ಬೀಳುವಂತೆ ಬಿದ್ದು ಕೊಲ್ಲಬೇಕು. ಅವನು ಬಲಿಷ್ಟನಾದರೆ ಮಾಯೆಯನ್ನಾದರೂ ಮಾಡಬೇಕು. ಹೆಣ್ಣುವೇಶ ಹಾಕಿಕೊಂಡು ಭೀಮನು ಕೀಚಕನನ್ನು ಕೊಲ್ಲಲಿಲ್ಲವೆ? ಯಮನಂತೆ ಭಯಂಕರನಾದ ಅರಸನನ್ನು ಕಂಡರೆ ಶತ್ರುಗಳು ಹೆದರುವರು. ದಯಾಲುವಾದ ಅರಸನನ್ನು ಶತ್ರುಗಳು ಹುಲ್ಲಿಗಿಂತ ಹಗುರನೆನ್ನುವರು. ಯಾವ ಅರಸನ ಭೂಮಿಯು ಶತ್ರುಗಳ ರಕ್ಷದಿಂದಲೂ, ಶತ್ರು ಪತ್ನಿಯರ ಕಣ್ಣೀರುಗಳಿಂದಲೂ ನೆನೆಯುವುದಿಲ್ಲವೋ ಅವನು ಬದುಕಿದ್ದರೆ ತಾನೇ ಏನು? ಅದರಿಂದ ವಿಗ್ರಹವೇ ಸರಿ ಎಂದು ನನ್ನ ಅಭಿಮತವು” ಎಂದು ಹೇಳಿದನು.
ಅರಸನು ಅನುಜೀವಿಯನ್ನು ಕೇಳಿದನು. ಅವನು ಹೇಳಿದನು:- “ದೇವ, ಅರಿಮರ್ದನನು ದುಷ್ಟನು, ನಮಗಿಂತ ಬಲಾಢ್ಯನು. ಮರ್ಯಾದೆಯಿಲ್ಲದವನು. ಮರ್ಯಾದೆಯಿಲ್ಲದವನೊಡನೆ ಸಂಧಿಯು ಯೋಗ್ಯವಲ್ಲ. ಬಲಾಢ್ಯನೊಡನೆ ವಿಗ್ರಹವು ತಕ್ಕುದಲ್ಲ ಅದರಿಂದ ಯಾನ ಎಂದರೆ ನಾವು ಈ ಸ್ಥಲವನ್ನು ಬಿಟ್ಟು ಬೇರೊಂದು ಸ್ಥಲವನ್ನು ಆಶ್ರಯಿಸುವುದೇ ತಕ್ಕದ್ದು. ಯಾನವು ಎರಡು ವಿಧವಾಗಿರುವುದು. ಮೊದಲನೆಯದು ಹೆದರಿದವರು ತಮ್ಮನ್ನು ಕಾಪಾಡಿಕೊಳ್ಳಲು ಅವಲಂಬಿಸುವದು : ಎರಡನೆಯದು ಹೆಗೆಯವರನ್ನು ಗೆಲ್ಲುವುದಕ್ಕಾಗಿ ಧೀರರು ಆಶ್ರಯಿಸುವದು. ಮೊದಲನೆಯದು ಪಲಾಯನವು, ಎರಡನೆಯದು ಯಾತ್ರೆಯು ನಮ್ಮ ಸ್ಥಳವು ಇತರರಿಗೆ ಸಿಕ್ಕದಂತೆ ಭದ್ರಪಡಿಸಿ, ಅನಂತರ ನಾವು ಇತರ ಸ್ಥಳಕ್ಕೆ ಹೋಗಿ ಸಮಯ ಕಾದಿದ್ದು ಬಂದು ಶತ್ರುವಿನ ಮೇಲೆ ಬೀಳಬೇಕು. ಟಗರು ಹಿಂದಕ್ಕೆ ಹೋಗುವುದು ಏಕೆ? ಓಡಿಬಂದು ಗುದ್ದುವುದಕ್ಕೆ. ಸಿಂಹವು ಮೈಯೆಲ್ಲ ಅಡಗಿಸಿಕೊಳ್ಳುವುದೇಕೆ? ಶತ್ರುವಿನ ಮೇಲೆ ಹಾರುವುದಕ್ಕೆ. ಹಾಗೆ ನಾನು ಹೇಳುವ ಈ ಯಾತ್ರೆಯೆಂಬುದು. ಶತ್ರುವು ಬಲವಾಗಿದ್ದಾಗ ಆ ದೇಶವನ್ನು ಬಿಟ್ಟು ದೇಶಾಂತರ ಹೋಗಬೇಕು. ಹಾಗಿಲ್ಲದೆ ನಮಗಿಂತ ಬಲವಾಗಿರುವವನ ಮೇಲೆ ಬಿದ್ದರೆ, ನಮ್ಮ ಕುಲವೇ ಕ್ಷಯವಾಗುವುದು.”
