Home / ಕವನ / ಕವಿತೆ / ತಂಗದಿರ!

ತಂಗದಿರ!

ವಾರ್ಧಿಕ

ಮುಗಿಲುಗಳ ಮೆಟ್ಟಲಿನ ಮೇಲೆ ಮೆಲುನಡಿಗೆಯಲಿ
ನಗು ನಗುತ ಬಿಡದೇರಿ ಬರುತಿರುವೆ ತ೦ಗದಿರ!
ಒಗುಮಿಗೆಯ ಗಮನದಲಿ ಹೋಗುತಿಹೆ ಯಾವೆಡೆಗೆ?
ಗುರಿಯೇನು ಗುರುತಿಲ್ಲವೇ?
ಸೊಗದ ಸನ್ಮಾಂತ್ರಿಕದ ಮಾಟದನುಭವದಿಂದ
ಮೊಗವು ವಿಕಸಿತವಾಗಿ ತೋರುವುದು. ಶಶಿ! ನಿನ್ನ
ಸೊಗಸುಗಾರ್ತಿಯ ಮಡದಿ ರೋಹಿಣಿಯ ಬಳಿಗೆಂದು
ವಿಹರಿಸಲು ಪೋಪೆಯೇನು?


ಅನುದಿನವು ವಿಧು! ನೀನು ಮೂಡುತಿಹೆ-ಮುಳುಗುತಿಹೆ,
ಮನಸಿನೊಳಗಿದಕಾಗಿ ಬೇಸರಿಸಿ, ಬಿದಿಯೊಡನೆ
ಅನುನಯದಿ ಮಾಸಕೊ೦ದಾವರ್ತಿ ದಿನವೊಂದ
‘ರಜೆ’ ಯೆಂದು ಪಡೆದೆಯೇನು?
ಇನನೊಂದು ವಿಧಿಯಿಂದ ಇನಿತೊಂದು ತಪ್ಪದೇ
ದಿನ ದಿನಂ ಮೂಡುವಂ-ಬಾಡುವಂ; ಶಶಿ! ನೀನು
ಹುಣ್ಣಿಮೆಯ ಬಿಟ್ಟುಳಿದ ರಜನಿಯಲಿ ಅನಿತಿನಿತು
ಬೆಳಗಿ ಮರೆಯಾಗುವೇಕೆ?


ನೀನೋಷಧೀಶನಾಗಿರುವೆಯಾದುದರಿಂದ,
ಸಾನುರಾಗದಿ ತರು-ಲತಾಳಿ ಸಸ್ಯಗಳೆಲ್ಲ
ಆನನವನೊಲೆಯುತ್ತಲಿರುತಿಹವು ನಿನ್ನಮೃತ
ಕಿರಣ ಶೀತ ಸ್ಪರ್ಶದಿಂ.
ಕಾನನದಿ ಮಲ್ಲಿಗೆಯು ಮೊದಲಾದ ಕುಸುಮಗಳು
ಸಾನಂದದಿ೦ದ ನಗು ನಗುತ ನೀರಾಜನವ-
ನಾನುವಂತೆಸೆಯುತಿವೆ; ಶಶಿ! ನಿನಗೆ, ನೀನೆಸಗಿ
ದುಪಕಾರದರಿವಿಗಾಗಿ.


ಎತ್ತಲೂ ತಿರೆಯನ್ನು ತೀವಿ ಜೊನ್ನದ ಸರಿಯು
ಸುತ್ತಲಿಡಿದತಿ ಶೋಭೆಯಾಂತೆಸೆವ ಬಿಳಿ ಮೊಸರ
ಮೊತ್ತ ಚೆಲ್ಲಿದ ತೆರದಿ ಬಿತ್ತರವನಾಂತಿಹುದು.
ಆದರೂ ತಂಗದಿರನೇ!
ಕತ್ತಲೆಯ ಕಾಲವಾದುದರಿಂದ ಮರಗಳಡಿ-
ಯತ್ತ ಬಿದ್ದೊರಗಿಹುದು ನೆರಳ ಕಾಳಿಮೆಯದನು
ಕಿತ್ತಳಿಸಿ ಬಿಸುಡಲಾರದೆ, ನಾಚಿ, ಮೊಗದಲ್ಲಿ
ಮಾಲಿನ್ಯವನ್ನಾಂತೆಯೆ?


ತೊಳತೊಳಗಿ, ಬೆಳಬೆಳಗಿ, ಕಳೆವೆತ್ತು ಪೊಳೆಯುತಿಹೆ!
ಕಿಲಕಿಲನೆ ನಗುನಗುತ ಹಾಸ್ಯರೋಚಿಯನೆಲ್ಲ
ಬಳಿಗಳಿಗು ಪಸರಿಸುತ್ತ, ಸಂತೋಷ ಸಾಗರದೊ-
ಳೋಲಾಡಿ ತೇಲಾಡುತ.
ಒಲಿಯುತ್ತ, ನಲಿಯುತ್ತ, ಮುಗಿಲುಗಳ ಮರೆಯಲ್ಲಿ
ನೆಲಸುತ್ತ, ಹೊರಬರುತ, `ಕಣ್ಣ ಮುಚ್ಚಾಲೆ’ ಯಲಿ
ಲಲಿತ ಲೀಲೆಯನಾಂತು, ಬಾಲಕೇಳಿಯ ನಟಿಸಿ,
ಮೆರೆವೆಯೇಂ ತಂಗದಿರನೇ?
*****
೧೯೩೭

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...