
(೨೬-೧-೧೯೫೦)
ಕಿರೀಟಪತಿಗಳ ರಾಜ್ಯವಿದಲ್ಲ
ನಮ್ಮೀ ಭಾರತದೇಶ
ಈ ಮೊದಲಿನ್ನೀ ರಾಜ್ಯದಿ ನಡೆವುದು
ನಾಡ ಮಕ್ಕಾಳಾದೇಶ-
ಎಂದುಗ್ಗಡಿಸುವ ಬಿರುದಿನ ಬಾವುಟ
ವೇರಿತು ದಿಭಿಯ ತುದಿಗೆ
ಬಿಸಿರಕುತದ ಹುಸಿಯಲ್ಲದ ಕನಸಿನ
ಧೀರರ ಬಗೆಬಾನ್ಬದಿಗೆ.
ಚಳಿಮುರಿಯದೆ ಹಿಮಹಿಂಗದೆ ಜನ ಮುಂ-
ಜಾನೆಯೊಳೆಚ್ಚರೆ ಬೆದರೆ
ಸುಖಪುರುಷರು ನೆಮ್ಮದಿಗೆಡೆ ಹೊರಟಿತು
ದಿಬ್ಬಣ ಹಳಮನವದಿರೆ.
ಹೊಸತೀ ನೆಲ ಹೊಸತೀ ಜನ ಹೊಸತೇ-
ಜದ ಬಾಳೀ ಭಾರತಕೆ
ಎನೆ ಹೊಸ ಜಗ್ಗಿನ ಹೆಜ್ಜೆಯ ಲಾಗಿನ
ನಡೆ ನಮ್ಮೀ ಯುವಜನಕೆ.
ಉದುರುವ ಹಣ್ಣೆಲೆ ಹೊಸ ಚೆಂದಳಿರಿಗೆ
ಗೊಬ್ಬರವೆಂತುಟೊ ಅಂತು
ಹಳೆಯ ರೂಢಿ ಹುಡಿಗೂಡಲು ಹೊಸತರ
ಹುರುಪೆಮಗಾಯಿತಿದಿಂತು.
ಮುದುಡಿದ ವಿಜ್ಞಾನದ ಹೆಡೆ ಬಿಚ್ಚುತ
ನಮ್ಮೊಳ ಪ್ರಜ್ಞೆಯನಂತ
ತನ್ನೆದೆ ತಲ್ಪದೊಳಿಹ ಮಂಗಳವನು
ಕಾಪಿಡೆ ತೊಟ್ಟಿದೆ ಪಂತ.
ತನ್ನರಿವಿನಂತೆ ತನ್ನಿರವಾಗಲು
ಹವಣಿಸುತೆದ್ದಿದೆ ನಾಡು
ಪರರಿಗಲ್ಲದೆಮ್ಮುಜ್ಜುಗಕಾಯಿತು
ಸರ್ವ ಸಮೃದ್ಧಿಯ ಜಾಡು.
ಜಗಳಗಂಟರಲ್ಲಬಲರಲ್ಲನಾ-
ವೆಮಗಿನಿತಿಲ್ಲವು ಕರುಬು
ಅಂಜೆವಂಜಿಸೆವು-ಎನೆ ಗೆಲುವಾಯ್ತೀ
ಬಾವುಟವಾಡುವ ಜರುಬು.
ಕಿವಿಗಿನಿದೀ ಜಯ ಜಯಫೋಷಣೆ, ಕಣ್-
ಗಿನಿದೀ ಹಮ್ಮಿನ ಪರಿಸೆ
ಮೆರವಣಿಗೆಯಿಗೋ ದೈವವು ಧೀರರಿ-
ಗೆರೆವಾ ಶುಭಗಳ ವರಿಸೆ.
ಜಯ ಶುಭಮಂಗಳ ನವ ಭಾರತಕೆ
ಸಲ್ಲಲಿ ಸಂತರ ಹರಕೆ
ಶುಭಾ ಶುಭವ ತನ್ನಿಚ್ಛೆಗೆ ನಡೆಸುವ
ಸರ್ವೋದ್ಧಾರಕ ಶಿವಕೆ.
ಅವಾಚ್ಯವಾಗಲಿ ದೇಹಿನಾಸ್ತಿಯೆಂ-
ಬುಕ್ತಿಗಳೆಮ್ಮೀ ಜನಕೆ
ಮಿತಹಿಂಸೆಯೊಳಮಿತಪ್ರೇಮದೊಳೀ-
ಆಳಿಕೆ ಲೋಕವ ಹಿತಕೆ.
ಸಿರಿ ಹೆಚ್ಚಲಿ ಸೊಗಹೆಚ್ಚಲಿ ಋದ್ಧಿಯೊ-
ಳಿಂದ್ರಿಯ ನಿಗ್ರಹಕೊಲಿದು
ದುಃಖದ ಕರುಕಿಡದಾನಂದವ ಪಡೆ-
ದೀ ನೆಲ ಬಾಳಲಿ ನಲಿದು.
*****
















