Home / ಕವನ / ಕವಿತೆ / ಆಸ್ತಿಕನಿಗೆ

ಆಸ್ತಿಕನಿಗೆ

ಎಲ್ಲಿಹನೋ ನಿನ್ನ ದೇವ?
ಅದೆಲ್ಲಿಹನೋ ನಿನ್ನ ಕಾವ?
ತಂದೆದುರಿಗೆ ನಿಲ್ಲಿಸೊ!
ಅದುವರೆವಿಗು ಏನೇನನೊ
ಗಳಹುವುದನು ನಿಲ್ಲಿಸೊ!

ಅನಂತನೆಂಬೆ!
ಅಂತವುಳ್ಳ ನೀನವನನು ಕಾಣೆ ಸತತ ಯತ್ನಿಪೆ!
ಅಚಿಂತ್ಯನೆಂಬೆ!
ಅನವರತವು ನಿನ್ನ ಮನದೊಳವನ ಬಿಡದೆ ಚಿಂತಿಪೆ!
ಅಮೇಯನೆಂಬೆ!
ಮೇಯವಾದ ಅವನ ಗುಣಗಳನ್ನು ಸತತ ಹೊಗಳುವೆ!
ಅಜೇಯನೆಂಬೆ!
ಭಕ್ತವಿಜಯಗಳನು ನೆನೆದು ಅದರ ಮುದದಿ ಮುಳುಗುವೆ!

“ಸಂಭವಾಮಿ ಯುಗೇ ಯುಗೇ”
ಎಂಬ ಮಾತನೊರೆಯುವೆ!-
ಅಧರ್ಮ ಜಗದಿ ಹೆಚ್ಚಿದಂದು
ಧರ್ಮದುದ್ಧಾರಕೆಂದು
ಅವತರಿಪನು ದೇವನೆಂದು
ಗೀತೆಯುದ್ಧರಿಸುವೆ!
ಅಂತಾದೊಡೆ ಇಂದಿಗಿಂತ
ಕೆಟ್ಟ ಜಗವು ದೊರೆವುದೆ?
ಇಂಥ ಸಮಯ ಬರುವುದೆ?
ಅಧರ್ಮ ಕಾಡ ಕಿಚ್ಚ ಹೋಲಿ
ಹಬ್ಬಿ, ನಲ್ಮೆಯೆಲ್ಲ ತೇಲಿ
ಮಾಯವಾಗೆ ಯಾವ ಕೇಲಿ-
ಯೊಳಗೆ ದೇವ ಮಗ್ನನೊ!
ಮಾತನಿತ್ತು ಬರದ ದೇವ-
ನೆಂಥ ವಚನ ಭ್ರಷ್ಠನೊ!

ಪಾಪ! ಸೊದೆಯ ಕಡಲ ಸವಿಯ
ಮತ್ತಿನೊಳಗೆ ಈ ಬುವಿಯ
ಗೋಳು ಸೇರದೇನೊ ಕಿವಿಯ!

“ಬುವಿ ಪ್ರಯೋಗಶಾಲೆಯು!
ಇದೆಲ್ಲ ಅವನ ಲೀಲೆಯು!”
ಎಂದು ನುಡಿಯುವೆ!
“ಎಲ್ಲ ಅವನ ಲೀಲೆಯು!”
ಲೀಲೆಯಂತೆ ಲೀಲೆಯು!

ಯುದ್ಧಮಾರಿ ಹರಡುತಿರುವ
ಕಿಚ್ಚು ಇಳೆಯ ದಹಿಸಲಿ!
ಚಽಕ್ರಾಧಿಪತ್ಯವೆನಿತೊ
ನುಚ್ಚು ನೂರಾಗಲಿ!
“ಎಲ್ಲ ಅವನ ಲೀಲೆಯು!”

ಕ್ಷಾಮಾಗ್ನಿಯು ನಾಲಗೆಯನು
ಚಾಚಿ ಜಗವ ನೆಕ್ಕಲಿ!
ಬುವಿಯ ಬಸಿರ ಬಗೆದು `ಲಾವ’
ಎಲ್ಲೆಲ್ಲಿಯು ಉಕ್ಕಲಿ!
“ಎಲ್ಲ ಅವನ ಲೀಲೆಯು!”

