Home / ಬಾಲ ಚಿಲುಮೆ / ಕಥೆ / ವಿಕಾಲನ ಕಥೆ

ವಿಕಾಲನ ಕಥೆ

ಒಂದಾನೊಂದು ಊರಿನಲ್ಲಿ ಭದ್ರಸೇನನೆಂಬ ರಾಜನಿದ್ದನು. ಅವನಿಗೆ ರತ್ನವತಿ ಎಂಬ ಲಕ್ಷಣವತಿಯಾದ ಮಗಳಿದ್ದಳು. ಅವಳಿಗೆ ಒಬ್ಬ ರಾಕ್ಷಸನು ಹಿಡಿದಿದ್ದನು. ಆದರೆ ಅವಳು ರಕ್ಷಾ ಯಂತ್ರವನ್ನು ಕಟ್ಟಿಕೊಂಡಿದ್ದಳು. ಅದರಿಂದ ಅವಳನ್ನು ಹೊತ್ತು ಕೊಂಡು ಹೋಗಲು ಆಗಲಿಲ್ಲ.
ಒಂದು ದಿನ ನಡುರಾತ್ರಿಯಲ್ಲಿ ರಾಕ್ಷಸನು ಅಂತಃಪುರದ ಮೂಲೆಯಲ್ಲಿ ನಿಂತಿದ್ದನು. ಆ ರಾಕ್ಷಸನನ್ನು ರಾಜಪುತ್ರಿಯು ಸಖಿಗೆ ತೋರಿಸಿ “ಇದೇ ಈ ವಿಕಾಲ ಸಮಯದಲ್ಲಿ ನನ್ನನು ಗೋಳು ಹೊಯ್ದುಕೊಳ್ಳುವ ರಾಕ್ಷಸ. ಇದನ್ನು ತಪ್ಪಿಸಲು ಏನಾದರೂ ಮಾರ್ಗವನ್ನು ಹುಡುಕು” ಎಂದಳು.
ವಿಕಾಲಸಮಯ ಎಂದರೆ ಹೊತ್ತಲ್ಲದ ಹೊತ್ತು. ಅದನ್ನು ರಾಕ್ಷಸನು ವಿಕಾಲನು ಬರುವ ಸಮಯ ಎಂದುಕೊಂಡು, “ಆಃ ವಿಕಾಲನೆಂಬ ಇನ್ನೊಬ್ಬನೂ ಇವಳನ್ನು ಹಿಡಿದಿರಬೇಕು. ಅವನಿಗೂ ನನ್ನಂತೆಯೇ ಇವಳನ್ನು ಹೊತ್ತುಕೊಂಡು ಹೋಗಲು ಅಸಾಧ್ಯವಾಗಿದೆ. ಇರಲಿ. ಆ ವಿಕಾಲನು ಯಾರೋ ನೋಡೋಣ” ಎಂದು ಕುದುರೆಯಾಗಿ ಲಾಯದಲ್ಲಿ ನಿಂತನು.
ಆ ವೇಳೆಗೆ ಒಬ್ಬ ಕುದುರೆ ಕಳ್ಳನು ಲಾಯದೊಳಕ್ಕೆ ನುಗ್ಗಿ ಬಂದು ದೀಪವನ್ನು ಆರಿಸಿ ಕುದುರೆ ಕುದುರೆಯನ್ನು ಮುಟ್ಟಿ ನೋಡುತ್ತ ಬಂದನು. ರಾಕ್ಷಸ ಕುದುರೆಯು ಮಿಕ್ಕ ಕುದುರೆಗಳಿಗಿಂತ ಚೆನ್ನಾಗಿತ್ತು. ಅದರಿಂದ ಅವನು ಅದಕ್ಕೆ ಕಡಿವಾಣ, ಹಲ್ಲಣಗಳನ್ನು ಹಾಕಿ, ಅದರ ಮೇಲೆ ಕುಳಿತು ಓಡಿಸಿಕೊಂಡು ಹೋದನು. ರಾಕ್ಷಸನೂ “ಇವನೇ ವಿಕಾಲ ನಿರಬೇಕು. ಎಲ್ಲ ಕುದುರೆಗಳನ್ನೂ ಬಿಟ್ಟು ನನ್ನನ್ನೇ ಹಿಡಿದಿದ್ದಾನೆ. ಬಂತು ನನಗೆ ಮೃತ್ಯು. ಇನ್ನು ನಾನು ಬದುಕುವಂತಿಲ್ಲ” ಎಂದು ಹೆದರಿ ನಾಗಾಲೋಟ ಓಡಿತು.
