Home / ಕವನ / ಕವಿತೆ / ತಂಗದಿರ!

ತಂಗದಿರ!

ವಾರ್ಧಿಕ

ಮುಗಿಲುಗಳ ಮೆಟ್ಟಲಿನ ಮೇಲೆ ಮೆಲುನಡಿಗೆಯಲಿ
ನಗು ನಗುತ ಬಿಡದೇರಿ ಬರುತಿರುವೆ ತ೦ಗದಿರ!
ಒಗುಮಿಗೆಯ ಗಮನದಲಿ ಹೋಗುತಿಹೆ ಯಾವೆಡೆಗೆ?
ಗುರಿಯೇನು ಗುರುತಿಲ್ಲವೇ?
ಸೊಗದ ಸನ್ಮಾಂತ್ರಿಕದ ಮಾಟದನುಭವದಿಂದ
ಮೊಗವು ವಿಕಸಿತವಾಗಿ ತೋರುವುದು. ಶಶಿ! ನಿನ್ನ
ಸೊಗಸುಗಾರ್ತಿಯ ಮಡದಿ ರೋಹಿಣಿಯ ಬಳಿಗೆಂದು
ವಿಹರಿಸಲು ಪೋಪೆಯೇನು?


ಅನುದಿನವು ವಿಧು! ನೀನು ಮೂಡುತಿಹೆ-ಮುಳುಗುತಿಹೆ,
ಮನಸಿನೊಳಗಿದಕಾಗಿ ಬೇಸರಿಸಿ, ಬಿದಿಯೊಡನೆ
ಅನುನಯದಿ ಮಾಸಕೊ೦ದಾವರ್ತಿ ದಿನವೊಂದ
‘ರಜೆ’ ಯೆಂದು ಪಡೆದೆಯೇನು?
ಇನನೊಂದು ವಿಧಿಯಿಂದ ಇನಿತೊಂದು ತಪ್ಪದೇ
ದಿನ ದಿನಂ ಮೂಡುವಂ-ಬಾಡುವಂ; ಶಶಿ! ನೀನು
ಹುಣ್ಣಿಮೆಯ ಬಿಟ್ಟುಳಿದ ರಜನಿಯಲಿ ಅನಿತಿನಿತು
ಬೆಳಗಿ ಮರೆಯಾಗುವೇಕೆ?


ನೀನೋಷಧೀಶನಾಗಿರುವೆಯಾದುದರಿಂದ,
ಸಾನುರಾಗದಿ ತರು-ಲತಾಳಿ ಸಸ್ಯಗಳೆಲ್ಲ
ಆನನವನೊಲೆಯುತ್ತಲಿರುತಿಹವು ನಿನ್ನಮೃತ
ಕಿರಣ ಶೀತ ಸ್ಪರ್ಶದಿಂ.
ಕಾನನದಿ ಮಲ್ಲಿಗೆಯು ಮೊದಲಾದ ಕುಸುಮಗಳು
ಸಾನಂದದಿ೦ದ ನಗು ನಗುತ ನೀರಾಜನವ-
ನಾನುವಂತೆಸೆಯುತಿವೆ; ಶಶಿ! ನಿನಗೆ, ನೀನೆಸಗಿ
ದುಪಕಾರದರಿವಿಗಾಗಿ.


ಎತ್ತಲೂ ತಿರೆಯನ್ನು ತೀವಿ ಜೊನ್ನದ ಸರಿಯು
ಸುತ್ತಲಿಡಿದತಿ ಶೋಭೆಯಾಂತೆಸೆವ ಬಿಳಿ ಮೊಸರ
ಮೊತ್ತ ಚೆಲ್ಲಿದ ತೆರದಿ ಬಿತ್ತರವನಾಂತಿಹುದು.
ಆದರೂ ತಂಗದಿರನೇ!
ಕತ್ತಲೆಯ ಕಾಲವಾದುದರಿಂದ ಮರಗಳಡಿ-
ಯತ್ತ ಬಿದ್ದೊರಗಿಹುದು ನೆರಳ ಕಾಳಿಮೆಯದನು
ಕಿತ್ತಳಿಸಿ ಬಿಸುಡಲಾರದೆ, ನಾಚಿ, ಮೊಗದಲ್ಲಿ
ಮಾಲಿನ್ಯವನ್ನಾಂತೆಯೆ?


ತೊಳತೊಳಗಿ, ಬೆಳಬೆಳಗಿ, ಕಳೆವೆತ್ತು ಪೊಳೆಯುತಿಹೆ!
ಕಿಲಕಿಲನೆ ನಗುನಗುತ ಹಾಸ್ಯರೋಚಿಯನೆಲ್ಲ
ಬಳಿಗಳಿಗು ಪಸರಿಸುತ್ತ, ಸಂತೋಷ ಸಾಗರದೊ-
ಳೋಲಾಡಿ ತೇಲಾಡುತ.
ಒಲಿಯುತ್ತ, ನಲಿಯುತ್ತ, ಮುಗಿಲುಗಳ ಮರೆಯಲ್ಲಿ
ನೆಲಸುತ್ತ, ಹೊರಬರುತ, `ಕಣ್ಣ ಮುಚ್ಚಾಲೆ’ ಯಲಿ
ಲಲಿತ ಲೀಲೆಯನಾಂತು, ಬಾಲಕೇಳಿಯ ನಟಿಸಿ,
ಮೆರೆವೆಯೇಂ ತಂಗದಿರನೇ?
*****
೧೯೩೭

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...