Home / ಕವನ / ಕವಿತೆ / ಕಾಲನ ಕುದುರೆಯನೇರಿ ಬರುತಿಹ

ಕಾಲನ ಕುದುರೆಯನೇರಿ ಬರುತಿಹ

ಕಾಲನ ಕುದುರೆ ಏರಿ ಸಂಕ್ರಾಂತಿಗೆ ಬರುತಿಹ
ಸೂರ್ಯ ಮಕರರಾಶಿ ಪ್ರವೇಶಿಸುವ ದಿನ
ಪವಿತ್ರ ಸ್ನಾನಕೆ ಆಗಲೇ ಜನದಟ್ಟನೆ
ಹೆಣ್ಣುಗಂಡು ಭೇದವಿಲ್ಲದೆ ಮುಳುಗೇಳುವ
ಪ್ರಾರ್ಥಿಸುವ ಭಕ್ತಿ ಮಾರ್ಗಿಗಳ ಬೆಳಗು
ಚಳಿಗೆ ಮೈಮರಗಟ್ಟುವ ಸಮಯ
ನೆಲದ ಕಣ ಕಣ ಉಸುರಿನೊಳು
ವಸಂತಾಗಮನದ ಪಲ್ಲವ ತರುಲತೆಗಳ ತೋರಣ
ಕುಂಭಮೇಳದ ಚೈತನ್ಯಸಾಗರ ಪರ್ವಕಾಲ

ಪುಷ್ಯ ಹುಣ್ಣಿಮೆ ಮಕರ ಸಂಕ್ರಮಣ
ಮೌನಿ ಅಮವಾಸೆ ವಸಂತಪಂಚಮಿ
ಮಾಘ ಪೂರ್ಣಿಮೆ ಮಹಾಶಿವರಾತ್ರಿಯಲಿ
ಕುಂಭಮೇಳ ಅರ್ಧಕುಂಭಮೇಳಗಳ ಹರ್ಷೋಲ್ಲಾಸ
ನದಿಗುಂಟ ಎಲ್ಲೆಂದರಲ್ಲಿ ಭಕ್ತರ ಸಂಕುಲ
ಬಾಯ್ತುಂಬ ದೇವರನಾಮ
ದೈನ್ಯತೆ ಸಮರ್ಪಣಾ ಭಾವ

ಗಂಗಾ ಯಮುನಾ ಸರಸ್ವತಿ
ತ್ರಿವೇಣಿ ಸಂಗಮದ ಪ್ರಯಾಗ
ಪುಣ್ಯ ಸ್ನಾನಕೆ ಕೊರೆವ ಚಳಿಯೊಳಗೆ
ಹೆಪ್ಪುಗಟ್ಟಿದ ನೀರಿಗಿಳಿವ
ದ್ವಿಗುಣ ಫಲಪ್ರಾಪ್ತಿಯ ನಂಬಿಕೆಯವರ
ಜೀವನೋತ್ಸಾಹ ಆಸೆ ನೀರಿಕ್ಷೆ ಅದಮ್ಯ

ಮುಡಿಯಿಂದ ಅಡಿವರೆಗೆ ಸುರುಳಿಸುರುಳಿಯಾಗಿ
ಇಳಿದ ಕೂದಲು ಆಲದಮರದ ಬಿಳಲುಗಳು
ಈ ಸಾದು ಸನ್ಯಾಸಿಯರದು
ಹೊಂಗಿರಣ ಮೂಡುವ ಮೊದಲೇ
ಹಿಮನೀರಿಗೆ ಧುಮುಕಿ – ಪಾಪ ಕಳೆಯಿತೆಂಬಂತೆ
ಮೇಲೆದ್ದು ನಗ್ನದೇಹಕೆ ಭಸ್ಮ ಧರಿಸಿ
ಓಂ ಶಿವ, ಹರಹರಮಹಾದೇವ
ಧ್ಯಾನಿಸುತ ಒಂಟಿಕಾಲಲಿ ನಿಂತು
ಜಗದ ಪರಿವೆ ಬಿಟ್ಟು ಭಕ್ತಿ ಪರಾಕಾಷ್ಟೆ ತಲುಪಿ
ದಿನೆ ದಿನೆ ದೇಹದಂಡಿಸುವ ಪರಿ ಅಗಣಿತ
ಭಕ್ತಿಯೋನ್ಮಾದದ ಪರಿ ಅಪರಿಮಿತ

