Home / ಕವನ / ಕವಿತೆ / ಕಾಲನ ಕುದುರೆಯನೇರಿ ಬರುತಿಹ

ಕಾಲನ ಕುದುರೆಯನೇರಿ ಬರುತಿಹ

ಕಾಲನ ಕುದುರೆ ಏರಿ ಸಂಕ್ರಾಂತಿಗೆ ಬರುತಿಹ
ಸೂರ್ಯ ಮಕರರಾಶಿ ಪ್ರವೇಶಿಸುವ ದಿನ
ಪವಿತ್ರ ಸ್ನಾನಕೆ ಆಗಲೇ ಜನದಟ್ಟನೆ
ಹೆಣ್ಣುಗಂಡು ಭೇದವಿಲ್ಲದೆ ಮುಳುಗೇಳುವ
ಪ್ರಾರ್ಥಿಸುವ ಭಕ್ತಿ ಮಾರ್ಗಿಗಳ ಬೆಳಗು
ಚಳಿಗೆ ಮೈಮರಗಟ್ಟುವ ಸಮಯ
ನೆಲದ ಕಣ ಕಣ ಉಸುರಿನೊಳು
ವಸಂತಾಗಮನದ ಪಲ್ಲವ ತರುಲತೆಗಳ ತೋರಣ
ಕುಂಭಮೇಳದ ಚೈತನ್ಯಸಾಗರ ಪರ್ವಕಾಲ

ಪುಷ್ಯ ಹುಣ್ಣಿಮೆ ಮಕರ ಸಂಕ್ರಮಣ
ಮೌನಿ ಅಮವಾಸೆ ವಸಂತಪಂಚಮಿ
ಮಾಘ ಪೂರ್ಣಿಮೆ ಮಹಾಶಿವರಾತ್ರಿಯಲಿ
ಕುಂಭಮೇಳ ಅರ್ಧಕುಂಭಮೇಳಗಳ ಹರ್ಷೋಲ್ಲಾಸ
ನದಿಗುಂಟ ಎಲ್ಲೆಂದರಲ್ಲಿ ಭಕ್ತರ ಸಂಕುಲ
ಬಾಯ್ತುಂಬ ದೇವರನಾಮ
ದೈನ್ಯತೆ ಸಮರ್ಪಣಾ ಭಾವ

ಗಂಗಾ ಯಮುನಾ ಸರಸ್ವತಿ
ತ್ರಿವೇಣಿ ಸಂಗಮದ ಪ್ರಯಾಗ
ಪುಣ್ಯ ಸ್ನಾನಕೆ ಕೊರೆವ ಚಳಿಯೊಳಗೆ
ಹೆಪ್ಪುಗಟ್ಟಿದ ನೀರಿಗಿಳಿವ
ದ್ವಿಗುಣ ಫಲಪ್ರಾಪ್ತಿಯ ನಂಬಿಕೆಯವರ
ಜೀವನೋತ್ಸಾಹ ಆಸೆ ನೀರಿಕ್ಷೆ ಅದಮ್ಯ

ಮುಡಿಯಿಂದ ಅಡಿವರೆಗೆ ಸುರುಳಿಸುರುಳಿಯಾಗಿ
ಇಳಿದ ಕೂದಲು ಆಲದಮರದ ಬಿಳಲುಗಳು
ಈ ಸಾದು ಸನ್ಯಾಸಿಯರದು
ಹೊಂಗಿರಣ ಮೂಡುವ ಮೊದಲೇ
ಹಿಮನೀರಿಗೆ ಧುಮುಕಿ – ಪಾಪ ಕಳೆಯಿತೆಂಬಂತೆ
ಮೇಲೆದ್ದು ನಗ್ನದೇಹಕೆ ಭಸ್ಮ ಧರಿಸಿ
ಓಂ ಶಿವ, ಹರಹರಮಹಾದೇವ
ಧ್ಯಾನಿಸುತ ಒಂಟಿಕಾಲಲಿ ನಿಂತು
ಜಗದ ಪರಿವೆ ಬಿಟ್ಟು ಭಕ್ತಿ ಪರಾಕಾಷ್ಟೆ ತಲುಪಿ
ದಿನೆ ದಿನೆ ದೇಹದಂಡಿಸುವ ಪರಿ ಅಗಣಿತ
ಭಕ್ತಿಯೋನ್ಮಾದದ ಪರಿ ಅಪರಿಮಿತ

