Home / ಕವನ / ಕವಿತೆ / ಕಾಲನ ಕುದುರೆಯನೇರಿ ಬರುತಿಹ

ಕಾಲನ ಕುದುರೆಯನೇರಿ ಬರುತಿಹ

ಕಾಲನ ಕುದುರೆ ಏರಿ ಸಂಕ್ರಾಂತಿಗೆ ಬರುತಿಹ
ಸೂರ್ಯ ಮಕರರಾಶಿ ಪ್ರವೇಶಿಸುವ ದಿನ
ಪವಿತ್ರ ಸ್ನಾನಕೆ ಆಗಲೇ ಜನದಟ್ಟನೆ
ಹೆಣ್ಣುಗಂಡು ಭೇದವಿಲ್ಲದೆ ಮುಳುಗೇಳುವ
ಪ್ರಾರ್ಥಿಸುವ ಭಕ್ತಿ ಮಾರ್ಗಿಗಳ ಬೆಳಗು
ಚಳಿಗೆ ಮೈಮರಗಟ್ಟುವ ಸಮಯ
ನೆಲದ ಕಣ ಕಣ ಉಸುರಿನೊಳು
ವಸಂತಾಗಮನದ ಪಲ್ಲವ ತರುಲತೆಗಳ ತೋರಣ
ಕುಂಭಮೇಳದ ಚೈತನ್ಯಸಾಗರ ಪರ್ವಕಾಲ

ಪುಷ್ಯ ಹುಣ್ಣಿಮೆ ಮಕರ ಸಂಕ್ರಮಣ
ಮೌನಿ ಅಮವಾಸೆ ವಸಂತಪಂಚಮಿ
ಮಾಘ ಪೂರ್ಣಿಮೆ ಮಹಾಶಿವರಾತ್ರಿಯಲಿ
ಕುಂಭಮೇಳ ಅರ್ಧಕುಂಭಮೇಳಗಳ ಹರ್ಷೋಲ್ಲಾಸ
ನದಿಗುಂಟ ಎಲ್ಲೆಂದರಲ್ಲಿ ಭಕ್ತರ ಸಂಕುಲ
ಬಾಯ್ತುಂಬ ದೇವರನಾಮ
ದೈನ್ಯತೆ ಸಮರ್ಪಣಾ ಭಾವ

ಗಂಗಾ ಯಮುನಾ ಸರಸ್ವತಿ
ತ್ರಿವೇಣಿ ಸಂಗಮದ ಪ್ರಯಾಗ
ಪುಣ್ಯ ಸ್ನಾನಕೆ ಕೊರೆವ ಚಳಿಯೊಳಗೆ
ಹೆಪ್ಪುಗಟ್ಟಿದ ನೀರಿಗಿಳಿವ
ದ್ವಿಗುಣ ಫಲಪ್ರಾಪ್ತಿಯ ನಂಬಿಕೆಯವರ
ಜೀವನೋತ್ಸಾಹ ಆಸೆ ನೀರಿಕ್ಷೆ ಅದಮ್ಯ

ಮುಡಿಯಿಂದ ಅಡಿವರೆಗೆ ಸುರುಳಿಸುರುಳಿಯಾಗಿ
ಇಳಿದ ಕೂದಲು ಆಲದಮರದ ಬಿಳಲುಗಳು
ಈ ಸಾದು ಸನ್ಯಾಸಿಯರದು
ಹೊಂಗಿರಣ ಮೂಡುವ ಮೊದಲೇ
ಹಿಮನೀರಿಗೆ ಧುಮುಕಿ – ಪಾಪ ಕಳೆಯಿತೆಂಬಂತೆ
ಮೇಲೆದ್ದು ನಗ್ನದೇಹಕೆ ಭಸ್ಮ ಧರಿಸಿ
ಓಂ ಶಿವ, ಹರಹರಮಹಾದೇವ
ಧ್ಯಾನಿಸುತ ಒಂಟಿಕಾಲಲಿ ನಿಂತು
ಜಗದ ಪರಿವೆ ಬಿಟ್ಟು ಭಕ್ತಿ ಪರಾಕಾಷ್ಟೆ ತಲುಪಿ
ದಿನೆ ದಿನೆ ದೇಹದಂಡಿಸುವ ಪರಿ ಅಗಣಿತ
ಭಕ್ತಿಯೋನ್ಮಾದದ ಪರಿ ಅಪರಿಮಿತ