ಇದು ಯೋಗ
ಭಕ್ತರ ಸಮ್ಮಿಲನ ಶಾಂತಿಯ ಮಿಲನ
ತ್ರಿವೇಣಿ ಸಂಗಮದೆದೆ ದಡಗುಂಟಲೆಲ್ಲ
ಲಕ್ಷ ಲಕ್ಷಾಂತರ ಭಕ್ತರ ಸಾಗರ ಹೋಮ ಹವನಗಳ
ದೀಪ ಧೂಪಗಳ ಹೊಗೆ ಬೆಂಕಿ ಜ್ವಾಲೆ
ಬೆರಗುಕಣ್ಣುಗಳ ನೋಟ
ಏನೇನೋ ಪಾಪ ಪ್ರಜ್ಞೆಗಳಿಗೆ
ಪ್ರಾಯಶ್ಚಿತ ಪಡುವಾಸೆ
ತ್ರಿವೇಣಿಯರ ಗಾಂಭೀರ್ಯ ನಡಿಗೆಯೊಳಿಳಿದು
ಅವರ ಸಾನಿಧ್ಯ ಸಂಸ್ಕಾರದೊಳಗೊಂದಾಗುವ ತವಕ

ಎಲ್ಲೆಲ್ಲೂ ಭಕ್ತಿ ಶಕ್ತಿಯ ಆವರಣ
ಅವರವರ ಭಕುತಿಗೆ ಒಲೆಯುತಿಹರು……
ಮೆಲ್ಲ ಮೆಲ್ಲನೆ ನಿರಿಗೆ ಚಿಮ್ಮಿಸಿ
ಗೆಜ್ಜೆನಾದದಿ ಬಳುಕಾಡಿ ಸುತ್ತಿ ಸುಳಿದಾಡಿ
ಸಾಗುವ ಜೀವನದಿಗಳ ಸಂಭ್ರಮ ಹರ್ಷೋಲ್ಲಾಸ
ಹಗಲು ರಾತ್ರಿ ಪೂಜಿಸಿಕೊಳುತ ಹೂವಿನ ತೆಪ್ಪ
ಹಣ್ಣುಕಾಯಿ ಅರಿಷಿಣ ಕುಂಕುಮ ಉಡಿತುಂಬಿಕೊಂಡು
ಆಶೀರ್ವದಿಸಿ ಪಾವನಿಸಿ
ಮುಂದೆ ಮುಂದೆ ಹೆಜ್ಜೆಹಾಕುವ ಶಕ್ತಿಯರು
ಎಷ್ಟೊಂದು ಕಣ್ಣಿಗೆ ಕೀಲಿಸಿದರೂ ಕಡಿಮೆಯೆ.

ಅದೋ ಅಲ್ಲಿ ಜಾತ್ರೆಯ ಸಂಭ್ರಮ
ನೆನಪುಗಳು ಹೊತ್ತೊಯ್ಯುವ ಕಾಲ
ಅಲ್ಲಿ ಎನುಂಟು ಏನಿಲ್ಲ ಎಲ್ಲವೂ ದೇವಸಾನಿಧ್ಯ
ಕಂಡದ್ದೆಲ್ಲ ಮುಟ್ಟಿದ್ದೆಲ್ಲ ಪವಿತ್ರ ಸ್ಪರ್ಷದ
ಸೆಳೆತ ಒಂದೊಂದಾಗಿ ಗಂಟಿಗಿಳಿಸಿಕೊಳ್ಳುವ ಕಾತರ
ಗಂಗಾಜಲ ಒಯ್ಯದವರಾರು.

