Home / ಕವನ / ಕವಿತೆ / ಸ್ವಾತಂತ್ರ್ಯ ದೇವಿಗೆ

ಸ್ವಾತಂತ್ರ್ಯ ದೇವಿಗೆ

ತುಳಿದ ರಭಸಕೆ ನೆಲವೆ ಬಿರಿವಂತೆ, ಬಿಡುಗಡೆಯೆ,
ಇಳಿತಂದೆಯೌ ಪರಮರೌದ್ರವನು ಮೆರೆದು
ನಿನ್ನ ಭಜಕರ ತಪಕೆ ಒಲಿದರೂ ಈ ಎಡೆಗೆ
ಬರೆ ಬಿಂಕಗೊಂಡಂತೆ ಸೌಮ್ಯತೆಯ ತೊರೆದು
ಭಾರತದ ಸಾಧುಜನರಾತತಾಯಿಗಳಾಗೆ
ದುರ್ಮೋಹ ಧೂಮದಿಂ ಚಿತ್ತವನು ಕವಿದು
ಕಾಂಬವರು ಕಂದೆಗೆಯೆ ವಿಪುಳ ತೇಜದೊಳುರಿದು
ನೀರಸರು ಸಿಡಿದೊಡೆವ ತೆರದಿ ಕಿಡಿಗರೆದು

ನೀ ಬಂದೆಯಂದು ಬಾನುಳಿವ ಸ್ವರ್‌ಗಂಗೆಯಂತೆ
ಶಿವನ ಹೃದಯವ ತುಳಿದು ನರ್ತಿಸುವ ಕಾಳಿಯಂತೆ
ವಿಷದ ಮುಂಗಾವಲಂ ಕೊಂಡು ಬಂದಮೃತದಂತೆ
ನಿನ್ನ ನೆನೆದವರೂಹೆಗೆಟ್ಟಾಸೆ ಹಿಂಗುವಂತೆ.

ಶುಭದ ಶಂಖಧ್ವನಿಯ ಓಂಕಾರದಾಹ್ವಾನ
ಜಯ ಜಯೆಂಬುಗ್ಗಡಣೆ, ಸ್ವಸ್ತಿಸ್ವಸ್ತ್ಯುಕ್ತಿ
ಮರುಚಣವೆ ದುಃಖಾರ್ತಲೋಕದಾಕ್ರಂದನವು
ಲೋಭದುರ್ಮದಮೋಹವೈಷಮ್ಯಮುಕ್ತಿ
ಕೃತಕೃತ್ಯತೆಯ ಸೊಗದ ಸಂಮೋದ ಸಂಭ್ರಮದ
ಜತೆಗೆ ರುಷ್ಟೋದ್ರಿಕ್ತಜನದ ನಿರ್‌ಹ್ರಾದ
ನಿಶ್ಶೃಂಖಲತೆಯೊಡನೆ ಉಚ್ಛೃಂಖಲಾವೃತ್ತಿ
ವಿಶ್ವಮಾನಿತೆಯೊಡನೆ ವಿಶ್ವಾಪವಾದ-

ಇಂತಾತ್ಮ ತ್ರೈಗುಣ್ಯಬಂಧಗಳ ಎಲ್ಲೆ ಮೀರೆ
ಉದ್ರಸೋಜ್ವಲವಾಗಿ ನವರಸಗಳೆಲ್ಲವನು ತೋರೆ
ನಿನ್ನುಸಿರಕೊಂಡೆದ್ದ ಜೀವಬುದ್‌ಬುದಗಳೆಂತು
ಭಾವವಿಸ್ಫುರಣವಂ ಕೊಂಡವವೌ ಸ್ಫುಟಿಸುವಂತು!

ಭಕ್ತ ವಿಶ್ವಾಸದಿಂ ಪಾರ್ಥನಿದಿರೊಳು ನಿಂದ
ವಿಶ್ವರೂಪದ ಅಪ್ರಮೇಯನಂ ಹೋಲಿ
ಮಾತವಸಿಯಿದಿರಿಂತು ನೀ ನಿಲ್ಲೆ ಕಾಣುತ್ತ
ಭೀತಿ ವಿಹ್ವಲನಾದನಾ ಸತ್ವಶಾಲಿ
ತನ್ನಳತೆಗಳವಟ್ಟು ಮಮತೆಯೊಳೆ ನಡೆದಂಥ
ದಿನದ ಬಳಕೆಯ ಕನಸು ಇಂಥ ಕಣಸಾಯ್ತೆ
ತನ್ನ ನಯಸಂಪನ್ನವಾಗಿದ್ದ ಬದ್ಧ ಜನ
ಸ್ವಾಚ್ಛಂದ್ಯದೊಳಗಿಂತು ದುರ್ದಮ್ಯವಾಯ್ತೆ!-

