Home / ಕವನ / ಕವಿತೆ / ಸ್ವಾತಂತ್ರ್ಯ ದೇವಿಗೆ

ಸ್ವಾತಂತ್ರ್ಯ ದೇವಿಗೆ

ತುಳಿದ ರಭಸಕೆ ನೆಲವೆ ಬಿರಿವಂತೆ, ಬಿಡುಗಡೆಯೆ,
ಇಳಿತಂದೆಯೌ ಪರಮರೌದ್ರವನು ಮೆರೆದು
ನಿನ್ನ ಭಜಕರ ತಪಕೆ ಒಲಿದರೂ ಈ ಎಡೆಗೆ
ಬರೆ ಬಿಂಕಗೊಂಡಂತೆ ಸೌಮ್ಯತೆಯ ತೊರೆದು
ಭಾರತದ ಸಾಧುಜನರಾತತಾಯಿಗಳಾಗೆ
ದುರ್ಮೋಹ ಧೂಮದಿಂ ಚಿತ್ತವನು ಕವಿದು
ಕಾಂಬವರು ಕಂದೆಗೆಯೆ ವಿಪುಳ ತೇಜದೊಳುರಿದು
ನೀರಸರು ಸಿಡಿದೊಡೆವ ತೆರದಿ ಕಿಡಿಗರೆದು

ನೀ ಬಂದೆಯಂದು ಬಾನುಳಿವ ಸ್ವರ್‌ಗಂಗೆಯಂತೆ
ಶಿವನ ಹೃದಯವ ತುಳಿದು ನರ್ತಿಸುವ ಕಾಳಿಯಂತೆ
ವಿಷದ ಮುಂಗಾವಲಂ ಕೊಂಡು ಬಂದಮೃತದಂತೆ
ನಿನ್ನ ನೆನೆದವರೂಹೆಗೆಟ್ಟಾಸೆ ಹಿಂಗುವಂತೆ.

ಶುಭದ ಶಂಖಧ್ವನಿಯ ಓಂಕಾರದಾಹ್ವಾನ
ಜಯ ಜಯೆಂಬುಗ್ಗಡಣೆ, ಸ್ವಸ್ತಿಸ್ವಸ್ತ್ಯುಕ್ತಿ
ಮರುಚಣವೆ ದುಃಖಾರ್ತಲೋಕದಾಕ್ರಂದನವು
ಲೋಭದುರ್ಮದಮೋಹವೈಷಮ್ಯಮುಕ್ತಿ
ಕೃತಕೃತ್ಯತೆಯ ಸೊಗದ ಸಂಮೋದ ಸಂಭ್ರಮದ
ಜತೆಗೆ ರುಷ್ಟೋದ್ರಿಕ್ತಜನದ ನಿರ್‌ಹ್ರಾದ
ನಿಶ್ಶೃಂಖಲತೆಯೊಡನೆ ಉಚ್ಛೃಂಖಲಾವೃತ್ತಿ
ವಿಶ್ವಮಾನಿತೆಯೊಡನೆ ವಿಶ್ವಾಪವಾದ-

ಇಂತಾತ್ಮ ತ್ರೈಗುಣ್ಯಬಂಧಗಳ ಎಲ್ಲೆ ಮೀರೆ
ಉದ್ರಸೋಜ್ವಲವಾಗಿ ನವರಸಗಳೆಲ್ಲವನು ತೋರೆ
ನಿನ್ನುಸಿರಕೊಂಡೆದ್ದ ಜೀವಬುದ್‌ಬುದಗಳೆಂತು
ಭಾವವಿಸ್ಫುರಣವಂ ಕೊಂಡವವೌ ಸ್ಫುಟಿಸುವಂತು!

ಭಕ್ತ ವಿಶ್ವಾಸದಿಂ ಪಾರ್ಥನಿದಿರೊಳು ನಿಂದ
ವಿಶ್ವರೂಪದ ಅಪ್ರಮೇಯನಂ ಹೋಲಿ
ಮಾತವಸಿಯಿದಿರಿಂತು ನೀ ನಿಲ್ಲೆ ಕಾಣುತ್ತ
ಭೀತಿ ವಿಹ್ವಲನಾದನಾ ಸತ್ವಶಾಲಿ
ತನ್ನಳತೆಗಳವಟ್ಟು ಮಮತೆಯೊಳೆ ನಡೆದಂಥ
ದಿನದ ಬಳಕೆಯ ಕನಸು ಇಂಥ ಕಣಸಾಯ್ತೆ
ತನ್ನ ನಯಸಂಪನ್ನವಾಗಿದ್ದ ಬದ್ಧ ಜನ
ಸ್ವಾಚ್ಛಂದ್ಯದೊಳಗಿಂತು ದುರ್ದಮ್ಯವಾಯ್ತೆ!-