ಕಾದ ಗುಳದ ತೆರದಿ ಭಾನು
ಕೂಲಿಗಳನು ಚುಚ್ಚಲಿ!

ಕರಾಳ ಮೇಘ ಮಿಂಚು ಸಿಡಿಲ
ಪೊಟ್ಟಣವನು ಬಿಚ್ಚಲಿ!
“ಎಲ್ಲ ಅನನ ಲೀಲೆಯು!”

ಅನೀತಿ ಜಗದಿ ನೆಲಸಲಿ
ಅಧರ್ಮ ಬಂದು ಕುಣಿಯಲಿ
ಅಶಾಂತಿಯೆಲ್ಲು ಹಬ್ಬಲಿ
ಅಕೃತ್ಯ ಬಿಡದೆ ನಡೆಯಲಿ
ನರನು ನರನ ಸುಲಿಯಲಿ
ಜಗದ ಕೆಟ್ಟುದೆಲ್ಲ ಬಂದು
ಇಲ್ಲೆ ಹೆಪ್ಪುಗಟ್ಟಲಿ!
“ಎಲ್ಲ ಅವನ ಲೀಲೆಯು!”
ಲೀಲೆಯಂತೆ ಲೀಲೆಯು!

ಎಲ್ಲಿಹನೋ ದುರುಳ ದೇವ?
ಅದೆಲ್ಲಿಹನೋ ಜಗವ ‘ಕಾವ’?
ಎಳೆದು ತಾರೊ ಇಲ್ಲಿಗೆ
ಇಂತು ಲೀಲೆಯಾಡುವವನ
ಹಾಕಬೇಕು ಗಲ್ಲಿಗೆ!

ಸಾಕು ಮಾಡೊ! ಒಡ್ಡದಿರೆಲೊ
ಸಗ್ಗದ ಪ್ರಲೋಭನ!
ನರಳಿದರೂ ಇಲ್ಲಿ, ಮುಂ-
ದಿರುವ ಸುಖದ ಕಥನವ!
ಕೊಡನು ಕೈಯೊಳಿರುವ ಕಲ್ಲ!
ಕೊಡುವನೆ ಮುಚ್ಚಿಟ್ಟ ಬೆಲ್ಲ!

ಬುವಿಯ ಗೋಳ ಕಡಿಮೆ ಮಾಡ-
ಲವಗೆ ತ್ರಾಣವಿಲ್ಲವೆ?
ಇಲ್ಲ ಇಚ್ಛೆ ಯಿಲ್ಲವೆ?

ತ್ರಾಣವಿದ್ದು ಇಚ್ಛೆ ಯಿರದ
ಭಂಡನಾತನೆ?
ಇಚ್ಛೆಯಿದ್ದು ತ್ರಾಣವಿರದ
ಷಂಡನಾತನೆ?
ಇಚ್ಛೆ ತ್ರಾಣ ಎರಡುಮಿರದೆ
ಬರಿದೆ ಸೋತನೊ?
ಇಚ್ಛೆ ತ್ರಾಣ ಎರಡುಮಿರಲು
ಏಕೆ ಕೂತನೊ?
* * *

ಇಲ್ಲದಿರುವ ದೇವರನ್ನು
ಸುಮ್ಮನೇಕೆ ಬೈಯಲಿ:
ಬರಿಯೆ ಗಾಳಿಯನ್ನು ಗುದ್ದಿ
ಸುಮ್ಮನೇಕೆ ನೋಯಲಿ!
ವಿಚಾರ ಮಥನ ಮಾಡಿಬಿಡು!
ಇದೊಂದು ಮಾತ ಮನದಿ ನೆಡು:

ನರನ ಬಾಳ ಶಿಲ್ಪಿ ನರನೆ!
ದೇವ ಮನದ ಭಯದ ರಚನೆ!
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...