Home / ಕವನ / ಕವಿತೆ / ಸ್ವಾತಂತ್ರ್ಯ ದೇವಿಗೆ

ಸ್ವಾತಂತ್ರ್ಯ ದೇವಿಗೆ

ತುಳಿದ ರಭಸಕೆ ನೆಲವೆ ಬಿರಿವಂತೆ, ಬಿಡುಗಡೆಯೆ,
ಇಳಿತಂದೆಯೌ ಪರಮರೌದ್ರವನು ಮೆರೆದು
ನಿನ್ನ ಭಜಕರ ತಪಕೆ ಒಲಿದರೂ ಈ ಎಡೆಗೆ
ಬರೆ ಬಿಂಕಗೊಂಡಂತೆ ಸೌಮ್ಯತೆಯ ತೊರೆದು
ಭಾರತದ ಸಾಧುಜನರಾತತಾಯಿಗಳಾಗೆ
ದುರ್ಮೋಹ ಧೂಮದಿಂ ಚಿತ್ತವನು ಕವಿದು
ಕಾಂಬವರು ಕಂದೆಗೆಯೆ ವಿಪುಳ ತೇಜದೊಳುರಿದು
ನೀರಸರು ಸಿಡಿದೊಡೆವ ತೆರದಿ ಕಿಡಿಗರೆದು

ನೀ ಬಂದೆಯಂದು ಬಾನುಳಿವ ಸ್ವರ್‌ಗಂಗೆಯಂತೆ
ಶಿವನ ಹೃದಯವ ತುಳಿದು ನರ್ತಿಸುವ ಕಾಳಿಯಂತೆ
ವಿಷದ ಮುಂಗಾವಲಂ ಕೊಂಡು ಬಂದಮೃತದಂತೆ
ನಿನ್ನ ನೆನೆದವರೂಹೆಗೆಟ್ಟಾಸೆ ಹಿಂಗುವಂತೆ.

ಶುಭದ ಶಂಖಧ್ವನಿಯ ಓಂಕಾರದಾಹ್ವಾನ
ಜಯ ಜಯೆಂಬುಗ್ಗಡಣೆ, ಸ್ವಸ್ತಿಸ್ವಸ್ತ್ಯುಕ್ತಿ
ಮರುಚಣವೆ ದುಃಖಾರ್ತಲೋಕದಾಕ್ರಂದನವು
ಲೋಭದುರ್ಮದಮೋಹವೈಷಮ್ಯಮುಕ್ತಿ
ಕೃತಕೃತ್ಯತೆಯ ಸೊಗದ ಸಂಮೋದ ಸಂಭ್ರಮದ
ಜತೆಗೆ ರುಷ್ಟೋದ್ರಿಕ್ತಜನದ ನಿರ್‌ಹ್ರಾದ
ನಿಶ್ಶೃಂಖಲತೆಯೊಡನೆ ಉಚ್ಛೃಂಖಲಾವೃತ್ತಿ
ವಿಶ್ವಮಾನಿತೆಯೊಡನೆ ವಿಶ್ವಾಪವಾದ-

ಇಂತಾತ್ಮ ತ್ರೈಗುಣ್ಯಬಂಧಗಳ ಎಲ್ಲೆ ಮೀರೆ
ಉದ್ರಸೋಜ್ವಲವಾಗಿ ನವರಸಗಳೆಲ್ಲವನು ತೋರೆ
ನಿನ್ನುಸಿರಕೊಂಡೆದ್ದ ಜೀವಬುದ್‌ಬುದಗಳೆಂತು
ಭಾವವಿಸ್ಫುರಣವಂ ಕೊಂಡವವೌ ಸ್ಫುಟಿಸುವಂತು!

ಭಕ್ತ ವಿಶ್ವಾಸದಿಂ ಪಾರ್ಥನಿದಿರೊಳು ನಿಂದ
ವಿಶ್ವರೂಪದ ಅಪ್ರಮೇಯನಂ ಹೋಲಿ
ಮಾತವಸಿಯಿದಿರಿಂತು ನೀ ನಿಲ್ಲೆ ಕಾಣುತ್ತ
ಭೀತಿ ವಿಹ್ವಲನಾದನಾ ಸತ್ವಶಾಲಿ
ತನ್ನಳತೆಗಳವಟ್ಟು ಮಮತೆಯೊಳೆ ನಡೆದಂಥ
ದಿನದ ಬಳಕೆಯ ಕನಸು ಇಂಥ ಕಣಸಾಯ್ತೆ
ತನ್ನ ನಯಸಂಪನ್ನವಾಗಿದ್ದ ಬದ್ಧ ಜನ
ಸ್ವಾಚ್ಛಂದ್ಯದೊಳಗಿಂತು ದುರ್ದಮ್ಯವಾಯ್ತೆ!-