ಹೊಡೆದರೂ, ಮುಳ್ಳು ಚುಚ್ಚಿದರೂ, ಕಡಿವಾಣ ಎಳೆದರೂ ನಿಲ್ಲದೆ ಓಡುತ್ತಿರುವ ಕುದುರೆಯನ್ನು ನೋಡಿ, “ನಿಜವಾಗಿಯೂ ಇದಕ್ಕೆಲ್ಲೋ ದೆವ್ವ ಹಿಡಿದಿದೆ. ಇದನ್ನು ಹಿಡಿಯುವುದು ಸಾಧ್ಯವಿಲ್ಲ ಇದೆಲ್ಲಾದರೂ ನನ್ನನ್ನು ಹೊತ್ತುಕೊಂಡು ಹೋಗಿ ಕೊಲ್ಲುವುದು  ತಪ್ಪಿಸಿಕೊಳ್ಳಬೇಕು?” ಎಂದು ಆ ಕಳ್ಳನು ಯೋಚಿಸಿಕೊಂಡು, ಬೆಳಗಾಗುವ ವೇಳೆಗೆ ದಾರಿಯಲ್ಲಿ ಸಿಕ್ಕಿದ ಒಂದು ಆಲದ ಮರವನ್ನು ಹತ್ತಿಕೊಂಡನು.
ಆ ಮರದಲ್ಲಿ ಆ ರಾಕ್ಷಸನಿಗೆ ಪರಮ ಸ್ನೇಹಿತನಾದ ಒಂದು ಕಪಿ ಇತ್ತು. ಅದು ಓಡುತ್ತಿದ್ದ ರಾಕ್ಷಸನನ್ನು ನಿಲ್ಲಿಸಿ “ಏನು?” ಎಂದು ಕೇಳಿತು. ರಾಕ್ಷಸನು ವಿಕಾಲನ ಕಥೆಯನ್ನು ಹೇಳಲು, “ನಿನ್ನ ವಿಕಾಲನು ಈ ಮರದಲ್ಲಿದ್ದಾನೆ. ನೋಡು. ಅವನು ಮನುಷ್ಯ ನಿನ್ನ ಆಹಾರ” ಎಂದಿತು. ಅದನ್ನು ಕಳ್ಳನು ಕೇಳಿ ಕಪಿಯ ಮೇಲೆ ಕೋಪಮಾಡಿಕೊಂಡು, ಅದರ ಬಾಲವನ್ನು ಹಿಡಿದು ಚೆನ್ನಾಗಿ ಕಚ್ಚಿ ಬಿಟ್ಟನು. ಕಪಿಯು ಕೊಂಬೆಗಳ ನಡುವೆ ಕುಳಿತಿತ್ತು. ಅದು ಅತ್ತ ಇತ್ತ ತಿರುಗುವಂತೆ ಇಲ್ಲ. ಆ ನೋವೋ ಸಹಿಸಲಾರದಷ್ಟು. ಆಗ, ಅದು ನೋವಿನಿಂದ ಮುಸುಡಿ ಸೊಟ್ಟ ಮಾಡಿಕೊಂಡು ಅಯ್ಯೋ ಎಂದು ಕೂಗಿ ಕೊಂಡಿತು.
ರಾಕ್ಷಸನು ಆ ಕೂಗನ್ನೂ ಅದರ ಮುಸುಡನ್ನೂ ನೋಡಿ. “ನೋಡಿದೆಯಾ ವಿಕಾಲನ ಮಹಿಮೆ? ನನಗೆ ಬೇಡ ಈ ಸಹವಾಸ” ಎಂದು ಕಾಲಿಗೆ ಬುದ್ದಿ ಹೇಳಿದನು.
ಅದರಿಂದ ಹೇಳಿದೆ, “ಓಡಿಗೆದ್ದವ ಬದುಕಿದ” ಎಂದು. ಅದರಿಂದ ನನಗೆ ಅಪ್ಪಣೆಯನ್ನು, ಕೊಡು. ನಾನು ಮನೆಗೆ ಹೋಗುವೆನು. ನಿನ್ನ ಲೋಭದ ಫಲವನ್ನು ನೀನು ಅನುಭವಿಸು” ಎಂದನು.
ಚಕ್ರಧರನು “ಸತ್ಯ. ಆದದ್ದಾಯಿತು. ಹೋಗಿ ಬಾ. ನೀನೆಲ್ಲಾದರೂ ಚೆನ್ನಾಗಿರು.” ಎಂದು ಆಶೀರ್ವಾದ ಮಾಡಿ ಕಳುಹಿಸಿ ಕೊಟ್ಟನು.
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ
“ನೋಡದೆ ಮಾಡಿದರೆ” ಎಂಬ
ಎರಡನೆಯ ತಂತ್ರವು ಮುಗಿದುದು
*****
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...