ಈ ಅಚಿಂತ್ಯಕೆ ಚಿತ್ತ ಕೋರೈಸೆ ಕುರುಡನಾಗಿ
ಉಪವಾಸದಿಂ ತವಿಸಿ ಮುದನೀಗಿ ಮೌನಿಯಾಗಿ
ಓ ರುದ್ರೆ ಭದ್ರಳಾಗೆಂದು ಒಮ್ಮನದೊಳೆರೆದಂ
ಎಲ್ಲ ಮನದೊಳಗಿಂತೆ ಮೊರೆಗೊಡಲು ತನುವ ಮರೆದಂ

ದೇವಿ, ಸ್ವಾತಂತ್ರ್ಯಾಂಬೆ, ಎನಿತು ಶತಶತಮಾನ
ನಾವೆರೆದು ಕಾದಿಹೆವು ನೀ ಬಿಜಯಗೈಯೆ
ಎನಿತು ದೇಹದೊಳೆನಿತು ರೀತಿಯೊಳು ನಿನಗಾಗಿ
ಎನಿತು ಸೊಗದಾಹುತಿಯ ನಿತ್ತೆವೌ, ತಾಯೆ.
ಪರಶಿಶಿರ ಶೈತ್ಯದೊಳು ಋಷಿತೇಜದುಷ್ಣದಿಂ
ನಮ್ಮ ತಾಯ್ನೆಲ ಬದುಕೆ ಕಡುಪಾಡ ಪಡುತ

ಜಾತಿ ಜಾತಿಯ ಗೂಢ ರೂಢಿಗಳ ಮೂಡೆಯೊಳು
ಅವಳ ಸತ್ವದ ಬೀಜಗಳನು ಕಾಪಿಡುತ

ಕೊನೆಗೆ ನೀನೈತಂದೆ, ಶುಭ ಸುಪ್ರಭಾತವೆಂದೆ
ಮುಂಬೆಳಗ ತಂದವಳು ನಂಜ ಮರೆಗೇಕೆ ನಿಂದೆ?
ಅರಿಷಟ್ಕತೊಲಗೆ ಮೊದಲವಕೆ ಈ ರೌದ್ರಬೇಕೆ
ದುರ್‌ಗ್ರಹೋಚ್ಚಾಟನಕೆ ಕೊಟ್ಟಬಲಿ ಇನ್ನು ಸಾಕೆ?

ಎಂತಾದರೂ ಸರಿಯೆ, ಇಲ್ಲೆ ನೀ ನಿಲ್ಲವ್ವ
ಏನಾದರೂ ನಮ್ಮ ನೀ ತೊರೆಯಬೇಡ
ನಿನ್ನ ಅಭಯದ ವರದೊಳೆಲ್ಲ ಭಯಗಳ ನೀಗಿ
ವಿಶ್ವತೋಮುಖವಾಗೆ ನಡೆಸು ಈ ನಾಡ
ಸ್ವಾರ್ಥಿಗಳ ಲೋಭಕ್ಕೆ ಮತವಳರ ಕಾಮಕ್ಕೆ
ಧ್ಯೇಯ ಮೋಹಕು ನಾವು ಸಲ್ಲದಂತಿರಿಸು
ಕ್ಷೇಮಮಿತಿಯುದ್ಯೋಗ ಹೃದಯಮಿತಿ ವಿಜ್ಞಾನ
ವಿಶ್ವಮಿತಿ ನಮ್ಮಾತ್ಮವಾಗಲನುಗೊಳಿಸು.

ಸಂತನಸುವೇ ನಿನಗೆ ನಾವಿಡುವ ರಾಮರಕ್ಷೆ
ನಿರ್ಬಾಧ ಪೌರುಷೋತ್ತಮ್ಯವೇ ಬಯಪ ಭಿಕ್ಷೆ
ಇಂದು ಉದಯದ ಮಂಜುಹರಿದು ಹಗಲಾಯಿತೆಂಬೆ
ದೇವಿ, ಜಯಜಯ, ಶರಣು, ಹರಸು ಕೈಮುಗಿವೆನಂಬೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...