ಈ ಅಚಿಂತ್ಯಕೆ ಚಿತ್ತ ಕೋರೈಸೆ ಕುರುಡನಾಗಿ
ಉಪವಾಸದಿಂ ತವಿಸಿ ಮುದನೀಗಿ ಮೌನಿಯಾಗಿ
ಓ ರುದ್ರೆ ಭದ್ರಳಾಗೆಂದು ಒಮ್ಮನದೊಳೆರೆದಂ
ಎಲ್ಲ ಮನದೊಳಗಿಂತೆ ಮೊರೆಗೊಡಲು ತನುವ ಮರೆದಂ

ದೇವಿ, ಸ್ವಾತಂತ್ರ್ಯಾಂಬೆ, ಎನಿತು ಶತಶತಮಾನ
ನಾವೆರೆದು ಕಾದಿಹೆವು ನೀ ಬಿಜಯಗೈಯೆ
ಎನಿತು ದೇಹದೊಳೆನಿತು ರೀತಿಯೊಳು ನಿನಗಾಗಿ
ಎನಿತು ಸೊಗದಾಹುತಿಯ ನಿತ್ತೆವೌ, ತಾಯೆ.
ಪರಶಿಶಿರ ಶೈತ್ಯದೊಳು ಋಷಿತೇಜದುಷ್ಣದಿಂ
ನಮ್ಮ ತಾಯ್ನೆಲ ಬದುಕೆ ಕಡುಪಾಡ ಪಡುತ

ಜಾತಿ ಜಾತಿಯ ಗೂಢ ರೂಢಿಗಳ ಮೂಡೆಯೊಳು
ಅವಳ ಸತ್ವದ ಬೀಜಗಳನು ಕಾಪಿಡುತ

ಕೊನೆಗೆ ನೀನೈತಂದೆ, ಶುಭ ಸುಪ್ರಭಾತವೆಂದೆ
ಮುಂಬೆಳಗ ತಂದವಳು ನಂಜ ಮರೆಗೇಕೆ ನಿಂದೆ?
ಅರಿಷಟ್ಕತೊಲಗೆ ಮೊದಲವಕೆ ಈ ರೌದ್ರಬೇಕೆ
ದುರ್‌ಗ್ರಹೋಚ್ಚಾಟನಕೆ ಕೊಟ್ಟಬಲಿ ಇನ್ನು ಸಾಕೆ?

ಎಂತಾದರೂ ಸರಿಯೆ, ಇಲ್ಲೆ ನೀ ನಿಲ್ಲವ್ವ
ಏನಾದರೂ ನಮ್ಮ ನೀ ತೊರೆಯಬೇಡ
ನಿನ್ನ ಅಭಯದ ವರದೊಳೆಲ್ಲ ಭಯಗಳ ನೀಗಿ
ವಿಶ್ವತೋಮುಖವಾಗೆ ನಡೆಸು ಈ ನಾಡ
ಸ್ವಾರ್ಥಿಗಳ ಲೋಭಕ್ಕೆ ಮತವಳರ ಕಾಮಕ್ಕೆ
ಧ್ಯೇಯ ಮೋಹಕು ನಾವು ಸಲ್ಲದಂತಿರಿಸು
ಕ್ಷೇಮಮಿತಿಯುದ್ಯೋಗ ಹೃದಯಮಿತಿ ವಿಜ್ಞಾನ
ವಿಶ್ವಮಿತಿ ನಮ್ಮಾತ್ಮವಾಗಲನುಗೊಳಿಸು.

ಸಂತನಸುವೇ ನಿನಗೆ ನಾವಿಡುವ ರಾಮರಕ್ಷೆ
ನಿರ್ಬಾಧ ಪೌರುಷೋತ್ತಮ್ಯವೇ ಬಯಪ ಭಿಕ್ಷೆ
ಇಂದು ಉದಯದ ಮಂಜುಹರಿದು ಹಗಲಾಯಿತೆಂಬೆ
ದೇವಿ, ಜಯಜಯ, ಶರಣು, ಹರಸು ಕೈಮುಗಿವೆನಂಬೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...