ಇದು ಯೋಗ
ಭಕ್ತರ ಸಮ್ಮಿಲನ ಶಾಂತಿಯ ಮಿಲನ
ತ್ರಿವೇಣಿ ಸಂಗಮದೆದೆ ದಡಗುಂಟಲೆಲ್ಲ
ಲಕ್ಷ ಲಕ್ಷಾಂತರ ಭಕ್ತರ ಸಾಗರ ಹೋಮ ಹವನಗಳ
ದೀಪ ಧೂಪಗಳ ಹೊಗೆ ಬೆಂಕಿ ಜ್ವಾಲೆ
ಬೆರಗುಕಣ್ಣುಗಳ ನೋಟ
ಏನೇನೋ ಪಾಪ ಪ್ರಜ್ಞೆಗಳಿಗೆ
ಪ್ರಾಯಶ್ಚಿತ ಪಡುವಾಸೆ
ತ್ರಿವೇಣಿಯರ ಗಾಂಭೀರ್ಯ ನಡಿಗೆಯೊಳಿಳಿದು
ಅವರ ಸಾನಿಧ್ಯ ಸಂಸ್ಕಾರದೊಳಗೊಂದಾಗುವ ತವಕ

ಎಲ್ಲೆಲ್ಲೂ ಭಕ್ತಿ ಶಕ್ತಿಯ ಆವರಣ
ಅವರವರ ಭಕುತಿಗೆ ಒಲೆಯುತಿಹರು……
ಮೆಲ್ಲ ಮೆಲ್ಲನೆ ನಿರಿಗೆ ಚಿಮ್ಮಿಸಿ
ಗೆಜ್ಜೆನಾದದಿ ಬಳುಕಾಡಿ ಸುತ್ತಿ ಸುಳಿದಾಡಿ
ಸಾಗುವ ಜೀವನದಿಗಳ ಸಂಭ್ರಮ ಹರ್ಷೋಲ್ಲಾಸ
ಹಗಲು ರಾತ್ರಿ ಪೂಜಿಸಿಕೊಳುತ ಹೂವಿನ ತೆಪ್ಪ
ಹಣ್ಣುಕಾಯಿ ಅರಿಷಿಣ ಕುಂಕುಮ ಉಡಿತುಂಬಿಕೊಂಡು
ಆಶೀರ್ವದಿಸಿ ಪಾವನಿಸಿ
ಮುಂದೆ ಮುಂದೆ ಹೆಜ್ಜೆಹಾಕುವ ಶಕ್ತಿಯರು
ಎಷ್ಟೊಂದು ಕಣ್ಣಿಗೆ ಕೀಲಿಸಿದರೂ ಕಡಿಮೆಯೆ.

ಅದೋ ಅಲ್ಲಿ ಜಾತ್ರೆಯ ಸಂಭ್ರಮ
ನೆನಪುಗಳು ಹೊತ್ತೊಯ್ಯುವ ಕಾಲ
ಅಲ್ಲಿ ಎನುಂಟು ಏನಿಲ್ಲ ಎಲ್ಲವೂ ದೇವಸಾನಿಧ್ಯ
ಕಂಡದ್ದೆಲ್ಲ ಮುಟ್ಟಿದ್ದೆಲ್ಲ ಪವಿತ್ರ ಸ್ಪರ್ಷದ
ಸೆಳೆತ ಒಂದೊಂದಾಗಿ ಗಂಟಿಗಿಳಿಸಿಕೊಳ್ಳುವ ಕಾತರ
ಗಂಗಾಜಲ ಒಯ್ಯದವರಾರು.