ಮತ್ತೊಂದೆಡೆ ನೂರಾರು ಭಕ್ತರ ಊಟದ ಸಾಲು
ದಾನಿಗರ, ಮಠದವರ ವಿಶಾಲಹೃದಯ
ಕಾಣುವ ಸಮಯ, ಮೈತುಂಬಾ ಬಟ್ಟೆ
ಊಟ ಹಣ ಬಡವರ ನೆಮ್ಮದಿಗೆ ಹೇಳಿದ ತಾಣ
ಚಳಿಗೊಡ್ಡಿದ ಮೈಗೆ ಹಸಿವಿನ ಕ್ಷಣ
ಕಣ್ತುಂಬ ನೀರು ಕೃತಜ್ಞತೆ ಗಂಗೆಗೆ.

ಮಿಣು ಮಿಣುಕು ದೀಪ ಝಗಝಗಿಸುವ ದೀಪಸಾಲು
ಇನ್ನೊಂದೆಡೆ ಅಲ್ಲೊಂದೆಡೆ ಈ ಕಡೆ ಆ ಕಡೆ
ಹಿಮನೀರು ಸುರಿವ ಅನುಭವ ಈ ಚಳಿ
ಕೆಂಡಹೊತ್ತಿಸಿ ಕಾಯಿಸಿಕೊಳುತ

ದೇವರನಾಮ ಜಪಿಸುವ, ದೇವ ಮಹಿಮೆಯ
ನಾಟಕಗಳ ನೋಡುವ ಒಮ್ಮೊಮ್ಮೆ
ತಮ್ಮೊಳಗೇ ದೇವರು ಹೊಕ್ಕಂತೆ ಎದ್ದು ಕುಣಿಯುತ
ನಿರಾಳತೆಯ ರಾತ್ರಿಗೆ ಶರಣಾಗುತ ಬೆಚ್ಚಗಾಗುವರು.

ಅದೇ ಇಲ್ಲಿ ಗುರುಸಾನಿಧ್ಯದಲಿ
ಸತ್ಸಂಗದ ಶಾಂತಿಯ ತಿಳುವಳಿಕೆ
ಮೌನವಾಗಿ ಆಲಿಸುವ ಪಶ್ಚಾತ್ತಾಪಿಗರ
ಕಣ್ಣೀರು ಕಟ್ಟೆಯೊಡೆಯುವ ಜನರ ಗುಂಪು
ನಿಂತು ಕುಳಿತು ಕೇಳುವ ಸಂಯಮಿಗಳು
ಧರ್ಮ ಸಂಸ್ಕಾರ ಸಂಸ್ಕೃತಿಯ ಭೂಮಿಸ್ಪರ್ಷ

ನಡು ನಡುವೆ ವಿದೇಶಿಗರ ಪರಿವರ್ತನಾ
ಮುಖಗಳು ಪ್ರಸನ್ನತೆಯ ಕಳೆ ಸನ್ಯಾಸ
ಸ್ವೀಕರಿಸುವ ಒಲವು ಅದೆಷ್ಟೋ ಗೆಲವು
ಮುಡಿನೀಡಿ ಗಂಗೆಯಲಿ ಮಿಂದು
ವೇದ ಮಂತ್ರಗಳ ಪಠಿಸುತ ಶಾಂತಿ ಸಿಕ್ಕ
ನೆಮ್ಮದಿಗೆ ಸನ್ಯಾಸ, ಅಹಿಂಸೆ ಒಪ್ಪಿ ಅಪ್ಪಿಕೊಂಡದ್ದು
ಜಗದಗಲದ ಶಾಂತಿ ಹುಡುಕಾಟದ ಜನ

ಎಲ್ಲೆಲ್ಲೂ ಚೈತನ್ಯದ ಚಿಲುಮೆ
ತ್ರಿವೇಣಿಯರ ಸ್ಪರ್ಷ
ಬೆಳಗು ಮುಂಜಾವು ನಡುಹಗಲು
ಸಂಜೆ ನಡುರಾತ್ರಿ ಕುಂಭಮೇಳದ ಪರ್ವಕಾಲ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...