ಈ ಅಚಿಂತ್ಯಕೆ ಚಿತ್ತ ಕೋರೈಸೆ ಕುರುಡನಾಗಿ
ಉಪವಾಸದಿಂ ತವಿಸಿ ಮುದನೀಗಿ ಮೌನಿಯಾಗಿ
ಓ ರುದ್ರೆ ಭದ್ರಳಾಗೆಂದು ಒಮ್ಮನದೊಳೆರೆದಂ
ಎಲ್ಲ ಮನದೊಳಗಿಂತೆ ಮೊರೆಗೊಡಲು ತನುವ ಮರೆದಂ

ದೇವಿ, ಸ್ವಾತಂತ್ರ್ಯಾಂಬೆ, ಎನಿತು ಶತಶತಮಾನ
ನಾವೆರೆದು ಕಾದಿಹೆವು ನೀ ಬಿಜಯಗೈಯೆ
ಎನಿತು ದೇಹದೊಳೆನಿತು ರೀತಿಯೊಳು ನಿನಗಾಗಿ
ಎನಿತು ಸೊಗದಾಹುತಿಯ ನಿತ್ತೆವೌ, ತಾಯೆ.
ಪರಶಿಶಿರ ಶೈತ್ಯದೊಳು ಋಷಿತೇಜದುಷ್ಣದಿಂ
ನಮ್ಮ ತಾಯ್ನೆಲ ಬದುಕೆ ಕಡುಪಾಡ ಪಡುತ

ಜಾತಿ ಜಾತಿಯ ಗೂಢ ರೂಢಿಗಳ ಮೂಡೆಯೊಳು
ಅವಳ ಸತ್ವದ ಬೀಜಗಳನು ಕಾಪಿಡುತ

ಕೊನೆಗೆ ನೀನೈತಂದೆ, ಶುಭ ಸುಪ್ರಭಾತವೆಂದೆ
ಮುಂಬೆಳಗ ತಂದವಳು ನಂಜ ಮರೆಗೇಕೆ ನಿಂದೆ?
ಅರಿಷಟ್ಕತೊಲಗೆ ಮೊದಲವಕೆ ಈ ರೌದ್ರಬೇಕೆ
ದುರ್‌ಗ್ರಹೋಚ್ಚಾಟನಕೆ ಕೊಟ್ಟಬಲಿ ಇನ್ನು ಸಾಕೆ?

ಎಂತಾದರೂ ಸರಿಯೆ, ಇಲ್ಲೆ ನೀ ನಿಲ್ಲವ್ವ
ಏನಾದರೂ ನಮ್ಮ ನೀ ತೊರೆಯಬೇಡ
ನಿನ್ನ ಅಭಯದ ವರದೊಳೆಲ್ಲ ಭಯಗಳ ನೀಗಿ
ವಿಶ್ವತೋಮುಖವಾಗೆ ನಡೆಸು ಈ ನಾಡ
ಸ್ವಾರ್ಥಿಗಳ ಲೋಭಕ್ಕೆ ಮತವಳರ ಕಾಮಕ್ಕೆ
ಧ್ಯೇಯ ಮೋಹಕು ನಾವು ಸಲ್ಲದಂತಿರಿಸು
ಕ್ಷೇಮಮಿತಿಯುದ್ಯೋಗ ಹೃದಯಮಿತಿ ವಿಜ್ಞಾನ
ವಿಶ್ವಮಿತಿ ನಮ್ಮಾತ್ಮವಾಗಲನುಗೊಳಿಸು.

ಸಂತನಸುವೇ ನಿನಗೆ ನಾವಿಡುವ ರಾಮರಕ್ಷೆ
ನಿರ್ಬಾಧ ಪೌರುಷೋತ್ತಮ್ಯವೇ ಬಯಪ ಭಿಕ್ಷೆ
ಇಂದು ಉದಯದ ಮಂಜುಹರಿದು ಹಗಲಾಯಿತೆಂಬೆ
ದೇವಿ, ಜಯಜಯ, ಶರಣು, ಹರಸು ಕೈಮುಗಿವೆನಂಬೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...