Home / ಕವನ / ಕವಿತೆ / ಹೊಗೆಯ ಸೊಪ್ಪು

ಹೊಗೆಯ ಸೊಪ್ಪು

ಹೊಗೆಯಸೊಪ್ಪಿನ ಮೇಲೆ ಪದ್ಯವ
ಬರೆವ ನನ್ನನು ಹಳಿಯದೆ
ಸಾವಧಾನದೊಳದರ ಮಹಿಮೆಯ
ಕೇಳಿರಯ್ಯಾ ಮುಳಿಯದೆ!

ಜಗದೊಳೆಷ್ಟೋ ಸೊಪ್ಪು ಸದೆಗಳು
ಬೆಳೆದು ಮಡಿಯುತಲಿವೆ ನಿಜ
ಪೇಳಿರೈ ನಿಮಗಾವುದೀವುದು
ಹೊಗೆಯಸೊಪ್ಪಿನ ಈ ಮಜ!

ಹಳಿವರೆಲ್ಲರ ತೃಪ್ತಿಗೋಸುಗ
ಇದರ ಜನನವನಿಲ್ಲಿಯೆ
ಬಣ್ಣಿಪೆನು ನಾ. ಇದುವು ಜನಿಸಿತು
ಶಿವನ ಸಮ್ಮುಖದಲ್ಲಿಯೆ!

ಒಮ್ಮೆ ಶಿವನಿಗೆ ಗಂಗೆ ತಲೆಯೊಳು
ನೆಲಸಿ ನೆಗಡಿಯು ಹಿಡಿದಿತು
ನಾರದನ ಜೊತೆಯಲ್ಲಿ ಯೋಚಿಸೆ
ಹೊಗೆಯಸೊಪ್ಬಿದು ಜನಿಸಿತು!

ಇದರ ಫಲವನು ಕಂಡ ಶಂಕರ
“ತಿರೆಯೊಳೂ ಇದ ಸೃಷ್ಟಿಸಿ
ಜನರಿಗುಪಕಾರವನು ಗೈವೆನು”
ಎಂದ ಗೌರಿಯ ದೃಷ್ಟಿಸಿ!

ಅಂದಿನಿಂ ಮೊದಲಾಯಿತಹಹಾ
ಹೊಗೆಯ ಸೊಪ್ಪಿನ ಮೋಹವು!
‘ಮೋಹ’ ವೆಂದೆನೆ? ತಪ್ಪು ನುಡಿದೆನು.
ಮೋಹವಲ್ಲವು, ನೇಹವು!

ಕೆಲರು ಸೊಪ್ಪನು ಎಲೆಯ ಜೊತೆಯೊಳು
ಜಗಿದು ಸುಖಿಸುತ ನಲಿದರು!
ಮತ್ತೆ ಕೆಲವರು ಪುಡಿಯ ಮೂಗಿಗೆ
ತುರುಕಿ ಮೂಗೊಳೆ ಉಲಿದರು!

ಇನ್ನು ಕೆಲವರು ಸುರುಳಿಗೈಯ್ಯುತ
ಅದಕೆ ಬೆಂಕೆಯನಿಟ್ಟರು!
ಬಂದ ಹೊಗೆಯನು ಶ್ವಾಸಕೋಶಕೆ
ಕಳುಹಿ ಉಸುರನು ಬಿಟ್ಟರು!

ಇಂತು ವಿಧವಿಧ ರೀತಿಯೊಳು ಜನ
ಹೊಗೆಯಸೊಪ್ಪನು ಬಳಸುತ
ನಲಿಯುತಿರಲದ ಮಾತ ಬಹುಜನ-
ರಿದ್ದರಲ ಹಣ ಗಳಿಸುತ!

ಒಳ್ಳೆ ಸುಣ್ಣದ ತೆಳ್ಳನೆಯ ಲೇ-
ಪವನು ಧರಿಸಿಹ ಚಿಗುರೆಲೆ
ಘಮ್ಮನಡಕೆಯು, ಜೊತೆಗೆ ಸೊಪ್ಪಿರೆ
ತಿರೆಯ ಜೀವನ ಹಗುರೆಲೆ!

ಅಡಕೆಲೆಯ ಜಗಿದಿಂತು ಬಿಡದಲೆ
ಕೆಂಪಗಾಗಿರೆ ತುಟಿಗಳು
ಬೆರಳ ಮಧ್ಯದಿ ರಸವ ಪಿಚ್ಚನೆ
ಉಗುಳ್ವರಹಹಾ ಸುಟಿಗಳು!

ಬೆರಳುಗಳ ನಡುವಿಂದ ಬುಗ್ಗೆಯ
ತೆರದಿ ಝಗ್ಗನೆ ನುಗ್ಗುತ
ಬಗೆಬಗೆಯ ತುಂತುರನು ರಚಿಪುದು
ಅರುಣ ರಸ ನೆರೆ ಹಿಗ್ಗುತ!

