Home / ಕವನ / ಕವಿತೆ / ಸಬ್ ವೇ

ಸಬ್ ವೇ

ಅಲ್ಲಿ ಬೇಸರವಿಲ್ಲ
ಸುಮ್ಮನೆ ಅಡ್ಡಾಡಬಹುದು ಒಂದರ್ಧಗಂಟೆ
ಛಿ ! ಥೂ ! ಅಣಕೂಡದು ಮುಖ ಸಿಂಡರಿಸಲೇಬಾರದು
ಹಸನ್ಮುಖರಾಗಿರಬೇಕು.
ತೆರೆದ ಕಣ್ಣು ಬಿಚ್ಚಿದ ಮನಸ್ಸುಗಳಷ್ಟಿದ್ದರೂ ಸಾಕು
ಹಣವಿಲ್ಲದಿದ್ದರೂ ನಡೆದೀತು
ಗಡಿಬಿಡಿ ಇರಬಾರದಷ್ಟೆ !
ಕೊಂಡುಕೊಳ್ಳಲೇಬೇಕೆಂದೇನಿಲ್ಲ
ಧಾರಾಳ ಅವಕಾಶ ಹತ್ತಿಪ್ಪತ್ತು ರೂಪಾಯಿಗಳ
ಸಾಮಾನು ನೋಡಲು
ಹೆಚ್ಚು ಮಾತನಾಡಬಾರದಷ್ಟೆ.

ಅಬ್ಬಬ್ಬಾ ಒಮ್ಮೊಮ್ಮೆ ಅದೇನು ಚೆಂದ
ಜನಜಂಗುಳಿ ಕೆಂಡಹಾಯ್ದು ಓಡುವಂಥಾ ಗಡಿಬಡಿ
ಆಚೆ ಕಾಯುತ್ತಿರಬಹುದೆ ಹುಡುಗಿ –
ಗೇಟ್ ಹಾಕಬಹುದೆ ಪ್ಯಾಕ್ಟರಿಯ ವಾಚಮನ್ –
ಕಾಲೇಜು ಬೆಲ್ ಬಾರಿಸಿತೋ ಏನೋ –
ದೂರದೂರಿನ ಬಸ್ಸು ಹೋಗಿದ್ದರೆ ! –
ಹೇಗಿದ್ದಾನೋ ಕೌನ್ಸಿಲರ್ ಅವನೊಬ್ಬ –
ಹೀಗೆ ಹೀಗೆ ಅದೇನೇನೋ ಕಾರಣದವರು.

ಮೆಟ್ಟಲಿನಾಚೆ ಈಚೆ ಹೊಟ್ಟೆಪಾಡಿಗರ ದೈನ್ಯತೆ
ಒಂದು ಕೊಂಡರೆ ಇನ್ನೊಂದು ಫ್ರಿ ಸರ್
ಪೆನ್ನು ಪೆನ್ಸಿಲ್ ಅಷ್ಟೇ ಅಲ್ಲ
ವಾಚು ಇಲೆಕ್ಟ್ರಿಕ್ ಸಾಮಾನುಗಳೂ
ಮೇಡ್ ಇನ್ ಚೈನಾ ಕೋರಿಯಾದವುಗಳು

ಅಲ್ಲಲ್ಲಿ ಜಪಾನದವುಗಳೂ ಅದೆಂತಹ ಮಿಂಚು
ಅಷ್ಟಷ್ಟೇ ಕೊಂಡು ಕೊಡುವ
ಜಾಣ ಜಿಪುಣರಿಗೆ ಜಾತ್ರೆಯೋ ಜಾತ್ರೆ
ಅಲ್ಲಿ ಏನುಂಟು ಏನಿಲ್ಲ
ಚಿನ್ನ ಚಿನ್ನ ಆಸೆ…..