ಇದು ಯೋಗ
ಭಕ್ತರ ಸಮ್ಮಿಲನ ಶಾಂತಿಯ ಮಿಲನ
ತ್ರಿವೇಣಿ ಸಂಗಮದೆದೆ ದಡಗುಂಟಲೆಲ್ಲ
ಲಕ್ಷ ಲಕ್ಷಾಂತರ ಭಕ್ತರ ಸಾಗರ ಹೋಮ ಹವನಗಳ
ದೀಪ ಧೂಪಗಳ ಹೊಗೆ ಬೆಂಕಿ ಜ್ವಾಲೆ
ಬೆರಗುಕಣ್ಣುಗಳ ನೋಟ
ಏನೇನೋ ಪಾಪ ಪ್ರಜ್ಞೆಗಳಿಗೆ
ಪ್ರಾಯಶ್ಚಿತ ಪಡುವಾಸೆ
ತ್ರಿವೇಣಿಯರ ಗಾಂಭೀರ್ಯ ನಡಿಗೆಯೊಳಿಳಿದು
ಅವರ ಸಾನಿಧ್ಯ ಸಂಸ್ಕಾರದೊಳಗೊಂದಾಗುವ ತವಕ

ಎಲ್ಲೆಲ್ಲೂ ಭಕ್ತಿ ಶಕ್ತಿಯ ಆವರಣ
ಅವರವರ ಭಕುತಿಗೆ ಒಲೆಯುತಿಹರು……
ಮೆಲ್ಲ ಮೆಲ್ಲನೆ ನಿರಿಗೆ ಚಿಮ್ಮಿಸಿ
ಗೆಜ್ಜೆನಾದದಿ ಬಳುಕಾಡಿ ಸುತ್ತಿ ಸುಳಿದಾಡಿ
ಸಾಗುವ ಜೀವನದಿಗಳ ಸಂಭ್ರಮ ಹರ್ಷೋಲ್ಲಾಸ
ಹಗಲು ರಾತ್ರಿ ಪೂಜಿಸಿಕೊಳುತ ಹೂವಿನ ತೆಪ್ಪ
ಹಣ್ಣುಕಾಯಿ ಅರಿಷಿಣ ಕುಂಕುಮ ಉಡಿತುಂಬಿಕೊಂಡು
ಆಶೀರ್ವದಿಸಿ ಪಾವನಿಸಿ
ಮುಂದೆ ಮುಂದೆ ಹೆಜ್ಜೆಹಾಕುವ ಶಕ್ತಿಯರು
ಎಷ್ಟೊಂದು ಕಣ್ಣಿಗೆ ಕೀಲಿಸಿದರೂ ಕಡಿಮೆಯೆ.

ಅದೋ ಅಲ್ಲಿ ಜಾತ್ರೆಯ ಸಂಭ್ರಮ
ನೆನಪುಗಳು ಹೊತ್ತೊಯ್ಯುವ ಕಾಲ
ಅಲ್ಲಿ ಎನುಂಟು ಏನಿಲ್ಲ ಎಲ್ಲವೂ ದೇವಸಾನಿಧ್ಯ
ಕಂಡದ್ದೆಲ್ಲ ಮುಟ್ಟಿದ್ದೆಲ್ಲ ಪವಿತ್ರ ಸ್ಪರ್ಷದ
ಸೆಳೆತ ಒಂದೊಂದಾಗಿ ಗಂಟಿಗಿಳಿಸಿಕೊಳ್ಳುವ ಕಾತರ
ಗಂಗಾಜಲ ಒಯ್ಯದವರಾರು.

