Home / ಕವನ / ಕವಿತೆ / ಆರಿದಾರಿದು?

ಆರಿದಾರಿದು?

ಆರಿದಾರಿದು ಕರಿಯ ಅಂಚಿನ
ಬಿಳಿಯ ಸೀರೆಯ ಕನ್ನೆಯು
ತುಂಬು ಜವ್ವನವನ್ನೆ ಬಿಂಬಿಪ
ನುಣುಪು ಕೆನ್ನೆಯ ಚೆನ್ನೆಯು?

ಕರಿಯ ಮೋಡದ ಮೇಲೆ ಥಟ್ಟನೆ
ಸುಳಿದು ಮೆರೆಯುವ ಮಿಂಚೊಲು
ಕಾಡಿಗೆಯ ಕಣ್‌ತುದಿಯೊಳಹಹಾ!
ಕಣ್ಣಮಿಂಚಿನ ಗೊಂಚಲು!

ಕಂಗಳೆಸೆಯುವ ಮಿಂಚಕುಡಿಗಳ-
ನೆಲ್ಲವೊಂದೆಡೆ ಹೀರುತ
ಕೂಡಿಸಿಟ್ಟೊಲು ನತ್ತು ಮೂಗಿನೊ-
ಳಿಹುದು ನಗೆಯನು ಬೀರುತ!

ಪ್ರೇಮ-ಸರದೊಳು ಕೊಂಕುನಗೆಗಳ-
ನೊಯ್ವ ದೋಣಿಯು ಚೆಂದುಟಿ!
ಮುಂದೆ ಬರಲಿಹ ಮುತ್ತುಗಳ ನೆನೆ-
ದಿಂದೆ ನಾಚಿದೆ ಕೆಂದುಟಿ!

ರತಿಗೆ ಚೆಲುವೊಳು ರತಿಯೆ ಸಾಟಿಯು;
ಬೆಲ್ಲದೊಲೆ ಸವಿ ಬೆಲ್ಲವು;
ಅಂತೆಯೀಕೆಯ ಚೆಲುವು ಮಾಟಗ-
ಳೂಟೆಯೆನಿಪೀ ಗಲ್ಲವು!

ಮದನ ಮಾಲಿಯು ರವಿಕೆ ಬೇಲಿಯು
ಜನರ ಮನಗಳೆ ಹೊಲಗಳು!
ತುಂಬಿದೆದೆಗಳು ದೇಹ-ಲತೆಯೊಳು
ಬಿಟ್ಟ ಸುಮಧುರ ಫಲಗಳು!

ಕಾಣೆನೇತಕೊ ನಗುತಲಿರುವಳು
ಅದೆಕೊ ಕದಪೊಳು ಕುಳಿಗಳು-
ಮನವ ಸೆಳೆಯುತ ಮೋಹದಾಳಕೆ
ತಳ್ಳಲೆಳಸುವ ಸುಳಿಗಳು!

ಇಂಥ ಚೆಲುವೆಯು ಮತ್ತೆ ಸಿಕ್ಕಳು
ಎನುತಲವಳನು ಅಪ್ಪಲು
ಮುಂದೆ ನುಗ್ಗಲು ಕನಸು ಒಡೆದುದು;
ಕಣ್ಗೆ ಕವಿದಿತು ಕತ್ತಲು!
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...