ಮತ್ತೊಂದೆಡೆ ನೂರಾರು ಭಕ್ತರ ಊಟದ ಸಾಲು
ದಾನಿಗರ, ಮಠದವರ ವಿಶಾಲಹೃದಯ
ಕಾಣುವ ಸಮಯ, ಮೈತುಂಬಾ ಬಟ್ಟೆ
ಊಟ ಹಣ ಬಡವರ ನೆಮ್ಮದಿಗೆ ಹೇಳಿದ ತಾಣ
ಚಳಿಗೊಡ್ಡಿದ ಮೈಗೆ ಹಸಿವಿನ ಕ್ಷಣ
ಕಣ್ತುಂಬ ನೀರು ಕೃತಜ್ಞತೆ ಗಂಗೆಗೆ.

ಮಿಣು ಮಿಣುಕು ದೀಪ ಝಗಝಗಿಸುವ ದೀಪಸಾಲು
ಇನ್ನೊಂದೆಡೆ ಅಲ್ಲೊಂದೆಡೆ ಈ ಕಡೆ ಆ ಕಡೆ
ಹಿಮನೀರು ಸುರಿವ ಅನುಭವ ಈ ಚಳಿ
ಕೆಂಡಹೊತ್ತಿಸಿ ಕಾಯಿಸಿಕೊಳುತ

ದೇವರನಾಮ ಜಪಿಸುವ, ದೇವ ಮಹಿಮೆಯ
ನಾಟಕಗಳ ನೋಡುವ ಒಮ್ಮೊಮ್ಮೆ
ತಮ್ಮೊಳಗೇ ದೇವರು ಹೊಕ್ಕಂತೆ ಎದ್ದು ಕುಣಿಯುತ
ನಿರಾಳತೆಯ ರಾತ್ರಿಗೆ ಶರಣಾಗುತ ಬೆಚ್ಚಗಾಗುವರು.

ಅದೇ ಇಲ್ಲಿ ಗುರುಸಾನಿಧ್ಯದಲಿ
ಸತ್ಸಂಗದ ಶಾಂತಿಯ ತಿಳುವಳಿಕೆ
ಮೌನವಾಗಿ ಆಲಿಸುವ ಪಶ್ಚಾತ್ತಾಪಿಗರ
ಕಣ್ಣೀರು ಕಟ್ಟೆಯೊಡೆಯುವ ಜನರ ಗುಂಪು
ನಿಂತು ಕುಳಿತು ಕೇಳುವ ಸಂಯಮಿಗಳು
ಧರ್ಮ ಸಂಸ್ಕಾರ ಸಂಸ್ಕೃತಿಯ ಭೂಮಿಸ್ಪರ್ಷ

ನಡು ನಡುವೆ ವಿದೇಶಿಗರ ಪರಿವರ್ತನಾ
ಮುಖಗಳು ಪ್ರಸನ್ನತೆಯ ಕಳೆ ಸನ್ಯಾಸ
ಸ್ವೀಕರಿಸುವ ಒಲವು ಅದೆಷ್ಟೋ ಗೆಲವು
ಮುಡಿನೀಡಿ ಗಂಗೆಯಲಿ ಮಿಂದು
ವೇದ ಮಂತ್ರಗಳ ಪಠಿಸುತ ಶಾಂತಿ ಸಿಕ್ಕ
ನೆಮ್ಮದಿಗೆ ಸನ್ಯಾಸ, ಅಹಿಂಸೆ ಒಪ್ಪಿ ಅಪ್ಪಿಕೊಂಡದ್ದು
ಜಗದಗಲದ ಶಾಂತಿ ಹುಡುಕಾಟದ ಜನ

ಎಲ್ಲೆಲ್ಲೂ ಚೈತನ್ಯದ ಚಿಲುಮೆ
ತ್ರಿವೇಣಿಯರ ಸ್ಪರ್ಷ
ಬೆಳಗು ಮುಂಜಾವು ನಡುಹಗಲು
ಸಂಜೆ ನಡುರಾತ್ರಿ ಕುಂಭಮೇಳದ ಪರ್ವಕಾಲ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...