ಮತ್ತೊಂದೆಡೆ ನೂರಾರು ಭಕ್ತರ ಊಟದ ಸಾಲು
ದಾನಿಗರ, ಮಠದವರ ವಿಶಾಲಹೃದಯ
ಕಾಣುವ ಸಮಯ, ಮೈತುಂಬಾ ಬಟ್ಟೆ
ಊಟ ಹಣ ಬಡವರ ನೆಮ್ಮದಿಗೆ ಹೇಳಿದ ತಾಣ
ಚಳಿಗೊಡ್ಡಿದ ಮೈಗೆ ಹಸಿವಿನ ಕ್ಷಣ
ಕಣ್ತುಂಬ ನೀರು ಕೃತಜ್ಞತೆ ಗಂಗೆಗೆ.

ಮಿಣು ಮಿಣುಕು ದೀಪ ಝಗಝಗಿಸುವ ದೀಪಸಾಲು
ಇನ್ನೊಂದೆಡೆ ಅಲ್ಲೊಂದೆಡೆ ಈ ಕಡೆ ಆ ಕಡೆ
ಹಿಮನೀರು ಸುರಿವ ಅನುಭವ ಈ ಚಳಿ
ಕೆಂಡಹೊತ್ತಿಸಿ ಕಾಯಿಸಿಕೊಳುತ

ದೇವರನಾಮ ಜಪಿಸುವ, ದೇವ ಮಹಿಮೆಯ
ನಾಟಕಗಳ ನೋಡುವ ಒಮ್ಮೊಮ್ಮೆ
ತಮ್ಮೊಳಗೇ ದೇವರು ಹೊಕ್ಕಂತೆ ಎದ್ದು ಕುಣಿಯುತ
ನಿರಾಳತೆಯ ರಾತ್ರಿಗೆ ಶರಣಾಗುತ ಬೆಚ್ಚಗಾಗುವರು.

ಅದೇ ಇಲ್ಲಿ ಗುರುಸಾನಿಧ್ಯದಲಿ
ಸತ್ಸಂಗದ ಶಾಂತಿಯ ತಿಳುವಳಿಕೆ
ಮೌನವಾಗಿ ಆಲಿಸುವ ಪಶ್ಚಾತ್ತಾಪಿಗರ
ಕಣ್ಣೀರು ಕಟ್ಟೆಯೊಡೆಯುವ ಜನರ ಗುಂಪು
ನಿಂತು ಕುಳಿತು ಕೇಳುವ ಸಂಯಮಿಗಳು
ಧರ್ಮ ಸಂಸ್ಕಾರ ಸಂಸ್ಕೃತಿಯ ಭೂಮಿಸ್ಪರ್ಷ

ನಡು ನಡುವೆ ವಿದೇಶಿಗರ ಪರಿವರ್ತನಾ
ಮುಖಗಳು ಪ್ರಸನ್ನತೆಯ ಕಳೆ ಸನ್ಯಾಸ
ಸ್ವೀಕರಿಸುವ ಒಲವು ಅದೆಷ್ಟೋ ಗೆಲವು
ಮುಡಿನೀಡಿ ಗಂಗೆಯಲಿ ಮಿಂದು
ವೇದ ಮಂತ್ರಗಳ ಪಠಿಸುತ ಶಾಂತಿ ಸಿಕ್ಕ
ನೆಮ್ಮದಿಗೆ ಸನ್ಯಾಸ, ಅಹಿಂಸೆ ಒಪ್ಪಿ ಅಪ್ಪಿಕೊಂಡದ್ದು
ಜಗದಗಲದ ಶಾಂತಿ ಹುಡುಕಾಟದ ಜನ

ಎಲ್ಲೆಲ್ಲೂ ಚೈತನ್ಯದ ಚಿಲುಮೆ
ತ್ರಿವೇಣಿಯರ ಸ್ಪರ್ಷ
ಬೆಳಗು ಮುಂಜಾವು ನಡುಹಗಲು
ಸಂಜೆ ನಡುರಾತ್ರಿ ಕುಂಭಮೇಳದ ಪರ್ವಕಾಲ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...