ಆಗ ಅರಸನು ಪ್ರಜೀವಿಯನ್ನು ಕೇಳಿದನು. ಅವನು ಹೇಳಿದನು: “ದೇವ, ಸಂಧಿ, ವಿಗ್ರಹ, ಯಾನ, ಎಂಬ ಈ ಮೂರೂ ನನಗೆ ಹಿಡಿಸವು. ನನಗೆ ಆಸನವೇ ಸರಿಯೆನಿಸುವುದು. (ಆಸನವೆಂದರೆ ಸ್ವಸ್ಥಾನದಲ್ಲಿಯೇ ಇರುವುದು.) ಕೇಳಿಲ್ಲವೇ ?
ನೀರಿನೊಳಿದ್ದಾ ಮೊಸಳೆಯು | ಆನೆಯನಾದರು ಹೊಡೆಯವುದು ॥
ತನ್ನೆಡೆ ಬಿಟ್ಟೊಡೆ ಮೊಸಳೆಯ ॥ ನಾಯಿಗಳೆಳೆದ್ದಾಡುವುವು ॥೩॥
“ತಿಳಿದವನು ಬಲವಂತರನ್ನು ಸೇರಿಸಿಕೊಂಡು ತನ್ನ ದುರ್ಗದಲ್ಲಿ ಇರಬೇಕು. ಶತ್ರುವಿಗೆ ಹೆದರಿಕೊಂಡು ತನ್ನ ಸ್ಥಾನವನ್ನು ಬಿಟ್ಟವನು ಮತ್ತೆ ಅಲ್ಲಿಗೆ ಬರುವುದಿಲ್ಲ. ಹಲ್ಲಿಲ್ಲದ ಹಾವು, ಮದವಿಲ್ಲದ ಆನೆ, ಸ್ಥಾನವಿಲ್ಲದ ಅರಸು, ಇವರನ್ನು ಯಾರುಬೇಕಾದರೂ ಆಡಿಸುವರು. ತನ್ನ ಸ್ಥಾನದಲ್ಲಿ ಇರುವ ಒಬ್ಬನು ನೂರು ಜನರೊಡನಾದರೂ ಹೋರಾಡಬಲ್ಲನು. ಅದರಿಂದ, ದುರ್ಗವನ್ನು ಬಲಪಡಿಸಿಕೊಂಡು, ಸುಭಟರನ್ನೂ ಬೇಕಾದ ಪದಾರ್ಥಗಳನ್ನೂ ತುಂಬಿ ಕೊಂಡು, ಯಾವಾಗಲೂ ಯುದ್ಧಕ್ಕೆ ಸಿದ್ಧನಾಗಿಯೇ ಇರಬೇಕು. ಬಳ್ಳಿಗಳೇ ಆಗಿರಲಿ ಒಟ್ಟಿಗಿದ್ದರೆ ಗಾಳಿಯು ಎಷ್ಟೇ ಬಲವಾಗಿದ್ದರೂ ಏನೂ ಮಾಡಲಾರದು. ಮರವು ಒ೦ದೇ ಒಂದಾದಕ್ಕೆ ಅದೆಷ್ಟೇ ಬಲವಾಗಿದ್ದರೂ ಗಾಳಿಯನ್ನು ತಡೆದು ಬದುಕಲಾರದು. ಆದುದರಿಂದ ಸ್ಥಾನವನ್ನು ಬಿಡಬಾರದು. ಕೇಳಿಲ್ಲವೇ?”
ಚಿಕ್ಕದು ಎಂದೆನೆ ಲಕ್ಷಿಸದೆ । ಮೂಷಕ ನುಗ್ಗಿತು ಗೂಡಿಂಗೆ ।
ಮುಳ್ಳನು ಚುಚ್ಚಲು ಬಲವಾಗಿ । ಕೆಳಗುರುಳಿತು ಇಲಿ ಮೃತವಾಗಿ ॥೪॥
ಅರಸನು ಅದೆಂತು ಎನಲು ಮಂತ್ರಿಯು ಹೇಳಿದನು:
*****
ಜೇನು ಗೂಡಿಗೆ ನುಗ್ಗಿದ ಇಲಿಯ ಕಥೆ ಓದಿ