ಇಂತು ಜಗಿದರೆ ಹಲ್ಲಹುಳುಕಿಗೆ
ಪರಮ ಔಷಧವೆಂಬರೈ!
ಮದ್ದಿದೀಯದೆ ಹಲ್ಲಕೀಳುವ
ವೈದ್ಯರೆಲ್ಲರು ಹುಂಬರೈ!

ಬೇಸ್ತಿನಾಟದಿ, ಸುತ್ತುಮುತ್ತಿನ
ಗೆಳೆಯರೆಲ್ಲರು ಬಳಿಯಿರೆ
ಕಾಯುತೆನ್ನಿಳಿತವನೆ ಭಯದೊಳು
ಸದ್ದ ಮಾಡೆ ಕುಳಿತಿರೆ,

“ನೈಲ ತೂರಲೊ ತೂರದಿರಲೋ”
ಎಂಬ ಪೇಚೊಳು ನಾನಿರೆ
ಒಂದೆ ಚಿಟಿಕೆಯ ಮೂಗಿಗೇರಿಸೆ
ಹರಿವುದಹ ಮಂಕಿನ ಪೊರೆ!

ಠೀವಿಯೊಳು ಬಲಗಾಲ ತುದಿ ಎಡ-
ಗಾಲ ಮಂಡಿಯೊಳಾಡುತ
ತೂಗುತಿರೆ, ಘೃತ ಸುಣ್ಣ ಬೆರೆಸಿದ
ಮಡ್ಡಿ ನಶ್ಯವ ತೀಡುತ,

ಕುಳಿತು-ಸಗ್ಗದ ಮರಿಗಳಂದದ
ಗುಳಿಗೆ ಕೈಯೊಳು ನಿಂದಿರೆ
ಅದನೆ ನೋಡುತ ಪಡುವ ಸುಖವಿರೆ
ಏಕೆ ನನಗಾ ಇಂದಿರೆ?

ನೇವಿಕಟ್ಟನೊ ಗೋಲ್ಡುಫ್ಲ್ಯಾಕನೊ
ಬಾಯಲಿಡುತಲಿ ಬೆಂಕಿಯ
ಹಚ್ಚಿ ನೋಡಿರಿ! ನನ್ನ ಮಾತೊಳು
ನೀವು ಕಳೆವಿರಿ ಶಂಕೆಯ!

ತನಗೆ ತಾನೇ ಬಾಯಿ ಗೊಣಗುತ-
ಲಿರಲು ಹಾಡಿನ ಗುಂಗನು
ಕಣ್ಣ ತೇಲಿಸಿ, ದಮ್ಮನೊಂದನು
ಎಳೆದು ಬಿಡುತಲಿ ರಿಂಗನು,

ಅದನೆ ದಿಟ್ಟಿಸಿ ಮನದ ಪಾತ್ರೆಗೆ
ಸ್ವಪ್ನಮಧುವನು ತುಂಬಿಸಿ
ನಲಿಯದೀ ಜನ ಬರಿದೆ ಬೈವರು
ಮೂರ್ಖತನವನು ಬಿಂಬಿಸಿ!

ಉಗಿಯ ಬಂಡಿಗೆ ಆವಿಯೆಂತೋ
ಮತ್ತದೆಂತೋ ಸುರೆಯೊಳು
ನಿದ್ದೆಗೊಳ್ಳೆಯ ಕನಸದೆಂತೋ
ಅಂತೆ ಸಿಗರೇಟ್‌ ತಿರೆಯೊಳು!

“ಹೊಗೆಯ ಸೊಪ್ಪಿದು ಕೆಡುಕನೀವುದು”
ಎನುವರೆಲ್ಲರು ಪೆದ್ದರು
ತಿರೆಯೊಳುತ್ತಮ ಸೃಷ್ಟಿಯೆನಿಸಿದ
ನರನ ಕುಟಿಲತೆ ಮರೆವರು!

ನಿದ್ದೆವೆಣ್ಣಿನ ಕನಸ ಸೀರೆಯ
ಅವಳ ನೆರವೊಂದಿಲ್ಲದೆ
ಕಾಣಬಹುದಹ ಹೊಗೆಯಸೊಪ್ಪೊಳು
ಏನು ಮಾಯೆಯಿದಲ್ಲದೆ!

ಅದರಿನೆಲ್ಲರು ನನ್ನ ಮಾತೊಳು
ನಂಬಿ ಸೊಗವನು ಕಾಣಿರಿ
ಪ್ರಾಣಿಗಳು ಸಹ ನಾಚಿಕೊಳುವಂ-
ತಿರುವ ಬೈಗಳ ಮಾಣಿರಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...