ಅದೋ ಅಲ್ಲಿ ಗೌಜು ಗದ್ದಲದಲ್ಲೂ ತಣ್ಣಗೆ
ಪಿಟಿಲು ಬಾರಿಸಿ ಎದೆಕೊರೆಯುವ ಕುರುಡ
ಚಿಂದಿತೊಟ್ಟು ನಿಶ್ಚಿಂತತೆಯಲಿ ಬಿದ್ದ ಹೆಳವ
ಪಿಳಿ ಪಿಳಿ ಕಣ್ಣು ಕೈ ಸನ್ನೆಯ ಮೂಗ
ಹೇಳಿ ಯಾರಿಗಿದ್ದೀತು ಹಾದಿಹೋಕರಿಗೆ
ಹೃದಯ, ಸಮಯ ಇಲ್ಲಿ
ಕಿಸೆಗೆ ಭಾರವಾಗಿದ್ದರೆ ಎರಡು ಬಿಲ್ಲೆ
ಚೆಲ್ಲಿ ಹಗುರಾಗಿ ಓಡುವ
ಮನಸುಗಳ ಹೊರತಾಗಿ –
ಇಲ್ಲಿ ಗೋಡೆಯ ಪಿಚಕಾರಿಗೆ
ಹೊಂದಿ ಕುಳಿತ ಭಿಕ್ಷುಕರು
ಅಲ್ಲಿ ಗುಮಾನಿಯಾಗಿ ನಿಂತು
ನೋಡುವ ಕಳ್ಳ ಕದೀಮ ಪ್ರಚಂಡರು
ಅರೆಬರೆ ಬೆಳಕಿನಲ್ಲಿಯೇ ಎದೆ ಬಿರಿದುಕೊಂಡು
ಹಾದಿಹೋಕರ ಕಣ್ಣೆಳೆಯುತ
ಹದಿಹರೆಯದ ಮಾಂಸ ಮಾರಿಕೊಳ್ಳುವ
ಕೆಂಪು ದೀಪಿಕೆಯರು-

ಮತ್ತೊಂದೆಡೆ ಗಾಲಿಯ ಖುರ್ಚಿಯ ಮೇಲೊಬ್ಬ ಅಜ್ಜ
ಸುಸಂಸ್ಕೃತ ವೇಷ ಭೂಷಣಧಾರಿ
ಆಯಾ ದೇಶಗಳ ಪ್ರವಾಸಿಗರ ನೋಡುತ
ಅವರವರದೇ ದೇಶಗೀತೆಗಳಲಿ ಪಿಟಿಲಿಸಿ ಗಮನ ಸೆಳೆಯುವವ
ಇಲ್ಲಿ ಇವರ ಹಿಂದೆಯೇ ಅವನ ಮೊಮ್ಮಕ್ಕಳು
ಪಿಕ್ ಪಾಕೇಟ್‌ಮಾಡಿ ಮೆಲ್ಲಗೆ ಸರಿಯುವ ಸಮಯ
ಒಂದು ಜಾಲ, ಲೀಲಾಜಾಲ, ಕೈಚಳಕ.

ಇಲ್ಲಿ ಸುರಂಗದಲ್ಲಿ
ಸೂರ್ಯ ಒಳಗೆ ಬರಲೊಲ್ಲ
ಕನಸುಗಳು ಚಿಗಿತಾವು ಹೇಗೆ?
ಕತ್ತಲಗರ್ಭದಲ್ಲಿ ನಡೆಯುವ ತಳಮಳಕೆ
ಕೇವಲ ವರ್ತಮಾನ.

ಪೋಲಿಸನದೋ, ಹಪ್ತಾ ವಸೂಲಿಯವನದೋ
ಚಾಟಿ ಕಟ ಕಟ, ಅದರೊಳಗಿನ ಮಾತು ಗೊತ್ತಷ್ಟೇ

ಹೆದರಿದಂತೆ ಗಂಟು ಕಟ್ಟುವ ಓಡುವ ನಾಟಕ
ಕಳ್ಳ ಕಾಕರು ಮೆತ್ತಗೆ ಕಾಲುಕೀಳುವ ಸಮಯ
ಸೂರ್ಯ ಮುಳುಗುತ್ತಾನೆ,
ಸಂಜೆ ಮತ್ತದೇ ಗರಿಗರಿ ಮುದುರಿದ
ಸುಕ್ಕಾದ ಸುಸ್ತಾದ ದೇಹಗಳು
ಬೂದಿ ತುಳಿಯುತ ತೆವಳುತ ಸಾಗುವ ರೀತಿ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...